ಬೆಂಗಳೂರು: ವಿದ್ಯಾ ದೇಗುಲವಾಗಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ಈಗ ರೌಡಿಗಳ ಅಡ್ಡೆಯಾಗುತ್ತಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ನಡುವೆ ನಡೆಯುತ್ತಿರುವ ಸರಣಿ ಹಲ್ಲೆಗಳು ಮತ್ತು ಗೂಂಡಾಗಿರಿ ಚಟುವಟಿಕೆಗಳು ವಿವಿ ಆಡಳಿತ ಮಂಡಳಿಯ ವೈಫಲ್ಯವನ್ನು ಎತ್ತಿ ತೋರಿಸುತ್ತಿವೆ. ನಿನ್ನೆ ತಡರಾತ್ರಿ ಜಿಯೋಗ್ರಫಿ ವಿಭಾಗದ ವಿದ್ಯಾರ್ಥಿ ಅಭಿಷೇಕ್ ಎಂಬುವವರ ಮೇಲೆ ನಡೆದ ಭೀಕರ ಹಲ್ಲೆ ಈ ಆತಂಕವನ್ನು ಇಮ್ಮಡಿಗೊಳಿಸಿದೆ.
ಜಿಯೋಗ್ರಫಿ 3ನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ಅಭಿಷೇಕ್ ಮೇಲೆ ಈ ಹಲ್ಲೆ ನಡೆದಿದೆ. ಜಗಳಕ್ಕೆ ಕಾರಣವಾಗಿದ್ದು ಅತ್ಯಂತ ಸಣ್ಣ ವಿಚಾರ. ಅಭಿಷೇಕ್ ಅವರ ಸ್ನೇಹಿತ ನೀರು ಕುಡಿಯಲು ಪಕ್ಕದ ರೂಮಿಗೆ ಹೋಗಿದ್ದರು. ಈ ವೇಳೆ ಅಲ್ಲಿನ ವಿದ್ಯಾರ್ಥಿಗಳು ಆತನ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದರು. ಇದನ್ನು ಪ್ರಶ್ನಿಸಲು ಹೋದ ಅಭಿಷೇಕ್ ಮೇಲೆ ಅರುಣ್, ದೀಕ್ಷಿತ್, ವಿನಯ್, ಅಕ್ಷಯ್ ಮತ್ತು ಅವರ ಗ್ಯಾಂಗ್ ರೌಡಿಗಳಂತೆ ಮುಗಿಬಿದ್ದಿದೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಅಟ್ಟಹಾಸ:
ನಿನ್ನೆ ತಡರಾತ್ರಿ ಸುಮಾರು 1:30ರ ಸುಮಾರಿಗೆ PG 3 ಹಾಸ್ಟೆಲ್ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಹಲ್ಲೆಕೋರರು ಕೇವಲ ಹಾಸ್ಟೆಲ್ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ, ಹೊರಗಿನಿಂದಲೂ ಹುಡುಗರನ್ನು ಕರೆತಂದು ಅಭಿಷೇಕ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೀಕರ ಹಲ್ಲೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಕೋರರು ಯಾವ ರೀತಿ ವಿದ್ಯಾರ್ಥಿಯ ಮೇಲೆ ಅಟ್ಟಹಾಸ ಮೆರೆದಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.
ಹಳೆ ಕ್ರಿಮಿನಲ್ ಅರುಣ್ ಅಂಡ್ ಗ್ಯಾಂಗ್:
ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಅರುಣ್ ಎಂಬಾತನ ಮೇಲೆ ಈಗಾಗಲೇ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ 4 ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ. ಒಬ್ಬ ವಿದ್ಯಾರ್ಥಿಯ ಮೇಲೆ ಇಷ್ಟೊಂದು ಕೇಸ್ಗಳಿದ್ದರೂ ವಿಶ್ವವಿದ್ಯಾಲಯ ಆತನನ್ನು ಹಾಸ್ಟೆಲ್ನಲ್ಲಿ ಇರಿಸಿಕೊಂಡಿದ್ದು ಹೇಗೆ? ಆಡಳಿತ ಮಂಡಳಿಗೆ ಈತನ ಕ್ರಿಮಿನಲ್ ಹಿನ್ನೆಲೆ ತಿಳಿದಿರಲಿಲ್ಲವೇ? ಎಂಬ ಪ್ರಶ್ನೆಗಳು ಈಗ ಎದ್ದಿವೆ. ಕ್ಯಾಂಪಸ್ನಲ್ಲಿ ರೌಡಿಸಂ ಪ್ರವೃತ್ತಿ ಬೆಳೆಯುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ವಿದ್ಯಾರ್ಥಿಗಳ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದೆ.
ಇದನ್ನೂ ಓದಿ | ಮುದ್ದು ಬಂಗಾರು ಕಿಸ್ ಮಿ ಅಂತ ಲೇಡಿ ರೌಡಿಶೀಟರ್ ಹಿಂದೆ ಬಿದ್ದ ಪೊಲೀಸ್ ಇನ್ಸ್’ಪೆಕ್ಟರ್..!
ಹಲ್ಲೆಗೊಳಗಾದ ಅಭಿಷೇಕ್ ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಲಿಖಿತ ದೂರು ನೀಡಿದ್ದಾರೆ. ಅಲ್ಲದೆ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ಜ್ಞಾನಭಾರತಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಆಡಳಿತ ಮಂಡಳಿ, ಮೊದಲು ಅಲ್ಲಿನ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಬೇಕಿದೆ. ಕ್ರಿಮಿನಲ್ ಹಿನ್ನೆಲೆಯ ವಿದ್ಯಾರ್ಥಿಗಳನ್ನು ತಕ್ಷಣವೇ ಉಚ್ಚಾಟಿಸದಿದ್ದರೆ ಇಂತಹ ಘಟನೆಗಳು ಮರುಕಳಿಸುವುದು ಖಚಿತ ಎನ್ನಲಾಗಿದೆ.










