ಬೆಂಗಳೂರು: ಕಾನೂನು ಕಾಪಾಡಬೇಕಾದ ಪೊಲೀಸರೇ ಕಾನೂನು ಕೈಗೆತ್ತಿಕೊಂಡರೆ ಜನಸಾಮಾನ್ಯರು ಯಾರ ಬಳಿ ಹೋಗಿ ನ್ಯಾಯ ಕೇಳಬೇಕು? ನ್ಯಾಯಾಲಯ ನೀಡಿದ ಜಾಮೀನು (Bail) ಪ್ರತಿ ಹಿಡಿದು ಠಾಣೆಗೆ ಹೋದ ವ್ಯಕ್ತಿಯ ಮೇಲೆ ಖಾಕಿ ದರ್ಪ ಮೆರೆದಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಅಚ್ಚರಿಯೆಂದರೆ, ಮಾಗಡಿ ರಸ್ತೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (PSI) ವಿರುದ್ಧ ಅದೇ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅವಿನಾಶ್ ಎಂಬುವವರ ತಾಯಿ ಪ್ರಮಿಳಾ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀ ಎಂಬುವವರು ನೀಡಿದ ದೂರಿನ ಮೇರೆಗೆ, ಚೀಟಿ ಹಣ ವಂಚನೆಗೆ ಸಂಬಂಧಿಸಿದಂತೆ ಪ್ರಮಿಳಾ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಈ ಕೇಸ್ನ ತನಿಖೆ ನೆಪದಲ್ಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬುದು ಆರೋಪ ಕೇಳಿಬಂದಿದೆ.
ಯಾವುದೇ ಪೂರ್ವ ನೊಟೀಸ್ ನೀಡದೆ ಅವಿನಾಶ್ ಅವರ ತಾಯಿ, ಸಹೋದರಿ ಹಾಗೂ ತಂದೆಯನ್ನು ಬಂಧಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ಕೂಡ ಮಾಡಲಾಗಿದೆ ಎಂದು ಅವಿನಾಶ್ ಆರೋಪಿಸಿದ್ದಾರೆ.

ಬೇಲ್ ತಂದಿದ್ದಕ್ಕೇ ಕಪಾಳಮೋಕ್ಷ!
ತಮ್ಮ ತಾಯಿ ಮೇಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ್ ಅವರು ನ್ಯಾಯಾಲಯದಿಂದ ಜಾಮೀನು ಪಡೆದು, ಆ ಬೇಲ್ ಪ್ರತಿಯನ್ನು ನೀಡಲು ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಹೋಗಿದ್ದರು. ಈ ವೇಳೆ ಅಲ್ಲಿ ಹಾಜರಿದ್ದ ಪಿಎಸ್ಐ ಕೌಶಿಕ್ ಅವರು ಏಕಾಏಕಿ ರೊಚ್ಚಿಗೆದ್ದಿದ್ದಾರೆ.
“ಬೇಲ್ ತಗೊಂಡು ಬಂದಿದ್ದೀಯಾ?” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಿಎಸ್ಐ ಕೌಶಿಕ್, ಅವಿನಾಶ್ ಅವರ ತಾಯಿ ಮತ್ತು ಸಹೋದರಿಯ ಎದುರಲ್ಲೇ ಅವಿನಾಶ್ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, “ಈ ಕೇಸ್ಗೆ ಬೇಲ್ ತಗೊಂಡ್ರೆ, ನಿನ್ನ ಮೇಲೆ ಇನ್ನೊಂದು ಕೇಸ್ ಹಾಕ್ತೀನಿ” ಎಂದು ನೇರವಾಗಿ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.
ಪಿಎಸ್ಐ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲು!
ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ, ತಮ್ಮ ಮೇಲೆಯೇ ಹಲ್ಲೆ ನಡೆಸಿದ ಪಿಎಸ್ಐ ಕೌಶಿಕ್ ಅವರ ವರ್ತನೆಯಿಂದ ಬೇಸತ್ತ ಅವಿನಾಶ್, ಅದೇ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವಿನಾಶ್ ನೀಡಿದ ದೂರಿನ ಅನ್ವಯ, ಇದೀಗ ಪಿಎಸ್ಐ ಕೌಶಿಕ್ ಹಾಗೂ ಪ್ರಕರಣದ ದೂರುದಾರರಾದ ಲಕ್ಷ್ಮೀ ಮತ್ತು ನರಸಿಂಹ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಒಂದೇ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಸ್ಐ ವಿರುದ್ಧ ಅದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಪೊಲೀಸರ ಮುಂದಿನ ತನಿಖೆ ಯಾವ ತಿರುವು ಪಡೆಯಲಿದೆ ಕಾದು ನೋಡಬೇಕಿದೆ.










