ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕಿದೆ ಎಂಬ ಸುದ್ದಿ ಕೇಳಿ ಇಡೀ ರಾಜ್ಯವೇ ಕುತೂಹಲದಿಂದ ಇತ್ತು. ಆದರೆ, ಈ ನಿಧಿಯ ಹಿಂದೆ ಅಡಗಿದ್ದದ್ದು ಅಸಲಿ ಬಂಗಾರವಲ್ಲ, ಬದಲಿಗೆ ಅಂತರಾಜ್ಯ ಮಟ್ಟದ ವಂಚಕ ಜಾಲದ ಕರಾಳ ಮುಖ! ನಿಧಿ ಆಸೆಗೆ ಬಿದ್ದ ರೈತರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದ ಉತ್ತರಾಖಂಡ ಮೂಲದ ಕಿಂಗ್ಪಿನ್ ಹಜರತ್ ಮೌಲ್ವಿಯನ್ನು ಗದಗ ಪೊಲೀಸರು ಹಡೆಮುರಿ ಕಟ್ಟಿದ್ದಾರೆ.
ಹೇಗಿತ್ತು ನಿಧಿ ಶೋಧದ ಮೋಸದಾಟ?
ಈ ವಂಚನೆಯ ಕಥೆ ಶುರುವಾಗಿದ್ದು 2022ರಲ್ಲಿ. ಲಕ್ಕುಂಡಿಯ ಸಣ್ಣಬಸಪ್ಪ ಮತ್ತು ದೊಡ್ಡಬಸಪ್ಪ ಎಂಬ ಸಹೋದರರ ಜಮೀನಿನಲ್ಲಿ ನಿಧಿಯಿದೆ ಎಂದು ನಂಬಿಸಿದ ವಂಚಕರ ತಂಡ, ಅದನ್ನು ತೆಗೆಯಲು ಮಾಟ-ಮಂತ್ರದ ಮೊರೆ ಹೋಗುವಂತೆ ನಾಟಕವಾಡಿತ್ತು.
ಬಂಧಿತ ಆರೋಪಿ ಹಜರತ್ ಮೌಲ್ವಿ ಗದಗಕ್ಕೆ ಬಂದು ಹಳೆಯ ಭಾಂಡೆ ಅಂಗಡಿಯಲ್ಲಿ ಒಂದು ಬಿಂದಿಗೆಯನ್ನು ಖರೀದಿಸಿದ್ದ. ಅದರಲ್ಲಿ ಮಣ್ಣು ತುಂಬಿಸಿ, ಅದರ ಮೇಲೆ ಚಿನ್ನದ ಬಣ್ಣದ ಚಾಕಲೇಟ್ ಕಾಯಿನ್ಗಳು ಮತ್ತು ನಕಲಿ ಬಿಸ್ಕಿಟ್ಗಳನ್ನು ಇಟ್ಟು ಜಮೀನಿನ ಆರು ಅಡಿ ಹಳ್ಳದಲ್ಲಿ ಹೂತು ಹಾಕಿದ್ದ.
ಪೂಜೆ ಮಾಡಿ ಹಳ್ಳ ತೋಡಿದಾಗ ಹಂಡೆಯಲ್ಲಿ ಬಂಗಾರ ಹೊಳೆಯುತ್ತಿರುವುದನ್ನು ಕಂಡ ರೈತರು ಬೆರಗಾಗಿದ್ದರು. ಇದನ್ನು ವಿಡಿಯೋ ಮಾಡಿಕೊಂಡಿದ್ದ ವಂಚಕರು, ಇತರರಿಗೂ ಮೋಸ ಮಾಡಲು ಈ ವಿಡಿಯೋ ಬಳಸಿಕೊಳ್ಳಲು ಸಿದ್ಧತೆ ನಡೆಸಿದ್ದರು.
ಹಣ ಸಿಗದಿದ್ದಾಗ ಮಣ್ಣಾದ ‘ಬಂಗಾರ’!
ನಿಧಿ ತೆಗೆದ ಬಳಿಕ ರೈತರಿಂದ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೌಲ್ವಿ, ಹಣ ಕೊಡಲು ರೈತರು ನಿರಾಕರಿಸಿದಾಗ ಹೊಸ ನಾಟಕವಾಡಿದ್ದ. “ನೀವು ಹಣ ಕೊಡದಿದ್ದರೆ ಈ ನಿಧಿ ಮಣ್ಣಾಗುತ್ತದೆ” ಎಂದು ಹೇಳಿ ಆ ಹಂಡೆಯನ್ನು ಕಾಲಿನಿಂದ ಒದ್ದು ಮತ್ತೆ ಮಣ್ಣು ಮಾಡಿದ್ದ. ರೈತರು ಇದನ್ನು ದೈವಶಾಪವೆಂದೇ ನಂಬಿದ್ದರು! ಆದರೆ ಇತ್ತೀಚೆಗೆ ಲಕ್ಕುಂಡಿಯಲ್ಲಿ ಮತ್ತೆ ನಿಧಿಯ ಚರ್ಚೆ ಶುರುವಾದಾಗ ಪೊಲೀಸರು ರೈತರನ್ನು ವಿಚಾರಣೆ ನಡೆಸಿದಾಗ ಈ ಎಲ್ಲಾ ಕರಾಳ ಸತ್ಯಗಳು ಹೊರಬಂದಿವೆ.
ಇದನ್ನೂ ಓದಿ | ವಿಕ್ಟೋರಿಯಾದಲ್ಲಿ ಸ್ಕ್ಯಾನಿಂಗ್ ಭಾಗ್ಯವಿಲ್ಲ! ಬಡ ರೋಗಿಗಳ ಪಾಲಿಗೆ ‘ನರಕ’ವಾದ ಮಹಾ ಆಸ್ಪತ್ರೆ
ಗದಗ ಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉತ್ತರಾಖಂಡದ ಕಾಶಿಪುರದ ಹಜರತ್ ಮೌಲ್ವಿಯನ್ನು ಬಂಧಿಸಲಾಗಿದೆ. ಈ ಜಾಲದ ಹಿಂದೆ ಬಸೀರಾ ಎಂಬ ಮಹಿಳೆ ಸೇರಿದಂತೆ ಇಕ್ಬಾಲ್, ಗೂಳಪ್ಪ ಎಂಬುವವರ ದೊಡ್ಡ ಸಂಚೇ ಇರುವುದು ಬೆಳಕಿಗೆ ಬಂದಿದೆ. ಲಕ್ಕಿ ರೆಸಿಡೆನ್ಸಿಯಲ್ಲಿ ವಾಸ್ತವ್ಯ ಹೂಡಿ ನಿಧಿ ಶೋಧದ ಹೆಸರಲ್ಲಿ ಮೋಸ ಮಾಡುತ್ತಿದ್ದ ಈ ಗ್ಯಾಂಗ್ನ ಹಳೆಯ ಕಡತಗಳಿಗೆ ಈಗ ಮರುಜೀವ ಬಂದಿದೆ.










