ಹಿರಿಯ ಹಾಗು ಅನುಭವಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡಿದ್ದು ಎಷ್ಟು ಸರಿ.?!
ಓದುವ ಮುನ್ನ ಸ್ಷಪ್ಟನೆಗಾಗಿ : ಸುದ್ದಿಮನೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಇಲ್ಲದ ತಗಾದೆ ನಿಮಗೇಕೆ…ಹಾಗೆಯೇ ರಿಪಬ್ಲಿಕ್ ಕನ್ನಡದಲ್ಲಿ ನಡೆದಿದೆ ಎನ್ನಲಾದ ಈ ಘಟನೆಗೆ ಅಂತದ್ದ್ಯಾವ ಮಹತ್ವ ಕೊಡಬೇಕಿದೆ ಎಂದು ಅನೇಕರು ಪ್ರಶ್ನೆ ಮಾಡಬಹುದು.ಮುಖ್ಯವಾಗಿ ರಿಪಬ್ಲಿಕ್ ಕನ್ನಡದ ಮ್ಯಾನೇಜ್ಮೆಂಟ್ ಇದರ ಬಗ್ಗೆ ಆಕ್ಷೇಪ ಎತ್ತಬಹುದು.ಆದರೆ ಮಾದ್ಯಮ ಕ್ಷೇತ್ರದಲ್ಲಿ ಏನೇ ವ್ಯತ್ಯಾಸವಾದ್ರೂ ಯಾರಿಗೇನೇ ಅನ್ಯಾಯವಾದ್ರೂ ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಟಿಸುವುದಲ್ಲದೇ ಅದನ್ನು ಖಂಡಿಸುತ್ತಲೂ ಬಂದಿದೆ. ಮಾದ್ಯಮ ಲೋಕದ ಹಿರಿಯ-ದಿಗ್ಗಜ ಪತ್ರಕರ್ತರಲ್ಲಿ ಒಬ್ಬರಾದ ಜಯಪ್ರಕಾಶ್ ಶೆಟ್ಟಿ ಅವರನ್ನು ವೈಯುಕ್ತಿಕವಾಗಿ ಹೆಚ್ಚಾಗಿ ತಿಳಿಯದಿದ್ದರೂ ಅವರ ಕೆಲಸಗಳನ್ನು ( ಬಿಗ್ 3 ಎನ್ನುವ ಕಾರ್ಯಕ್ರಮವೊಂದೇ ಸಾಕು ಅವರ ಜನಪರ ಕಾಳಜಿ ಹಾಗೂ ಹದಗೆಟ್ಟಿರುವ ವ್ಯವಸ್ಥೆ ಬಗ್ಗೆ ಅವರಿಗಿದ್ದ ಅಸಹನೆ-ಆಕ್ರೋ ಏನೆನ್ನುವುದು ತಿಳಿಯಲು) ತೀರಾ ಹತ್ತಿರದಿಂದ ಬಲ್ಲವೆ.ರಿಪಬ್ಲಿಕ್ ಕನ್ನಡ ಸುದ್ದಿವಾಹಿನಿಯಿಂದ ಅವರ ನಿರ್ಗಮನ ಗೌರವಪೂರ್ಣವಾಗಿ ನಡೆದಿದ್ದರೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಯಾವುದೇ ಅಭ್ಯಂತರ-ಆಕ್ಷೇಪ ಇರಲಿಲ್ಲ.ಆದರೆ ಅವರಂಥ ಪ್ರತಿಭಾನ್ವಿತನನ್ನು ಅಪಮಾನ ಮಾಡಿ ಕಳುಹಿಸಿದೆ ಎನ್ನುವ ಸುದ್ದಿ ಕೇಳಿಬರುತ್ತಿರುವುದು ಸಹಜವಾಗಿಯೇ ಅದರ ಬಗ್ಗೆ ಬರೆಯಬೇಕೆನ್ನುವ ನಿರ್ದಾರ ಮೂಡಿಸಿದೆ.