ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೋಳೇನಹಳ್ಳಿ ಗ್ರಾಮದಲ್ಲಿ ನಡೆದಿರುವ ಸರ್ಕಾರಿ ಭೂಮಿಯ ಬೃಹತ್ ಅಕ್ರಮವೊಂದು ವ್ಯವಸ್ಥೆಯ ಭ್ರಷ್ಟ ಮುಖವನ್ನು ಅನಾವರಣಗೊಳಿಸಿದೆ. ಕಾವಲುಗಾರನೇ ಕಳ್ಳನಾದಂತೆ, ಸರ್ಕಾರದ ಆಸ್ತಿಯನ್ನು ರಕ್ಷಿಸಬೇಕಾದ ಅಧಿಕಾರಿಗಳೇ ಶಾಮೀಲಾಗಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಪಾಲಿಗೆ ನೀಡಿರುವ ಆಘಾತಕಾರಿ ಸತ್ಯ ದಾಖಲೆಗಳ ಸಮೇತ ಬಯಲಾಗಿದೆ. ಇದರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಪ್ತ ಸಹಾಯಕ ಬಿ.ಎನ್. ವರಪ್ರಸಾದ್ ರೆಡ್ಡಿಯ ಹೆಸರು ಕೇಳಿ ಬಂದಿದೆ.
ಹಗರಣದ ಆಳ-ಅಗಲ: 2009ರ ಆ ಅಕ್ರಮವಾಗಿ ನಮೂದು!
ಚೋಳೇನಹಳ್ಳಿ ಗ್ರಾಮ/ದ ಸರ್ವೆ ನಂಬರ್ 100ರಲ್ಲಿರುವ ಸುಮಾರು 11.12 ಗುಂಟೆ ಸರ್ಕಾರಿ ಜಮೀನನ್ನು ನುಂಗಲು ಅಂದಿನ ಅಧಿಕಾರಿಗಳ ಪಡೆ ಹೂಡಿದ ಸಂಚು ಅಕ್ಷರಶಃ ಕಾನೂನಿನ ಕಣ್ಣಿಗೆ ಮಣ್ಣೆರಚುವಂತಿದೆ. ಆಗಿನ ತಹಶೀಲ್ದಾರ್ ಬಿ.ಎನ್. ವರಪ್ರಸಾದ್ ರೆಡ್ಡಿ, ರಾಜಸ್ವ ನಿರೀಕ್ಷಕ ನಂಜುಂಡಯ್ಯ, ಗ್ರಾಮ ಲೆಕ್ಕಾಧಿಕಾರಿ ಬಿ.ಎಚ್. ಮೋಹನ್ ಕುಮಾರ್ ಮತ್ತು ಭೂಮಿ ಆಪರೇಟರ್ ಕೆ.ಪಿ. ರಮೇಶ್ ಸೇರಿ ಅಕ್ರಮದ ‘ಮಹಾಜಾಲ’ವನ್ನೇ ಹೆಣೆದಿದ್ದಾರೆ.
ಉಪವಿಭಾಗಾಧಿಕಾರಿಗಳ ಆದೇಶ ಸಂಖ್ಯೆ 126/2009-10 (ದಿನಾಂಕ 27.08.2009) ಅನ್ನು ದುರ್ಬಳಕೆ ಮಾಡಿಕೊಂಡು, ದಾಖಲೆಗಳಲ್ಲಿ ಇಲ್ಲದ ಹೊಸ ಮ್ಯೂಟೇಷನ್ ಸೃಷ್ಟಿಸಿ, ಸುಮಾರು 0.22.08 ಗುಂಟೆ ವಿಸ್ತೀರ್ಣದ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾಯಿಸಲಾಗಿದೆ. ಇದು ಕೇವಲ ಕರ್ತವ್ಯ ಲೋಪವಲ್ಲ, ವ್ಯವಸ್ಥಿತವಾಗಿ ನಡೆದ ಭೂಗಳ್ಳತನ!
ನಿಯಮ 3ಕ್ಕೆ ಎಳ್ಳುನೀರು: ಎಲ್ಲಿ ಹೋಯಿತು ನೈತಿಕತೆ?
ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮ 1966ರ ನಿಯಮ 3/(1)(2)(3) ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಕಾಪಾಡಿಕೊಳ್ಳಬೇಕು. ಆದರೆ, ಇಲ್ಲಿ ಬಯೋಮೆಟ್ರಿಕ್ (Thumb impression) ನೀಡಿ, ಕಚೇರಿ ಟಿಪ್ಪಣಿಗೆ ಸಹಿ ಹಾಕಿದ ಅಧಿಕಾರಿಗಳು ತಮಗೆ ತಾವೇ ಶಿಕ್ಷೆ ಬರೆದುಕೊಂಡಿದ್ದಾರೆ. ಹಣದ ಆಸೆಗಾಗಿ ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ಬರೆದುಕೊಟ್ಟ ಈ ಅಧಿಕಾರಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿರುವುದು ದುರಂತ.
ದೂರುಗಳ ಮೇಲೆ ದೂರು: ಕಣ್ಮುಚ್ಚಿ ಕುಳಿತಿದೆಯೇ ಜಿಲ್ಲಾಡಳಿತ?
ಈ ಅಕ್ರಮದ ಕುರಿತು ಚನ್ನರಾಯಪಟ್ಟಣ ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಸವಿವರವಾದ ದೂರುಗಳನ್ನು ನೀಡಲಾಗಿದೆ. ಆದರೆ, ತನಿಖೆಯ ಹೆಸರಿನಲ್ಲಿ ‘ಕಣ್ಣಾಮುಚ್ಚಾಲೆ’ ಆಡಲಾಗುತ್ತಿದೆ. ಬಯೋಮೆಟ್ರಿಕ್ ಪುರಾವೆಗಳಿದ್ದರೂ, ತಪ್ಪಿತಸ್ಥ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಬದಲು ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ನಡೆಯುತ್ತಿರುವುದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಇದನ್ನೂ ಓದಿ | ಜೋಗಿಯಿಂದ ‘ಕೆಡಿ’ತನಕ್ಕೆ ಜಾರಿದರೇ ಪ್ರೇಮ್? ‘ಸರ್ಸೆ’ ಹಾಡಿನ ಅಶ್ಲೀಲತೆಗೆ ಕನ್ನಡಿಗರ ಧಿಕ್ಕಾರ!
ನ್ಯಾಯಾಧೀಶರ ಗಮನಕ್ಕೆ ನಮ್ಮ ಆಗ್ರಹ:
ಈ ಪ್ರಕರಣ ಕೇವಲ ಒಬ್ಬ ವ್ಯಕ್ತಿಯ ಹೋರಾಟವಲ್ಲ, ಇದು ಸಾರ್ವಜನಿಕ ಆಸ್ತಿಯ ಸಂರಕ್ಷಣೆಯ ಪ್ರಶ್ನೆ. ಆದ್ದರಿಂದ:
ಗೌರವಾನ್ವಿತ ನ್ಯಾಯಾಲಯವು ಈ ಕೂಡಲೇ ಸ್ವಯಂ ಪ್ರೇರಿತ (Suo Motu) ಕೇಸ್ ದಾಖಲಿಸಿಕೊಳ್ಳಬೇಕು.
ಭ್ರಷ್ಟ ಅಧಿಕಾರಿಗಳಾದ ಬಿ.ಎನ್. ವರಪ್ರಸಾದ್ ರೆಡ್ಡಿ, ಬಿ.ಎಚ್. ಮೋಹನ್ ಕುಮಾರ್, ಕೆ.ಪಿ. ರಮೇಶ್ ಮತ್ತು ತಂಡದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ, ಸೇವೆಯಿಂದ ವಜಾಗೊಳಿಸಬೇಕು. ಅಕ್ರಮವಾಗಿ ಖಾಸಗಿ ಹೆಸರಿಗೆ ಹೋಗಿರುವ ಜಮೀನನ್ನು ಮರಳಿ ‘ಕರಾಬ್ ಭೂಮಿ’ ಎಂದು ಪಹಣಿಯಲ್ಲಿ ನಮೂದಿಸಿ ಸರ್ಕಾರದ ವಶಕ್ಕೆ ಪಡೆಯಬೇಕು.
ಸರ್ಕಾರಿ ಭೂಮಿ ಎಂದರೆ ಅದು ಜನರ ಆಸ್ತಿ. ಅದನ್ನು ನುಂಗುವ ‘ಬಕಾಸುರ’ ಅಧಿಕಾರಿಗಳಿಗೆ ಶಿಕ್ಷೆಯಾಗದಿದ್ದರೆ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆ ನಶಿಸಿ ಹೋಗಲಿದೆ.










