ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಬಾಗಲಕೋಟೆ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಗೆಲುವಿಗಾಗಿ ಆಡಳಿತರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ ಭರ್ಜರಿ ತಂತ್ರಗಳನ್ನು ಹೆಣೆಯುತ್ತಿವೆ. ಈ ನಡುವೆ ಬಾಗಲಕೋಟೆ ಉಪಚುನಾವಣೆಯ ಕುರಿತು ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಸಮಿತಿಯು ಸಿದ್ಧಪಡಿಸಿದ ಎಕ್ಸ್ಕ್ಲೂಸಿವ್ ಗ್ರೌಂಡ್ ರಿಪೋರ್ಟ್ ರಾಜ್ಯ ಹೈಕಮಾಂಡ್ ಕೈಸೇರಿದೆ. ಈ ವರದಿಯಲ್ಲಿ ಕ್ಷೇತ್ರದ ನೈಜ ಚಿತ್ರಣವನ್ನು ಬಿಚ್ಚಿಡಲಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವುದಾಗಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.
ಗೆಲುವಿನ ಅವಕಾಶ ಯಾರಿಗೆ ಎಷ್ಟು?
ಚುನಾವಣಾ ಉಸ್ತುವಾರಿ ಸಮಿತಿಯು ಸಲ್ಲಿಸಿರುವ ವರದಿಯ ಪ್ರಕಾರ, ಪ್ರಸ್ತುತ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ 55-45% ರಷ್ಟು ನೇರ ಹಣಾಹಣಿ ನಡೆಯುತ್ತಿದೆ. ಸದ್ಯದ ವರದಿಯ ಪ್ರಕಾರ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಅವಕಾಶ ಶೇ. 55 ರಷ್ಟಿದ್ದರೆ, ಬಿಜೆಪಿ ಗೆಲ್ಲುವ ಅವಕಾಶ ಶೇ. 45 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಭೌಗೋಳಿಕವಾಗಿ ನೋಡುವುದಾದರೆ, ನಗರ ಪ್ರದೇಶದ ಮತದಾರರು ಹೆಚ್ಚಾಗಿ ಬಿಜೆಪಿ ಪರ ಒಲವು ಹೊಂದಿದ್ದಾರೆ. ಆದರೆ, ಗ್ರಾಮೀಣ ಭಾಗದ ಮತದಾರರು ಬಹುತೇಕ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ ಎಂಬುದು ವರದಿಯಿಂದ ತಿಳಿದುಬಂದಿದೆ. ಇದರ ಜೊತೆಗೆ ಕ್ಷೇತ್ರದಲ್ಲಿ ಬೀಸುತ್ತಿರುವ ‘ಅನುಕಂಪದ ಅಲೆ’ ಕೂಡ ಕಾಂಗ್ರೆಸ್ ಕೈಹಿಡಿಯುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.
ಲಿಂಗಾಯತ v/s ಅಹಿಂದ ಪೈಪೋಟಿ
ಬಾಗಲಕೋಟೆ ಉಪಚುನಾವಣೆಯು ಸಂಪೂರ್ಣವಾಗಿ ‘ಲಿಂಗಾಯತ ವರ್ಸಸ್ ಅಹಿಂದ’ ಎಂಬ ಜಾತಿ ಸಮೀಕರಣದ ಅಡಿಯಲ್ಲಿ ನಡೆಯುತ್ತಿದೆ. ಕ್ಷೇತ್ರದ ಒಟ್ಟು ಮತಗಳಲ್ಲಿ ಶೇ. 30ರಷ್ಟು ಲಿಂಗಾಯತ ಸಮುದಾಯದ ಮತಗಳು ನೇರವಾಗಿ ಬಿಜೆಪಿ ಪರವಾಗಿವೆ. ಹೀಗಾಗಿ ಕಾಂಗ್ರೆಸ್ ಸಂಪೂರ್ಣವಾಗಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಮತಬ್ಯಾಂಕ್ ಅನ್ನು ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ವರ್ಚಸ್ಸು ಕುರುಬ ಸಮುದಾಯದ ಹಾಗೂ ಇತರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವಲ್ಲಿ ಮಹತ್ತರ ಪ್ರಭಾವ ಬೀರಲಿದೆ ಎಂದು ಉಸ್ತುವಾರಿ ಸಮಿತಿ ಹೈಕಮಾಂಡ್ಗೆ ತಿಳಿಸಿದೆ.