ಈ ಬರಹ ರಿಪಬ್ಲಿಕ್ ಕನ್ನಡ ಸುದ್ದಿ ಸಂಸ್ಥೆಯನ್ನು ಅಪಮಾನಿಸುವ ಯಾವುದೇ ದುರುದ್ದೇಶವನ್ನಾಗಲಿ,ಹಿತಾಸಕ್ತಿಯನ್ನಾಗಲಿ ಹೊಂದಿಲ್ಲ.ಪ್ರತಿಭೆಯುಳ್ಳ ಯಾವುದೇ ಮಾದ್ಯಮ ಮಿತ್ರರಿಗೂ ಅನ್ಯಾಯ-ಅವಮಾನ ಆಗಬಾರದೆನ್ನುವ ಕಳಕಳಿಯಷ್ಟೇ ಕನ್ನಡ ಫ್ಲ್ಯಾಶ್ ನ್ಯೂಸ್ ನದ್ದು. – ಸಂಪಾದಕೀಯ ಬಳಗ

ಬೆಂಗಳೂರು: ನಿನ್ನೆ ರಾತ್ರಿ 26-05-2025 ರ ರಾತ್ರಿ ರಿಪಬ್ಲಿಕ್ ಕನ್ನಡದ ಮಾದ್ಯಮಸ್ನೇಹಿತನೋರ್ವ ನೀಡಿದ ಖಚಿತ ಮಾಹಿತಿ ಆಧರಿಸಿ ಕನ್ನಡ ಫ್ಲ್ಯಾಶ್ ನ್ಯೂಸ್ ಅಲ್ಲಿನ ಸ್ಟಾರ್ ಆಂಕರ್ ಜಯಪ್ರಕಾಶ್ ಶೆಟ್ಟಿ ಅವರು ರಾಜೀನಾಮೆ ನೀಡಿದ ಸುದ್ದಿಯನ್ನು ಬಿತ್ತರಿಸಿತ್ತು.ಇದಕ್ಕೆ ಮಾದ್ಯಮಸ್ನೇಹಿತರ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಯಿತು.ಬಹುಷಃ ರಿಪಬ್ಲಿಕ್ ಕನ್ನಡ ತೊರೆಯಲು ಜಯಪ್ರಕಾಶ್ ಶೆಟ್ಟಿ ಅವರಿಗೆ ವೈಯುಕ್ತಿಕ ಕಾರಣಗಳಿರಬಹುದೆಂದೇ ಭಾವಿಸಲಾಗಿತ್ತು.ಶೋಭಾ ಅವರು ಎಂಟ್ರಿ ಕೊಟ್ಟಿದ್ದಕ್ಕೇನಾದ್ರೂ ಬೇಸತ್ತು ಸಂಸ್ಥೆಯಿಂದ ಹೊರನಡುದ್ರಾ( ಆದ್ರೆ ಶೋಭಾ ಮತ್ತು ಜಯಪ್ರಕಾಶ್ ಶೆಟ್ಟಿ ಅವರ ನಡುವೆ ಗಾಢವಾದ ಆತ್ಮೀಯತೆ ಇದೆ ಎನ್ನುವುದು ಕೂಡ ಸತ್ಯ ) ಎನ್ನುವ ರೀತಿಯಲ್ಲೂ ವಿಶ್ಲೇಷಣೆ-ವ್ಯಾಖ್ಯಾನಗಳು ಶುರುವಾಗಿದ್ವು. ಮಾದ್ಯಮದಲ್ಲಿ ಇದೆಲ್ಲಾ ಕಾಮನ್ ಎಂದುಕೊಂಡು ಸುಮ್ಮನಾಗಿದ್ದಾಗಲೇ ಅಘಾತಕಾರಿ ಎನ್ನುವಂತ ಸುದ್ದಿಯೊಂದು ರಿಪಬ್ಲಿಕ್ ಕನ್ನಡದ ಸುದ್ದಿಮನೆಯಿಂದಲೇ ಹೊರಬಿದ್ದಿದೆ. ಜಯಪ್ರಕಾಶ್ ಶೆಟ್ಟಿ ಅವರು ಚಾನೆಲ್ ಬಿಟ್ಟಿದ್ದಲ್ಲ..ಅವರನ್ನು ಅವಮಾನ ಮಾಡಿ ಕಳುಹಿಸಿದ್ರೆನ್ನುವ ಸಂಗತಿ ಹರಡಿಬಿಟ್ಟಿದೆ.

