ನವದೆಹಲಿ: ಕೇಂದ್ರ ಸರ್ಕಾರವು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕೇರಳದ ಹೆಸರನ್ನು ಬದಲಾಯಿಸುವ ಪ್ರಸ್ತಾವನೆಗೆ ಮಹತ್ವದ ಅನುಮೋದನೆ ನೀಡಿದೆ. ಮಂಗಳವಾರ (ಫೆಬ್ರವರಿ 24, 2026) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂʼ’ (Keralam) ಎಂದು ಮರುನಾಮಕರಣ ಮಾಡಲು ಹಸಿರು ನಿಶಾನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ್ದಾರೆ.
ಈ ಹೆಸರು ಬದಲಾವಣೆಯ ಬೇಡಿಕೆಯು ಇಂದು ನಿನ್ನೆಯದಲ್ಲ. ಜೂನ್ 24, 2024 ರಂದು ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವಂತೆ ಕೋರಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತ್ತು. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದೇ ಬಳಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ರಾಜ್ಯದ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯ ಎಂದು ಅಲ್ಲಿನ ಸರ್ಕಾರ ಪ್ರತಿಪಾದಿಸಿತ್ತು.
ಮನ್ನಣೆ ಸಿಕ್ಕಿದ್ದು ಹೇಗೆ?:
ಕೇರಳ ವಿಧಾನಸಭೆ ಸಲ್ಲಿಸಿದ ಈ ಮನವಿಯನ್ನು ಪರಿಶೀಲಿಸಿದ ಕೇಂದ್ರ ಗೃಹ ಇಲಾಖೆ ಮತ್ತು ಸಚಿವ ಸಂಪುಟ, ಈಗ ಅಂತಿಮ ಮುದ್ರೆ ಒತ್ತಿದೆ. ಸಂವಿಧಾನದ ಒಂದನೇ ಅನುಸೂಚಿಯಲ್ಲಿ ತಿದ್ದುಪಡಿ ತರುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ಮೊದಲಿನಿಂದಲೂ ‘ಕೇರಳಂ’ ಎಂದೇ ಕರೆಯಲಾಗುತ್ತಿತ್ತು, ಆದರೆ ಇಂಗ್ಲಿಷ್ನಲ್ಲಿ ‘ಕೇರಳ’ ಎಂದು ಬಳಕೆಯಾಗುತ್ತಿತ್ತು. ಈಗ ಎಲ್ಲಾ ಆಡಳಿತಾತ್ಮಕ ದಾಖಲೆಗಳಲ್ಲಿ ಏಕರೂಪತೆ ತರಲು ‘ಕೇರಳಂ’ ಹೆಸರನ್ನು ಬಳಸಲಾಗುತ್ತದೆ.
ಇದನ್ನೂ ಓದಿ | ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಏಳು ಜನರ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ!
ಈ ನಿರ್ಧಾರವು ಕೇವಲ ಹೆಸರು ಬದಲಾವಣೆಯಲ್ಲ, ಬದಲಾಗಿ ಒಂದು ರಾಜ್ಯದ ಭಾಷಾ ಅಸ್ಮಿತೆಗೆ ಸಿಕ್ಕ ದೊಡ್ಡ ಜಯವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.










