ರಾಮನಗರ: ಸ್ನೇಹಿತರ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋದ ಯುವಕನ ಮೇಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೃಗೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಟ್ಟಗುಪ್ಪೆ ಗ್ರಾಮದ ಕೆರೆ ಬಳಿ ನಡೆದ ಈ ಭೀಕರ ಕೃತ್ಯವು ಮನುಷ್ಯತ್ವವೇ ನಾಚುವಂತಿದೆ.
ಪುನೀತ್ ಎಂಬ ಯುವಕನು ತನ್ನ ಪರಿಚಯಸ್ಥರ ಬರ್ತಡೆ ಪಾರ್ಟಿಗೆಂದು ತಟ್ಟಗುಪ್ಪೆ ಕೆರೆ ಬಳಿ ಬಂದಿದ್ದನು. ಈ ವೇಳೆ ಅಲ್ಲಿಗೆ ಬಂದ ಕ್ರಿಮಿನಲ್ ಹಿನ್ನೆಲೆಯುಳ್ಳ ಗಜೇಂದ್ರ ಹಾಗೂ ಸುಮಂತ್ ಎಂಬುವವರು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಪುನೀತ್ ಮೇಲೆರಗಿದ್ದಾರೆ. ಹಲ್ಲೆಗೊಳಗಾದ ಪುನೀತ್ ಪ್ರಾಣ ಉಳಿಸಿಕೊಳ್ಳಲು ಕೈ ಮುಗಿದು ಬೇಡಿಕೊಂಡರೂ, ಕಾಲು ಹಿಡಿದು ಕ್ಷಮೆಯಾಚಿಸಿದರೂ ಈ ಕಿರಾತಕರು ಮಾತ್ರ ಬಿಡಲಿಲ್ಲ.
ವಿಕೃತಿಯ ಪರಮಾವಧಿ:
ಆರೋಪಿಗಳಾದ ಗಜೇಂದ್ರ ಮತ್ತು ಸುಮಂತ್ ಅವರು ಪುನೀತ್ನನ್ನು ಕಾಲಿನಿಂದ ಒದ್ದು, ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಈ ವಿಕೃತ ಮನಸ್ಸಿನವರು, ಹೊಡೆತದಿಂದ ರಕ್ತ ಸುರಿಯುತ್ತಿದ್ದರೂ ಪುನೀತ್ ತಲೆಯ ಮೇಲೆ ಮದ್ಯ ಸುರಿದು ವಿಕೃತವಾಗಿ ಸಂಭ್ರಮಿಸಿದ್ದಾರೆ. ಈ ಮೃಗೀಯ ವರ್ತನೆಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ದಾಖಲಾದ ಕೊಲೆ ಯತ್ನ ಪ್ರಕರಣ:
ಈ ಹಿಂದೆ ಸುಮಂತ್ ಮೇಲೆ ಪುನೀತ್ ಹಲ್ಲೆ ಮಾಡಿದ್ದನು ಎಂಬ ಕಾರಣಕ್ಕೆ, ಅದೇ ಸೇಡನ್ನು ತೀರಿಸಿಕೊಳ್ಳಲು ಗಜೇಂದ್ರನನ್ನು ಕರೆಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ ಕಗ್ಗಲೀಪುರ ಪೊಲೀಸರು, ಗಜೇಂದ್ರ ಹಾಗೂ ಸುಮಂತ್ ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | ಧರ್ಮಸ್ಥಳ ಪ್ರಕರಣ: ಮರುತನಿಖೆಗೆ ಎಸ್ಐಟಿ ರಚಿಸಿದ ರಾಜ್ಯ ಸರ್ಕಾರ
ನಾಗರಿಕ ಸಮಾಜದಲ್ಲಿ ಇಂತಹ ವಿಕೃತ ಘಟನೆಗಳು ನಡೆಯುತ್ತಿರುವುದು ಆತಂಕಕಾರಿಯಾಗಿದ್ದು, ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.










