ಮೈಸೂರು: ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಆದರೆ ಮೈಸೂರಿನಲ್ಲಿ ನಡೆದ ಈ ಘಟನೆಯನ್ನು ಕೇಳಿದರೆ ಆ ಮಾತಿಗೇ ಅವಮಾನವಾಗುತ್ತದೆ. ಜೂನಿಯರ್ ವೈದ್ಯನೊಬ್ಬನ ಪ್ರೇಮ ನಾಟಕ, ಕಾಮದಾಸೆ ಮತ್ತು ಆತ್ಮಹತ್ಯೆಯ ಸಂಚಿಗೆ ಸಿಲುಕಿ ಸೀನಿಯರ್ ವೈದ್ಯೆಯೊಬ್ಬರು ಬರೋಬ್ಬರಿ 12 ವರ್ಷಗಳ ಕಾಲ ಜೀವಂತ ಶವವಾಗಿ ಬದುಕಿ, ಅಂತಿಮವಾಗಿ ನಿನ್ನೆ ಉಸಿರು ಚೆಲ್ಲಿದ್ದಾರೆ. ಈ ಸಾವಿನ ಹಿಂದೆ ಅಡಗಿರುವ ‘ಸೀರಿಯಲ್ ಕಿಲರ್’ ಮಾದರಿಯ ವೈದ್ಯನ ಕರಾಳ ಮುಖ ಈಗ ಬಯಲಾಗಿದೆ.
ಯಾರು ಈ ಡಾ. ನಾಗಶ್ರೀ? ಏನಿದು ಘಟನೆ?
ಮೈಸೂರಿನ ಖಾಸಗಿ ಆಯುರ್ವೇದ ಕಾಲೇಜಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದ ಡಾ. ನಾಗಶ್ರೀ ಅವರು ಪ್ರತಿಭಾವಂತ ವೈದ್ಯೆಯಾಗಿದ್ದರು. ಇವರಿಗೆ ಅದೇ ಕಾಲೇಜಿನಲ್ಲಿ ಜೂನಿಯರ್ ಆಗಿದ್ದ ಡಾ. ವಿನಯ್ ಕುಮಾರ್ ಎಸ್. ಎಂಬಾತನ ಪರಿಚಯವಾಗಿತ್ತು. ಹಿರಿಯ ವೈದ್ಯೆಯನ್ನೇ ತನ್ನ ಬಲೆಗೆ ಬೀಳಿಸಿಕೊಂಡ ವಿನಯ್ ಕುಮಾರ್, ಪ್ರೀತಿಯ ನಾಟಕವಾಡಿದ್ದ. ಆದರೆ ಮದುವೆಯ ಮಾತು ಬಂದಾಗ “ನೀನು ವಯಸ್ಸಿನಲ್ಲಿ ನನಗಿಂತ ದೊಡ್ಡವಳು, ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ” ಎಂದು ಕ್ಯಾತೆ ತೆಗೆದು ಕೊನೆಗೆ ‘ಆತ್ಮಹತ್ಯೆ ನಾಟಕ’ಕ್ಕೆ ಮುಂದಾಗಿದ್ದ.

ಶ್ರೀರಂಗಪಟ್ಟಣ ಲಾಡ್ಜ್ನಲ್ಲಿ ನಡೆದಿದ್ದೇನು?
ವಿನಯ್ ಕುಮಾರ್ ನಾಗಶ್ರೀ ಅವರನ್ನು ಶ್ರೀರಂಗಪಟ್ಟಣದ ಲಾಡ್ಜ್ವೊಂದಕ್ಕೆ ಕರೆದೊಯ್ದು, “ನಾವಿಬ್ಬರೂ ಸಾಯೋಣ” ಎಂದು ನಂಬಿಸಿದ್ದ. ನಾಗಶ್ರೀ ಅವರಿಗೆ ನಿದ್ರೆ ಮಾತ್ರೆ ಹಾಗೂ ಓವರ್ ಡೋಸ್ ಇಂಜೆಕ್ಷನ್ ನೀಡಿದ್ದ ಆರೋಪಿ, ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಸೋಗು ಹಾಕಿದ್ದ. ಘಟನೆಯ ನಂತರ ನಾಗಶ್ರೀ ಅವರು ಕೋಮಕ್ಕೆ ಜಾರಿದರೆ, ಈ ಕಿಲಾಡಿ ವೈದ್ಯ ಮಾತ್ರ ಮರುದಿನವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಆರಾಮವಾಗಿ ಓಡಾಡಿಕೊಂಡಿದ್ದ.
