ಬೆಂಗಳೂರು: “ಪರರ ಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಧರ್ಮ” ಎಂಬ ಮಾತನ್ನು ಸಮಾಜ ಸೇವಕ ಹಾಗೂ ಚಿಂತಕ ವೀರಕಪುತ್ರ ಶ್ರೀನಿವಾಸ್ ಅವರು ಅಕ್ಷರಶಃ ಸಾಬೀತುಪಡಿಸಿದ್ದಾರೆ. ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ ಬಳಿ ಜೇನುನೋಣಗಳ ದಾಳಿಗೆ ತುತ್ತಾಗಿ ಸಾವಿನ ದವಡೆಯಲ್ಲಿದ್ದ ತಾಯಿ ಮತ್ತು ಮಗುವನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸುವ ಮೂಲಕ ಅವರು ಇಂದು ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಡುರಸ್ತೆಯಲ್ಲಿ ಜೇನು ಗೂಡಿನಂತಾದ ತಾಯಿ-ಮಗು!
12-03-2026ರ ಸಂಜೆ ಸುಚಿತ್ರಾ ಫಿಲ್ಮ್ ಸೊಸೈಟಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ. ಸಾವಿರಾರು ಜೇನುನೋಣಗಳು ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಮಗುವನ್ನು ಮುತ್ತಿಕೊಂಡಿದ್ದವು. ಆ ದೃಶ್ಯ ಹೇಗಿತ್ತೆಂದರೆ, ದೂರದಿಂದ ನೋಡುವವರಿಗೆ ಅದು ತಾಯಿ-ಮಗು ಎನ್ನುವುದಕ್ಕಿಂತ ರಸ್ತೆಯಲ್ಲಿದ್ದ ಜೇನುಗೂಡಿನಂತೆ ಭಾಸವಾಗುತ್ತಿತ್ತು. ಜೇನುನೋಣಗಳ ಕಡಿತದಿಂದ ರಕ್ಷಿಸಿಕೊಳ್ಳಲು ಆ ತಾಯಿ ತನ್ನ ಪುಟ್ಟ ಮಗುವನ್ನು ಕಾಂಗರೂ ರೀತಿ ಅಪ್ಪಿಕೊಂಡು “ಕಾಪಾಡಿ.. ಕಾಪಾಡಿ..” ಎಂದು ಕಿರುಚುತ್ತಿದ್ದರೂ, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದ ನೂರಾರು ಜನರು ಮೌನ ಪ್ರೇಕ್ಷಕರಾಗಿದ್ದರು.
ಕಾರಿನಲ್ಲಿ ಸೋದರ ನಾಗೇಶ್ ಅವರೊಂದಿಗೆ ಮೀಟಿಂಗ್ಗೆ ಹೊರಟಿದ್ದ ವೀರಕಪುತ್ರ ಶ್ರೀನಿವಾಸ್ ಅವರು ಈ ದೃಶ್ಯ ಕಂಡು ಕೂಡಲೇ ಕಾರಿನಿಂದ ಇಳಿದಿದ್ದಾರೆ. “ನನ್ನ ಮಗಳ ವಯಸ್ಸಿನ ಮಗು ಆ ತಾಯಿಯ ಅಪ್ಪುಗೆಯಲ್ಲಿದ್ದನ್ನು ಕಂಡು ನನಗೆ ಸುಮ್ಮನಿರಲು ಸಾಧ್ಯವಾಗಲಿಲ್ಲ” ಎಂದು ಅವರು ಆ ಕ್ಷಣವನ್ನು ಸ್ಮರಿಸುತ್ತಾರೆ. ಕೈಯಲ್ಲಿದ್ದ ಒಂದು ಸಣ್ಣ ಬಟ್ಟೆಯನ್ನೇ ಆಯುಧವನ್ನಾಗಿಸಿಕೊಂಡು ಜೇನ್ನೊಣಗಳ ಹಿಂಡಿನ ನಡುವೆ ನುಗ್ಗಿದ ಶ್ರೀನಿವಾಸ್, ಆ ತಾಯಿ-ಮಗುವನ್ನು ಸುಚಿತ್ರಾ ಫಿಲ್ಮ್ ಸೊಸೈಟಿಯ ಆವರಣದೊಳಗೆ ಕರೆದೊಯ್ದಿದ್ದಾರೆ.