ಜಯಪ್ರಕಾಶ್ ಶೆಟ್ಟಿ ಅವರನ್ನು ಅವಮಾನಕರವಾಗಿ ನಡೆಸಿಕೊಂಡಿದ್ದಾರೆನ್ನುವುದೇ ಸತ್ಯವಾಗಿದ್ದಲ್ಲಿ ಅದು ಖಂಡನೀಯ. ಮಾದ್ಯಮ ಮಿತ್ರರನ್ನು ಅವಮಾನಕರವಾಗಿ ನಡೆಸಿಕೊಳ್ಳುವ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಮೊದಲಿಂದಲೂ ನಿಷ್ಟುರವಾಗಿಯೇ ಖಂಡಿಸುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಇದರಲ್ಲಿ ಯಾವುದೇ ಮುಲಾಜೂ ಇಲ್ಲ..ಮುಜುಗರವೂ ಇಲ್ಲ.ನಿನ್ನೆ ನಡೆದಿದೆ ಎನ್ನಲಾದ ಬೆಳವಣಿಗೆಗಳು, ಜಯಪ್ರಕಾಶ್ ಶೆಟ್ಟಿ ಅವರು ರಿಪಬ್ಲಿಕ್ ಕನ್ನಡದ ಲಾಂಚಿಂಗ್ ಡೇಸ್ ನಿಂದ ಹಿಡಿದು ಇವತ್ತಿನವರೆಗೂ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ರಿಪಬ್ಲಿಕ್ ಕನ್ನಡದ ಆಡಳಿತ ಬೆಲೆನೇ ಕೊಡಲಿಲ್ಲವಾ..? ಅವರ ಜೇಷ್ಟತೆ-ಹಿರಿತನ-ಅನುಭವ-ಪ್ರತಿಭೆ -ಸಾಮರ್ಥ್ಯಗಳ್ಯಾವುವು ಪರಿಗಣಿಸಲ್ಪಡಲಿಲ್ಲವೇ..? ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿಬಿಟ್ಟಿವೆ.

ರಿಪಬ್ಲಿಕ್ ಕನ್ನಡದ ಸುದ್ದಿಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದ ಮಾಹಿತಿಗಳ ಪ್ರಕಾರ ನಿನ್ನೆ ರಾತ್ರಿಯ ಪ್ರೈಮ್ ಬುಲೆಟಿನ್ ನ್ನು ಜಯಪ್ರಕಾಶ್ ಶೆಟ್ಟಿ ಅವರು ನಡೆಸಿಕೊಡಬೇಕಿತ್ತಂತೆ.ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡು ಬಂದಿದ್ರಂತೆ.ಇನ್ನೇನು ಬುಲೆಟಿನ್ ಶುರು ಮಾಡಬೇಕೆನ್ನುವಷ್ಟರಲ್ಲಿ ಬುಲೆಟಿನ್ ನ ಉಸ್ತುವಾರಿ ಹೊತ್ತಿರುವವರು ಡುಯೆಲ್ ಆಂಕರ್ ಜತೆ ಬುಲೆಟಿನ್ ಮಾಡಿ ಎಂದ್ರಂತೆ. ಇದನ್ನು ಕೇಳಿ ಶೆಟ್ಟರಿಗೆ ಸ್ವಲ್ಪ ಬೇಸರ-ಗಲಿಬಿಲಿಯೂ ಆಗಿದೆ.ಏಕೆ ಎಂದು ಕೇಳಿದ್ರೆ ಅದಕ್ಕೆ ಸಮರ್ಪಕ ಉತ್ತರ ದೊರೆತಿಲ್ಲ. ಸಿಂಗಲ್ ಆಗಿ ಮಾಡುತ್ತಿದ್ದ ನ್ಯೂಸನ್ನು ಇನ್ನೊಬ್ಬರ ಜತೆ ಶೇರ್ ಮಾಡಿಕೊಂಡು ಮಾಡಲೇಬೇಕೆಂದು ಫರ್ಮಾನ್ ಹೊರಡಿಸಿದಾಗ ನಿಜಕ್ಕೂ ಅವಮಾನಗೊಂಡಂತಾದ ಶೆಟ್ಟರು ಆ ಕ್ಷಣವೇ ಸಂಸ್ಥೆ ಬಿಡುವ ತೀರ್ಮಾನ ಕೈಗೊಂಡು ಅದನ್ನು ಆನ್ ಸ್ಪಾಟ್ ನಲ್ಲಿ ಕಾರ್ಯಗತಗೊಳಿಸಿಬಿಟ್ಟರಂತೆ.ಸುಮಾರು 20-25 ವರ್ಷಗಳಷ್ಟಯ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ ಅನುಭವಿ ಆಗಿರುವ ಜಯಪ್ರಕಾಶ್ ಶೆಟ್ಟಿ ಅವರು ಮನಸು ಮಾಡಿದ್ರೆ ಅದನ್ನು ಒಪ್ಪಿಕೊಂಡು ಮಾಡಬಹುದಿತ್ತು.ಆದರೆ ಅವರ ಸ್ವಾಭಿಮಾನ ಅದಕ್ಕೆ ಅವಕಾಶ ಕೊಡಲಿಲ್ಲ ಎನ್ನಿಸುತ್ತೆ.ನನಗೆ ಆತ್ಮಾಭಿಮಾನಕ್ಕಿಂತ ದೊಡ್ಡದು ಇನ್ನ್ಯಾವುದು ಇಲ್ಲ ಎಂದೆನಿಸಿ ಅಲ್ಲಿಂದಲೇ ಹೊರನಡೆದಿದ್ದಾರೆ.

