ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘಕ್ಕೆ ಮಹತ್ವದ ಗೆಲುವು ಲಭಿಸಿದೆ.ಕಾನೂನಾತ್ಮಕ ಹೋರಾಟಕ್ಕೆ ಜಯ ದೊರೆತಿದೆ.ಸಂಘದ ಅಧ್ಯಕ್ಷ ಅಮೃತರಾಜ್ ಹಾಗೂ ಅವರ ಸಂಘ ಮತ್ತು ಅಮೃತರಾಜ್ ಕುಟುಂಬದ ಬಗ್ಗೆ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದರೆನ್ನಲಾದ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಮಾಯಣ್ಣ ಮತ್ತು ಅವರ ಬೆಂಬಲಿಗರು ಮಾನನಷ್ಟ ಸ್ವರೂಪದಲ್ಲಿ 10 ಲಕ್ಷ ರೂ ಪಾವತಿಸುವಂತೆ ಕೋರ್ಟ್ ಎಚ್ಚರಿಕೆ ನೀಡಿದೆ.ಜತೆಗೆ ಅಧ್ಯಕ್ಷ ಬಗ್ಗೆಯಾಗಲಿ, ಅವರ ಕುಟುಂಬದವರ ಬಗ್ಗೆಯಾಗಲಿ ಮತ್ತು ಸಂಘದ ಬಗ್ಗೆಯಾಗಲಿ ಅಪಪ್ರಚಾರ ಮಾಡುವುದನ್ನು ಪ್ರತಿಬಂಧಿಸಿ ನಗರ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.


ಮೇಲ್ಕಂಡ ಪ್ರಕರಣದಲ್ಲಿ 24ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯ ಈ ಆದೇಶ ನೀಡಿದೆ. ಆದೇಶದ ದಿನಾಂಕದಿಂದ 3 ತಿಂಗಳೊಳಗೆ ದೂರುದಾರ ಸಂಘಕ್ಕೆ ಹತ್ತು ಲಕ್ಷ ರೂಪಾಯಿಗಳ ನಷ್ಟವನ್ನು ಪಾವತಿಸುವಂತೆ ಪ್ರತಿವಾದಿ ಮಾಯಣ್ಣ ಅವರಿಗೆ ನ್ಯಾಯಾಧೀಶರಾದ ರೇಣುಕಾ ಡಿ ರಾಯ್ಕರ್ ಆದೇಶ ನೀಡಿದ್ದಾರೆ.
ಪ್ರತಿವಾದಿಯು ದಾಖಲಿಸಿರುವ ಪ್ರಶ್ನಿಸದ ವಾದಗಳು, ಮೌಖಿಕ ಮತ್ತು ದಾಖಲೆಪತ್ರ ಸಾಕ್ಷ್ಯಗಳಿಂದ. ದೂರುದಾರ ಸಾಬೀತು ಮಾಡಿರುವುದೇನೆಂದರೆ ಪ್ರತಿವಾದಿಯು ಮಾಡಿರುವ ವಿವಿಧ ಸುಳ್ಳು ದೂರುಗಳು, ಪ್ರಚಾರಗಳು ಇತ್ಯಾದಿಗಳಿಂದಾಗಿ ಸೊಸೈಟಿ ಮತ್ತು ಅದರ ಅಧ್ಯಕ್ಷರು ಅನಾನುಕೂಲತೆ ಮತ್ತು ಕಿರುಕುಳ ವನ್ನು ಅನುಭವಿಸಿದ್ದಾರೆ. ಆದ್ದರಿಂದ. ದೂರುದಾರರು ಪ್ರಾರ್ಥಿಸಿದಂತೆ ಶಾಶ್ವತ ತಡೆಯಾಜ್ಞೆ ಪರಿಹಾರಕ್ಕೂ ಅರ್ಹರಾಗಿದ್ದಾರೆ ಎಂದು ಕೋರ್ಟ್ ಆದೇಶ ನೀಡಿದೆ.
ಪ್ರತಿವಾದಿಯು ಅಥವಾ ಅವರ ಕಡೆಯವರು ಫಿರ್ಯಾದಿ ಸಂಘ ಮತ್ತು ಅದರ ಪದಾಧಿಕಾರಿಗಳು, ಅದರ ಅಧ್ಯಕ್ಷ ಅಮೃತ್ರಾಜ್ ಅಥವಾ ಅವರ ಕುಟುಂಬ ಸದಸ್ಯರು ಮತ್ತು ಅವರಿಗೆ ಸಂಬಂಧಪಟ್ಟವರನ್ನು ಯಾವುದೇ ರೀತಿಯ ಚಾರಿತ್ರ್ಯ ವಧೆ ಅಥವಾ ಮಾನನಷ್ಟಕ್ಕೆ ಒಳಪಡಿಸುವುದನ್ನು ಕೋರ್ಟ್ ಪ್ರತಿಬಂಧಿಸಿ ತಡೆಯಜ್ಞೆ ಕೊಟ್ಟಿದೆ.

ಸಂಘದ ಬಗ್ಗೆ ಅಥವಾ ಅಧ್ಯಕ್ಷರು, ಪದಾಧಿಕಾರಗಳ ಅವರ ಬಗ್ಗೆ ಅಪಪ್ರಚಾರ ಬರೆಯುವುದು. ಪ್ರಕಟಿಸುವುದು. ಪ್ರಚಾರ ಮಾಡುವುದು, ಪ್ರಸಾರ ಮಾಡುವುದು ಅಥವಾ ಪ್ರಕಟಿಸುವುದು ಅಥವಾ ಪ್ರಸಾರಕ್ಕೆ ಅವಕಾಶ ನೀಡುವುದು ಸೇರಿದಂತೆ ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಳ್ಳುವುದು ಅಥವಾ ವರ್ತಿಸುವುದು ಅಥವಾ ನಕಾರಾತ್ಮಕವಾಗಿ ತೊಡಗುವುದಕ್ಕೆ ಶಾಶ್ವತ ತಡೆಯಾಜ್ಞೆಯ ಆದೇಶದ ಮೂಲಕ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತಿವಾದಿ ಮಾಯಾಣ್ಣ ಅವರು ಅಪಪ್ರಚಾರ ಮಾಡಿ ಸಂಘಕ್ಕೆ ಮತ್ತು ಅಧ್ಯಕ್ಷರು-ಪದಾಧಿಕಾರಗಳಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದಾರೆ. ಇಂಥ ಅಪಪ್ರಚಾರ ಮಾಡುವುದು, ಸುಳ್ಳು ಆರೋಪಗಳನ್ನು ಪ್ರಕಟಿಸುವುದು, ಸಂಘ ಮತ್ತು ಅಧ್ಯಕ್ಷರು-ಪದಾಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಅಪಾದನೆಗಳನ್ನು ಮಾಡುತ್ತಾ ಚಾರಿತ್ರ್ಯವಧೆ ಅಥವಾ ಮಾನನಷ್ಟ ಮಾಡುವುದನ್ನು ನಿರ್ಬಂಧಿಸಿ ಶಾಶ್ವತ ತಡೆಯಾಜ್ಞೆ ನೀಡಬೇಕೆಂದು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘ ಕೋರ್ಟ್ ಮೊರೆ ಹೋಗಿತ್ತು.
