advertise here

Search

“ರಿಪಬ್ಲಿಕ್‌ ಕನ್ನಡ”ಕ್ಕೆ ಹಿರಿಯ ಪತ್ರಕರ್ತ ಶಿವಶಂಕರ್ ಎಂಟ್ರಿ.. ಗರಿಗೆದರಿದ “ಮರುಹುಟ್ಟಿ”ನ ನಿರೀಕ್ಷೆ..


ನಾವಿಕನಿಲ್ಲದ ದೋಣಿಯಂತಾಗಿದ್ದ ರಿಪಬ್ಲಿಕ್‌ ಕನ್ನಡ(republic tv)ಕ್ಕೆ ಸಮರ್ಥ ಸಾರಥಿ ಸಿಕ್ಕಿದ್ದಾರೆಂದು ಅನ್ನಿಸುತ್ತೆ.ಟಿವಿ೯ ಕನ್ನಡ ಚಾನೆಲ್‌ ಸ್ಥಾಪಕರಲ್ಲೊಬ್ಬರಾಗಿದ್ದ ಹಿರಿಯ ಪತ್ರಕರ್ತ ಶಿವಶಂಕರ್‌( senior journalist shivashankar) ರಿಪಬ್ಲಿಕ್‌ ಕನ್ನಡದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದಾರೆ.ನಿನ್ನೆ ಅಂದರೆ ಏಪ್ರಿಲ್‌ ೨ ರಂದು ಅಧಿಕಾರ ವಹಿಸಿಕೊಂಡಿರುವ ಶಿವಶಂಕರ್‌ ಮೇಲೆ ಮೊಣಭಾರದ ಜವಾಬ್ದಾರಿಗಳಿವೆ…ಆತ್ಮಸ್ಥೈರ್ಯಕ್ಕೆ ಸವಾಲೆಸೆಯುವ ಮಟ್ಟಿಗಿನ ಗಂಭೀರ ಸವಾಲುಗಳಿರುವುದಂತೂ ಸತ್ಯ..ಏಕೆಂದರೆ ಶೂನ್ಯದಿಂದ ಚಾನೆಲ್‌ ನ್ನು ಕಟ್ಟಿ ಬೆಳೆಸಬೇಕಾದ ಸ್ಥಿತಿಯಲ್ಲಿದೆ ರಿಪಬ್ಲಿಕ್‌ ಕನ್ನಡದ ಸಧ್ಯದ ಸ್ಥಿತಿ.ಹಾಗಾಗಿ ಶಿವಶಂಕರ್‌ ಅವರ ಪಯಣ ಅಂದುಕೊಂಡಷ್ಟು ಸಲೀಸಾಗಿಯಂತೂ ಇಲ್ಲ.

ಶಿವಶಂಕರ್‌ ಕನ್ನಡ ಪತ್ರಿಕೋದ್ಯಮದ ಅನುಭವಿ ಪತ್ರಕರ್ತ. ಪ್ರಚಲಿತ ವಿದ್ಯಾಮಾನಗಳ ಇಂಚಿಂಚೂ ಮಾಹಿತಿ ಬಲ್ಲ ನಿಷ್ಣಾತ.ಇದೆಲ್ಲಕ್ಕಿಂತ ಹೆಚ್ಚಾಗಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಾದ್ಯಮಗಳು ಪಡೆಯೋ ಸ್ಥಿತ್ಯಂತರ ವನ್ನು ಬಲ್ಲಂತ..ಅದಕ್ಕೆ ಮಾದ್ಯಮ ವ್ಯವಸ್ಥೆಯನ್ನು ಹೇಗೆ ಅಣಿಗೊಳಿಸಬೇಕೆನ್ನುವುದನ್ನು ಚೆನ್ನಾಗಿ ಅರಿತ, ನುರಿತ ಪತ್ರಕರ್ತ. ಎಲ್ಲಕ್ಕಿಂತ ಹೆಚ್ಚಾಗಿ ಟಿವಿ೯ ನಂತ ಚಾನೆಲ್‌ ನ್ನು ಸ್ಪರ್ದಾತ್ಮಕವಾಗಿ ರೂಪಿಸುವಲ್ಲಿ ಕಾರಣಕರ್ತ ರಾಗಿದ್ದವರಲ್ಲಿ ಮಂಚೂಣಿಯಲ್ಲಿದ್ದವರು. ಇಂಥಾ ಶಿವಶಂಕರ್‌ ಹತ್ತಿರತ್ತಿರ ಒಂದೂವರೆ ದಶಕದ ನಂತರ ಮತ್ತೆ ದೃಶ್ಯಮಾದ್ಯಮಕ್ಕೆ ರೀ ಎಂಟ್ರಿ ಹೊಡೆದಿದ್ದಾರೆ.‌ಕನ್ನಡ ಫ್ಲ್ಯಾಶ್‌ ನ್ಯೂಸ್‌ ನಿಂದ  ಅವರಿಗೊಂದು ಆಲ್‌ ದಿ ಬೆಸ್ಟ್.

