ರಾಜ್ಯ ರಾಜಕಾರಣದಲ್ಲಿ ಈಗ ‘ನೆರೆ ರಾಜ್ಯದ ಪ್ರೇಮ’ ಮತ್ತು ‘ಸ್ವಂತ ರಾಜ್ಯದ ಕಡೆಗಣನೆ’ ಎಂಬ ಗಂಭೀರ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿ ನಡೆದ ತೆರವು ಕಾರ್ಯಾಚರಣೆಯ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹಸ್ತಕ್ಷೇಪದ ಬೆನ್ನಲ್ಲೇ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ವಯನಾಡು ಕ್ಷೇತ್ರಕ್ಕೆ 10 ಕೋಟಿ ರೂ. ವಿಶೇಷ ಅನುದಾನ ನೀಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕೆಲವು ದಿನಗಳ ಹಿಂದೆ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸರ್ಕಾರದ ನಡೆಯನ್ನು ‘ಬುಲ್ಡೋಜರ್ ಸಂಸ್ಕೃತಿ’ ಎಂದು ಟೀಕಿಸಿದ್ದರು. ಇದು ಕರ್ನಾಟಕದ ಆಂತರಿಕ ವಿಚಾರದಲ್ಲಿ ಕೇರಳದ ಹಸ್ತಕ್ಷೇಪ ಎಂದು ವಿಪಕ್ಷಗಳು ಕಿಡಿಕಾರಿದ್ದವು. ಈ ವಿವಾದ ಇನ್ನೂ ತಣ್ಣಗಾಗುವ ಮುನ್ನವೇ ಸಿದ್ದರಾಮಯ್ಯ ಅವರು ಕೇರಳಕ್ಕೆ ನೀಡಿರುವ ‘ಉದಾರ’ ಅನುದಾನ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ವಯನಾಡಿಗೆ 10 ಕೋಟಿ ರೂ. ಕೊಡುಗೆ: ಅಶೋಕ್ ಲೇವಡಿ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿಗಳ ವಿಶೇಷ ಅನುದಾನ ನೀಡಿರುವುದನ್ನು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್) ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರನ್ನು “ಕೇರಳದ ಮುಖ್ಯಮಂತ್ರಿ” ಎಂದು ಕರೆದು ವ್ಯಂಗ್ಯವಾಡಿದ್ದಾರೆ.
“ಕೇರಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು! ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ವಯನಾಡಿಗೆ 10 ಕೋಟಿ ರೂ. ನೀಡುವ ಮೂಲಕ ನೀವು ಹೈಕಮಾಂಡ್ ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣವನ್ನು ಅನ್ಯರಾಜ್ಯಕ್ಕೆ ಧಾರೆ ಎರೆಯುತ್ತಿದ್ದೀರಿ. ನೀವು ಕರ್ನಾಟಕದ ಸಿಎಂ ಎಂಬ ಹಕೀಕತ್ತನ್ನು ಮರೆತಂತಿದೆ” ಎಂದು ಅಶೋಕ್ ಕಿಡಿ ಕಾರಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳಂ ರಾಜ್ಯದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಹೆಚ್ಚುವರಿ ವಿಶೇಷ ಅನುದಾನ ನೀಡಿರುವ ಕೇರಳಂ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ ಅಭಿನಂದನೆಗಳು.
— R. Ashoka (@RAshokaBJP) March 24, 2026
ಕೇರಳಂ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ,… pic.twitter.com/11cN6fKIye
ಕರ್ನಾಟಕದ ರೈತರಿಗೆ ಇಲ್ಲದ ಹಣ ಕೇರಳಕ್ಕೆ ಹೇಗೆ?
ವಿಪಕ್ಷಗಳ ಪ್ರಮುಖ ಆರೋಪವೆಂದರೆ, ರಾಜ್ಯದ ಉತ್ತರ ಕರ್ನಾಟಕದ ಭಾಗದಲ್ಲಿ ನೆರೆ ಮತ್ತು ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕನ್ನಡಿಗರಿಗೆ ಕೇವಲ 95 ಸಾವಿರ ರೂ. ಪರಿಹಾರ ನೀಡುವ ಸರ್ಕಾರ, ವಯನಾಡಿನ 100 ಮನೆಗಳ ನಿರ್ಮಾಣಕ್ಕೆ ತಲಾ 10 ಲಕ್ಷ ರೂ. (ಒಟ್ಟು 10 ಕೋಟಿ) ನೀಡುತ್ತಿರುವುದು ಎಷ್ಟು ಸರಿ? ಎಂದು ವಿಜಯೇಂದ್ರ ಮತ್ತು ಅಶೋಕ್ ಪ್ರಶ್ನಿಸಿದ್ದಾರೆ. “ನನ್ನ ತೆರಿಗೆ ನನ್ನ ಹಕ್ಕು” ಎಂದು ದೆಹಲಿಯಲ್ಲಿ ಕೂಗಿದ್ದ ಸಿದ್ದರಾಮಯ್ಯ ಅವರು, ಈಗ ಕನ್ನಡಿಗರ ತೆರಿಗೆಯನ್ನು ಕೇರಳಕ್ಕೆ ಏಕೆ ನೀಡುತ್ತಿದ್ದಾರೆ ಎಂಬುದು ವಿಪಕ್ಷಗಳ ನೇರ ಪ್ರಶ್ನೆಯಾಗಿದೆ.
ಸರ್ಕಾರದ ಸಮರ್ಥನೆ ಏನು?
ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, “ಇದು ಕೇವಲ ಮಾನವೀಯತೆಯ ದೃಷ್ಟಿಯಿಂದ ನೀಡುತ್ತಿರುವ ನೆರವು. ವಯನಾಡಿನ ಭೂಕುಸಿತದ ಸಂದರ್ಭದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡಿದ್ದರು, ಅದರಲ್ಲಿ ಕನ್ನಡಿಗರೂ ಇದ್ದರು. ಒಕ್ಕೂಟ ವ್ಯವಸ್ಥೆಯಲ್ಲಿ ನೆರೆ ರಾಜ್ಯಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ” ಎಂದು ಸಮರ್ಥಿಸಿಕೊಂಡಿದ್ದಾರೆ.
ಒಂದು ಕಡೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಂದ ಟೀಕೆ ಎದುರಿಸುತ್ತಿರುವ ಕರ್ನಾಟಕ ಸರ್ಕಾರ, ಮತ್ತೊಂದೆಡೆ ಅದೇ ಕೇರಳಕ್ಕೆ ಕೋಟಿ ಕೋಟಿ ಹಣ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ‘ಹೈಕಮಾಂಡ್ ಓಲೈಕೆ’ ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ.










