

ಕನ್ನಡ ಸುದ್ದಿ ಚಾನೆಲ್ ಗಳ ಹಣೆಬರಹವನ್ನು ನಿರ್ದರಿಸುವ ಟಿಆರ್ ಪಿ( ಟೆಲಿರೇಟಿಂಗ್ ಪಾಯಿಂಟ್) ಹೊರಬಿದ್ದಿದೆ.6ನೇ ವಾರ(19-02-2026)ರ ಟಿಆರ್ ಪಿಯಲ್ಲಿ ಅನೇಕ ವಾರಗಳಿಂದ ಮೊದಲ ಸ್ಥಾನದಲ್ಲೇ ಅಬಾಧಿತವಾಗಿ ಮುಂದುವರೆದಿದ್ದ ಅಂಬಾನಿ ಒಡೆತನದ ನ್ಯೂಸ್ 18 ಕನ್ನಡವನ್ನು ಎಚ್.ಆರ್ ರಂಗನಾಥ್ ಮಾಲೀಕತ್ವದ ಪಬ್ಲಿಕ್ ಟಿವಿ ಹಿಂದಿಕ್ಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಪಬ್ಲಿಕ್ ಟಿವಿ 60 ಟಿಆರ್ ಪಿ ಪಾಯಿಂಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ,ನ್ಯೂಸ್ 18 ಕನ್ನಡ 58 ಪಾಯಿಂಟ್ ಪಡೆದಿದೆ.ಎರಡನೇ ಸ್ಥಾನದಲ್ಲಿದ್ದ ಟಿವಿ9 ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ( ವಾರ ಕಳೆದಂತೆಲ್ಲಾ ಟಿಆರ್ ಪಿ ಸ್ಪರ್ದೆಯಲ್ಲಿ ಹಿಂದೆ ಬೀಳುತ್ತಿದ್ದರೂ ಟಿವಿ9 ಮ್ಯಾನೇಜ್ಮೆಂಟ್ ಅದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ ಅನ್ನಿಸುತ್ತೆ..ಜನರ ದೃಷ್ಟಿಯಲ್ಲಿ ನಾವೇ ಫಸ್ಟ್ ಎನ್ನೋದು ಅವರ ಭಾವನೆ ಇರಬಹುದೇನೋ..?) ಪಬ್ಲಿಕ್ ಟಿವಿ ಹೋಲಿಕೆಯಲ್ಲಿ 4 ಪಾಯಿಂಟ್ ಗಳನ್ನು ಕಳೆದುಕೊಂಡ ಟಿವಿ9 ನ ಟಿಆರ್ ಪಿ 56.
ಇನ್ನುಳಿದಂತೆ ಆರಂಭದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುತ್ತಿದ್ದ ಏಷಿಯಾ ನೆಟ್ ಮಾಲೀಕತ್ವದ ಸುವರ್ಣ ಟಿವಿ ಕೇವಲ 20 ಪಾಯಿಂಟ್ ಪಡೆದುಕೊಂಡಿದೆ.ಪಬ್ಲಿಕ್ ಟಿವಿ ಹೋಲಿಕೆಯಲ್ಲಿ 40 ಪಾಯಿಂಟ್ ಹಿಂದಿದೆ.ರಾಷ್ಟ್ರವಾದಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ಮಾಲೀಕತ್ವದ ರಿಪಬ್ಲಿಕ್ ಕನ್ನಡದ ಕಳಪೆ ಪ್ರದರ್ಶನ ಮುಂದುವರೆದಿದೆ( ಸಧ್ಯಕ್ಕೆ ನಾವಿಕನಿಲ್ಲದ ದೋಣಿಯಂತೆ ಆಗಿರುವ ರಿಪಬ್ಲಿಕ್ ಕನ್ನಡದಲ್ಲಿ ಅಮೂಲಾಗ್ರ ಬದಲಾವಣೆ ಆಗದಿದ್ದರೆ ಚಾನೆಲ್ ನ ಸ್ಥಿತಿ ಹೀನಾತೀಹೀನ ಆಗೋದರಲ್ಲಿ ಅನುಮಾನವೇ ಇಲ್ಲ.ಇಲ್ಲಿನ ಟೀಮ್ ನ್ನು ಕಟ್ಟಿಕೊಂಡು ಏನನ್ನೋ ಸಾಧಿಸ್ತೀನಿ ಎನ್ನುವ ಭ್ರಮೆಯಲ್ಲಿರುವಂತೆ ಕಾಣುವ ಅರ್ನಾಬ್ ಗೋಸ್ವಾಮಿ ಅದರಿಂದ ಹೊರಬರದಿದ್ದಲ್ಲಿ ಸಧ್ಯ ಡಬಲ್ ಡಿಜಿಟ್ ನಲ್ಲಿ ಮಾನ ಕಾಪಾಡಿಕೊಂಡಿರುವ ರಿಪಬ್ಲಿಕ್ ಒಂದು ಅಂಕಿಗೆ ಕುಸಿತ ಕಾಣುವುದರಲ್ಲಿ ಅನುಮಾನವೇ ಇಲ್ಲ.
