ಶಿವಮೊಗ್ಗ: ಕೇಂದ್ರ ಕಚೇರಿ ಹೊರಡಿಸುವ ಸುತ್ತೋಲೆಗಳು ಜಿಲ್ಲೆಗಳಲ್ಲಿ ಬೆಲೆ ಕಳೆದುಕೊಂಡು ಬಿಟ್ಟಿವೆಯಾ..? ಬೆಲೆನೇ ಇಲ್ಲ ಅಂದ ಮೇಲೆ,ಅವುಗಳ ಪಾಲನೆಯೇ ಆಗೊಲ್ಲ ಎಂದಾದ್ರೆ ಸುತ್ತೋಲೆಗಳನ್ನು ಯಾಕಾದ್ರೂ ಹೊರಡಿಸಬೇಕೋ ಗೊತ್ತಾಗುತ್ತಿಲ್ಲ.ಇದನ್ನೆಲ್ಲಾ ಹೇಳೊಕ್ಕೆ ಕಾರಣವೇ ಶಿವಮೊಗ್ಗ ವಿಭಾಗೀಯ ಕಚೇರಿಯಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಅವ್ಯವಸ್ಥೆ ಹಾಗೂ ಅಂದದರ್ಬಾರ್.

ಚಾಲನಾ ಸಿಬ್ಬಂದಿಗಳಿಗೆ ಡ್ಯೂಟಿ ರೋಟಾ ಕೌನ್ಸೆಲಿಂಗ್ ಮೂಲಕ ಚಾಲನಾ ಸಿಬ್ಬಂದಿಗಳಿಗೆ ಮಾರ್ಗಚರಣೆಯ ಮಾರ್ಗಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.ಅಂದ್ಹಾಗೆ ಇದೊಂದು ಸಹಜ ಪ್ರಕ್ರಿಯೆ.ಎಲ್ಲವೂ ಪಾರದರ್ಶಕ ವಾಗಿ ನಡೆಯಬೇಕು. ಯಾರೊಬ್ಬರಿಗೂ ಸಮಸ್ಯೆ ಆಗಬಾರದು.ಯಾವುದೇ ಚಾಲನಾ ಸಿಬ್ಬಂದಿ ಕೂಡ ಇದರ ಬಗ್ಗೆ ಆಕ್ಷೇಪ-ಅನುಮಾನ ವ್ಯಕ್ತಪಡಿಸಬಾರದೆನ್ನುವುದು ಇದರ ಉದ್ದೇಶ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಛೇರಿಯ ಸುತ್ತೋಲೆ ಸಂಖ್ಯೆ 1192 ಹೇಳುವುದು ಕೂಡ ಇದನ್ನೇ..ಆದರೆ ಶಿವಮೊಗ್ಗ ವಿಭಾಗೀಯ ಕಚೇರಿಯಲ್ಲಿ ಈ ಪ್ರಕ್ರಿಯೆಯನ್ನು ಕೆಲವು ಅಧಿಕಾರಿಗಳು ಹಾಳೆಬ್ಬಿಸಿದ್ದಾರೆ.ಸುತ್ತೋಲೆ ಪ್ರಕಾರ ನಡೆಯಬೇಕಿದ್ದ ಪ್ರಕ್ರಿಯೆ ಅಧಿಕಾರಿಗಳ ಹಿತಾಸಕ್ತಿಗೆ ತಕ್ಕಂತೆ ನಡೆಯುತ್ತಿದೆ ಎನ್ನುವ ಮಾತು ಅನೇಕ ನೊಂದ ಸಿಬ್ಬಂದಿಯಿಂದ ಕೇಳಿಬರುತ್ತಿದೆ.

ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ಡ್ಯೂಟಿ ರೋಟಾ ಕೌನ್ಸೆಲಿಂಗ್ ಮೂಲಕ ಮಾರ್ಗಚರಣೆಯ ಮಾರ್ಗಗಳನ್ನು ಆಯ್ಕೆ ಮಾಡಬೇಕಿದೆ.ಈ ಪ್ರಕ್ರಿಯೆಯೂ ನಡೆಯುತ್ತಿದೆ.ಆದರೆ ಯಾವ ನಿಯಾಮವಳಿಗಳಂತೆ ನಡೆಯಬೇಕಿತ್ತೋ, ಹಾಗೆ ನಡೆಯುತ್ತಿಲ್ಲ ಎನ್ನಲಾಗುತ್ತಿದೆ.

