ಮೈಸೂರು: “ನನ್ನ ದೇಹದಲ್ಲಿ ಪ್ರಾಣವಿರುವವರೆಗೂ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಮತ್ತು ಜನರ ಸೇವೆ ಮಾಡುತ್ತೇನೆ. ಅಧಿಕಾರ ಇರಲಿ, ಇಲ್ಲದಿರಲಿ ಜನರೊಂದಿಗಿನ ನನ್ನ ಸಂಬಂಧ ಎಂದಿಗೂ ಕಡಿದು ಹೋಗುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಭಾವನಾತ್ಮಕವಾಗಿ ನುಡಿದರು.
ಮೈಸೂರು ತಾಲ್ಲೂಕಿನ ವರಕೂಡು ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಜೀವನದ ಏರಿಳಿತಗಳನ್ನು ಮೆಲುಕು ಹಾಕಿದರು. “ನಾನು ರಾಜಕೀಯದಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದೇನೆ. ಆದರೆ ಗೆದ್ದಾಗ ಬೀಗಿಲ್ಲ, ಸೋತಾಗ ಜನರ ಕೈ ಬಿಟ್ಟಿಲ್ಲ. ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಜನರು ನನ್ನನ್ನು ಮಗನಂತೆ ಬೆಳೆಸಿದ್ದಾರೆ. ನಿಮ್ಮ ಆಶೀರ್ವಾದದಿಂದಲೇ ನಾನು ಇಂದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
ಮಗ ಯತೀಂದ್ರನಿಗೆ ಜನರ ಬೆಂಬಲ ಕೋರಿದ ಸಿಎಂ
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರದ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಮಗ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಜವಾಬ್ದಾರಿಯನ್ನು ಹಸ್ತಾಂತರಿಸುವ ಸುಳಿವು ನೀಡಿದರು. “ಮುಖ್ಯಮಂತ್ರಿಯಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಬೇಕಿರುವುದರಿಂದ ನನಗೆ ಈಗ ಕ್ಷೇತ್ರಕ್ಕೆ ಹೆಚ್ಚು ಬರಲು ಸಾಧ್ಯವಾಗುತ್ತಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಮಗ ಯತೀಂದ್ರ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾನೆ. ನನ್ನನ್ನು ನೀವು ಹೇಗೆ ರಾಜಕೀಯವಾಗಿ ಬೆಳೆಸಿ ಹರಸಿದ್ದೀರೋ, ಹಾಗೆಯೇ ಯತೀಂದ್ರನನ್ನೂ ಬೆಳೆಸಿ, ಅವನಿಗೆ ನಿಮ್ಮ ಸಂಪೂರ್ಣ ಬೆಂಬಲ ನೀಡಿ” ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ | ಅಡುಗೆ ಅನಿಲ ಬಿಕ್ಕಟ್ಟು: ಬಿಜೆಪಿ ಸಂಸದರ ಮೌನ ಖಂಡಿಸಿ, ಸಂಸತ್ತಿನಲ್ಲಿ ಧ್ವನಿ ಎತ್ತಲು ಡಿಕೆಶಿ ಆಗ್ರಹ!
ಬಡವರ ಪರ ಆಡಳಿತಕ್ಕೆ ಬದ್ಧ
ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಬಡವರ ಕಲ್ಯಾಣದ ಬಗ್ಗೆ ಮಾತನಾಡಿದ ಅವರು, “ನಮ್ಮ ಆಡಳಿತದ ಕೇಂದ್ರ ಬಿಂದುವೇ ಬಡವರು ಮತ್ತು ಶೋಷಿತರು. ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೋಗಲಾಡಿಸುವುದೇ ನನ್ನ ಗುರಿ. ದೇವಸ್ಥಾನಕ್ಕೆ ಬರುವುದು ಕೇವಲ ಕಷ್ಟಕಾಲದಲ್ಲಿ ಮಾತ್ರವಲ್ಲ, ಭಕ್ತಿ ಎಂಬುದು ನಮ್ಮ ದೈನಂದಿನ ಕಾಯಕದಲ್ಲಿರಬೇಕು. ದೇವರು ಎಲ್ಲೆಡೆ ಇದ್ದಾನೆ, ಜನರ ಸೇವೆಯೇ ಜನಾರ್ದನನ ಸೇವೆ ಎಂದು ನಾನು ನಂಬಿದ್ದೇನೆ” ಎಂದರು.










