ಆರಂಭಕ್ಕೂ ಮುನ್ನವೇ CSKಗೇ ಶಾಕ್‌: ಸ್ಟಾರ್ ಆಟಗಾರ ಔಟ್!


ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 19ನೇ ಆವೃತ್ತಿ ಮಾರ್ಚ್ 28ರಿಂದ ಅದ್ಧೂರಿಯಾಗಿ ಚಾಲನೆ ಪಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗುತ್ತಿವೆ. ಆದರೆ, ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಗಾಯದ ಸಮಸ್ಯೆ ಮತ್ತು ಆಟಗಾರರ ಅಲಭ್ಯತೆ ಐಪಿಎಲ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಪ್ರಮುಖ ಆಟಗಾರರ ಅಲಭ್ಯತೆ: ತಂಡಗಳ ಸ್ಥಿತಿ ಏನು?

1. ಚೆನ್ನೈ ಸೂಪರ್ ಕಿಂಗ್ಸ್ (CSK) – ನಾಥನ್ ಎಲಿಸ್ ಔಟ್:

ಸಿಎಸ್‌ಕೆ ತಂಡದ ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ನಂಬಲಾಗಿದ್ದ ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಎಂ.ಎಸ್. ಧೋನಿ ಅವರ ಮಾರ್ಗದರ್ಶನದಲ್ಲಿ ಈ ಬಾರಿ ಕಪ್ ಗೆಲ್ಲುವ ಕನಸು ಕಾಣುತ್ತಿರುವ ಸಿಎಸ್‌ಕೆಗೆ ಇದು ದೊಡ್ಡ ಹೊಡೆತ. ಸದ್ಯ ಒಟ್ನಿಯಲ್ ಬಾರ್ಟ್‌ಮನ್ ಅವರಂತಹ ಬದಲಿ ಆಟಗಾರರ ಹುಡುಕಾಟದಲ್ಲಿ ಮ್ಯಾನೇಜ್‌ಮೆಂಟ್ ಇದೆ.

2. ರಾಜಸ್ಥಾನ್ ರಾಯಲ್ಸ್ (RR) – ಸ್ಯಾಮ್ ಕರನ್ ಅಲಭ್ಯ:

ಈ ಬಾರಿಯ ದೊಡ್ಡ ಟ್ರೇಡ್‌ಗಳಲ್ಲಿ ಒಂದಾಗಿದ್ದ ಸ್ಯಾಮ್ ಕರನ್ (ರವೀಂದ್ರ ಜಡೇಜಾ ಜೊತೆಗೆ ಸಿಎಸ್‌ಕೆಯಿಂದ ಆರ್.ಆರ್ ಗೆ ಬಂದವರು) ತೊಡೆಸಂದು ಗಾಯದಿಂದಾಗಿ  ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಆಲ್-ರೌಂಡರ್ ಆಗಿ ತಂಡಕ್ಕೆ ಸಮತೋಲನ ನೀಡಬೇಕಿದ್ದ ಕರನ್ ಅಲಭ್ಯತೆ ಸಂಜು ಸ್ಯಾಮ್ಸನ್ ನಿರ್ಗಮನದ ನಂತರ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ್ ತಂಡಕ್ಕೆ ಆತಂಕ ತಂದಿದೆ.

3. ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಮಥಿಶಾ ಪತಿರಾಣ ಮತ್ತು ಹರ್ಷಿತ್ ರಾಣಾ:

ALSO READ :  KMF GUMUL Jobs 2026: ಕಲಬುರಗಿಯಲ್ಲಿ ಲಕ್ಷಾಂತರ ರೂ ಸಂಬಳದ ಭರ್ಜರಿ ಸರ್ಕಾರಿ ಕೆಲಸ, ಜೂನ್‌ 27 ಕೊನೆ ದಿನ

ಕೆಕೆಆರ್ ತಂಡ ಅಬುಧಾಬಿಯಲ್ಲಿ ನಡೆದ ಹರಾಜಿನಲ್ಲಿ ಶ್ರೀಲಂಕಾದ ಯುವ ವೇಗಿ ಮಥಿಶಾ ಪತಿರಾಣ ಅವರನ್ನು ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಪತಿರಾಣ ಕಾಲಿನ ಸ್ನಾಯು ಸೆಳೆತದಿಂದಾಗಿ ಟೂರ್ನಿಯ ಆರಂಭಿಕ ಹಂತದಿಂದ ಹೊರಗುಳಿಯುವ ಸಾಧ್ಯತೆಯಿದೆ (ಕೆಲವು ವರದಿಗಳು ಸಂಪೂರ್ಣ ಹೊರಬಿದ್ದಿದ್ದಾರೆ ಎನ್ನಲಾಗುತ್ತಿದೆ). ಇದರ ಜೊತೆಗೆ ಭಾರತದ ವೇಗಿ ಹರ್ಷಿತ್ ರಾಣಾ ಕೂಡ ಗಾಯಗೊಂಡು ಹೊರಬಿದ್ದಿರುವುದು ಕೆಕೆಆರ್ ಪಾಲಿಗೆ ನುಂಗಲಾರದ ತುತ್ತಾಗಿದೆ.

ಇದನ್ನೂ ಓದಿ | ಆರ್‌ಸಿಬಿ ಅಭಿಮಾನಿಗಳಿಗೆ ಹಬ್ಬ: ಪಂದ್ಯದ ಟಿಕೆಟ್ ಇದ್ದರೆ ಮೆಟ್ರೋ ಪ್ರಯಾಣ ಫ್ರೀ!

ಇತರೆ ತಂಡಗಳಿಗೂ ತಪ್ಪದ ಬಿಸಿ:

SRH: ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೆನ್ನು ನೋವಿನ ಕಾರಣ ಮೊದಲ 3-4 ಪಂದ್ಯಗಳಿಗೆ ಅಲಭ್ಯರಾಗಲಿದ್ದು, ಅವರ ಬದಲು ಇಶಾನ್ ಕಿಶನ್ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

RCB: ವೇಗಿ ಜೋಶ್ ಹ್ಯಾಜಲ್‌ವುಡ್ ಕೂಡ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.


Leave a Comment