ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. “ವೈದ್ಯೋ ನಾರಾಯಣ ಹರಿ” ಎಂದು ವೈದ್ಯರನ್ನು ದೇವರಂತೆ ಗೌರವಿಸುವ ಸಮಾಜ ನಮ್ಮದು. ಆದರೆ, ಅದೇ ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡು, ರೋಗಿಗಳ ಅಸಹಾಯಕತೆಯನ್ನು ಬಂಡವಾಳವಾಗಿಸಿಕೊಂಡು ಸುಲಿಗೆ ಮಾಡುವವರನ್ನು ಪ್ರಶ್ನಿಸಬಾರದೇ? ವಿಕ್ಟೋರಿಯಾ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಡಾ. ಗಿರೀಶ್ ರೆಡ್ಡಿ ಅವರ ಪ್ರಕರಣ ಈಗ ಇಂತಹದ್ದೊಂದು ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ತಮ್ಮ ಮೇಲಿನ ಆರೋಪಗಳ ಬಗ್ಗೆ ಸ್ಪಷ್ಟನೆ ಕೇಳಲು ಹೋದ ಮಾಧ್ಯಮ ಪ್ರತಿನಿಧಿಗಳ (ಜನತಾ ಟಿವಿ) ಮೇಲೆಯೇ ಡಾ. ಗಿರೀಶ್ ರೆಡ್ಡಿ ದರ್ಪ ತೋರಿದ್ದು, ಪೊಲೀಸರನ್ನು ಬಳಸಿಕೊಂಡು ಬೆದರಿಕೆ ಹಾಕುವ ಪ್ರಯತ್ನ ಮಾಡಿದ್ದಾರೆ.
ಅಧಿಕೃತ ವರದಿಯಲ್ಲೇ ಬಯಲಾದ ಕರ್ಮಕಾಂಡ
ಡಾ. ಗಿರೀಶ್ ರೆಡ್ಡಿ ಮೇಲಿನ ಆರೋಪಗಳು ಕೇವಲ ಗಾಳಿಯಲ್ಲಿ ಗುಂಡು ಹಾರಿಸಿದ ಕಥೆಯಲ್ಲ. ಆಸ್ಪತ್ರೆಯ ಆಡಳಿತಾಧಿಕಾರಿಯಾಗಿದ್ದ ಹಿರಿಯ ಕೆಎಎಸ್ ಅಧಿಕಾರಿ ಆಶಾ ಪರ್ವೀನ್ ಅವರು ನೀಡಿದ್ದ 31 ಪುಟಗಳ ಅಧಿಕೃತ ತನಿಖಾ ವರದಿಯಲ್ಲೇ ಈ ಅಕ್ರಮಗಳು ಸಾಬೀತಾಗಿವೆ.

ವರದಿಯ ಪ್ರಮುಖ ಅಂಶಗಳು:
ಕ್ಯಾಥ್ ಲ್ಯಾಬ್ ದುರ್ಬಳಕೆ: ಕಿಡ್ನಿ ರೋಗಿಗಳ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚುವರಿ ಹಣ ವಸೂಲಿ ಮಾಡಲಾಗಿದೆ.
ಹಗಲು ದರೋಡೆ: ರೋಗಿಗಳು ಆಸ್ಪತ್ರೆಗೆ ಅಧಿಕೃತವಾಗಿ ಪಾವತಿಸಬೇಕಾಗಿದ್ದ ಮೊತ್ತ ಕೇವಲ ₹3,130. ಆದರೆ, ಡಾ. ಗಿರೀಶ್ ರೆಡ್ಡಿ ರೋಗಿಗಳಿಂದ ಪೀಕುತ್ತಿದ್ದುದು ಬರೋಬ್ಬರಿ ₹20,000!
ಫೋನ್ ಪೇ (PhonePe) ಮೂಲಕ ವರ್ಗಾವಣೆ: ವರದಿಯ 5-6ನೇ ಪುಟ ಹಾಗೂ 7ನೇ ಪ್ಯಾರಾದಲ್ಲಿ ಉಲ್ಲೇಖಿಸಿರುವಂತೆ, ಕ್ಯಾಥ್ ಲ್ಯಾಬ್ ತಂತ್ರಜ್ಞೆ ಕುಮಾರಿ ಕಾವ್ಯ ಅವರ ಫೋನ್ ಪೇ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ಕೇವಲ 3 ತಿಂಗಳಲ್ಲಿ 7 ಪ್ರಕರಣಗಳಿಂದ ₹1.25 ಲಕ್ಷ ನಗದು ವರ್ಗಾವಣೆಯಾಗಿರುವುದು ದೃಢಪಟ್ಟಿದೆ.
ತಪ್ಪೊಪ್ಪಿಗೆ: ವಿಚಾರಣೆ ವೇಳೆ ತಂತ್ರಜ್ಞೆ ಕಾವ್ಯ, “ಡಾ. ಗಿರೀಶ್ ರೆಡ್ಡಿ ಅವರ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾಗಿ” ಬಾಯಿಬಿಟ್ಟಿದ್ದಾರೆ. ಸ್ವತಃ ಡಾ. ಗಿರೀಶ್ ರೆಡ್ಡಿ ಕೂಡ ವಿಚಾರಣೆ ವೇಳೆ “ಮಾಡಿದ್ದು ತಪ್ಪಾಗಿದೆ” ಎಂದು ಒಪ್ಪಿಕೊಂಡಿದ್ದಾರೆ ಎಂಬುದು ವರದಿಯಲ್ಲಿದೆ.