ರಾಕೇಶ್ ಶೆಟ್ಟಿ ಅವರ ಪವರ್ ಟಿವಿ 9 ಪಾಯಿಂಟ್ ಪಡೆದುಕೊಂಡಿದ್ದರೆ ಅತ್ಯಂತ ನಿರಾಶಾದಾಯಕ ಪ್ರದರ್ಶನ ಕಂಡುಬಂದಿರುವುದು ರಾಧಾ ಹಿರೇಗೌಡರ್ ಅವರಂಥ ಹಿರಿಯ ಸಂಪಾದಕಿಯ ಸಂಪಾದಕತ್ವದ ಗ್ಯಾರಂಟಿ ಕೇವಲ 2.5 ಪಾಯಿಂಟ್ ಪಡೆದಿರುವುದು.ಕೇವಲ 2 ಪಾಯಿಂಟ್ ಪಡೆಯುವ ಮೂಲಕ ಕೊನೆಯ ಸ್ಥಾನವನ್ನು ನಿರೀಕ್ಷೆಯಂತೆ ರಾಜ್ ನ್ಯೂಸ್ ಕನ್ನಡ ಪಡೆದುಕೊಂಡಿದೆ.ಗ್ಯಾರಂಟಿ ಟಿವಿಯಲ್ಲೂ ಬದಲಾವಣೆ ಕಾಣದಿದ್ದರೆ ಪರಿಸ್ಥಿತಿ ಬಿಗಡಾಯಿಸುವ ಸನ್ನಿವೇಶ ಸೃಷ್ಟಿಯಾಗಬಹುದೇನೋ..?
ಟಿಆರ್ ಪಿ ಎನ್ನುವುದು ಜನಸಾಮಾನ್ಯರಿಗಾಗಲಿ.ವೀಕ್ಷಕರಿಗಾಗಲಿ ಅಷ್ಟು ಸರಳವಾಗಿ ಅರ್ಥವಾಗುವಂತದ್ದಲ್ಲ. ಚಾನೆಲ್ ಗಳ ಪ್ರದರ್ಶನ,ಜನಪ್ರಿಯತೆಯ ಮಾನದಂಡವಾಗಿರುವ ಈ ಟಿಆರ್ ಪಿ ವ್ಯವಸ್ಥೆ ಪ್ರಮುಖವಾಗಿ ಜಾಹಿರಾತು ಮತ್ತು ಮಾರುಕಟ್ಟೆ ವಿಸ್ತಾರಕ್ಕೆ ಮುಖ್ಯವಾಗಿದೆ.ಜಾಹಿರಾತುಗಳನ್ನು ನೀಡುವ ವಾಣಿಜ್ಯ ಸಂಸ್ಥೆಗಳು ನೋಡೋದೇ ಈ ಟಿಆರ್ ಪಿಯನ್ನು ಎನ್ನುವುದು ಗಮನಾರ್ಹ








