advertise here

Search

ದಾವಣಗೆರೆ ದಕ್ಷಿಣ ಉಪಸಮರ: ‘ಕೈ’ ಕೋಟೆಯಲ್ಲಿ ಬಂಡಾಯದ ಕಿಚ್ಚು! ಕಾಂಗ್ರೆಸ್‌ಗೆ ತಲೆನೋವು

sadiq pailwan rebel candidate

ದಾವಣಗೆರೆ: ದಾವಣಗೆರೆಯ ರಾಜಕೀಯ ಭೀಷ್ಮ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡ ಈಗ ಅನಿರೀಕ್ಷಿತ ತಿರುವು ಪಡೆದಿದೆ. ಶಾಮನೂರು ಕುಟುಂಬದ ಕುಡಿ ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸಿ ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದ್ದರೆ, ಪಕ್ಷದ ಒಳಗಿನಿಂದಲೇ ಭಾರಿ ಬಂಡಾಯ ಸ್ಫೋಟಗೊಂಡಿದೆ. ಶಾಮನೂರು ಶಿವಶಂಕರಪ್ಪ (shamanuru shivashankarappa) ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ಸಾಧಿಕ್ ಪೈಲ್ವಾನ್ (Sadiq Pailwan) ಈಗ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದ್ದಾರೆ.

ಯಾರೇ ಒತ್ತಡ ಹಾಕಿದ್ರೂ ಹಿಂದೆ ಸರಿಯಲ್ಲ: ಸಾಧಿಕ್ 

ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ, ಸಾಧಿಕ್ ಪೈಲ್ವಾನ್ ಅವರನ್ನು ಸಮಾಧಾನಪಡಿಸಲು ಕಾಂಗ್ರೆಸ್ ನಾಯಕರು ತೆರೆಮರೆಯ ಕಸರತ್ತು ನಡೆಸುತ್ತಿದ್ದರು. ಆದರೆ, ಇದೀಗ ವಿಡಿಯೋ ಒಂದನ್ನು ಹರಿಬಿಟ್ಟಿರುವ ಸಾಧಿಕ್ ಪೈಲ್ವಾನ್, ತಾವು ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಜನರ ಒತ್ತಾಸೆಯ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ಯಾರೇ ಎಷ್ಟೇ ಒತ್ತಡ ಹೇರಿದರೂ, ಯಾವ ನಾಯಕರು ಬಂದರೂ ನಾನು ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಹೈಕಮಾಂಡ್‌ಗೆ ನೇರ ಸವಾಲು ಎಸೆದಿದ್ದಾರೆ.

ಅಹಿಂದ ಅಸ್ತ್ರ ಮತ್ತು ಮತಗಳ ವಿಭಜನೆ ಭೀತಿ:

ಸಾಧಿಕ್ ಪೈಲ್ವಾನ್ ಅವರ ಈ ನಿರ್ಧಾರ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು (Samarth shamanur) ಅವರಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. “ನಾನು ಅಹಿಂದ ಸಮುದಾಯದ ಬೆಂಬಲದಿಂದ ಈ ಬಾರಿ ಚುನಾವಣಾ ಕಣದಲ್ಲಿದ್ದೇನೆ. ಅಹಿಂದ ಸಮುದಾಯ ಬಿಟ್ಟು ನಾನಿಲ್ಲ, ಅವರ ಆಶೀರ್ವಾದ ನನ್ನ ಮೇಲಿದೆ” ಎಂದು ಹೇಳುವ ಮೂಲಕ ಸಾಧಿಕ್ ಅವರು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಲಗ್ಗೆ ಹಾಕಿದ್ದಾರೆ.

ALSO READ :  ಭವಾನಿ ರೇವಣ್ಣಗೆ ಬಿಗ್ ರಿಲೀಫ್: ನಿರೀಕ್ಷಣಾ ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನಕಾರ

ಬಿಜೆಪಿಗೆ ವರದಾನವಾಗುತ್ತಾ ಈ ಬಂಡಾಯ?

ಈಗಾಗಲೇ ಈ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ಅವರು ಬೃಹತ್ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿ ಅಬ್ಬರಿಸುತ್ತಿದ್ದಾರೆ. ಕಾಂಗ್ರೆಸ್ ಮತಗಳು ಸಾಧಿಕ್ ಪೈಲ್ವಾನ್ ಮತ್ತು ಸಮರ್ಥ್ ಶಾಮನೂರು ನಡುವೆ ವಿಭಜನೆಯಾದರೆ, ಅದು ನೇರವಾಗಿ ಬಿಜೆಪಿಗೆ ಲಾಭ ತಂದುಕೊಡಲಿದೆ ಎಂಬ ಆತಂಕ ಕಾಂಗ್ರೆಸ್ ಪಾಳೆಯದಲ್ಲಿ ಮನೆಮಾಡಿದೆ. ಮುಸ್ಲಿಂ ಮತದಾರರು ಸಾಧಿಕ್ ಪರವಾಗಿ ವಾಲಿದರೆ ಕಾಂಗ್ರೆಸ್‌ನ ಗೆಲುವಿನ ಹಾದಿ ಅತ್ಯಂತ ಕಠಿಣವಾಗಲಿದೆ.