ಮೊದಲೇ ಹೇಳಿದಂತೆ ಶಿವಶಂಕರ್‌ ಅವರ ಮುಂದೆ ಬಹುದೊಡ್ಡ ಸವಾಲುಗಳಿವೆ.ಅವರು ಅಂದುಕೊಂಡಷ್ಟು ಎಲ್ಲವೂ ಸಲೀಸಾಗಿಲ್ಲ.ಟಿವಿ೯ ಕಟ್ಟಿ ಬೆಳೆಸಿದವರಲ್ಲಿ ಒಬ್ಬರೆಂದಾಕ್ಷಣ ರಿಪಬ್ಲಿಕ್‌ ಕನ್ನಡಕ್ಕೆ ಪುನಶ್ಚೇತನ ಕೊಡುವುದು ಅನಾಯಾಸಕರವಾಗಿಲ್ಲ. ಏಕೆಂದರೆ ಶಿವಶಂಕರ್‌ ಅವರು ಕೆಲಸ ಮಾಡುತ್ತಿದ್ದ ಟಿವಿ9 ( tv 9 kannada news channel) ನ ಅಂದಿನ ಕಾಲಘಟ್ಟಕ್ಕೂ ಮಾದ್ಯಮಗಳ ಪರಿಭಾಷೆಯೇ ಬದಲಾಗಿರುವ ಇವತ್ತಿನ ಕಾಲಘಟ್ಟಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ.ಟಿವಿ೯ ಕನ್ನಡವನ್ನೂ ಹಿಂದಿಕ್ಕುವ ಮಟ್ಟಿಗೆ ಇವತ್ತು ಬೇರೆ ಮಾದ್ಯಮಗಳು ಬೆಳೆದುಬಿಟ್ಟಿವೆ.ಅದಕ್ಕಿಂತ ಮುನ್ನವೇ ಸುದ್ದಿಗಳನ್ನು ಬ್ರೇಕ್‌  ಮಾಡುವಷ್ಟರ ಮಟ್ಟಿಗೆ ವೃತ್ತಿಪರತೆಯಲ್ಲಿ ಮುಂದೋಗಿವೆ. ನಂಬರ್‌ 1ಚಾನೆಲ್‌ ಎನ್ನುವ ಭಾವನೆ ಜನರ ಮನಸಲ್ಲಿ ಉಳಿದೋಗಿರುವುದರಿಂದಷ್ಟೇ ಟಿವಿ9 ಕನ್ನಡ ಜೀವಂತವಾಗಿದೆ ಎನ್ನುವುದು ಕೂಡ ಸತ್ಯ.ಏಕೆಂದರೆ ಟಿಆರ್ ಪಿ ವಿಷಯದಲ್ಲಿ ಟಿವಿ9ನ್ನು ಇತ್ತೀಚಿನ ವರ್ಷಗಳಲ್ಲಿ ಬೇರೆ ಚಾನೆಲ್‌ ಗಳು ಹಿಂದಿಕ್ಕುವುದು ಸರ್ವೇಸಾಮಾನ್ಯವಾಗ್ಹೋಗಿದೆ.

