ಬೆವರು ಸುರಿಸಿ ದುಡಿದ ಹಣವನ್ನು ಕೇಳಲು ಹೋದ ಬಡ ಚಾಲಕನ ಮೇಲೆ ಟೂರಿಸ್ಟ್ ಕಂಪನಿಯ ಮಾಲೀಕ ಮತ್ತು ಸಿಬ್ಬಂದಿ ರಾಡ್ನಿಂದ ಹಲ್ಲೆ ನಡೆಸಿರುವ ಘೋರ ಘಟನೆ ಬೆಂಗಳೂರಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದಿದೆ. “ಸಿದ್ದಗಂಗಾ ಟೂರಿಸ್ಟ್ & ಟ್ರಾವೆಲ್ಸ್” ಕಛೇರಿಯಲ್ಲಿ ನಡೆದ ಈ ರಕ್ತಪಾತವು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಒಂದು ವರ್ಷದಿಂದ ಸಿದ್ದಗಂಗಾ ಟೂರಿಸ್ಟ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಾಮೇಗೌಡ ಎಂಬುವವರೇ ಈ ಹಲ್ಲೆಗೆ ಒಳಗಾದ ದುರ್ದೈವಿ. ಕಳೆದ ಐದು ತಿಂಗಳಿನಿಂದ ಅವರಿಗೆ ಬರಬೇಕಿದ್ದ ಸಂಬಳ ಬಾಕಿ ಇತ್ತು ಎನ್ನಲಾಗಿದೆ. ಸಂಸಾರ ನಡೆಸಲು ಹಣವಿಲ್ಲದೆ ಕಷ್ಟಪಡುತ್ತಿದ್ದ ರಾಮೇಗೌಡ, ಶನಿವಾರ ತನ್ನ ಬಾಕಿ ಸಂಬಳವನ್ನು ಕೇಳಲು ಟೂರಿಸ್ಟ್ ಕಛೇರಿಗೆ ತೆರಳಿದ್ದರು.
ಮಾತಿಗೆ ಮಾತು ಬೆಳೆದು ಶುರುವಾಯ್ತು ರಕ್ತಪಾತ:
ಸಂಬಳದ ವಿಚಾರವಾಗಿ ರಾಮೇಗೌಡ ಮತ್ತು ಮಾಲೀಕ ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಾಲೀಕ ಮಹೇಶ್ ಮತ್ತು ಅಲ್ಲಿಯೇ ಇದ್ದ ಅಭಿ ಎಂಬ ಯುವಕ ಸೇರಿ ರಾಮೇಗೌಡನ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ. ಕೈಗಳಿಂದ ಹೊಡೆಯುವುದಲ್ಲದೆ, ಕಛೇರಿಯಲ್ಲಿದ್ದ ಕಬ್ಬಿಣದ ರಾಡ್ನಿಂದ ರಾಮೇಗೌಡ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಏಟಿನ ರಭಸಕ್ಕೆ ರಾಮೇಗೌಡ ಅವರ ತಲೆಗೆ ಗಂಭೀರ ಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಅಲ್ಲೇ ಕುಸಿದು ಬಿದ್ದಿದ್ದಾರೆ. ಅವರ ಧರಿಸಿದ್ದ ಬಿಳಿ ಶರ್ಟ್ ಪೂರ್ತಿಯಾಗಿ ರಕ್ತಸಿಕ್ತವಾಗಿದ್ದು, ಘಟನೆಯ ತೀವ್ರತೆಯನ್ನು ಸಾರುತ್ತಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ 112 ಪೊಲೀಸ್ ಸಿಬ್ಬಂದಿಗಳು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮೇಗೌಡ ಅವರನ್ನು ತಕ್ಷಣವೇ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಅವರ ಜೀವಕ್ಕೆ ಅಪಾಯವಿಲ್ಲದಿದ್ದರೂ ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ.
ಐದು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲು:
ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟೂರಿಸ್ಟ್ ಕಂಪನಿ ಮಾಲೀಕ ಮಹೇಶ್ ಹಾಗೂ ಅಭಿ ಎಂಬುವವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 118, 115 ಸೇರಿದಂತೆ ಒಟ್ಟು ಐದು ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳ ವಾದವೇ ಬೇರೆ:
ಆದರೆ, ಟೂರಿಸ್ಟ್ ಸಿಬ್ಬಂದಿಗಳು ನೀಡುತ್ತಿರುವ ಹೇಳಿಕೆಯೇ ಬೇರೆಯಾಗಿದೆ. “ನಾವು ಎಲ್ಲ ಸಂಬಳವನ್ನೂ ನೀಡಿದ್ದೇವೆ. ಆತ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋದ ಕಾರಣ ಕೆಲವು ಬಾಕಿ ಇತ್ತು” ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಎಷ್ಟೇ ವಾದವಿದ್ದರೂ ಒಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಾನೂನುಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | ‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!
ಬಡ ಚಾಲಕರು ಮತ್ತು ಕಾರ್ಮಿಕರ ಹಿತರಕ್ಷಣೆ ಮಾಡುವವರು ಯಾರು? ದುಡಿದ ಸಂಬಳ ಕೇಳಲು ಹೋದರೆ ರಾಡ್ ಏಟು ಬೀಳುತ್ತದೆ ಎಂದರೆ ನಾವು ಯಾವ ಸಮಾಜದಲ್ಲಿದ್ದೇವೆ? ಮಾಲೀಕರ ಈ ದರ್ಪಕ್ಕೆ ಕಾನೂನು ತಕ್ಕ ಪಾಠ ಕಲಿಸಬೇಕಿದೆ. ಇಂತಹ ಘಟನೆಗಳು ಬೆಂಗಳೂರಿನಂತಹ ಮಹಾನಗರದಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿವೆ.










