ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ‘ಸಿಎಂ ಕುರ್ಚಿ’ ಕದನ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಮೂಲಗಳ ಪ್ರಕಾರ, ಮಾರ್ಚ್ ಅಂತ್ಯದೊಳಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಹಠಕ್ಕೆ ಬಿದ್ದಿದ್ದ ಸಿದ್ದರಾಮಯ್ಯ ಅವರನ್ನು ದೆಹಲಿಯ ಹೈಕಮಾಂಡ್ ನಾಯಕರು ಕೊನೆಗೂ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಈ ಹಾದಿ ಅಷ್ಟು ಸುಲಭದ್ದಾಗಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡಲು ಹೈಕಮಾಂಡ್ ಮುಂದೆ ಇಟ್ಟಿರುವ ‘ಬಂಪರ್ ಕಂಡೀಷನ್’ಗಳು ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ.
ಸಿದ್ದು ಮನವೊಲಿಸಿದ ಹೈಕಮಾಂಡ್ ‘ಆಫರ್’!
ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಹೈಕಮಾಂಡ್ಗೆ ಅಗ್ನಿಪರೀಕ್ಷೆಯಾಗಿತ್ತು. ಆದರೆ, ರಾಷ್ಟ್ರ ರಾಜಕೀಯದ ದೃಷ್ಟಿಯಿಂದ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಎಂದು ಮನವರಿಕೆ ಮಾಡಿಕೊಟ್ಟಿರುವ ನಾಯಕರು, ಸಿದ್ದರಾಮಯ್ಯ ಅವರ ಮುಂದೆ ಹಲವು ಆಕರ್ಷಕ ಆಫರ್ಗಳನ್ನು ಇಟ್ಟಿದ್ದಾರೆ. ಈ ಆಫರ್ಗಳಿಗೆ ಸಮ್ಮತಿ ಸೂಚಿಸಿರುವ ಸಿದ್ದರಾಮಯ್ಯ, ತಮ್ಮ ಭವಿಷ್ಯದ ರಾಜಕೀಯ ಮತ್ತು ಬೆಂಬಲಿಗರ ರಕ್ಷಣೆಗಾಗಿ ಕಠಿಣ ಷರತ್ತುಗಳನ್ನು ವಿಧಿಸಿದ್ದಾರೆ.

ಸಿದ್ದರಾಮಯ್ಯ ಇಟ್ಟಿರುವ ‘ಪಂಚ’ ಷರತ್ತುಗಳು:
ಸಿದ್ದರಾಮಯ್ಯ ಅವರ ಬೇಡಿಕೆಗಳು ಈಡೇರಿದರೆ ಮಾತ್ರ ಮಾರ್ಚ್ ಅಂತ್ಯಕ್ಕೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಆ ಪ್ರಮುಖ ಷರತ್ತುಗಳು ಇಲ್ಲಿವೆ:
ಮಗ ಯತೀಂದ್ರಗೆ ಡಿಸಿಎಂ ಪಟ್ಟ:
ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ನಿವೃತ್ತಿಗೂ ಮುನ್ನ ಮಗ ಯತೀಂದ್ರ ಅವರ ಭವಿಷ್ಯವನ್ನು ಭದ್ರಪಡಿಸಲು ಪಣತೊಟ್ಟಿದ್ದಾರೆ. ಕೇವಲ ಸಚಿವ ಸ್ಥಾನ ನೀಡಿದರೆ ಮುಂದಿನ ದಿನಗಳಲ್ಲಿ ಡಿಕೆಶಿ ಬಣದಲ್ಲಿ ಯತೀಂದ್ರ ಮೂಲೆಗುಂಪಾಗಬಹುದು ಎಂಬ ಆತಂಕ ಸಿದ್ದು ಅವರಿಗಿದೆ. ಹೀಗಾಗಿ, ಡಿಸಿಎಂ ಪಟ್ಟ ನೀಡುವ ಮೂಲಕ ಯತೀಂದ್ರ ಅವರನ್ನು ಪರ್ಯಾಯ ಶಕ್ತಿಯನ್ನಾಗಿ ಬೆಳೆಸುವುದು ಅವರ ಉದ್ದೇಶ.
ಸಾಮಾಜಿಕ ಸಮತೋಲನದ ಡಿಸಿಎಂ ಹುದ್ದೆಗಳು:
ಕೇವಲ ಒಕ್ಕಲಿಗ ನಾಯಕ ಸಿಎಂ ಆಗುವುದಕ್ಕೆ ಪ್ರತಿಯಾಗಿ, ಲಿಂಗಾಯತ ಸಮುದಾಯಕ್ಕೊಂದು ಮತ್ತು ದಲಿತ ಸಮುದಾಯಕ್ಕೊಂದು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಬೇಕು. ಆ ಮೂಲಕ ಅಹಿಂದ ಮತಬ್ಯಾಂಕ್ ಚದುರದಂತೆ ನೋಡಿಕೊಳ್ಳಬೇಕು ಎಂಬುದು ಅವರ ಲೆಕ್ಕಾಚಾರ.
ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ:
ಡಿ.ಕೆ. ಶಿವಕುಮಾರ್ ಸಿಎಂ ಆದ ಮೇಲೆ ತೆರವಾಗುವ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರ ಆಪ್ತ ವಲಯದ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ನೀಡಬೇಕು. ಇದು ಸಿದ್ದರಾಮಯ್ಯ ಅವರು ಸಂಘಟನೆಯ ಮೇಲೆ ಹಿಡಿತ ಸಾಧಿಸಲು ಇಟ್ಟಿರುವ ದಾಳ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸತೀಶ್ ಜಾರಕಿಹೊಳಿ ಅವರಿಗೆ ಕೇಳುತ್ತಿರುವುದು ಕೇವಲ ಸ್ನೇಹಕ್ಕಾಗಿ ಅಲ್ಲ. ಡಿಕೆಶಿ ಸಿಎಂ ಆದಾಗ ಪಕ್ಷದ ಮೇಲೆ ಹಿಡಿತ ಕಳೆದುಕೊಳ್ಳಬಾರದು ಎಂಬುದು ಸಿದ್ದರಾಮಯ್ಯ ಅವರ ದೂರದೃಷ್ಟಿ. ಸತೀಶ್ ಜಾರಕಿಹೊಳಿ ಅವರು ಅಹಿಂದ ನಾಯಕತ್ವದ ಮೇಲೆ ಹಿಡಿತ ಹೊಂದಿದ್ದು, ಅವರು ಅಧ್ಯಕ್ಷರಾದರೆ ಸರ್ಕಾರ ಮತ್ತು ಸಂಘಟನೆ ಎರಡರಲ್ಲೂ ಸಿದ್ದರಾಮಯ್ಯ ಅವರ ಪ್ರಭಾವ ಹಾಗೆಯೇ ಮುಂದುವರಿಯಲಿದೆ.
16 ಬೆಂಬಲಿಗರಿಗೆ ಆಯಕಟ್ಟಿನ ಸಚಿವ ಸ್ಥಾನ:
ತಮ್ಮನ್ನು ನಂಬಿ ಬಂದಿರುವ 16 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. ಅಷ್ಟೇ ಅಲ್ಲದೆ, ಪ್ರಮುಖ ಖಾತೆಗಳಾದ:
ಹಣಕಾಸು ಮತ್ತು ಗೃಹ ಖಾತೆ, ಜಲಸಂಪನ್ಮೂಲ ಮತ್ತು ನಗರಾಭಿವೃದ್ಧಿ, ಸಮಾಜ ಕಲ್ಯಾಣ ಮತ್ತು ಅಬಕಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಸಾರಿಗೆ, ಈ ಎಲ್ಲ ಪ್ರಬಲ ಖಾತೆಗಳು ಸಿದ್ದರಾಮಯ್ಯ ಬೆಂಬಲಿಗರ ಕೈಯಲ್ಲೇ ಇರಬೇಕು ಎಂಬುದು ಅವರ ಪಟ್ಟು. ಒಂದು ವೇಳೆ ಡಿಕೆಶಿ ಸಿಎಂ ಆದರೂ, ಈ ಪ್ರಮುಖ ಖಾತೆಗಳು ಸಿದ್ದು ಬೆಂಬಲಿಗರ ಕೈಯಲ್ಲಿದ್ದರೆ, ಡಿಕೆಶಿ ಅವರಿಗೆ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಇದು ಒಂದು ರೀತಿಯಲ್ಲಿ ‘ರಿಮೋಟ್ ಕಂಟ್ರೋಲ್’ ಆಡಳಿತದ ತಂತ್ರವಾಗಿದೆ.
ಸಿದ್ದು ಕಂಡೀಷನ್ಗೆ ‘ಡಿಕೆಶಿ’ ಗ್ರೀನ್ ಸಿಗ್ನಲ್?
ಮೂಲಗಳ ಪ್ರಕಾರ, ಹೇಗಾದರೂ ಮಾಡಿ ಮುಖ್ಯಮಂತ್ರಿ ಪೀಠ ಏರಲೇಬೇಕು ಎಂಬ ಸಂಕಲ್ಪ ಮಾಡಿರುವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಈ ಕಠಿಣ ಷರತ್ತುಗಳಿಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಅಧಿಕಾರ ಸಿಗುವುದಾದರೆ ಸಣ್ಣಪುಟ್ಟ ತ್ಯಾಗಕ್ಕೆ ಸಿದ್ಧ ಎಂಬ ನಿಲುವಿಗೆ ಡಿಕೆಶಿ ಬಂದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ | ಟಿಆರ್ಪಿ ಕುಸಿತಕ್ಕೆ ಸಿಬ್ಬಂದಿಯ ವೇತನ ಕಡಿತ, ನಾಯಕತ್ವದ ವೈಫಲ್ಯಕ್ಕೆ ಮ್ಯಾನೇಜ್ಮೆಂಟ್ ಕೆಂಗಣ್ಣು!
ಈ ಬೆಳವಣಿಗೆಗಳು ನಿಜವಾದಲ್ಲಿ, ಕರ್ನಾಟಕ ಕಾಂಗ್ರೆಸ್ನಲ್ಲಿ ಬೃಹತ್ ಮಟ್ಟದ ಆಂತರಿಕ ಬದಲಾವಣೆಗಳು ಸಂಭವಿಸಲಿವೆ. ಸಿದ್ದರಾಮಯ್ಯ ಅವರು ಗೌರವಾನ್ವಿತವಾಗಿ ಸ್ಥಾನ ಬಿಟ್ಟುಕೊಟ್ಟು, ರಾಷ್ಟ್ರ ರಾಜಕೀಯದಲ್ಲಿ ಅಥವಾ ಪಕ್ಷದ ಉನ್ನತ ಸಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆದರೆ, ಮಾರ್ಚ್ ಅಂತ್ಯದ ಗಡುವು ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕೀಯದ ಹವಾಮಾನ ಯಾವ ರೀತಿ ಬದಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಾರೆಯಾಗಿ, ‘ಕೈ’ ಪಾಳಯದಲ್ಲಿ ಈಗ ‘ಮಾರ್ಚ್ ಮಿಷನ್’ ಶುರುವಾಗಿದ್ದು, ಪವರ್ ಶಿಫ್ಟ್ ಆಗುವ ಕ್ಷಣಗಣನೆ ಆರಂಭವಾಗಿದೆ!