ಪರಿಸ್ಥಿತಿ ಹೀಗಿರುವಲ್ಲಿ ಅರ್ನಾಬ್‌ ಗೋಸ್ವಾಮಿ( arnab goswami) ಅವರಂಥ ಮಾದ್ಯಮ ದಿಗ್ಗಜನ ವಿಶ್ವಾಸ-ನಿರೀಕ್ಷೆಗಳು ಬುಡಮೇಲುಗೊಳ್ಳುವ ಮಟ್ಟದಲ್ಲಿ ಆದ್ವಾನಗೊಂಡಿರುವ ರಿಪಬ್ಲಿಕ್‌ ಕನ್ನಡವನ್ನು ಮೊದಲಿದ್ದ ಸ್ಥಿತಿಗೆ ತರುವುದು ಕ್ಲಿಷ್ಟಕರವಲ್ಲದೇ ಅಸಾಧ್ಯ ಕೂಡ ಎನ್ನುವ ಮಾತಿದೆ.ಶೋಭಾ ಮಳವಳ್ಳಿ ಅವರು ಎಕ್ಸಿಟ್‌ ಆದ  ನಂತರ ತಿಂಗಳುವರೆಗೂ ಖಾಲಿಯಿದ್ದ ಮುಖ್ಯಸ್ಥರ ಸ್ಥಾನಕ್ಕೆ ಬಂದಿರುವ ಶಿವಶಂಕರ್‌ ಅವರ ಕೈಲಿಂದಲೂ ಇದು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಎಲ್ಲವನ್ನು ಒಮ್ಮಿಂದೊಮ್ಮೆಲೆ ಬದಲಿಸಿಬಿಡ್ತೇನೆ ಎಂದೇನಾದ್ರೂ ಶಿವಶಂಕರ್‌ ಅವರು ಭಾವಿಸಿದ್ದರೆ ವಾಸ್ತವದಲ್ಲಿ ಅದು ಕಷ್ಟ,ಆದ್ರೆ ಅಸಾಧ್ಯವೇನಲ್ಲ. ಚಾನೆಲ್‌ ನ ಸ್ವರೂಪ ಅಮೂಲಾಗ್ರವಾಗಿ ಬದಲಿಸಬೇಕಾದ ಸನ್ನಿವೇಶದಲ್ಲಿ ಶಿವಶಂಕರ್‌ ಅವರ ಪ್ಲ್ಯಾನ್‌ ಆಫ್‌ ಆಕ್ಷನ್‌ ಏನಿದೆ..? ತಂಡವನ್ನು ಹೇಗೆ ದುಡಿಸಿಕೊಳ್ಳುತ್ತಾರೆ..? ಯಾರ್ಯಾರನ್ನೆಲ್ಲಾ ಕರೆದುಕೊಂಡು ತಂಡ ರೂಪಿಸಲಿದ್ದಾರೆ..? ರೂಪಿಸಲಿರುವ ನ್ಯೂಸ್‌ ಫಾರ್ಮ್ಯಾಟ್‌ ಹೇಗಿರಲಿದೆ..? ಎನ್ನುವ ಸಾಕಷ್ಟು ಸಂಗತಿಗಳ ಮೇಲೆ ಎಲ್ಲವೂ ಅವಲಂಭಿತವಾಗಿದೆ.ಎಲ್ಲಕ್ಕಿಂತ  ಮೊದಲು ಶಿವಶಂಕರ್‌ ಅವರು ತಮ್ಮನ್ನು ತಾವು ಇದಕ್ಕಾಗಿ ಹೇಗೆ ಸಜ್ಜುಗೊಳಿಸಿಕೊಂಡಿದ್ದಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ.