ಆ ಘಟನೆಯ ನಂತರ ನಾಗಶ್ರೀ ಅವರ ನೆನಪಿನ ಶಕ್ತಿ ಸಂಪೂರ್ಣ ನಶಿಸಿ ಹೋಗಿತ್ತು. ಕಳೆದ 12 ವರ್ಷಗಳಿಂದ ಒಂದು ಮಾತೂ ಆಡಲಾಗದೆ, ಯಾರನ್ನೂ ಗುರುತಿಸಲಾಗದೆ ಜೀವಂತ ಶವವಾಗಿದ್ದ ನಾಗಶ್ರೀ ನಿನ್ನೆ ಸಾವನ್ನಪ್ಪಿದ್ದಾರೆ.
ವಿನಯ್ ಕುಮಾರ್ ಎಂಬ ‘ಸೀರಿಯಲ್’ ವಂಚಕ!
ನಾಗಶ್ರೀ ಅವರ ಪ್ರಕರಣ ಕೇವಲ ಆರಂಭವಷ್ಟೇ. ಈತನ ಕಾಮದಾಸೆಗೆ ಬಲಿಯಾದವರ ಪಟ್ಟಿ ಬೆಚ್ಚಿಬೀಳಿಸುವಂತಿದೆ:
ಗೌತಮಿ ಹಿರೇಮಠ ಕೇಸ್: ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಗೌತಮಿ ಹಿರೇಮಠ ಎಂಬ ಯುವತಿ ಕೂಡ ಈತನ ಪ್ರೇಮ ಜಾಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ದುರದೃಷ್ಟವಶಾತ್ ಆ ಕೇಸ್ನಲ್ಲಿ ಸದ್ಯ ಬಿ-ರಿಪೋರ್ಟ್ ಸಲ್ಲಿಕೆಯಾಗಿದೆ.

ವಿನೋದಾ ಅವರ ಗೋಳು: ಈ ಎರಡು ಘಟನೆಗಳ ನಂತರ ವಿನೋದಾ ಎಂಬಾಕೆಯನ್ನು ಮದುವೆಯಾಗಿದ್ದ ವಿನಯ್, ಕೇವಲ 15 ದಿನಗಳಲ್ಲಿ ಆಕೆಗೆ ನರಕ ದರ್ಶನ ಮಾಡಿಸಿದ್ದ. ಆತನ ಕಿರುಕುಳ ತಾಳಲಾರದೆ ವಿನೋದಾ ಈಗ ಆತನನ್ನು ತೊರೆದು ದೂರವಿದ್ದಾರೆ.
ಇದನ್ನೂ ಓದಿ | ಮುದ್ದು ಬಂಗಾರು ಕಿಸ್ ಮಿ ಅಂತ ಲೇಡಿ ರೌಡಿಶೀಟರ್ ಹಿಂದೆ ಬಿದ್ದ ಪೊಲೀಸ್ ಇನ್ಸ್’ಪೆಕ್ಟರ್..!
ಸದ್ಯ ಹುಣಸೂರು ತಾಲೂಕಿನ ಹನಗೂಡಿನಲ್ಲಿ ಕ್ಲಿನಿಕ್ ನಡೆಸುತ್ತಿರುವ ಈ ಕಾಮುಕ ವೈದ್ಯ ವಿನಯ್ ಕುಮಾರ್ ವಿರುದ್ಧ ನೊಂದ ಕುಟುಂಬಗಳು ಆಕ್ರೋಶ ಹೊರಹಾಕಿವೆ. ಹಿರಿಯ ವಕೀಲ ಪಾಂಡು ಪೂಜಾರಿ ಅವರು ಈ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ನಾಗಶ್ರೀ ಅವರ ಸಾವಿನ ನಂತರವಾದರೂ ಈ ‘ಕಾಮುಕ’ ವೈದ್ಯನಿಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದು ಜನರ ಆಗ್ರಹವಾಗಿದೆ.