ಇದನ್ನೂ ಓದಿ | ಎಕ್ಸೆಲ್ ಕಾಲೇಜಿನಿಂದ ವಿಷವಾಯಿತಾ ಗುರುವಾಯನಕೆರೆ? ಮೀನುಗಳ ಮಾರಣಹೋಮಕ್ಕೆ ಯಾರು ಹೊಣೆ!

ಶಾಮನೂರು ಆಪ್ತನಿಂದಲೇ ಶಾಮನೂರು ಕುಟುಂಬಕ್ಕೆ ಪೆಟ್ಟು:

ಶಾಮನೂರು ಶಿವಶಂಕರಪ್ಪ ಅವರಿದ್ದಾಗ ಅವರ ನೆರಳಿನಂತೆ ಇದ್ದ ಸಾಧಿಕ್ ಪೈಲ್ವಾನ್, ಈಗ ಅವರ ಕುಟುಂಬದ ವಿರುದ್ಧವೇ ನಿಂತಿರುವುದು ದಾವಣಗೆರೆಯ ಹಿರಿಯ ರಾಜಕೀಯ ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ದಶಕಗಳ ಕಾಲ ಕಾಂಗ್ರೆಸ್ ಪರವಾಗಿ ದುಡಿದ ತಮಗೆ ಈ ಬಾರಿ ಅವಕಾಶ ನೀಡಬೇಕಿತ್ತು ಎಂಬುದು ಸಾಧಿಕ್ ಬೆಂಬಲಿಗರ ವಾದ.

ಏಪ್ರಿಲ್ 9ರಂದು ನಡೆಯುವ ಮತದಾನಕ್ಕೂ ಮುನ್ನ ಕಾಂಗ್ರೆಸ್ ಈ ಬಂಡಾಯವನ್ನು ಶಮನ ಮಾಡುತ್ತದೆಯೇ ಅಥವಾ ಸಾಧಿಕ್ ಪೈಲ್ವಾನ್ ಅವರು ಕಾಂಗ್ರೆಸ್‌ನ ಗೆಲುವಿನ ರಥಕ್ಕೆ ಅಡ್ಡಿಯಾಗಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ಮೇ 4ರ ಫಲಿತಾಂಶವು ದಾವಣಗೆರೆಯ ಈ ಹೊಸ ರಾಜಕೀಯ ಸಮೀಕರಣಕ್ಕೆ ಉತ್ತರ ನೀಡಲಿದೆ.


Political News

ಕನ್ನಡಿಗರ ತೆರಿಗೆ ಕೇರಳ ಪಾಲು? ವಯನಾಡಿಗೆ 10 ಕೋಟಿ ನೀಡಿದ ಸಿದ್ದರಾಮಯ್ಯರಿಗೆ ‘ಕೇರಳ ಸಿಎಂ’ ಪಟ್ಟ ಕಟ್ಟಿದ ಆರ್. ಅಶೋಕ್!

ಉಪಸಮರದ ಅಖಾಡ ಸಿದ್ಧ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಕಮಲ-ಕೈ ಪಡೆಗಳ ಭರ್ಜರಿ ಶಕ್ತಿ ಪ್ರದರ್ಶನ!

ಪಶ್ಚಿಮ ಏಷ್ಯಾ ಯುದ್ಧದ ಭೀತಿ: ಸಂಸತ್‌ನಲ್ಲಿ ಪ್ರಧಾನಿ ಮೋದಿ ‘ಅಭಯ ಹಸ್ತ’; ಭಾರತದ ರಣತಂತ್ರವೇನು?

ಟ್ರಂಪ್ ಡೆಡ್‌ಲೈನ್ ಅಂತ್ಯ: ಇರಾನ್ ಮೇಲೆ ದಾಳಿ ನಡೆಸುವ ಬದಲು 5 ದಿನ ಕದನ ವಿರಾಮ ಘೋಷಿಸಿದ ಅಮೆರಿಕ!

ಕೆಎಸ್‌ಪಿಸಿಬಿ ಲ್ಯಾಪ್‌ಟಾಪ್ ಹಗರಣ: 72 ಸಾವಿರದ ಲ್ಯಾಪ್‌ಟಾಪ್‌ಗೆ 1.17 ಲಕ್ಷ ಪಾವತಿ!

ಬೆಂಗಳೂರಿನ ‘ಪಂಚ ಪಾಲಿಕೆ’ಗಳ ಚೊಚ್ಚಲ ಬಜೆಟ್: 15,000 ಕೋಟಿ ರೂ. ಆಯವ್ಯಯದಲ್ಲಿ ಯಾರಿಗೆ ಏನು ಸಿಗಲಿದೆ?

ಜಮೀರ್ ಅಹಮ್ಮದ್ ರಾಜೀನಾಮೆ ಅಸ್ತ್ರ: ದಾವಣಗೆರೆ ಟಿಕೆಟ್ ಫೈಟ್ ಈಗ ಹೈಕಮಾಂಡ್ ಅಂಗಳಕ್ಕೆ!

ಅಮೆರಿಕಾ–ಇರಾನ್ ಯುದ್ಧದ ಭೀತಿ: ಶಾಂತಿ ಒಪ್ಪಂದಕ್ಕೆ ಟ್ರಂಪ್ ನಕಾರ, ಇರಾನ್ ತೈಲ ಕೇಂದ್ರಗಳೇ ಟಾರ್ಗೆಟ್!

Scroll to Top