ರಿಪಬ್ಲಿಕ್ ಕನ್ನಡವನ್ನು ಕರ್ನಾಟಕದಲ್ಲಿ ಬೆಳೆಸುವ ಹೊಣೆಗಾರಿಕೆಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಕೆಲಸ ಮಾಡಿದ್ದ ಜಯಪ್ರಕಾಶ್ ಶೆಟ್ಟಿ ಅವರಿಗೆ ಮ್ಯಾನೇಜ್ಮೆಂಟ್ ತನ್ನನ್ನು ನಡೆಸಿಕೊಂಡ ರೀತಿ ಸರಿಯಲ್ಲ ಎನಿಸಿರಬೇಕು.ತುಂಬಾ ಬೇಸರ-ನೋವಿನಿಂದ ಕೆಲವು ಆತ್ಮೀಯರಿಗೆ ವಿಶ್ ಮಾಡಿ ಹೊರನಡೆದರಂತೆ.ಇದೆಲ್ಲಾ ಬಹುತೇಕ ಸಿಬ್ಬಂದಿ ಎದುರೇ ನಡೆದಿದೆ ಎನ್ನಲಾಗಿದೆ.ಜಯಪ್ರಕಾಶ್ ಶೆಟ್ಟಿ ಅವರ ಕೆಲಸದ ಪರಿಯನ್ನು ಚೆನ್ನಾಗಿ ಅರಿತಿರುವ ಅದೆಷ್ಟೋ ಸಿಬ್ಬಂದಿ ಶೆಟ್ಟರಿಗೆ ಆದ ಅಪಮಾನಕ್ಕೆ ಬೇಸರವನ್ನೂ ವ್ಯಕ್ತಪಡಿಸಿದರಂತೆ.ಕೆಲವು ಮೂಲಗಳ ಪ್ರಕಾರ ಜಯಪ್ರಕಾಶ್ ಶೆಟ್ಟಿ ಅವರು ಸಂಸ್ಥೆಯಿಂದ ಹೊರನಡೆಯುವಾಗ ಅವರ ಕಣ್ಣಂಚಲ್ಲಿ ಹನಿಗಳು ಮೂಡಿದ್ದವಂತೆ.ಆದರೆ ಅದ್ಯಾವುದನ್ನೂ ತೋರಿಸಿಕೊಳ್ಳದೆ ಸಂಸ್ಥೆಯಿಂದ ಹೊರನಡೆದರೆನ್ನುವುದು ವಿದ್ಯಾಮಾನ.