ಮಾದ್ಯಮ ಲೋಕದ ಶೋ ಮ್ಯಾನ್…ಡ್ರೀಮ್‌ ಮ್ಯಾನ್‌ ಎಂದೇ ಕರೆಸಿಕೊಳ್ಳುವ ಅರ್ನಾಬ್‌ ತುಂಬಾ ಇಷ್ಟಪಟ್ಟು ಕಟ್ಟಿದ ಚಾನೆಲ್ಲೇ  ರಿಪಬ್ಲಿಕ್‌ ಕನ್ನಡ..ಆದ್ರೆ ಸಮರ್ಥರ ಕೊರತೆಯಿಂದಾಗಿ ಅವರ ಕನಸಿನ ಆಶಾಗೋಪುರ ಕುಸಿಯಲಿಕ್ಕೆ ಆರಂಭವಾಗಿದ್ದು ಸುಳ್ಳಲ್ಲ..ಯಾವ ಚಾನೆಲ್‌ ಗಳು ನೀಡದಷ್ಟು ಸಂಬಳ-ಸೌಲಭ್ಯವನ್ನು ಕೊಟ್ಟ ಹೊರತಾಗ್ಯೂ ಚಾನೆಲ್‌ ಉದ್ದಾರವಾಗಲೇ ಇಲ್ಲ.ಚಾನೆಲ್‌ ಮುಚ್ಚಿದರೆ ನನ್ನ ಘನತೆ-ಗೌರವಕ್ಕೆ ಧಕ್ಕೆ ಎನ್ನುವ ಏಕೈಕ ಕಾರಣಕ್ಕಷ್ಟೇ ಮುಚ್ಚದೆ ಉಳಿಸಿಕೊಂಡಿದ್ದಾರೆನ್ನುವುದು ಕೂಡ ಸತ್ಯ.

ಬಂದವರೆಲ್ಲಾ ಸ್ಥಾನಕ್ಕಂಟಿ ಕೂತು, ಸಂಬಳಕ್ಕಷ್ಟೇ ಕೆಲಸ ಮಾಡಿ,ಅದರ ಪ್ರಯೋಜನ ಪಡೆದುಕೊಳ್ಳುವ ಮಟ್ಟಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ರಿಂದಲೇ ಬೆಳೆಯುವುದಕ್ಕೆ ಎಲ್ಲಾ ಅವಕಾಶವಿದ್ದ ಹೊರತಾಗ್ಯೂ ರಿಪಬ್ಲಿಕ್‌ ಕನ್ನಡ  ಬೆಳೆಯಲೇ ಇಲ್ಲ.ಈ ಕೊರಗು ಅರ್ನಾಬ್‌ ಮನಸಲ್ಲಿ ಚಿಂತೆಯಾಗಿ ಕಾಡ್ತಿರೋದಂತೂ ಸತ್ಯ..ಮಾದ್ಯಮ ಕ್ಷೇತ್ರದಲ್ಲಿ ಒಬ್ಬ  ಪತ್ರಕರ್ತ ಹಾಗೂ ಒಂದು ಚಾನೆಲ್‌ ಹೇಗೆ ಬೆಳೆಯಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟ ಅರ್ನಾಬ್‌ ಗೆ ರಿಪಬ್ಲಿಕ್‌ ಕನ್ನಡದ ವಿಷಯದಲ್ಲಿ ಮಾತ್ರ ತಾನು ಎಡವಿದ್ದು ಎಲ್ಲಿ..? ತನ್ನ ಲೆಕ್ಕಾಚಾರ ಬುಡಮೇಲಾಗಿದ್ದು ಎಲ್ಲಿ..? ಯಾರ ಕೈಗೆ ಜವಾಬ್ದಾರಿ ಕೊಡಬೇಕಿತ್ತು..? ಯಾರನ್ನು ನಂಬಿ ಹಾಳಾದೆ..? ಎನ್ನುವ ಪ್ರಶ್ನೆಗಳು ಕಾಡುತ್ತಿದ್ದರೂ ಆಶ್ಚರ್ಯವಿಲ್ಲ.

