ಮನುಷ್ಯತ್ವವನ್ನೇ ಮರೆತು, ತರಕಾರಿಯನ್ನು ಕಾಲಿನಿಂದ ಒದ್ದು ದರ್ಪ ತೋರಿಸಿದ್ದ PSI ಸಸ್ಪೆಂಡ್..!
ಒಂದು ಕಡೆ ಕೊರೊನಾ ಸೋಂಕು, ಮತ್ತೊಂದು ಕಡೆ ಸರ್ಕಾರ ವಿಧಿಸಿರುವ ಲಾಕ್ಡೌನ್, ಇವೆರಡರ ಮಧ್ಯೆ ಸಿಲುಕಿ ಜನರು ಅಕ್ಷರಸಃ ತತ್ತರಿಸಿ ಹೋಗಿದ್ದಾರೆ. ಜನರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿದೆ.
ಇಂತಹ ಸಂಕಷ್ಟದ ಸಮಯದಲ್ಲಿ ಹೊಟ್ಟೆಪಾಡಿಗಾಗಿ ಬೀದಿಬದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರ ಅಂಗಡಿಗಳ ಮೇಲೆ ದರ್ಪ ತೋರಿಸಿರುವ ರಾಯಚೂರಿನ ಸದರ ಬಜಾರ್ ಪೊಲೀಸ್ ಠಾಣೆಯ ಪಿಎಸ್ಐ ಅಜಂ ತರಕಾರಿಗಳನ್ನು ಬೂಟು ಕಾಲಿನಿಂದ ಒದ್ದು ಬಡವರ ಮೇಲೆ ಅಟ್ಟಹಾಸ ಮೆರೆದಿದ್ದರು ಈ ಹಿನ್ನೆಲೆ ಅಜಂರನ್ನು ಇದಿಗ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆ ರಾಯಚೂರಿನ ಎಲ್ಲಾ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದು, ನಗರದ ಚಂದ್ರಮೌಳೇಶ್ವರ ವೃತ್ತದ ಬಳಿ ಅಲ್ಲಲ್ಲಿ ವ್ಯಾಪಾರ ನಡೆಸಿದ್ದ ತರಕಾರಿ ವ್ಯಾಪಾರಿಗಳನ್ನ ಪೊಲೀಸರು ಜಾಗ ಖಾಲಿ ಮಾಡಿಸುತ್ತಿದ್ದರು. ಈ ವೇಳೆ ಏಕಾಏಕಿ ಬಂದು ಬೀದಿಯಲ್ಲಿ ಮಾರುತ್ತಿದ್ದ ತರಕಾರಿ, ಸೊಪ್ಪು ಕಾಲಿನಿಂದ ಒದ್ದು ದರ್ಪ ಮೆರೆದಿದ್ದರು.ದರ್ಪ ತೋರಿದ ಪಿಎಸ್ಐ ಅಜಂ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಇದರಿಂದ ಸಾರ್ವಜನಿಕ ವಲಯಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.