ಜಯಪ್ರಕಾಶ್ ಶೆಟ್ಟಿ ಅವರೊಬ್ಬರೇ ಅಲ್ಲ ಹೆಚ್ಚೆಚ್ಚು ಸಂಬಳ ಪಡೆಯುತ್ತಿರುವ ಅನೇಕರನ್ನು ಕೆಲಸದಿಂದ ತೆಗೆಯಬೇಕೆನ್ನುವ ಚಿಂತನೆ ಈ ಮೊದಲೇ ಮ್ಯಾನೇಜ್ಮೆಂಟ್ ಗೆ ಇತ್ತೆನ್ನುವ ಮಾತುಗಳಿವೆ.ಇದು ದಿಢೀರ್ ಆದ ಬೆಳವಣಿಗೆಯೂ ಅಲ್ಲವಂತೆ,ಸುಮಾರು ಒಂದು ತಿಂಗಳ ಹಿಂದೆಯೇ ಪ್ರಧಾನ ಮ್ಯಾನೇಜ್ಮಂಟ್ ಇಂತಹದೊಂದು ಸೂಚನೆಯನ್ನು ಇಲ್ಲಿನ ಆಡಳಿತಕ್ಕೆ ನೀಡಿತ್ತೆನ್ನುವ ಮಾತಿದೆ. ಅದರ ಪ್ರಕಾರವೇ ಮೊದಲ ಟಾರ್ಗೆಟ್ ಎನ್ನುವಂತೆ ಶೆಟ್ಟರು ಹೊರನಡೆದಿದ್ದಾರೆ.ಶೆಟ್ಟರಂಥ ಪ್ರತಿಭಾನ್ವಿತರ ವಿಷಯದಲ್ಲೇ ಮ್ಯಾನೇಜ್ಮೆಂಟ್ ಹೀಗೆ ನಡೆದುಕೊಂಡಿದೆ ಎಂದರೆ ನಾವ್ಯಾವ ಲೆಕ್ಕ ಎನ್ನುವ ಆತಂಕ ಹೆಚ್ಚು ಸಂಬಳ ಪಡೆಯುತ್ತಿರುವವರಲ್ಲಿ ಶುರುವಾಗಿದೆಯಂತೆ.ಇವತ್ತು ಶೆಟ್ಟರು ನಾಳೆ ನಾವಾ..? ಎಂದು ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರಂತೆ. ಯಾವ್ ಕ್ಷಣದಲ್ಲಿ ಏನಾಗಬಹುದೆಂದು ಗೊತ್ತಾಗದ ಸಂದಿಗ್ಧ ಹಾಗೂ ಅನಿಶ್ಚಿತತೆಯ ವಾತಾವರಣದಲ್ಲಿ ಸಿಬ್ಬಂದಿ ಕೆಲಸ ಮಾಡುವಂತಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಜಯಪ್ರಕಾಶ್ ಶೆಟ್ಟಿ ರಿಪಬ್ಲಿಕ್ ಕನ್ನಡಕ್ಕೆ ಅಪಥ್ಯವಾಗಿರಬಹುದು,ಆದರೆ ಅವರಿಗಿರುವ ಪ್ರತಿಭೆ-ಕೆಪಾಸಿಟಿ ಬೇರೆ ಚಾನೆಲ್ ಗಳಿಗೆ ಮುಖ್ಯವೆನಿಸದೆ ಇರದು.ಅಲ್ಲದೇ ವ್ಯಕ್ತಿತ್ವ-ಬದುಕು ಹಾಗು ಕೈಯನ್ನೆಂದು ಕೆಟ್ಟ ಕಾರಣಗಳಿಗೆ ಹಾಳು ಮಾಡಿಕೊಂಡಿಲ್ಲ ಶೆಟ್ಟಿ.ಅವರಿಗೆ ಇಂದಲ್ಲ ನಾಳೆ ಇನ್ನೊಂದು ಚಾನೆಲ್ ನ ಒಳ್ಳೆಯ ಅವಕಾಶ ಕಾಯುತ್ತಿರಬಹುದು..ಆದರೆ ನೀವು ನಮಗೆ ಅತ್ಯಗತ್ಯ ಎಂದು ಹೇಳುತ್ತಿದ್ದ ರಿಪಬ್ಲಿಕ್ ಕನ್ನಡದಂತ ಚಾನೆಲ್ ಇದ್ದಕ್ಕಿದ್ದಂತೆ ನಿಮ್ಮ ಅಗತ್ಯ ನಮಗಿಲ್ಲ ಎಂದ್ಹೇಳಿ,ಯಾವುದೇ ಮುನ್ಸೂಚನೆ ಕೊಡದೆ ದಿಢೀರ್ ಹೊರನಡೆಯುವಂತೆ ಮಾಡುವ ಕೆಟ್ಟ ವಾತಾವರಣ ಸೃಷ್ಟಿ ಮಾಡುವುದಿದೆಯೆಲ್ಲಾ ಅದಕ್ಕಿಂತ ಕೆಟ್ಟ ಬೆಳವಣಿಗೆ ಮತ್ತೊಂದಿಲ್ಲ..ಜಯಪ್ರಕಾಶ್ ಶೆಟ್ಟಿ ಅವರಂತ ಹಿರಿಯರಿಗೇ ಹೀಗೊಂದು ಕೆಟ್ಟ ಅನುಭವ ಆಗಿರುವುದು ಇತರರಿಗೆ ಒಂದು ಎಚ್ಚರಿಕೆಯ ಪಾಠ ಆಗಬೇಕಿದೆ.