ಬೆಂಗಳೂರು: ಮುಡಾ (MUDA) ಹಗರಣದ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಸೈಬರ್ ಕ್ರೈಂ ಪೊಲೀಸರು ಇಂದು (ಫೆಬ್ರವರಿ 20) ಬಂಧಿಸಿದ್ದಾರೆ. ಮುಡಾದ ಮಾಜಿ ಆಯುಕ್ತ ಡಿ.ಬಿ. ನಟೇಶ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚೆಗಷ್ಟೇ ಸ್ನೇಹಮಯಿ ಕೃಷ್ಣ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (CS) ಶಾಲಿನಿ ರಜನೀಶ್ ಮತ್ತು ಅಧಿಕಾರಿ ಡಿ.ಬಿ. ನಟೇಶ್ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಮುಡಾ ಹಗರಣದ ತನಿಖೆ ಎದುರಿಸುತ್ತಿರುವ ನಟೇಶ್ ಅವರು ತಮಗೆ ಮುಂಬಡ್ತಿ (Promotion) ಸಿಗಲು ಮುಖ್ಯ ಕಾರ್ಯದರ್ಶಿಯವರಿಗೆ 1.6 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಕೃಷ್ಣ ಆರೋಪಿಸಿದ್ದರು. ಈ ಕುರಿತು ಅವರು ಫೇಸ್ಬುಕ್ನಲ್ಲಿ ಆಡಿಯೋ ಕ್ಲಿಪ್ವೊಂದನ್ನು ಹಂಚಿಕೊಂಡು ವಿವಾದ ಸೃಷ್ಟಿಸಿದ್ದರು.
ಇದನ್ನೂ ಓದಿ | ಎಐ ಶೃಂಗಸಭೆಯಲ್ಲಿ ಹೈಡ್ರಾಮಾ: ಅರೆಬೆತ್ತಲೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು!
ಡಿ.ಬಿ. ನಟೇಶ್ ದೂರು ಮತ್ತು ಬಂಧನ:
ತಮ್ಮ ವಿರುದ್ಧ ಸುಳ್ಳು ಮತ್ತು ತಿರುಚಿದ ದಾಖಲೆಗಳನ್ನು ಬಳಸಿ ಮಾನಹಾನಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಡಿ.ಬಿ. ನಟೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರು ಐಟಿ ಕಾಯ್ದೆ ಮತ್ತು ಬಿಎನ್ಎಸ್ (BNS) ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದರು. ಇಂದು ಮಧ್ಯಾಹ್ನ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣಕ್ಕೆ ಕೆಲಸದ ನಿಮಿತ್ತ ಬಂದಿದ್ದ ಸ್ನೇಹಮಯಿ ಕೃಷ್ಣ ಅವರನ್ನು ಪೊಲೀಸರು ನಾಟಕೀಯವಾಗಿ ಸುತ್ತುವರಿದು ವಶಕ್ಕೆ ಪಡೆದರು.
ಬೆಂಗಳೂರಿನಲ್ಲಿ ಕೃಷ್ಣ ಅವರ ಬಂಧನವಾಗುತ್ತಿದ್ದಂತೆಯೇ, ಇತ್ತ ಮೈಸೂರಿನಲ್ಲಿರುವ ಅವರ ಎರಡು ಮನೆಗಳ ಮೇಲೆ ಪೊಲೀಸರು ಸರ್ಚ್ ವಾರಂಟ್ನೊಂದಿಗೆ ದಾಳಿ ನಡೆಸಿದ್ದಾರೆ. ಆರೋಪಕ್ಕೆ ಬಳಸಲಾದ ಡಿಜಿಟಲ್ ಪುರಾವೆಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲು ಈ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.