ಪ್ರಕ್ರಿಯೆ ಬಗ್ಗೆ ಚಾಲನಾ ಸಿಬ್ಬಂದಿ ದೂರುವಂತಾಗಿದೆ. ಪಾರದರ್ಶಕತೆಯನ್ನೇ ಮರೆಮಾಚಲಾ ಗಿದೆಯಂತೆ. ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹಿಂಬರಹ ನೀಡಿದ್ದರೂ ಸಹ ಶಿವಮೊಗ್ಗ ವಿಭಾಗದ ಅಧಿಕಾರಿಗಳು/ಸಿಬ್ಬಂದಿಗಳ ಏಕಪಕ್ಷೀಯವಾಗಿ ನಿರ್ಧಾರ ಮಾಡಿ ದಬ್ಬಾಳಿಕೆ ದೌರ್ಜನ್ಯ ನಡೆಸಿ10/03/2025 ರ ಕೌನ್ಸೆಲಿಂಗ್ ಪ್ರಕ್ರಿಯೆಯನ್ನೇ ಗಬ್ಬೆಬ್ಬಿಸಿದ್ದಾರೆನ್ನುವುದು ಚಾಲನಾ ಸಿಬ್ಬಂದಿಯ ನೇರ ಹಾಗೂ ಗಂಭೀರ ಆರೋಪ.

ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತಮಗೆ ಬೇಕಾದಂತೆ..ಬೇಕಾದವರಿಗೆ( ಹಣ ಪಡೆದು ಬೇಕಾದ ಡ್ಯೂಟಿ-ಮಾರ್ಗಗಳನ್ನು ನೀಡಲಾಗುತ್ತಿದೆ ಎನ್ನುವ ಆಪಾದನೆ ಕೂಡ ಕೇಳಿಬಂದಿದೆ) ಬೇಕಾದ ಡ್ಯೂಟಿ ಕೊಡಲಾಗುತ್ತಿದೆ.ಇದರಿಂದ ಅನೇಕರಿಗೆ ಅನ್ಯಾಯ ಆಗುತ್ತಿದೆ. ದಯವಿಟ್ಟು ರೋಟಾ ಕೌನ್ಸೆಲಿಂಗ್ ನಲ್ಲಿ ಉದ್ಭವವಾಗಿರುವ ಹಲವು ಲೋಪದೋಷಗಳನ್ನು ಸರಿಪಡಿಸಿ ಡ್ಯೂಟಿ ರೋಟಾ ಕೌನ್ಸೆಲಿಂಗ್ ನಡೆಸುವಂತೆ ಹಲವಾರು ಆಕ್ಷೇಪಣೆಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರಂತೆ.ಆದರೆ ಎಂದಿನಂತೆಯೇ ಪ್ರಕ್ರಿಯೆ ನಡೆಯುತ್ತಿದೆ.ಆದರೆ ಅವ್ಯವಸ್ಥೆಗಳು ಮಾತ್ರ ಸರಿಯಾಗಿಲ್ಲ ಎನ್ನುತ್ತಾರೆ ನೊಂದ ಸಿಬ್ಬಂದಿ.

