ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಹೊತ್ತಿಕೊಂಡಿದ್ದ ‘ಕುಟುಂಬ ರಾಜಕಾರಣ’ದ ಕಿಚ್ಚನ್ನು ಆರಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಮಾಜಿ ಶಾಸಕ ದಿ. ಎಚ್.ವೈ. ಮೇಟಿ ಅವರ ಮಕ್ಕಳ ನಡುವಿನ ಟಿಕೆಟ್ ಫೈಟ್ ಈಗ ಸಂಧಾನದ ಮೂಲಕ ಸುಖಾಂತ್ಯ ಕಂಡಿದೆ.
ಟಿಕೆಟ್ಗಾಗಿ ಅಣ್ಣ-ತಮ್ಮ-ತಂಗಿಯರ ಜಟಾಪಟಿ
ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅವರ ನಾಲ್ವರು ಮಕ್ಕಳಾದ ಮಲ್ಲಿಕಾರ್ಜುನ, ಉಮೇಶ, ಬಾಯಕ್ಕ ಮತ್ತು ಮಹಾದೇವಿ ಪ್ರಬಲ ಆಕಾಂಕ್ಷಿಗಳಾಗಿದ್ದರು. ವಿಶೇಷವಾಗಿ ಮಹಾದೇವಿ ಮೇಟಿ ಅವರು, “ನನಗೆ ಟಿಕೆಟ್ ಸಿಗದಿದ್ದರೆ ಮಾರ್ಚ್ 20 ರಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ” ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿದ್ದು ಪಕ್ಷಕ್ಕೆ ದೊಡ್ಡ ತಲೆನೋವಾಗಿತ್ತು. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳು ನಡೆಸಿದ ಅಭಿಯಾನ ಕಾಂಗ್ರೆಸ್ ನಾಯಕರಲ್ಲಿ ಆತಂಕ ಮೂಡಿಸಿತ್ತು.
ಸಿದ್ದರಾಮಯ್ಯರ ಖಡಕ್ ಸೂಚನೆ ಮತ್ತು ಸಂಧಾನ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಿಎಂ ಸಿದ್ದರಾಮಯ್ಯ, ಇಂದು (ಮಾರ್ಚ್ 18) ಮೇಟಿ ಕುಟುಂಬದ ನಾಲ್ವರನ್ನೂ ಬೆಂಗಳೂರಿಗೆ ಕರೆಯಿಸಿಕೊಂಡು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಪ್ರತಿಯೊಬ್ಬರ ಅಭಿಪ್ರಾಯ ಆಲಿಸಿದ ಸಿಎಂ, ಪಕ್ಷದ ಹಿತದೃಷ್ಟಿಯಿಂದ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು:
ಟಿಕೆಟ್ ಮೇಟಿ ಕುಟುಂಬಕ್ಕೇ ಸಿಗಲಿದೆ ಎಂಬ ಭರವಸೆಯನ್ನು ಸಿಎಂ ನೀಡಿದ್ದಾರೆ ಎನ್ನಲಾಗಿದೆ.
ಒಬ್ಬರಿಗೆ ಮಾತ್ರ ಅವಕಾಶ: ನಾಲ್ವರಲ್ಲಿ ಒಬ್ಬರಿಗೆ ಹೈಕಮಾಂಡ್ ಟಿಕೆಟ್ ನೀಡುತ್ತದೆ. ಅಂತಿಮವಾಗಿ ಯಾರಿಗೆ ಟಿಕೆಟ್ ಸಿಕ್ಕರೂ ಉಳಿದ ಮೂವರು ಯಾವುದೇ ಭಿನ್ನಮತ ತೋರದೆ ಪಕ್ಷದ ಗೆಲುವಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
ಬಂಡಾಯಕ್ಕೆ ಇಲ್ಲ ಅವಕಾಶ: ಒಂದು ವೇಳೆ ಯಾರಾದರೂ ಬಂಡಾಯವೆದ್ದರೆ ಅದು ಪಕ್ಷಕ್ಕೆ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ | ಮಠದ ಶ್ರೀಮಂತಿಕೆ ಬಡವನಿಗೆ ಶಾಪವಾಯಿತೇ? – ಓದಿ ಕೆ.ಎಂ. ಶಿವಪ್ರಸಾದ್ ಅವರ ವಿಶೇಷ ಲೇಖನ!
ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ನೀಡಿರುವ ಮೇಟಿ ಮಕ್ಕಳು, ಪಕ್ಷದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಬಾಗಲಕೋಟೆ ಕಾಂಗ್ರೆಸ್ನಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ಸದ್ಯಕ್ಕೆ ತಣ್ಣಗಾಗಿದೆ. ಮಲ್ಲಿಕಾರ್ಜುನ ಮೇಟಿ ಅವರ ಹೆಸರು ಮುಂಚೂಣಿಯಲ್ಲಿದ್ದರೂ, ಅಧಿಕೃತವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಸದ್ಯದಲ್ಲೇ ಹೈಕಮಾಂಡ್ನಿಂದ ಪ್ರಕಟವಾಗಲಿದೆ.











