ಬೆಂಗಳೂರು: ಪವಿತ್ರವೆನಿಸಿದ ವೈದ್ಯಕೀಯ ವೃತ್ತಿಯಲ್ಲಿ ಭ್ರಷ್ಟಾಚಾರವೆಂಬ ಕ್ಯಾನ್ಸರ್ ಹರಡಿದೆ ಎಂಬ ಆತಂಕಕಾರಿ ವಿಷಯವೊಂದು ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಸರ್ಕಾರಿ ಆಸ್ಪತ್ರೆಗೆ ಮೀಸಲಾದ ಸೌಲಭ್ಯಗಳನ್ನು ಸ್ವಂತಕ್ಕೆ ಬಳಸಿಕೊಂಡು, ಕೋಟ್ಯಾಂತರ ರೂಪಾಯಿ ಹಣವನ್ನು ಲೂಟಿ ಮಾಡಿದ ಆರೋಪದ ಮೇಲೆ ಡಾ. ಶಿವಲಿಂಗಯ್ಯ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರೂ ಆದ ಹಿರಿಯ ಪತ್ರಕರ್ತ ರಾಘವೇಂದ್ರಾಚಾರಿ ಅವರು ಎಲ್ಲಾ ದಾಖಲೆಗಳ ಸಮೇತ ಈ ದೂರು ನೀಡಿದ್ದು, ಭ್ರಷ್ಟಾಚಾರದ ಎಳೆಎಳೆಯನ್ನು ಬಯಲಿಗೆಳೆದಿದ್ದಾರೆ.
ಲಾಂಡ್ರಿ ಯಂತ್ರ ಖರೀದಿಯಲ್ಲಿ ಕೋಟ್ಯಂತರ ಲೂಟಿ!
ಡಾ. ಶಿವಲಿಂಗಯ್ಯ ಅವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪಟ್ಟಿ ಬೆಚ್ಚಿಬೀಳಿಸುವಂತಿದೆ. ಆಸ್ಪತ್ರೆಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಲಾಂಡ್ರಿ ಯಂತ್ರಗಳನ್ನು ಖರೀದಿಸಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಈ ಯಂತ್ರಗಳನ್ನು ಬಳಸದೆ ಮೂಲೆಯಲ್ಲಿ ಇಡಲಾಗಿದೆ. ಇತ್ತ ಆಸ್ಪತ್ರೆಯ ಬಟ್ಟೆ ಒಗೆಯುವ ಕೆಲಸವನ್ನು ಬೇರೆ ಹೊರಗಿನ ಸಂಸ್ಥೆಗಳಿಗೆ (Outsourcing) ನೀಡಿ, ಅಲ್ಲಿಂದ ಕಮಿಷನ್ ಪಡೆಯುವ ಮೂಲಕ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟುಮಾಡಲಾಗಿದೆ ಎಂಬ ಗಂಭೀರ ಆರೋಪವಿದೆ.

ಕಚ್ಚಾ ವಸ್ತು ಆಸ್ಪತ್ರೆಯದ್ದು.. ಮನೆ ಶಿವಲಿಂಗಯ್ಯನವರದ್ದು!
ಭ್ರಷ್ಟಾಚಾರ ಕೇವಲ ಆಸ್ಪತ್ರೆಗೆ ಸೀಮಿತವಾಗಿಲ್ಲ. ಎಚ್.ಎಸ್.ಆರ್ ಲೇಔಟ್ನಲ್ಲಿ ಡಾ. ಶಿವಲಿಂಗಯ್ಯ ಅವರು ನಿರ್ಮಿಸುತ್ತಿರುವ ಐಷಾರಾಮಿ ಮನೆಗೆ ಆಸ್ಪತ್ರೆ ನಿರ್ಮಾಣಕ್ಕೆ ತಂದಿದ್ದ ಕಚ್ಚಾ ವಸ್ತುಗಳನ್ನೇ ಬಳಸಲಾಗಿದೆ ಎನ್ನಲಾಗಿದೆ. ಈ ಮನೆಗೆ ಬಿಬಿಎಂಪಿಯಿಂದ ಯಾವುದೇ ಅಧಿಕೃತ ಪ್ಲ್ಯಾನ್ (Plan) ಅಥವಾ ಅನುಮತಿ ಪಡೆದಿಲ್ಲ ಎಂಬುದು ಮತ್ತೊಂದು ಆಘಾತಕಾರಿ ಸಂಗತಿ.
ಅಧಿಕಾರ ದುರ್ಬಳಕೆ: ಸರ್ಕಾರದ ಹಣದಲ್ಲಿ ಬಂದ ಕಚ್ಚಾ ವಸ್ತುಗಳನ್ನು ಪರ್ಮಿಷನ್ ಇಲ್ಲದ ಮನೆಗೆ ಬಳಸುವ ಮೂಲಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ಎಲ್ಲಾ ಅಕ್ರಮಗಳ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಆಶಾ ಪರ್ವಿನ್ ಅವರು ಈ ಹಿಂದೆಯೇ ಖಡಕ್ ವರದಿಯೊಂದನ್ನು ಸಲ್ಲಿಸಿದ್ದರು. ಔಷಧ ಖರೀದಿ, ಸಾಮಗ್ರಿ ಖರೀದಿ ಮತ್ತು ಆಸ್ಪತ್ರೆಯ ಆವರಣದಲ್ಲಿ ನಡೆಯುತ್ತಿರುವ ಲಂಚದ ಬಗ್ಗೆ ಅವರು ಎಚ್ಚರಿಸಿದ್ದರು. ಅನೇಕ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ದೂರುಗಳಿದ್ದರೂ ಶಿವಲಿಂಗಯ್ಯ ಅವರು ಯಾವುದೇ ಕ್ರಮ ಕೈಗೊಳ್ಳದೆ ಭ್ರಷ್ಟರಿಗೆ ರಕ್ಷಣೆ ನೀಡುತ್ತಿದ್ದರು ಎಂಬುದು ಈಗ ಸಾಕ್ಷ್ಯ ಸಮೇತ ಬಹಿರಂಗವಾಗಿದೆ.
ಪತ್ರಕರ್ತ ರಾಘವೇಂದ್ರಾಚಾರಿ ಅವರ ಕಾನೂನು ಸಮರ
“ಸಾರ್ವಜನಿಕರ ಹಣವನ್ನು ವೈಯಕ್ತಿಕ ವೈಭೋಗಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಆಸ್ಪತ್ರೆಯಂತಹ ಜಾಗದಲ್ಲಿ ಇಂತಹ ದರ್ಬಾರ್ ನಡೆಯುತ್ತಿರುವುದು ದುರದೃಷ್ಟಕರ,” ಎಂದು ದೂರುದಾರರಾದ ರಾಘವೇಂದ್ರಾಚಾರಿ ಕಿಡಿಕಾರಿದ್ದಾರೆ. ಲೋಕಾಯುಕ್ತ ಪೊಲೀಸರು ಈಗ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.