ಚಾಲನಾ ಸಿಬ್ಬಂದಿ ಅನೇಕ ರೀತಿಯಲ್ಲಿ ಮನವಿ ಮಾಡಿಕೊಂಡ್ರೂ ಅಮಾನವೀಯ ಹಾಗೂ ದುರಂಹಕಾರದ ಅಧಿಕಾರಿಗಳು ಯಾವುದೇ ಮನವಿಗಳಿಗೆ ಸ್ಪಂದಿಸದೆ ಏಕಪಕ್ಷೀಯವಾಗಿ ಅಧಿಕಾರಿಗಳ ವರ್ಗ ಡ್ಯೂಟಿ ರೋಟಾ ಕೌನ್ಸೆಲಿಂಗ್ ಮಾಡಿ ಮುಕ್ತಾಯ ಮಾಡಲಾಗಿರುತ್ತದೆ. ಆದರೆ ಈ ಕೌನ್ಸೆಲಿಂಗ್ ನಲ್ಲಿ ಹಲವಾರು ಅನುಮಾನಗಳು ಲೋಪದೋಷಗಳು ಇರುವುದರಿಂದ ಹಲವಾರು ಕಾರ್ಮಿಕ ಸಿಬ್ಬಂದಿಗಳು ಶಿವಮೊಗ್ಗ C.I.T.U. ಸಂಘಟನೆಯ ನೇತೃತ್ವದಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಅದರಂತೆ ಏಲ್ಲಾ ಲೋಪದೋಷಗಳನ್ನು ಸರಿಪಡಿಸಿ ಕಾರ್ಮಿಕ ಸಿಬ್ಬಂದಿಗಳಿಗೆ ಅನ್ಯಾಯ ಆಗಬಾರದು ಎಂದು ಡೈರೆಕ್ಷನ್ ಕೂಡ ನೀಡಲಾಗಿರುತ್ತದೆ


ಹೈ ಕೊರ್ಟ್ ನೀಡಿರುವ ಆದೇಶದಂತೆ ಶಿವಮೊಗ್ಗ ವಿಭಾಗದ ಶಿವಮೊಗ್ಗ ಘಟಕದಲ್ಲಿ ಪುನಃ ದಿನಾಂಕ 19/06/2025 ರಿಂದ ಜಾರಿಗೆ ಬರುವಂತೆ ಡ್ಯೂಟಿ ರೋಟಾ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ.ಆದರೆ ಈ ಬಾರಿಯೂ ಅಧಿಕಾರಿಗಳು ತಮ್ಮ ಚಾಳಿ ಬಿಟ್ಟು ಪ್ರಾಮಾಣಿಕವಾಗಿ,ಪಾರದರ್ಶಕವಾಗಿ ಕೆಲಸ ಮಾಡುತ್ತಾರೆನ್ನುವ ನಂಬಿಕೆಯೇ ಚಾಲನಾ ಸಿಬ್ಬಂದಿಗೆ ಇಲ್ಲವಾಗಿದೆ.ಹಾಗಾಗಿ ಹೈ ಕೋರ್ಟ್ ಆದೇಶದ ಪಾಲನೆ ಕಡ್ಡಾಯವಾಗಿ ಜಾರಿ ಮಾಡಬೇಕು ಎಂದು ಕೇಂದ್ರ ಕಚೇರಿ ಫರ್ಮಾನ್ ಹೊರಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಚಾಲನಾ ಸಿಬ್ಬಂದಿಗೆ ಅನ್ಯಾಯ ಆಗಬಾರದು ಎನ್ನುವ ಕಾರಣದ ಹಿನ್ನಲೆಯಲ್ಲಿ ಮಾಡಲಾಗಿರುವುದೇ ಈ ಕೌನ್ಸಿಲಿಂಗ್ .ಆದರೆ ಅದೇ ಕೌನ್ಸಿಲಿಂಗ್ ನಲ್ಲೂ ಹಣ ಮಾಡಲು ನೋಡುವ ಕೆಲವು ಅಪ್ರಮಾಣಿಕ-ಅದಕ್ಷ ಅಧಿಕಾರಿ ಸಿಬ್ಬಂದಿಯಿಂದ ಪ್ರಾಮಾಣಿಕರಿಗೆ ಅನ್ಯಾಯ ಆಗಬಾರದು.ಕೇಂದ್ರ ಕಚೇರಿ ಒಳ್ಳೆಯ ಉದ್ದೇಶದಿಂದಲೇ ಮಾಡಿರುವ ಈ ಪ್ರಕ್ರಿಯೆಗೆ ಮಸಿ ಬಳಿಯುವ ಕೆಲಸ ಮಾಡಲು ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಬಹುಷಃ ಪರಿಸ್ಥಿತಿ ಸುಧಾರಿಸಬಹುದು.ಇನ್ನುಳಿದವರು ಎಚ್ಚೆತ್ತುಕೊಂಡು ಅರ್ಹರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬಹುದೇನೋ ಎನ್ನಿಸುತ್ತೆ.