ಬೆಂಗಳೂರು: ಬಾಗಲಗುಂಟೆಯ ಎಂಇಐ ಲೇಔಟ್ನಲ್ಲಿ ನಡೆದಿರುವ 29 ವರ್ಷದ ಟೆಕ್ಕಿ ವಿದ್ಯಾಜ್ಯೋತಿಯ ಆತ್ಮಹತ್ಯೆ ಪ್ರಕರಣವು, ಕೇವಲ ಒಂದು ಕುಟುಂಬದ ದುರಂತವಲ್ಲ. ಇದು ಸಮಾಜದಲ್ಲಿ ಬೇರೂರಿರುವ ಜ್ಯೋತಿಷಿಗಳ ಅಂಧಕಾರದ ಮಾಯಾಜಾಲ ಮತ್ತು ಅದಕ್ಕೆ ಅಮಾಯಕರು ಬಲಿಯಾಗುತ್ತಿರುವ ಕರಾಳ ವಾಸ್ತವಕ್ಕೆ ಕನ್ನಡಿಯಾಗಿದೆ.
ಜ್ಯೋತಿಷಿಗಳ ಮಾಯಾಜಾಲ ಮತ್ತು ಭೀತಿಯ ವ್ಯಾಪಾರ:
ಈ ಸಾವಿನ ಹಿಂದೆ ಜ್ಯೋತಿಷಿಯೊಬ್ಬರು ಸೃಷ್ಟಿಸಿದ ಭೀತಿಯ ವಾತಾವರಣವೇ ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಯುವಕ-ಯುವತಿಯರಿಗೆ ತಮ್ಮ ಪ್ರಾಣದ ಭಯ, ಭವಿಷ್ಯದ ಚಿಂತೆ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಜ್ಯೋತಿಷಿಗಳು, ತಮಗೆ ಬೇಕಾದಂತೆ ಜಾತಕ ಬದಲಾಯಿಸುವುದು, ‘ಅಲ್ಪಾಯುಷಿ’ ಎಂದು ಭಯ ಹುಟ್ಟಿಸುವುದು, ನಂತರ ಶಾಂತಿ ಪೂಜೆಗಳ ಹೆಸರಿನಲ್ಲಿ ಸಾವಿರಾರು ರೂಪಾಯಿ ಸುಲಿಗೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಟೆಕ್ಕಿಗಳು ದುಡಿಯುವ ಹಣದ ಮೇಲೆ ಕಣ್ಣಿಡುವ ಇಂತಹ ವಂಚಕರಿಗೆ, ಪ್ರಾಣ ಉಳಿಸಿಕೊಳ್ಳುವ ಹಂಬಲವಿರುವ ಯುವಜನರು ಸುಲಭದ ತುತ್ತಾಗುತ್ತಿದ್ದಾರೆ.
ಟಿವಿ ಚಾನೆಲ್ಗಳ ಜವಾಬ್ದಾರಿ ಮತ್ತು ಮೌನ:
ಇಂದು ಪ್ರತಿದಿನ ಬೆಳಿಗ್ಗೆ ಟಿವಿ ಚಾನೆಲ್ಗಳನ್ನ ಓಪನ್ ಮಾಡಿದರೆ ಸಾಕು ಜ್ಯೋತಿಷ್ಯದ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಚಾನೆಲ್ಗಳು ಇಂತಹ ಜ್ಯೋತಿಷಿಗಳಿಗೆ ವೇದಿಕೆ ಕಲ್ಪಿಸಿಕೊಡುವ ಮೂಲಕ, ಅಪ್ರತ್ಯಕ್ಷವಾಗಿ ಮೂಢನಂಬಿಕೆಯನ್ನು ಬಿತ್ತುತ್ತಿವೆಯೇ? ಎಂಬ ಪ್ರಶ್ನೆ ಈಗ ಗಂಭೀರವಾಗಿ ಮೂಡಿದೆ. ಟಿವಿ ಚಾನೆಲ್ಗಳಲ್ಲಿ ಬಂದು ಕೂರುವ ಈ ‘ಭವಿಷ್ಯಕಾರರು’, ಮನುಷ್ಯನ ಮನಸ್ಸನ್ನು ನಿಯಂತ್ರಿಸುವಷ್ಟು ಪ್ರಭಾವಶಾಲಿಗಳಾಗಿದ್ದಾರೆ. ಇವರ ಸುಳ್ಳು ಭವಿಷ್ಯವಾಣಿಗಳೇ ಇಂತಹ ದುರಂತಗಳಿಗೆ ನಾಂದಿ ಹಾಡುತ್ತಿವೆ. ಮಾಧ್ಯಮಗಳು ಲಾಭದ ಆಮಿಷಕ್ಕಾಗಿ ಇಂತಹ ಜ್ಯೋತಿಷಿಗಳನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕಾದ ಸಮಯ ಬಂದಿದೆ.
ವಿದ್ಯಾಜ್ಯೋತಿಯ ಕುಟುಂಬಸ್ಥರು ಮಗಳ ಪ್ರಾಣ ಉಳಿಸಬೇಕೆಂಬ ಒಳ್ಳೆಯ ಉದ್ದೇಶದಿಂದಲೇ ಜ್ಯೋತಿಷಿ ಹೇಳಿದ ಎಲ್ಲಾ ವಿಧಿ-ವಿಧಾನಗಳನ್ನು ಪಾಲಿಸಿದ್ದರು. ಆದರೆ, ಅದೇ ವಿಧಿಗಳು ಮಗಳ ಮಾನಸಿಕ ಸ್ಥಿಮಿತವನ್ನು ಹಾಳು ಮಾಡಿ ಆತ್ಮಹತ್ಯೆಗೆ ಪ್ರೇರಣೆ ನೀಡಿದವು. ಇಂದು ಒಂದು ಸಾವು ಸಂಭವಿಸಿದೆ, ನಾಳೆ ಇಂತಹ ಘಟನೆಗಳು ಮತ್ತೊಬ್ಬರ ಮನೆಗೆ ಬಾರದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿ.
ಇದನ್ನೂ ಓದಿ | ಬೆಂಗಳೂರು ಕರಗ 2026: ಐತಿಹಾಸಿಕ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್!
ಮೂಢನಂಬಿಕೆಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಅವಶ್ಯಕತೆಯಿದೆ. ನಿಮ್ಮ ಜಾತಕವನ್ನು ನೀವೇ ಬರೆಯಿರಿ, ಭವಿಷ್ಯವನ್ನು ನಿಮ್ಮ ಪರಿಶ್ರಮದ ಮೂಲಕ ನಿರ್ಧರಿಸಿ. ಜ್ಯೋತಿಷಿಗಳ ಮಾತುಗಳನ್ನು ನಂಬಿ ಜೀವನವನ್ನು ದುರಂತದ ಕಡೆಗೆ ತಳ್ಳಬೇಡಿ.










