ನೇಪಾಳದ ರಾಜಕೀಯ ಇತಿಹಾಸದಲ್ಲಿ ಶನಿವಾರ (ಮಾರ್ಚ್ 28, 2026) ಒಂದು ಐತಿಹಾಸಿಕ ದಿನವಾಗಿ ದಾಖಲಾಗಿದೆ. ರ್ಯಾಪರ್ ಮತ್ತು ಇಂಜಿನಿಯರ್ ಆಗಿದ್ದ 35 ವರ್ಷದ ಯುವ ನಾಯಕ ಬಾಲೇಂದ್ರ ಶಾ (ಬಾಲೆನ್ ಶಾ) ನೇಪಾಳದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೇವಲ 24 ಗಂಟೆಗಳ ಒಳಗೆ, ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ (k.p. sharma oli) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಓಲಿ ಸರ್ಕಾರವು ಸುಮಾರು 26 ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳನ್ನು ನಿಷೇಧಿಸಿತ್ತು. ಇದು ನೇಪಾಳದ ಯುವ ಸಮೂಹವನ್ನು (GenZ) ಕೆರಳಿಸಿತ್ತು. ಕೇವಲ ಡಿಜಿಟಲ್ ಸ್ವಾತಂತ್ರ್ಯಕ್ಕಾಗಿ ಶುರುವಾದ ಹೋರಾಟ, ನಂತರ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯದ ವಿರುದ್ಧ ದೇಶಾದ್ಯಂತ ಜ್ವಾಲೆಯಾಗಿ ಹಬ್ಬಿತು. ಅಂದಿನ ಓಲಿ ಸರ್ಕಾರ ಈ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಿದ ಹಿಂಸಾತ್ಮಕ ದಮನಕಾರಿ ನೀತಿಯಲ್ಲಿ ಸುಮಾರು 77 ಜನರು ಬಲಿಯಾಗಿದ್ದರು.
ಗೌರಿಬಹಾದೂರ್ ಕರ್ಕಿ ಆಯೋಗದ ವರದಿ
ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಗೌರಿಬಹಾದೂರ್ ಕರ್ಕಿ ನೇತೃತ್ವದ ಆಯೋಗವನ್ನು ರಚಿಸಲಾಗಿತ್ತು. ಸುಮಾರು 900 ಪುಟಗಳ ಈ ವರದಿಯು ಓಲಿ ಅವರ ಆಡಳಿತವನ್ನು “ಕ್ರಿಮಿನಲ್ ನಿರ್ಲಕ್ಷ್ಯ” ಎಂದು ಕರೆದಿದೆ.
- ಓಲಿ ವಿರುದ್ಧದ ಆರೋಪ: ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವುದನ್ನು ತಡೆಯಲು ಯಾವುದೇ ಪ್ರಯತ್ನ ಮಾಡದಿರುವುದು ಮತ್ತು ಗುಪ್ತಚರ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸಿ ಯುವಕರ ಸಾವಿಗೆ ಕಾರಣರಾಗಿರುವುದು.
- ಇತರರ ಬಂಧನ: ಓಲಿ ಅವರೊಂದಿಗೆ ಅಂದಿನ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಸಹ ಬಂಧಿಸಲಾಗಿದೆ. ಅಂದಿನ ಐಜಿಪಿ ಚಂದ್ರ ಕುಬೇರ್ ಖಪುಂಗ್ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ | ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?
ಮಹತ್ವದ ತಿರುವು ಕೊಟ್ಟ ಬಾಲೆನ್ ಶಾ ನಿರ್ಧಾರ
ಶುಕ್ರವಾರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಾಲೆನ್ ಶಾ, ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕರ್ಕಿ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಲು ಆದೇಶಿಸಿದರು. “ಕಾನೂನಿಗಿಂತ ಯಾರೂ ಮೇಲಲ್ಲ, ಇದು ಯಾರಿಗೂ ಸೇಡು ತೀರಿಸಿಕೊಳ್ಳುವ ಕ್ರಮವಲ್ಲ, ಬದಲಾಗಿ ನ್ಯಾಯದ ಆರಂಭ” ಎಂದು ನೂತನ ಗೃಹ ಸಚಿವ ಸುದನ್ ಗುರುಂಗ್ ಟ್ವೀಟ್ ಮಾಡಿದ್ದಾರೆ.
ಓಲಿ ಅವರನ್ನು ಭಕ್ತಪುರದ ಗುಂಡುವಿನಲ್ಲಿರುವ ಅವರ ನಿವಾಸದಿಂದ ಮುಂಜಾನೆ 4:40ಕ್ಕೆ ಬಂಧಿಸಲಾಯಿತು. ಈ ಬೆಳವಣಿಗೆಯು ನೇಪಾಳದ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಭಾರಿ ಹೊಡೆತ ನೀಡಿದ್ದು, ದೇಶದಲ್ಲಿ ಹೊಸ ಯುವ ನಾಯಕತ್ವದ ಅಲೆ ಎದ್ದಿರುವುದನ್ನು ಸ್ಪಷ್ಟಪಡಿಸಿದೆ.










