ಬೆಂಗಳೂರು: ಪ್ರೀತಿ, ಮದುವೆಯ ಭರವಸೆ ಮತ್ತು ನಂಬಿಕೆಯ ಹೆಸರಿನಲ್ಲಿ ಯುವತಿಯೊಬ್ಬಳನ್ನು ಬೆಂಗಳೂರಿಗೆ ಕರೆತಂದು, ಕೊನೆಗೆ ವೈಯರ್ನಿಂದ ಕತ್ತು ಬಿಗಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸಿಲಿಕಾನ್ ಸಿಟಿಯ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಕೊಡಗಿನ ಪೊನ್ನಂಪೇಟೆಯ ರಂಜಿತಾ (23) ಎಂಬುವವರೇ ಕೊಲೆಯಾದ ದುರ್ದೈವಿ. ಈ ಸಂಬಂಧ ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ನಂಬಿಸಿ ಕರೆತಂದು ವಂಚಿಸಿದ ಅಯ್ಯಪ್ಪ
ಕೊಡಗಿನ ಪೊನ್ನಂಪೇಟೆಯವರಾದ ಅಯ್ಯಪ್ಪ ಮತ್ತು ರಂಜಿತಾ ಒಂದೇ ಊರಿನವರು. ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಆತ ತನ್ನ ಹೆಂಡತಿಯಿಂದ ದೂರವಿದ್ದ ಎನ್ನಲಾಗಿದೆ. ಆದರೆ ಈ ವಿಷಯವನ್ನು ರಂಜಿತಾಳಿಂದ ಮರೆಮಾಚಿದ್ದ ಆತ, ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿದ್ದ. ಅಷ್ಟೇ ಅಲ್ಲದೆ, ಆಕೆಯನ್ನು ಮದುವೆಯಾಗುವುದಾಗಿ ಆಕೆಯ ಪೋಷಕರಿಗೂ ಮಾತು ಕೊಟ್ಟು, ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ಕರೆತಂದಿದ್ದ. ವರ್ತೂರು ಬಳಿಯ ಕೊಡತಿಯ ಬಾಡಿಗೆ ಮನೆಯೊಂದರಲ್ಲಿ ಇಬ್ಬರೂ ‘ಲಿವ್-ಇನ್ ರಿಲೇಶನ್ಶಿಪ್’ನಲ್ಲಿ ವಾಸವಿದ್ದರು. ಅಯ್ಯಪ್ಪ ಅಲ್ಲಿನ ಡ್ರೈ ಫ್ರೂಟ್ಸ್ ಅಂಗಡಿಯೊಂದರಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿದ್ದ.
ಜಗಳ ವಿಕೋಪಕ್ಕೆ ಹೋಗಿದ್ದೇ ಕೊಲೆಗೆ ಕಾರಣ
ಇತ್ತೀಚಿನ ದಿನಗಳಲ್ಲಿ ಅಯ್ಯಪ್ಪನ ಮೊದಲ ಮದುವೆಯ ವಿಷಯ ರಂಜಿತಾಳಿಗೆ ತಿಳಿದುಬಂದಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಪ್ರತಿನಿತ್ಯ ಗಲಾಟೆಗಳು ನಡೆಯುತ್ತಿದ್ದವು. “ನನಗೆ ಮೋಸ ಮಾಡಿ ಯಾಕೆ ಕರೆತಂದೆ? ತಕ್ಷಣವೇ ಮದುವೆಯಾಗು” ಎಂದು ರಂಜಿತಾ ಒತ್ತಾಯಿಸುತ್ತಿದ್ದರು. ಮಗಳ ಅಳಲನ್ನು ಕೇಳಿದ್ದ ಪೋಷಕರು ಕೂಡ ಆತಂಕಗೊಂಡಿದ್ದರು. ಕಳೆದ ಬುಧವಾರ ರಾತ್ರಿ ಕೂಡ ಇದೇ ಮದುವೆಯ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ಮಟ್ಟದ ಜಗಳ ನಡೆದಿದೆ. ಜಗಳ ತಾರಕಕ್ಕೇರಿದಾಗ ಆಕ್ರೋಶಗೊಂಡ ಅಯ್ಯಪ್ಪ, ಮನೆಯಲ್ಲಿದ್ದ ಎಲೆಕ್ಟ್ರಿಕಲ್ ವೈಯರ್ನಿಂದ ರಂಜಿತಾಳ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ.
ಆತ್ಮಹತ್ಯೆಯ ನಾಟಕವಾಡಿದ ಆರೋಪಿ
ಕೊಲೆ ಮಾಡಿದ ನಂತರ ಗಾಬರಿಗೊಂಡ ಅಯ್ಯಪ್ಪ, ಪ್ರಕರಣವನ್ನು ಮುಚ್ಚಿಹಾಕಲು ಮೃತದೇಹವನ್ನು ನೇಣು ಹಾಕಿ ಅದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ನಂತರ ರಂಜಿತಾಳ ಪೋಷಕರಿಗೆ ಕರೆ ಮಾಡಿ, “ನಿಮ್ಮ ಮಗಳು ನೇಣು ಹಾಕಿಕೊಂಡು ಸತ್ತಿದ್ದಾಳೆ” ಎಂದು ಸುಳ್ಳು ಕಥೆ ಕಟ್ಟಿದ್ದ. ಆದರೆ ಮಗಳ ಸಾವು ಆತ್ಮಹತ್ಯೆಯಲ್ಲ ಎಂದು ಅನುಮಾನಗೊಂಡ ಪೋಷಕರು ವರ್ತೂರು ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ | ವೀರೇಂದ್ರ ಹೆಗ್ಗಡೆ ನೇತೃತ್ವದ ಎಸ್ಡಿಎಂ ಸೊಸೈಟಿಗೆ ಭೂಕಬಳಿಕೆ ಸಂಕಷ್ಟ: ಕೋರ್ಟ್ನಿಂದ ಸಮನ್ಸ್ ಜಾರಿ!
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಯ್ಯಪ್ಪನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ. ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ವೈಯರ್ನಿಂದ ಬಿಗಿದು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವರ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.










