ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಅಡುಗೆ ಅನಿಲ (LPG) ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಮತ್ತು ಹೋಟೆಲ್ ಉದ್ಯಮ ಕಂಗೆಟ್ಟಿದೆ. ಈ ಕುರಿತು ಗುರುವಾರ ಬೆಂಗಳೂರಿನ ತಮ್ಮ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
“ಬೇಡದ ವಿಚಾರಗಳಲ್ಲಿ ಅನಗತ್ಯವಾಗಿ ಮಾತನಾಡುವ ಬಿಜೆಪಿಯ ಸಂಸದರು, ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆದಿರುವ ಅಡುಗೆ ಅನಿಲ ಕೊರತೆಯ ಬಗ್ಗೆ ಸಂಸತ್ತಿನಲ್ಲಿ ಯಾಕೆ ಮಾತನಾಡುತ್ತಿಲ್ಲ?” ಎಂದು ಡಿಕೆಶಿ ಪ್ರಶ್ನಿಸಿದರು. ರಾಜ್ಯಕ್ಕೆ ಈ ವಿಚಾರದಲ್ಲಿ ನ್ಯಾಯ ಒದಗಿಸಿಕೊಡುವುದು ಅವರ ಆದ್ಯ ಕರ್ತವ್ಯವಾಗಬೇಕು. ಆದರೆ, ರಾಜ್ಯದಿಂದ ಆಯ್ಕೆಯಾಗಿ ಹೋದ ಸಂಸದರು ಜನರ ಸಂಕಷ್ಟಕ್ಕೆ ಸ್ಪಂದಿಸದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ | ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ‘ಗ್ರೀನ್ ಸಿಗ್ನಲ್’ ಕೊಟ್ಟ ಇರಾನ್!
ಹಳ್ಳಿ ಜನರು ಮತ್ತು ಹೋಟೆಲ್ ಮಾಲೀಕರ ಪರದಾಟ:
ಅಡುಗೆ ಅನಿಲದ ಕೊರತೆಯಿಂದಾಗಿ ಹಳ್ಳಿ ಜನರು, ರೈತರು ಮತ್ತು ಹೋಟೆಲ್ ಮಾಲೀಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ. “ಒಂದೆಡೆ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ, ಇನ್ನೊಂದೆಡೆ ಸೌದೆ ಒಲೆ ಬಳಸಲು ಸೌದೆ ತರಲು ಹೋದರೆ ಅದಕ್ಕೂ ಅರಣ್ಯ ಇಲಾಖೆ ಅಥವಾ ಇತರ ಕಾನೂನುಗಳ ಅಡಿಯಲ್ಲಿ ಅವಕಾಶ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಅಡುಗೆ ಮಾಡುವುದು ಹೇಗೆ? ಹೋಟೆಲ್ ನಡೆಸುವವರು ಸಂಸಾರ ಸಾಕುವುದು ಹೇಗೆ?” ಎಂದು ಅವರು ಆತಂಕ ವ್ಯಕ್ತಪಡಿಸಿದರು.