ALSO READ :  ಅಡುಗೆ ಅನಿಲ ಬಿಕ್ಕಟ್ಟು: ಬಿಜೆಪಿ ಸಂಸದರ ಮೌನ ಖಂಡಿಸಿ, ಸಂಸತ್ತಿನಲ್ಲಿ ಧ್ವನಿ ಎತ್ತಲು ಡಿಕೆಶಿ ಆಗ್ರಹ!

ಶಿವಶಂಕರ್‌ ಅವರಿಗೆ ಸವಾಲುಗಳನ್ನು ಎದುರಿಸುವುದು ಕಷ್ಟಕರವೇನಲ್ಲ ಎನ್ನುವ ಸತ್ಯದ ಅರಿವಿದೆ.ಟಿವಿ9 ನಂತ ಚಾನೆಲ್‌ ನ್ನು ರೂಪಿಸುವ ವೇಳೆಯಲ್ಲಿ ತಮ್ಮ ಕಸುವನ್ನೇ ಒಗ್ಗೂಡಿಸಿದ್ರು. ಹಗಲಿರುಳೆನ್ನದೆ ಅದಕ್ಕಾಗಿ ಶ್ರಮಿಸಿದ್ದರು.ತನ್ನ ಸೃಜನಶೀಲತೆ-ಕ್ರಿಯಾಶೀಲತೆಯನ್ನೆಲ್ಲಾ ಅದಕ್ಕೆ ಧಾರೆ ಎರೆದಿದ್ದರು.ಟಿವಿ9 ಫಾರ್ಮ್ಯಾಟ್ ರೂಪಿಸುವಲ್ಲಿ ಅವರ ಕೊಡುಗೆ ನಿರ್ಣಾಯಕವಾಗಿದೆ.ಎಲ್ಲವನ್ನು ರೂಪಿಸಿಕೊಟ್ಟ ಮೇಲೆ ಅವರೇ ಚಾನೆಲ್‌ ನಲ್ಲಿ ಮುಂದುವರೆಯದೆ ಹೋದದ್ದು ಮಾತ್ರ ದೌರ್ಭಾಗ್ಯಪೂರ್ಣ.ಇವತ್ತಿಗೂ ಟಿವಿ9  ಜನರ ಮನಸಲ್ಲಿ ಇದೆ..ಬಹುತೇಕ ಕಾರ್ಯಕ್ರಮಗಳು ಇವತ್ತಿಗೂ ಅದೇ ರೀತಿ ಪ್ರಸಾರವಾಗುತ್ತಿವೆ ಎಂದರೆ ಅದಕ್ಕೂ ಇವರೇ ಕಾರಣ.ಬಹುಷಃ ಇದೇ ಆತ್ಮವಿಶ್ವಾಸದಲ್ಲಿ ರಿಪಬ್ಲಿಕ್‌ ಕನ್ನಡಕ್ಕೆ ಎಂಟ್ರಿ ಹೊಡೆದಿದ್ದಾರೆ ಎನ್ನಿಸುತ್ತೆ.ಎಲ್ಲವೂ ಅವರು ಅಂದುಕೊಂಡಂತೆ ನಡುದ್ರೆ ರಿಪಬ್ಲಿಕ್‌ ಕನ್ನಡಕ್ಕೊಂದು ಹೊಸ ಆಯಾಮ ದೊರೆಯಬಹುದು..ಆದ್ರೆ ಲೆಕ್ಕಾಚಾರ ಉಲ್ಟಾ ಹೊಡೆದರೆ  ಶಿವಶಂಕರ್‌ ಅವರ ಮೇಲಿರುವ ನಂಬಿಕೆ-ವಿಶ್ವಾಸಗಳಿಗೆ ಅವರೇ ಕೊಳ್ಳಿ ಇಟ್ಟುಕೊಂಡಂತೆ ಎಂದು ಅನೇಕರು ವಿಶ್ಲೇಷಿಸಲಾರಂಭಿಸಿದ್ದಾರೆ..