ಸ್ಪಷ್ಟನೆ ಕೇಳಲು ಹೋದರೆ ದರ್ಪ, ಪೊಲೀಸರ ಸಾಥ್!
ದಾಖಲೆಗಳ ಸಮೇತ ಸಾಬೀತಾಗಿರುವ ಈ ಆರೋಪಗಳ ಬಗ್ಗೆ ವಿವರಣೆ ಕೇಳಲು, ಸ್ವತಃ ಡಾ. ಗಿರೀಶ್ ಅವರೇ “ಆಸ್ಪತ್ರೆಗೆ ಬನ್ನಿ ಸ್ಪಷ್ಟನೆ ಕೊಡುತ್ತೇನೆ” ಎಂದಿದ್ದರ ಮೇರೆಗೆ ಮಾಧ್ಯಮ ಪ್ರತಿನಿಧಿಗಳು ತೆರಳಿದ್ದರು. ಆದರೆ, ಭೇಟಿ ಕೊಟ್ಟು ಅಕ್ರಮದ ಬಗ್ಗೆ ಪ್ರಶ್ನಿಸುತ್ತಿದ್ದಂತೆ ರಂಪಾಟ ಶುರು ಮಾಡಿದ ವೈದ್ಯರು, ಸೆಕ್ಯುರಿಟಿ ಗಾರ್ಡ್ಗಳ ಮೂಲಕ ಬೆದರಿಕೆ ಹಾಕಿಸಿದ್ದಾರೆ.
ಕ್ಷಣಾರ್ಧದಲ್ಲಿ ಅಲ್ಲಿಗೆ ಎಂಟ್ರಿ ಕೊಟ್ಟ ವಿ.ವಿ. ಪುರಂ ಠಾಣೆಯ ಇನ್ಸ್ಪೆಕ್ಟರ್ ಧರ್ಮೇಂದ್ರ ಅವರ ನಡೆ ಕೂಡ ಅನುಮಾನಾಸ್ಪದವಾಗಿತ್ತು. ಡಾ. ಶಿವಲಿಂಗಯ್ಯ ಅವರ ಚೇಂಬರ್ ಒಳಗೆ ಹೋಗಿ ರಹಸ್ಯ ಮಾತುಕತೆ ನಡೆಸಿ ಹೊರಬಂದ ಇನ್ಸ್ಪೆಕ್ಟರ್ ಧರ್ಮೇಂದ್ರ, ದಿಢೀರ್ ಗರಂ ಆಗಿ ವರದಿಗಾರನ ಮೇಲೆಯೇ ಹರಿಹಾಯ್ದಿದ್ದಾರೆ. ನಿಷ್ಪಕ್ಷಪಾತವಾಗಿ ವರ್ತಿಸಬೇಕಿದ್ದ ಪೊಲೀಸ್ ಅಧಿಕಾರಿ, ಡಾ. ಗಿರೀಶ್ ರೆಡ್ಡಿ ಪರ ವಹಿಸಿ “ಮಾಧ್ಯಮದವರ ವಿರುದ್ಧವೇ ದೂರು ಕೊಡಿ” ಎಂದು ಕುಮ್ಮಕ್ಕು ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ | 25ನೇ ವಯಸ್ಸಿಗೆ ಸಿವಿಲ್ ಜಡ್ಜ್: ಶಿರಸಿಯ ಸುಮಂತ್ ಐತಿಹಾಸಿಕ ಸಾಧನೆ!
ಮಾಧ್ಯಮಗಳ ನೈತಿಕತೆಗೆ ಸವಾಲು
ತಪ್ಪು ಮಾಡಿದಾಗ ಪ್ರಶ್ನಿಸಿದರೆ ಅದು ಕಿರುಕುಳವೇ? ಆಸ್ಪತ್ರೆಗೆ ಹೋಗಿ ಮಾಹಿತಿ ಕೇಳುವುದೇ ಕರ್ತವ್ಯಕ್ಕೆ ಅಡ್ಡಿಪಡಿಸಿದಂತೆಯೇ? ಇಂತಹ ಪ್ರತ್ಯೇಕ ಕಾನೂನುಗಳು ಈ ದೇಶದಲ್ಲಿವೆಯೇ? ಇವೆಲ್ಲವೂ ಸಾರ್ವಜನಿಕರನ್ನು ಕಾಡುತ್ತಿರುವ ಪ್ರಶ್ನೆಗಳು.
ಮಾಧ್ಯಮಗಳು ನ್ಯಾಯಸಮ್ಮತವಾಗಿವೆ, ಅನ್ಯಾಯವನ್ನು ಪ್ರಶ್ನಿಸುವುದು ಪತ್ರಿಕಾ ಧರ್ಮ. ತಪ್ಪಿದ್ದರೆ ಮಾಧ್ಯಮಗಳ ವಿರುದ್ಧವೇ ಪ್ರಕರಣ ದಾಖಲಿಸಲಿ, ಆದರೆ ಇಂತಹ ಬೆದರಿಕೆಗಳಿಗೆ ಜಗ್ಗದೆ ಅಕ್ರಮಗಳ ವಿರುದ್ಧ ಧ್ವನಿ ಎತ್ತುವ ಕೆಲಸ ನಿರಂತರವಾಗಿ ನಡೆಯಲಿದೆ.










