ಹೊಸಕೋಟೆ: ಸರ್ಕಾರಿ ಗೋಮಾಳ, ಕೆರೆ, ನಾಲಾ ಮತ್ತು ರಾಜಕಾಲುವೆಗಳನ್ನೂ ಬಿಡದೆ ನುಂಗುತ್ತಿರುವ ಭೂ ಕಬಳಿಕೆದಾರರ ದರ್ಬಾರ್ ಈಗ ಹೊಸಕೋಟೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆತ್ತಲಾಗಿದೆ. ವಿ.ಆರ್. ರಾಯಲ್ ಟೌನ್ಶಿಪ್ ಹೆಸರಿನಲ್ಲಿ ಬೃಹತ್ ಬಡಾವಣೆ ನಿರ್ಮಿಸುತ್ತಿರುವ ಡೆವಲಪರ್ಸ್, ಸರಿಸುಮಾರು 3 ಎಕರೆಗೂ ಹೆಚ್ಚು ಸರ್ಕಾರಿ ಸ್ವತ್ತುಗಳನ್ನು ಒತ್ತುವರಿ ಮಾಡಿಕೊಂಡಿರುವ ಆಘಾತಕಾರಿ ದೂರು ಕೇಳಿಬಂದಿದೆ.
ದೂರುದಾರ ಭಾಸ್ಕರ್ ಅವರ ಆರೋಪಗಳೇನು?
ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಅವರು ಈ ಅಕ್ರಮದ ವಿರುದ್ಧ ಸಮರ ಸಾರಿದ್ದು, ಲೇಔಟ್ ಮಾಲೀಕ ಕಿಶೋರ್ ಎಂಬುವವರ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಇಲ್ಲಿವೆ:
ಸರ್ಕಾರಿ ಸ್ವತ್ತು ಒತ್ತುವರಿ: ಬಡಾವಣೆ ನಿರ್ಮಾಣದ ಹೆಸರಲ್ಲಿ ಸುಮಾರು 03 ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳ, ಬಂಡಿದಾರಿ ಹಾಗೂ 22 ಗುಂಟೆ ‘ಬಿ’ ಖರಾಬು ಜಾಗವನ್ನು ಅಕ್ರಮವಾಗಿ ಲೇಔಟ್ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ.
ನಾಲಾ ಮತ್ತು ರಾಜಕಾಲುವೆ ಕಬಳಿಕೆ: ಮಳೆನೀರು ಹರಿಯುವ ರಾಜಕಾಲುವೆ ಹಾಗೂ ಪಕ್ಕದ ಕೆರೆಯ ಅಂಗಳವನ್ನು ಒತ್ತುವರಿ ಮಾಡಿ ವಸತಿ ನಕ್ಷೆಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಸಿಎ ಜಾಗದ ದುರ್ಬಳಕೆ: ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಡಬೇಕಾದ (CA Site) ಜಾಗದಲ್ಲಿ ಕಾನೂನುಬಾಹಿರವಾಗಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿದೆ.

ನಗರ ಯೋಜನಾ ಅಧಿಕಾರಿ ಸುರೇಶ್ ಅವರ ನಿರ್ಲಕ್ಷ್ಯ?
ಹೊಸಕೋಟೆ ಯೋಜನಾ ಪ್ರಾಧಿಕಾರವು ಈ ಲೇಔಟ್ ಪ್ಲ್ಯಾನ್ ಅನುಮೋದಿಸುವಾಗ “ಸರ್ಕಾರಿ ಖರಾಬು ಭೂಮಿಯನ್ನು ಬಿಟ್ಟು ಬಡಾವಣೆ ಮಾಡಬೇಕು” ಎಂದು ಕಟ್ಟುನಿಟ್ಟಿನ ಷರತ್ತು ವಿಧಿಸಿತ್ತು. ಆದರೆ, ಈ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ ನಗರ ಯೋಜನಾ ಅಧಿಕಾರಿ ಸುರೇಶ್ ಅವರು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೂರುದಾರರು ಪದೇ ಪದೇ ದೂರು ನೀಡಿದರೂ ಸ್ಥಳ ಪರಿಶೀಲನೆ ನಡೆಸದ ಅಧಿಕಾರಿ ಸುರೇಶ್, ಲೇಔಟ್ ಮಾಲೀಕರ ಜೊತೆ ಶಾಮೀಲಾಗಿದ್ದಾರೆಯೇ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಇದನ್ನೂ ಓದಿ | ರಾಜ್ಯಸಭೆಗೆ ಇಂದು ಹೈವೋಲ್ಟೇಜ್ ಎಲೆಕ್ಷನ್: 11 ಸ್ಥಾನಗಳಿಗಾಗಿ ಶಾಸಕರ ಹಣಾಹಣಿ!
ಸರ್ಕಾರಿ ಭೂಮಿ ಉಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿರುವ ಹಿನ್ನೆಲೆಯಲ್ಲಿ, ದೂರುದಾರ ಭಾಸ್ಕರ್ ಅವರು ಈಗ ಈ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ (Land Grabbing Court) ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಇತ್ತ, ಅಧಿಕಾರಿಗಳು ಎಚ್ಚೆತ್ತುಕೊಂಡು ವಿ.ಆರ್. ರಾಯಲ್ ಟೌನ್ಶಿಪ್ಗೆ ನೀಡಿರುವ ನಕ್ಷೆ ಅನುಮೋದನೆಯನ್ನು ತಕ್ಷಣವೇ ರದ್ದುಪಡಿಸಬೇಕೆಂದು ಒತ್ತಾಯಿಸಲಾಗಿದೆ.
ಪ್ರಸ್ತುತ, ಈ ನೋಟಿಸ್ ತಲುಪಿದ 15 ದಿನಗಳ ಒಳಗಾಗಿ ಸೂಕ್ತ ದಾಖಲೆಗಳೊಂದಿಗೆ ವಿವರಣೆ ನೀಡುವಂತೆ ಡೆವಲಪರ್ಸ್ಗೆ ಸೂಚಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಕಾನೂನು ಕ್ರಮ ಗ್ಯಾರಂಟಿ ಎನ್ನಲಾಗಿದೆ.