ಚಾಣಾಕ್ಷತೆಯಿಂದ ಬಚಾವ್; ಆದರೆ ತಮಗೇ ತಪ್ಪದ ಸಂಕಷ್ಟ
ಶ್ರೀನಿವಾಸ್ ಅವರು ಸಮಯಪ್ರಜ್ಞೆ ಮೆರೆದು ತಾಯಿ ಮತ್ತು ಮಗುವನ್ನು ಶೌಚಾಲಯದ ಒಳಗೆ ಕಳುಹಿಸಿ ಬಾಗಿಲು ಹಾಕುವ ಮೂಲಕ ಜೇನುನೊಣಗಳ ದಾಳಿಯಿಂದ ಅವರನ್ನು ರಕ್ಷಿಸಿದರು. ಆದರೆ, ದುರದೃಷ್ಟವಶಾತ್ ಹೊರಗೆ ನಿಂತಿದ್ದ ಶ್ರೀನಿವಾಸ್ ಅವರ ಮೇಲೆ ಜೇನ್ನೊಣಗಳ ಇಡೀ ಹಿಂಡು ದಾಳಿ ನಡೆಸಿದೆ. ಸುಮಾರು 20ಕ್ಕೂ ಹೆಚ್ಚು ಜೇನು ಮುಳ್ಳುಗಳು ಅವರ ದೇಹವನ್ನು ಚುಚ್ಚಿವೆ. ತಾಯಿ ಮತ್ತು ಮಗುವಿನ ದೇಹದಲ್ಲಂತೂ ನೂರಾರು ಮುಳ್ಳುಗಳಿದ್ದವು.

ಇದನ್ನೂ ಓದಿ | ವೀರೇಂದ್ರ ಹೆಗ್ಗಡೆ ನೇತೃತ್ವದ ಎಸ್ಡಿಎಂ ಸೊಸೈಟಿಗೆ ಭೂಕಬಳಿಕೆ ಸಂಕಷ್ಟ: ಕೋರ್ಟ್ನಿಂದ ಸಮನ್ಸ್ ಜಾರಿ!
ದಾಳಿಯ ನಂತರ ತಾಯಿ-ಮಗುವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರಕ್ಷಿಸಲಾಯಿತು. ತಾವೂ ಚಿಕಿತ್ಸೆ ಪಡೆಯುತ್ತಾ ಬೆಡ್ ಮೇಲೆ ಮಲಗಿದ್ದಾಗ ಆ ತಾಯಿ ಕೇಳಿದ ಒಂದು ಮಾತು ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿತು: “ಸರ್, ನಾನು ಬದುಕುತ್ತೇನಲ್ಲ? ನನ್ನ ಮಗಳ ಜೊತೆ ಇರುತ್ತೇನಲ್ಲ?”. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಗೆ ಶ್ರೀನಿವಾಸ್ ಧೈರ್ಯ ತುಂಬಿದರು. ಸದ್ಯ ತಾಯಿ-ಮಗು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯ ನಂತರ ಸಾಹಿತಿ ನಾಗರಾಜ್ ವಸ್ತಾರೆ, ಡಿವೈಎಸ್ಪಿ ರಾಜೇಶ್ ಸೇರಿದಂತೆ ಹಲವು ಗಣ್ಯರು ಶ್ರೀನಿವಾಸ್ ಅವರ ಆರೋಗ್ಯ ವಿಚಾರಿಸಿದ್ದಾರೆ.
“ನಾನೊಂದು ನೆಪವಷ್ಟೇ, ಆ ತಾಯಿ-ಮಗುವಿನ ಆಯಸ್ಸು ಗಟ್ಟಿಯಿತ್ತು” ಎಂದು ವಿನಮ್ರವಾಗಿ ಹೇಳುವ ವೀರಕಪುತ್ರ ಶ್ರೀನಿವಾಸ್ ಅವರ ಈ ಸಾಹಸ, ಇಂದಿನ ಸ್ವಾರ್ಥಿ ಜಗತ್ತಿನಲ್ಲಿ ಮಾನವೀಯತೆ ಇನ್ನೂ ಬದುಕಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.