ರಿಪಬ್ಲಿಕ್‌ ಕನ್ನಡಕ್ಕೆ ಮರುಹುಟ್ಟು ಬೇಕಾಗಿರುವುದಂತೂ ಸತ್ಯ…ಪುನಶ್ಚೇತನ ದೊರೆಯ ಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ.ಚಾನೆಲ್‌ ನ ಸುದ್ದಿಯ ಸ್ವರೂಪವೇ ಬದಲಾಗಬೇಕಿದೆ. ಉದ್ದೇಶಗಳಲ್ಲಿ ಬದಲಾವಣೆ ಆಗಬೇಕಿದೆ. ಯಾವುದೋ ಇಸಂ, ಇನ್ನ್ಯಾವುದೋ ಪಂಥಗಳಿಗೆ ಚಾನೆಲ್‌ ನ್ನು ಬಲಿಗೊಡುತ್ತಿರುವ ಶೈಲಿ ಕೈಬಿಡಬೇಕಿದೆ.ಎಲ್ಲಾ ವರ್ಗದ ವೀಕ್ಷಕರನ್ನು ಒಳಗೊಳ್ಳುವ ರೀತಿಯಲ್ಲಿ ಚಾನೆಲ್‌ ರೂಪಿಸಬೇಕಿದೆ.ಸುದ್ದಿಯನ್ನು ಪರಿಣಾಮಕಾರಿಯಾಗಿ ಕೊಡುವ ವ್ಯವಸ್ಥೆ ಅಳವಡಿಕೆಯಾಗಬೇಕಿದೆ.ಇಷ್ಟ್‌ ವರ್ಷ ಅಲ್ಲಿ ಕೆಲಸ ಮಾಡುತ್ತಿರುವವರ ಮನಸ್ತಿತಿಗಳಿಗೆ ಸಾಣೆ ಹಿಡಿಯಬೇಕಾಗಿದೆ.ಈ ಎಲ್ಲಾ ಕೆಲಸಗಳನ್ನು ಆಧ್ಯತೆ ಮೇಲೆ ಶಿವಶಂಕರ್‌ ಅವರು ಕೆಲಸ ಮಾಡಬೇಕಿದೆ.ಅದಕ್ಕಾಗಿ ಇಡೀ ತಂಡವನ್ನು ದುಡಿಸಿಕೊಳ್ಳಬೇಕಿದೆ. ಶಿವಶಂಕರ್‌ ಅವರು ಈ ಪ್ರಯತ್ನದಲ್ಲಿ ಸಫಲರಾಗಿದ್ದೇ ಆದಲ್ಲಿ  ಐಸಿಯುನಲ್ಲಿ ರುವಂತೆ ಭಾಸವಾಗಿರುವ ರಿಪಬ್ಲಿಕ್‌ ಕನ್ನಡ ಉಸಿರಾಡೊಕ್ಕೆ ಶುರುವಾಗುತ್ತದೆ.ಆಮೇಲೆ ಅದಕ್ಕೊಂದು ಜೀವಂತಿಕೆ-ಲವಲವಿಕೆ ಕೊಡೋದು ಕಷ್ಟವೇನಲ್ಲ.ಇದಕ್ಕಾಗಿ ಶಿವಶಂಕರ್‌ ತಮ್ಮ ದಶಕಗಳವರೆಗಿನ ಪತ್ರಿಕೋದ್ಯಮದ ಅನುಭವವನ್ನು ಬಳಸಿಕೊಳ್ಳಬೇಕಿದೆ.ಬಳಸಿಕೊಳ್ಳಲಿ ಎನ್ನುವುದು ನಮ್ಮ ಆಶಯ-ಹಾರೈಕೆ ಕೂಡ.

