ಬೆಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ನಗರವನ್ನು ರೂಪಿಸಬೇಕಾದ ಯೋಜನಾ ಪ್ರಾಧಿಕಾರ (ಜಿಬಿಎ) ಈಗ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ. ಬಿಲ್ಡಿಂಗ್ ಪ್ಲ್ಯಾನ್ ಅನುಮೋದನೆಯಿಂದ ಹಿಡಿದು ಪ್ರತಿಯೊಂದು ಸಣ್ಣ ಕೆಲಸಕ್ಕೂ ಲಕ್ಷ ಲಕ್ಷ ಲಂಚ ನೀಡಬೇಕಾದ ಅನಿವಾರ್ಯತೆ ಬಿಲ್ಡರ್ಗಳಿಗೆ ಎದುರಾಗಿದೆ. ಈ ‘ಲಂಚಕಾಂಡ’ ಈಗ ಕೇವಲ ಕಚೇರಿಯ ಗೋಡೆಗಳ ನಡುವೆ ಉಳಿದಿಲ್ಲ, ಬದಲಿಗೆ ವಿಧಾನಸೌಧದ ಅಂಗಳದಲ್ಲೂ ಪ್ರತಿಧ್ವನಿಸಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರು ದುರ್ಬಳಕೆ!
ಈ ಲಂಚಕಾಂಡದ ಅತ್ಯಂತ ಆಘಾತಕಾರಿ ಅಂಶವೆಂದರೆ, ಅಧಿಕಾರಿಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಬಳಸಿಕೊಂಡು ಲೂಟಿ ಮಾಡುತ್ತಿರುವುದು.
ಪ್ರತಿ ಫ್ಲಾಟ್ಗೆ ಇಂತಿಷ್ಟು ಎಂದು ಪರ್ಸಂಟೇಜ್ ನಿಗದಿಪಡಿಸಲಾಗಿದೆ. ಹಾಗೆಯೆ ಈ ಹಿಂದೆ ಇದ್ದ ದರಕ್ಕಿಂತ ಈಗ ಪರ್ಸಂಟೇಜ್ ಪ್ರಮಾಣ ದುಪ್ಪಟ್ಟಾಗಿದೆಯಂತೆ. “ನಮಗೇನೂ ಸಿಗಲ್ಲ, ಡಿಸಿಎಂ ಕಚೇರಿಯಿಂದಲೇ ಒತ್ತಡವಿದೆ, ಅಲ್ಲಿಗೇ ಹಣ ತಲುಪಿಸಬೇಕು” ಎಂದು ಡಿಕೆಶಿ ಹೆಸರನ್ನು ಅಧಿಕಾರಿಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರಂತೆ. ಈ ಮೂಲಕ ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಳ್ಳುತ್ತಾ ಸರ್ಕಾರದ ಹೆಸರಿಗೂ ಮಸಿ ಬಳಿಯುತ್ತಿದ್ದಾರೆಯೆ? ಅಥವಾ ಡಿಕೆ ಶಿವಕುಮಾರ್ರವರ ಹಸ್ತಕ್ಷೇಪವೂ ಇದರಲ್ಲಿದೆಯಾ? ಎಂಬ ಇಂಚಿಂಚು ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಬಯಲಿಗೆಳೆಯಲಿದೆ.
5 ಟೇಬಲ್, 5 ಹಂತ; ಪ್ರತಿ ಹಂತಕ್ಕೂ ಲಕ್ಷಗಳ ಲೇವಾದೇವಿ!
ಜಿಬಿಎ ಟೌನ್ ಪ್ಲ್ಯಾನಿಂಗ್ ವಿಭಾಗದಲ್ಲಿ ಫೈಲ್ಗಳಿಗೆ ಜೀವ ಬರಬೇಕೆಂದರೆ ಅದು ಕನಿಷ್ಠ ಐದು ಹಂತಗಳನ್ನು ದಾಟಬೇಕು. ದುರಂತವೆಂದರೆ, ಈ ಐದೂ ಟೇಬಲ್ಗಳಿಗೂ ಲಕ್ಷ ಲಕ್ಷ ರೂಪಾಯಿ ಲಂಚದ ‘ನೈವೇದ್ಯ’ ಅರ್ಪಿಸದಿದ್ದರೆ ಫೈಲ್ ಒಂದು ಇಂಚೂ ಮುಂದೆ ಕದಲುವುದಿಲ್ಲ. ಕೆಳಹಂತದ ಗುಮಾಸ್ತರಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಈ ಭ್ರಷ್ಟಾಚಾರದ ಸರಣಿಯಲ್ಲಿ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಸತ್ಯ ಬಿಲ್ಡರ್ಗಳಿಂದ ತಿಳಿದುಬಂದಿದೆ.

