ನವದೆಹಲಿ: ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಎಐ ಇಂಪ್ಯಾಕ್ಟ್ ಶೃಂಗಸಭೆಯ ಅಂತಿಮ ದಿನವಾದ ಇಂದು (ಫೆಬ್ರವರಿ 20), ಭಾರತ್ ಮಂಟಪದ ಆವರಣದೊಳಗೆ ಭಾರಿ ನಾಟಕೀಯ ಬೆಳವಣಿಗೆಗಳು ನಡೆದವು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವಿರುವ ಟಿ-ಶರ್ಟ್ಗಳನ್ನು ಧರಿಸಿ ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ಶೃಂಗಸಭೆಯ ಮಧ್ಯದಲ್ಲೇ ಅರೆಬೆತ್ತಲೆ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೃಂಗಸಭೆಯ ಹಾಲ್ ನಂಬರ್ 5ರಲ್ಲಿ ಈ ಘಟನೆ ಸಂಭವಿಸಿದೆ. ಆನ್ಲೈನ್ ಮೂಲಕ ನೋಂದಾಯಿಸಿಕೊಂಡು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಾಮಾನ್ಯ ಸಂದರ್ಶಕರಂತೆ ಒಳಬಂದಿದ್ದ ಸುಮಾರು 10 ಕಾರ್ಯಕರ್ತರು, ಆರಂಭದಲ್ಲಿ ಜಾಕೆಟ್ ಮತ್ತು ಸ್ವೆಟರ್ಗಳನ್ನು ಧರಿಸಿದ್ದರು. ಇದರಿಂದ ಅವರ ಟಿ-ಶರ್ಟ್ ಮೇಲಿದ್ದ ಘೋಷಣೆಗಳು ಭದ್ರತಾ ಸಿಬ್ಬಂದಿಯ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ, ಒಳಗೆ ಬಂದ ಕೂಡಲೇ ಹಠಾತ್ತನೆ ತಮ್ಮ ಅಂಗಿಗಳನ್ನು ಬಿಚ್ಚಿದ ಪ್ರತಿಭಟನಾಕಾರರು, ‘ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ’ (PM is Compromised) ಎಂದು ಘೋಷಣೆ ಕೂಗುತ್ತಾ ಓಡಾಡಿದರು.
ಅವರು ಧರಿಸಿದ್ದ ಟಿ-ಶರ್ಟ್ಗಳ ಮೇಲೆ ಮೋದಿ-ಟ್ರಂಪ್ ಫೋಟೋ ಮಾತ್ರವಲ್ಲದೆ, ‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದ’ ಮತ್ತು ‘ಎಪ್ಸ್ಟೀನ್ ಫೈಲ್ಸ್’ ಕುರಿತಾದ ವಿವಾದಾತ್ಮಕ ಬರಹಗಳಿದ್ದವು. ಕೇಂದ್ರ ಸರ್ಕಾರವು ದೇಶದ ಹಿತಾಸಕ್ತಿಯನ್ನು ಬಲಿಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಪೊಲೀಸ್ ಕ್ರಮ ಮತ್ತು ಎಫ್ಐಆರ್:
ಈ ಹಠಾತ್ ಪ್ರತಿಭಟನೆಯಿಂದ ಶೃಂಗಸಭೆಗೆ ಆಗಮಿಸಿದ್ದ ದೇಶ-ವಿದೇಶಗಳ ಪ್ರತಿನಿಧಿಗಳು ಒಂದು ಕ್ಷಣ ದಿಗಿಲುಗೊಂಡರು. ಕೂಡಲೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ಸುತ್ತುವರಿದು ವಶಕ್ಕೆ ಪಡೆದರು. ಸದ್ಯ ಹತ್ತಕ್ಕೂ ಹೆಚ್ಚು ಜನರನ್ನು ತಿಲಕ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ | ಮಾಗಡಿ ರಸ್ತೆ ಠಾಣೆಯ ಪಿಎಸ್ಐ ವಿರುದ್ಧ ಅದೇ ಠಾಣೆಯಲ್ಲಿ ಎಫ್ಐಆರ್ ದಾಖಲು!
ರಾಜಕೀಯ ಕೆಸರೆರಚಾಟ:
ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಬಿಜೆಪಿ ನಾಯಕರು ಈ ವರ್ತನೆಯನ್ನು ‘ಅಸಭ್ಯ’ ಮತ್ತು ‘ದೇಶಕ್ಕೆ ಮುಜುಗರ ತರುವ ಕೆಲಸ’ ಎಂದು ಖಂಡಿಸಿದ್ದಾರೆ. “ಭಾರತವು ತಂತ್ರಜ್ಞಾನ ಲೋಕದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವಾಗ, ಕಾಂಗ್ರೆಸ್ ಇಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಕಿಡಿಕಾರಿದ್ದಾರೆ.
ಇನ್ನೊಂದೆಡೆ, ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್ ತಮ್ಮ ಕಾರ್ಯಕರ್ತರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. “ದೇಶದ ರೈತರಿಗೆ ಮತ್ತು ಯುವಕರಿಗೆ ಮಾರಕವಾಗುವಂತಹ ವ್ಯಾಪಾರ ಒಪ್ಪಂದಗಳಿಗೆ ಪ್ರಧಾನಿ ಸಹಿ ಹಾಕುತ್ತಿದ್ದಾರೆ. ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.










