ಬೆಂಗಳೂರು: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ ಎಂಬ ಮಾತನ್ನು ಮಂಡ್ಯದ ಒಂದು ಕುಟುಂಬ ಇಂದು ಸತ್ಯವಾಗಿಸಿದೆ. ಬ್ರೇನ್ ಡೆಡ್ ಆಗಿದ್ದ ಯುವಕನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬದವರು ಆರು ಜನರ ಬದುಕಿಗೆ ಹೊಸ ಭರವಸೆ ನೀಡಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್ ಸೆಂಟರ್ನಲ್ಲಿ ಈ ಅಂಗಾಂಗ ಕಸಿ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ.
ಮಂಡ್ಯದ ಕಸಬಾ ಹೋಬಳಿಯ ಚಿಕ್ಕಮಂಡ್ಯ ಗ್ರಾಮದ ದರ್ಶನ್ ಎಂಬ ಯುವಕ ಕಳೆದ ಫೆಬ್ರವರಿ 22ರಂದು ಬೈಕ್ನಿಂದ ಬಿದ್ದು ಅಪಘಾತಕ್ಕೀಡಾಗಿದ್ದ. ಆರಂಭದಲ್ಲಿ ಪೆಟ್ಟು ಸಣ್ಣದೆಂದು ಭಾವಿಸಿ ಮನೆಗೆ ಹೋಗಿ ಮಲಗಿದ್ದ ದರ್ಶನ್ಗೆ, ತಲೆಗೆ ಬಲವಾದ ಪೆಟ್ಟಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣವೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಯಿತು.
ಬ್ರೇನ್ ಡೆಡ್ ಮತ್ತು ಕುಟುಂಬದ ಶ್ಲಾಘನೀಯ ತೀರ್ಮಾನ
ವೈದ್ಯರ ತಂಡ ದರ್ಶನ್ಗೆ ಹಗಲಿರುಳು ಚಿಕಿತ್ಸೆ ನೀಡಿದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಎರಡು ದಿನಗಳ ನಂತರ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಉನ್ನತ ವೈದ್ಯರ ತಂಡವು ದರ್ಶನ್ ‘ಬ್ರೇನ್ ಡೆಡ್’ ಆಗಿದ್ದಾನೆ ಎಂದು ಅಧಿಕೃತವಾಗಿ ಘೋಷಿಸಿತು. ಈ ನೋವಿನ ಸಂದರ್ಭದಲ್ಲೂ ದರ್ಶನ್ ಕುಟುಂಬ ಸದಸ್ಯರು ಧೈರ್ಯ ತೋರಿದರು. ‘ಜೀವ ಸಾರ್ಥಕತೆ’ ತಂಡದ ಸಮಾಲೋಚನೆಯ ನಂತರ, ದರ್ಶನ್ ಅವರ ತಂದೆ ದಿನೇಶ್ ಮತ್ತು ಕುಟುಂಬದವರು ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದರು.
ಆರು ಜನರ ಬದುಕಿಗೆ ಆಸರೆ
ದರ್ಶನ್ ಅವರ ದೇಹದಿಂದ ಯಕೃತ್ತು (Liver), ಮೂತ್ರಪಿಂಡಗಳು (Kidneys), ಹೃದಯ ನಾಳಗಳು ಮತ್ತು ಇತರ ಪ್ರಮುಖ ಅಂಗಗಳನ್ನು ಪಡೆದು, ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಆರು ಜನ ಅರ್ಹ ರೋಗಿಗಳಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲೇ ಅತ್ಯಂತ ಕಡಿಮೆ ದರದಲ್ಲಿ ಈ ಜಟಿಲ ಚಿಕಿತ್ಸೆಯನ್ನು ಯಶಸ್ವಿಗೊಳಿಸಿರುವುದು ಬೆಂಗಳೂರು ವೈದ್ಯಕೀಯ ಸಂಸ್ಥೆಯ ಹೆಗ್ಗಳಿಕೆಯಾಗಿದೆ.
ಇದನ್ನೂ ಓದಿ | ಗಾಂಧಿ-ನೆಹರು ವಿರುದ್ಧ ಅವಹೇಳನಕಾರಿ ಭಾಷಣ: ಯತ್ನಾಳ್ ಪ್ರಕರಣ ದಾಖಲು
ಈ ಕುರಿತು ಮಾಹಿತಿ ನೀಡಿರುವ ಮೆಡಿಕಲ್ ಸೂಪರಿಟೆಂಡರ್ ಡಾ. ದೀಪಕ್ ಮತ್ತು ವಿಶೇಷ ಅಧಿಕಾರಿ ಡಾ. ಅಸೀಮಾ ಬಾನು ಧನ್ಯವಾದ ಅರ್ಪಿಸಿದ್ದಾರೆ. ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ಯುವಕ ದರ್ಶನ್ ಮತ್ತು ಆತನ ಕುಟುಂಬದ ತ್ಯಾಗಕ್ಕೆ ಈಗ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.