ಕರ್ನಾಟಕದ ಮಾದ್ಯಮ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸುವ ಮಟ್ಟಕ್ಕೆ ತನ್ನ ಚಾನೆಲ್‌ ಬೆಳೆಯಬೇಕೆನ್ನುವ ಹಿರಿದಾಸೆಯಲ್ಲಿ ಅರ್ನಾಬ್‌ ಗೋಸ್ವಾಮಿ ಆರಂಭಿಸಿದ ರಿಪಬ್ಲಿಕ್‌ ಕನ್ನಡ ಇಳಿಹಾದಿ ಯತ್ತ ಸಾಗಿದೆ ಎನ್ನುವುದು ದುರಾದೃಷ್ಟಕರವಾದ್ರೂ ವಾಸ್ತವ. ಇಷ್ಟಾದ್ರೂ ಚಾನೆಲ್‌ ಗೆ ಪ್ರತಿ ತಿಂಗಳು ಕೋಟ್ಯಾಂತರ ಬಂಡವಾಳ ಹೂಡುತ್ತಿರುವ ಅರ್ನಾಬ್‌  ಸಾಕಪ್ಪಾ..ಸಾಕು.ಇನ್ಮುಂದೆ ಆಗೊಲ್ಲ ಎನ್ನುವ ನಿರ್ದಾರಕ್ಕೆ ಬಂದ ದಿನ ರಿಪಬ್ಲಿಕ್‌ ಕನ್ನಡದ ಸ್ತಿತಿ ಏನಾಗಬಹುದೆನ್ನುವುದನ್ನು ಊಹಿಸಿದ್ರೆ ಅಲ್ಲಿ ಕೆಲಸ ಮಾಡುತ್ತಿರುವ ಸುದ್ದಿಮಿತ್ರರ ಕಥೆ ಏನಾಗಬಹುದು ಊಹಿಸಿ ನೋಡಿ..ಹಾಗೆಲ್ಲಾ ಆಗಬಾರದು ಎಂದಾದ್ರೆ ರಿಪಬ್ಲಿಕ್‌ ಕನ್ನಡ ಮೈ ಕೊಡವಿ ನಿಲ್ಲಲೇಬೇಕಿದೆ.ಅಂತದ್ದೊಂದು ಕೆಲಸ ಶಿವಶಂಕರ್‌ ಅವರಿಂದ ಆಗಲಿ..ಇತರೆ ಚಾನೆಲ್‌ ಗಳಿಗೆ ಪೈಪೋಟಿ ಕೊಡುವ ಮಟ್ಟಕ್ಕೆ ರಿಪಬ್ಲಿಕ್‌ ಕನ್ನಡ ಬೆಳೆಯಲಿ..ಆ ಮೂಲಕ ಸುದ್ದಿಮಿತ್ರರನ್ನು ಕಾಡುತ್ತಿರುವ ಅಭದ್ರತೆಯ ಭಯ ದೂರವಾಗಲಿ..ಎಲಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ರಿಪಬ್ಲಿಕ್‌ ಆರಂಭಿಸಿದ್ದಕ್ಕೂ ಸಾರ್ಥಕವಾಯ್ತು ಎಂದು ಅರ್ನಾಬ್‌ ಗೋಸ್ವಾಮಿ ನಿರಾಳದ ದೀರ್ಘ ಹಾಗೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲಿ..ಶಿವಶಂಕರ್‌ ಅವರ ದಶಕಗಳಷ್ಟು ಸುದೀರ್ಘವಾದ ವೃತ್ತಿ ಅನುಭವ ಇದಕ್ಕೆಲ್ಲಾ ಸಹಕಾರಿಯಾಗಲಿ ಎನ್ನುವುದೇ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ ಹಾರೈಕೆ..   


Political News

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

ದಾವಣಗೆರೆ ದಕ್ಷಿಣದಲ್ಲಿ ಜಮೀರ್ ಗೈರುಹಾಜರಿ: ಸಮರ್ಥ್ ಶಾಮನೂರು ಗೆಲುವಿಗೆ ಮುಸ್ಲಿಂ ಮತಗಳೇ ಅಡ್ಡಿ?

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

ನೇಪಾಳ:  ‘ಜೆನ್ ಜಿ’ ಪ್ರತಿಭಟನೆ ಹತ್ತಿಕ್ಕಿದ್ದ ಮಾಜಿ ಪ್ರಧಾನಿ ಓಲಿ ಸೆರೆ

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

Scroll to Top