advertise here

Search

ಸರಿಯಾಗಿ ಬಟ್ಟೆ ಹಾಕದಿದ್ದರೆ ಆಸಿಡ್ ಹಾಕುವೆ ಎಂದು ಬೆದರಿಸಿದ್ದ ಬೆಂಗಳೂರಿನ ಉದ್ಯೋಗಿ ವಜಾ!


ಸರಿಯಾಗಿ ಬಟ್ಟೆ ಧರಿಸದಿದ್ದರೆ ಆಸಿಡ್ ಎರಚುವೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಇಟಿಯೋಸ್ ಸರ್ವಿಸಸ್ ಕಂಪನಿ ಸೇವೆಯಿಂದ ವಜಾಗೊಳಿಸಿದೆ.

ಪತ್ನಿಗೆ ಮಾಡಿದ ಮೆಸೇಜ್ ನ ಸ್ಕ್ರೀನ್ ಶಾಟ್ ಅನ್ನು ಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಮಹಿಳೆಯರಿಗೆ ಎಷ್ಟು ಸುರಕ್ಷಿತ? ಎಂದು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿದ್ದ ನಿಕಿತ್ ಶೆಟ್ಟಿ ಎಂಬಾತನನ್ನು ಕಂಪನಿಯು ಸೇವೆಯಿಂದ ವಜಾಗೊಳಿಸಿದೆ.

ನಿನಗಿಷ್ಟ ಬಂದ ಬಟ್ಟೆಗಳನ್ನು ಹಾಕಿಕೊಳ್ಳಬೇಡ. ಸರಿಯಾಗಿರುವ ಬಟ್ಟೆ ಹಾಕಿಕೊ. ಇಲ್ಲದಿದ್ದರೆ ಮುಖದ ಮೇಲೆ ಆಸಿಡ್ ಎರಚುವೆ ಎಂದು ನಿಕಿತ್ ಶೆಟ್ಟಿ ಮಹಿಳೆಗೆ ಮೆಸೇಜ್ ಮಾಡಿದ್ದ. ಈ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದ ಪತಿ, ನನ್ನ ಪತ್ನಿ ಬಟ್ಟೆಯ ಆಯ್ಕೆಯನ್ನು ನಿರ್ಧರಿಸುವ ಆ ವ್ಯಕ್ತಿ ಯಾರು? ಈ ರೀತಿ ಬೆದರಿಕೆ ಹಾಕುವವರ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಿ ಎಂದು ಪತಿ ಪೋಸ್ಟ್ ಮಾಡಿದ್ದರು.

ALSO READ :  ಕಣ್ಣಿಲ್ಲದಿದ್ದರೂ ಕನಸುಗಳಿಗೆ ಬಣ್ಣ ತುಂಬಿದ ರವಿ ರಾಜ್: ಯುಪಿಎಸ್‌ಸಿಯಲ್ಲಿ 20ನೇ ರ್ಯಾಂಕ್ ಗಳಿಸಿ ಐಎಎಸ್ ಕನಸು ನನಸು!

ಈ ಪೋಸ್ಟ್ ಅನ್ನು ಷೇರ್ ಮಾಡಿಕೊಂಡಿದ್ದ ಪತ್ರಕರ್ತ ಶಹಬಾಜ್ ಅಜರ್, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರನ್ನು ಟ್ಯಾಗ್ ಮಾಡಿ ಕೂಡಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಿಕಿತ್ ಶೆಟ್ಟಿ ಕೆಲಸ ಮಾಡುತ್ತಿದ್ದ ಕಂಪನಿ ಇಟಿಯೋಸ್ ಸರ್ವಿಸಸ್ ಕೂಡಲೇ ಆತನನ್ನು ಸೇವೆಯಿಂದ ವಜಾ ಮಾಡಿದೆ.

ಈ ವಿಷಯ ತಿಳಿದ ಮಹಿಳೆಯ ಪತಿ ಸಂಬಂಧಪಟ್ಟವರಿಗೆ ಧನ್ಯವಾದ ಅರ್ಪಿಸಿದ್ದು, ನನ್ನ ಮನವಿಗೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು. ಬೆಂಗಳೂರು ಸುರಕ್ಷಿತ ಮಾಡಲು ನಿಮ್ಮ ಕೊಡುಗೆ ಅಗತ್ಯ ಎಂದು ಪೋಸ್ಟ್ ಮಾಡಿದ್ದಾರೆ.


Scroll to Top