ಪಂಚ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಪೋಲು: ಇದು ಅನುಷ್ಠಾನವೋ ಅಥವಾ ಲೂಟಿಯೋ?


ರಾಜ್ಯದಲ್ಲಿ ಒಂದೆಡೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸ್ವಪಕ್ಷದ ಶಾಸಕರೇ ಬೊಬ್ಬೆ ಹೊಡೆಯುತ್ತಿದ್ದರೆ, ಮತ್ತೊಂದೆಡೆ ‘ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ’ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಅಕ್ಷರಶಃ ಪೋಲಾಗುತ್ತಿದೆ. ಪ್ರಧಾನಿ, ರಾಷ್ಟ್ರಪತಿ ಅಥವಾ ಮುಖ್ಯಮಂತ್ರಿಗಳಿಗೂ ಇರದಷ್ಟು ಭರ್ಜರಿ ವೇತನ ಮತ್ತು ಸೌಲಭ್ಯಗಳನ್ನು ಈ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ನೀಡುತ್ತಿರುವುದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.

ಪಿಎಂ, ಸಿಎಂಗೂ ಇಲ್ಲದ ಸಂಬಳ ಇವರಿಗೆಕೆ?

ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿರುವ ಹೆಚ್.ಎಂ. ರೇವಣ್ಣ ಅವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು ನೀಡುತ್ತಿರುವ ವೇತನ ಬರೋಬ್ಬರಿ 6,51,844 ರೂಪಾಯಿ! ಹೌದು, ನೀವು ಓದುತ್ತಿರುವುದು ನಿಜ. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರಿಗಿಂತಲೂ ಹೆಚ್ಚಿನ ಸಂಬಳವನ್ನು ಸಮಿತಿಯ ಅಧ್ಯಕ್ಷರಿಗೆ ನೀಡಲಾಗುತ್ತಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ತೀರಾ ಹದಗೆಟ್ಟಿರುವ ಈ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ವೇತನ ನೀಡುವ ಅನಿವಾರ್ಯತೆ ಏನಿತ್ತು ಎಂಬುದು ಸಾರ್ವಜನಿಕರ ನೇರ ಪ್ರಶ್ನೆ.

ಪದಾಧಿಕಾರಿಗಳ ದಂಡು – ಬೊಕ್ಕಸಕ್ಕೆ 18 ಕೋಟಿ ಹೊರೆ

ಈ ಸಮಿತಿಯಲ್ಲಿ ಕೇವಲ ಒಬ್ಬ ಅಧ್ಯಕ್ಷರಲ್ಲ, ಬದಲಿಗೆ ಐವರು ಉಪಾಧ್ಯಕ್ಷರ ದಂಡೇ ಇದೆ:

ಉಪಾಧ್ಯಕ್ಷರು: ಎಸ್.ಆರ್. ಪಾಟೀಲ್, ಸೂರಜ್ ಹೆಗ್ಡೆ, ಪುಷ್ಪ ಅಮರನಾಥ್, ಎಸ್.ಆರ್. ಮೆಹರೋಜ್ ಖಾನ್ ಮತ್ತು ದಿನೇಶ್ ಗೂಳಿಗೌಡ.

ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ತಿಂಗಳ ವೇತನ ಹಾಗೂ ಇತರೆ ಭತ್ಯೆಗಳಿಗೆ ಸರ್ಕಾರ ಪ್ರತಿ ತಿಂಗಳು ಸುಮಾರು 1.50 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಅಂದರೆ ವರ್ಷಕ್ಕೆ 18 ಕೋಟಿ ರೂಪಾಯಿ ಕೇವಲ ಈ ಸಮಿತಿಯ ನಿರ್ವಹಣೆಗೇ ಖರ್ಚಾಗುತ್ತಿದೆ. ನಾಲ್ಕು ವರ್ಷಗಳ ಅವಧಿಗೆ ಅಂದಾಜು 70 ರಿಂದ 75 ಕೋಟಿ ರೂಪಾಯಿ ಕನ್ನಡಿಗರ ತೆರಿಗೆ ಹಣ ಈ ಸಮಿತಿಯ ಪಾಲಾಗಲಿದೆ.

ಅಧಿಕಾರಿಗಳ ಕೆಲಸಕ್ಕೆ ಸಮಿತಿ ಯಾಕೆ?

ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ವಿವಿಧ ಇಲಾಖೆಗಳು ಮತ್ತು ಅಧಿಕಾರಿಗಳ ಕರ್ತವ್ಯ. ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಮಾಡಬೇಕಾದ ಕೆಲಸಕ್ಕೆ ಪ್ರತ್ಯೇಕವಾಗಿ ರಾಜಕೀಯ ನಾಯಕರನ್ನು ಒಳಗೊಂಡ ಸಮಿತಿ ರಚಿಸಿರುವುದು ‘ಹಸ್ತ’ ಪಾಳೆಯದ ನಿರುದ್ಯೋಗಿ ನಾಯಕರಿಗೆ ಪುನರ್ವಸತಿ ಕಲ್ಪಿಸುವ ತಂತ್ರವೇ ಎಂಬ ಅನುಮಾನ ಮೂಡಿದೆ. “ನಮಗೆ ಗ್ಯಾರಂಟಿ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ, ಆದರೆ ಸಮಿತಿ ಹೆಸರಲ್ಲಿ ನಮ್ಮ ಹಣ ಲೂಟಿ ಮಾಡಲಾಗುತ್ತಿದೆ” ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.

ALSO READ :  ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ: 48 ನಾಯಕರ ಹತ್ಯೆ, ಖಮೇನಿ ಸಾವು ದೃಢ

ಇದನ್ನೂ ಓದಿ | ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

ಒಂದೆಡೆ ರಾಜ್ಯದ ಸಾಲದ ಹೊರೆ ಏರುತ್ತಿದೆ, ಸಾಲದ ಬಡ್ಡಿಗೆ ಸಾವಿರಾರು ಕೋಟಿ ಹೋಗುತ್ತಿದೆ. ಶಾಸಕರು ತಮ್ಮ ಕ್ಷೇತ್ರಗಳ ರಸ್ತೆ, ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನವಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಗ್ಯಾರಂಟಿ ಪ್ರಚಾರದ ಹೆಸರಲ್ಲಿ ಕೋಟಿ ಕೋಟಿ ಹಣ ವ್ಯಯ ಮಾಡುತ್ತಿರುವುದು ಎಷ್ಟು ಸರಿ? ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದು ‘ಸೇವೆಯೋ’ ಅಥವಾ ‘ಹಗಲು ದರೋಡೆಯೋ’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಜನರಿಗೆ ಹತ್ತು ಕೆಜಿ ಅಕ್ಕಿ ಕೊಡಲು ಹಣವಿಲ್ಲದ ಸರ್ಕಾರ, ಸಮಿತಿ ಅಧ್ಯಕ್ಷರಿಗೆ ಆರು ಲಕ್ಷಕ್ಕೂ ಹೆಚ್ಚು ಸಂಬಳ ನೀಡುತ್ತಿರುವುದು ಪ್ರಜಾಪ್ರಭುತ್ವದ ಅಣಕದಂತಿದೆ.


Leave a Comment