ಬಿಜೆಪಿ ಭಿನ್ನಮತವೇ ಕಾಂಗ್ರೆಸ್ಗೆ ಲಾಭ
ಕಾಂಗ್ರೆಸ್ಗೆ ಗೆಲುವಿನ ಆಶಾಭಾವನೆ ಮೂಡಿಸಿರುವ ಪ್ರಮುಖ ಅಂಶವೆಂದರೆ ಬಿಜೆಪಿಯೊಳಗಿನ ಆಂತರಿಕ ಭಿನ್ನಮತ. ಬಿಜೆಪಿ ಅಭ್ಯರ್ಥಿಯು ಸ್ಥಳೀಯ ನಾಯಕರ ಜೊತೆಗೆ ಉತ್ತಮ ಒಡನಾಟ ಹೊಂದಿಲ್ಲ. ಇದು ಕಮಲ ಪಾಳೆಯದಲ್ಲಿ ಅಸಮಾಧಾನ ಸ್ಫೋಟಗೊಳ್ಳಲು ಕಾರಣವಾಗಿದೆ. ಬಿಜೆಪಿಯ ಈ ಆಂತರಿಕ ಭಿನ್ನಾಭಿಪ್ರಾಯಗಳೇ ಕಾಂಗ್ರೆಸ್ಗೆ ವರದಾನವಾಗಲಿದ್ದು, ಇದರ ಲಾಭವನ್ನು ಇನ್ನಷ್ಟು ಪಡೆದುಕೊಳ್ಳಲು ಕೈ ನಾಯಕರು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್ಗೆ ಇರುವ ಎಚ್ಚರಿಕೆ ಮತ್ತು ಸವಾಲುಗಳು
ವರದಿಯಲ್ಲಿ ಕೇವಲ ಪ್ಲಸ್ ಪಾಯಿಂಟ್ಗಳನ್ನು ಮಾತ್ರವಲ್ಲದೆ, ಎದುರಾಗಬಹುದಾದ ಗಂಭೀರ ಸವಾಲುಗಳ ಬಗ್ಗೆಯೂ ಎಚ್ಚರಿಸಲಾಗಿದೆ. ಒಂದು ವೇಳೆ ಲಿಂಗಾಯತ ಮತಗಳು ಸಂಪೂರ್ಣವಾಗಿ ಕ್ರೋಡೀಕರಣಗೊಂಡು ಬಿಜೆಪಿ ಪರ ಮತ ಚಲಾವಣೆಯಾದರೆ ಕಾಂಗ್ರೆಸ್ಗೆ ಗೆಲುವು ಕಷ್ಟವಾಗಲಿದೆ. ಅದೇ ರೀತಿ, ಬಿಜೆಪಿಯೊಳಗಿನ ಅಸಮಾಧಾನವನ್ನು ಮರೆತು, ಅತೃಪ್ತ ನಾಯಕರೆಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದರೆ ಅದು ಕಾಂಗ್ರೆಸ್ಗೆ ದೊಡ್ಡ ಪೆಟ್ಟು ನೀಡಲಿದೆ.
ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್
ಬಾಗಲಕೋಟೆ ಕ್ಷೇತ್ರವು ಉಭಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವುದರಿಂದ, ಹೈಕಮಾಂಡ್ ಈ ಗ್ರೌಂಡ್ ರಿಪೋರ್ಟ್ ಅನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರು ಬಾಗಲಕೋಟೆಯಲ್ಲಿ ಬೀಡುಬಿಟ್ಟು, ಅಹಿಂದ ಮತಗಳನ್ನು ಒಗ್ಗೂಡಿಸಲು ರಣತಂತ್ರ ರೂಪಿಸುವ ಸಾಧ್ಯತೆಯಿದೆ. ಕೇವಲ ಜಾತಿ ಲೆಕ್ಕಾಚಾರ ಮಾತ್ರವಲ್ಲದೆ, ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಚಾರದ ವಿಚಾರದಲ್ಲಿ ಇನ್ನಷ್ಟು ಅಗ್ರೆಸಿವ್ ಆಗಿ ಕೆಲಸ ಮಾಡಬೇಕು ಎಂದು ವರದಿಯಲ್ಲಿ ಹೈಕಮಾಂಡ್ಗೆ ಸ್ಪಷ್ಟವಾಗಿ ಸಲಹೆ ನೀಡಲಾಗಿದೆ.