ಶಾಸಕ ಸತೀಶ್ ರೆಡ್ಡಿ ಬಿಚ್ಚಿಟ್ಟ ‘ಕರ್ಮಕಾಂಡ’
ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರು ಈ ಭ್ರಷ್ಟಾಚಾರದ ಜಾಲವನ್ನು ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಮತ್ತು ಹಣಕ್ಕಾಗಿ ಬಿಲ್ಡರ್ಗಳಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಲ್ಡರ್ಗಳ ಪಾಲಿಗೆ ಈ ಅಧಿಕಾರಿಗಳು ಕಂಟಕರಾಗಿದ್ದಾರೆ, ಲಂಚ ಕೊಡದಿದ್ದರೆ ಕೆಲಸ ಮಾಡಿಕೊಡುವುದಿಲ್ಲ ಎಂಬ ಹಠಕ್ಕೆ ಬಿದ್ದಿದ್ದಾರೆ” ಎಂದು ಅವರು ಸದನದ ಗಮನ ಸೆಳೆದಿದ್ದಾರೆ.
ಟೌನ್ ಪ್ಲ್ಯಾನಿಂಗ್ ವಿಭಾಗದ ಅಪರ ನಿರ್ದೇಶಕ ಗಿರೀಶ್ ಅವರ ಕಣ್ಗಾವಲಿನಲ್ಲೇ ಈ ಎಲ್ಲಾ ಅಕ್ರಮಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ತಮ್ಮ ಕೆಳಹಂತದ ಅಧಿಕಾರಿಗಳು ಮತ್ತು ಮಹಿಳಾ ಅಧಿಕಾರಿಗಳು ಬಹಿರಂಗವಾಗಿ ಲಂಚ ಪಡೆಯುತ್ತಿದ್ದರೂ ಗಿರೀಶ್ ಅವರಿಗೆ ಇದು ಗೊತ್ತಿಲ್ಲವೇ?” ಎಂಬುದು ಸಂಶಯಕ್ಕೆ ಕಾರಣವಾಗಿದೆ. ಎಲ್ಲವೂ ತಿಳಿದಿದ್ದರೂ ಗಿರೀಶ್ ಅವರು ‘ಪ್ರಾಮಾಣಿಕತೆ’ಯ ನಾಟಕವಾಡುತ್ತಾ ಭ್ರಷ್ಟರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ | ವರ್ಗಾವಣೆ ದಂಧೆಗೆ ಹೈಕೋರ್ಟ್ ಬ್ರೇಕ್! “ಸಿಎಂಗೆ ಇದಕ್ಕಿಂತ ದೊಡ್ಡ ಕೆಲಸಗಳಿವೆ” ಎಂದ ನ್ಯಾಯಪೀಠ
ಬಿಲ್ಡರ್ಗಳ ಆಕ್ರೋಶ: ಕೆಲಸ ಸ್ಥಗಿತದ ಎಚ್ಚರಿಕೆ
ಅಧಿಕಾರಿಗಳ ಈ ಲಂಚಬಾಕತನಕ್ಕೆ ಬೇಸತ್ತಿರುವ ಬಿಲ್ಡರ್ಗಳು ಈಗ ಬೀದಿಗಿಳಿಯುವ ಮುನ್ಸೂಚನೆ ನೀಡಿದ್ದಾರೆ. “ಒಂದು ಸಣ್ಣ ಕೆಲಸಕ್ಕೂ ಲಂಚ ಕೊಡಬೇಕೆಂದರೆ ಉದ್ಯಮ ನಡೆಸುವುದು ಹೇಗೆ?” ಎಂದು ಬಿಲ್ಡರ್ಗಳು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಯುವುದು ಖಚಿತವಾಗಿದೆ ಎಂದಿದ್ದಾರೆ.










