EXCLUSIVE: ಸರ್ಕಾರಕ್ಕೆ ಬೇಡವಾದ್ರಾ ಖಡಕ್‌ IPS ಶಿವಪ್ರಕಾಶ್‌ ದೇವರಾಜ್‌.! ದಕ್ಷರಾಗಿದ್ದೇ ತಪ್ಪಾ..?


ಬೆಂಗಳೂರು: ಅಪ್ರಮಾಣಿಕತೆಯನ್ನೇ ಸಹಿಸೊಲ್ಲ..ಭ್ರಷ್ಟಾಚಾರವನ್ನು ಪ್ರೋತ್ಸಾಹಿಸೊಲ್ಲ ..ಇದು ಈ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದ ಮಾತು.ಆದರೆ ಈಗ ನಾವು ಅವರನ್ನು ಪ್ರಶ್ನಿಸ ಬೇಕಾಗಿರೋದು ಏನಂದ್ರೆ, ನೀವು ಅಧಿಕಾರ ಸಿಕ್ಕ ಉತ್ಸಾಹದಲ್ಲಿ ಹೀಗೆಂದು ಹೇಳಿಕೆ ಕೊಟ್ಟಿದ್ರೋ ಅಥವಾ ಬಾಯ್ತಪ್ಪಿನಿಂದ ಅಂದ್ರೆ ಸ್ಲಿಪ್‌ ಆಫ್‌ ಟಂಗೋ ಗೊತ್ತಾಗ್ತಿಲ್ಲ..ಏಕಂದ್ರೆ ವಾಸ್ತವದಲ್ಲಿ ನೀವಂದ ಮಾತು ಈಡೇರಲೂ ಸಾ‍ಧ್ಯವಿಲ್ಲ ಎನ್ನುವ ಸತ್ಯ ನಿಮಗೇ ಗೊತ್ತು..ಅದಕ್ಕೆ ಅವಕಾಶವನ್ನು ಅಧಿಕಾರದಲ್ಲಿರೋರೇ ಮಾಡಿಕೊಡಲ್ಲ ಎನ್ನುವ ಸತ್ಯವೂ ನಿಮ್ಗೆ ತಿಳಿದಿದೆ.ಹೀಗಿರುವಾಗ ನೀವು ಹೇಳಿದ ಮಾತು ರಾಜ್ಯದ ಜನರನ್ನು ಮೆಚ್ಚಿಸುವ ಉದ್ದೇಶದಿಂದ ಕೂಡಿತ್ತಾ..? ನೀವೇ ಹೇಳಬೇಕು.

ಇದನ್ನು ಹೇಳೊಕ್ಕೆ ಕಾರಣವಿದೆ..ಅದು ಸ್ಪಷ್ಟ ಕೂಡ..ದಕ್ಷರು-ಪ್ರಾಮಾಣಿಕರಿಗೆ ಅನ್ಯಾಯ ಆಗಲು ಬಿಡಲ್ಲ ಎಂದಿದ್ದ ನಿಮ್ಮ ಮಾತಿನ ತಾತ್ಪಾರ್ಯಕ್ಕೆ ವ್ಯತಿರಿಕ್ತವಾದ ಬೆಳವಣಿಗೆ ನಿಮ್ಮ ಸರ್ಕಾರದಲ್ಲೇ ನಡೀತಿದೆ. ಸರ್ಕಾರದ ಇಲಾಖೆಗಳಲ್ಲಿ ದಕ್ಷರು-ಪ್ರಾಮಾಣಿಕರನ್ನು ದುರ್ಬೀನ್‌ ಹಾಕ್ಕೊಂಡು ಹುಡುಕಬೇಕಾದ ಸನ್ನಿವೇಶವಿದೆ.ಇಂಥಾ ಸನ್ನಿವೇಶದಲ್ಲಿ ನಮ್ಮ ನಡುವೆ ದಕ್ಷತೆಯಿಂದ ಕೆಲಸ ಮಾಡುವ ಬೆರಳೆಣಿಕೆಯ ಅಧಿಕಾರಿಗಳನ್ನು ಉಳಿಸಿಕೊಳ್ಳುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎಂದ್ರೆ ಅದಕ್ಕಿಂತ ದುರಂತದ ವಿಷಯ ಮತ್ತೊಂದಿದೆಯಾ..? ಹಿಂದಿನ ಸರ್ಕಾರಗಳ ಹಾಗೂ ಅದರ ಮು‍ಖ್ಯಮಂತ್ರಿಗಳ ಅವಧಿಯಲ್ಲಿ ಆದಂತದ್ದೇ ನಿಮ್ಮ ಅವಧಿಯಲ್ಲೂ ಆಗ್ತದೆ ಎಂದ್ರೆ ಮುಖ್ಯಮಂತ್ರಿಯಾಗಿ ನಿಮ್ಮ ನೈತಿಕತೆ ಏನ್‌ ಸರ್.ಇದನ್ನು ಇಡೀ ರಾಜ್ಯದ ಜನತೆ ಪ್ರಶ್ನಿಸ್ತಿದಾರೆ.

ನೀವಂದ ಆ ಪ್ರಾಮಾಣಿಕತೆ-ದಕ್ಷತೆಗೆ ಸಿಕ್ಕ ಬೆಲೆಯಾದ್ರೂ ಏನು.? ನೀವು ಇಷ್ಟೆಲ್ಲಾ ಹೇಳಿದ ಮೇಲೂ ದಕ್ಷರು-ಪ್ರಾಮಾಣಿಕರನ್ನು ಟಾರ್ಗೆಟ್‌ ಮಾಡಲಾಗ್ತದೆ ಎಂದ್ರೆ ನಿಮ್ಮ ಸರ್ಕಾರವೇ ನಿಮ್ಮ ಮಾತಿಗೆ ಸ್ಪಂದಿಸುತ್ತಿಲ್ಲ ಎಂದಾಯಿತಲ್ಲವೇ.? ಆಡಳಿತ ಯಂತ್ರವನ್ನು ಕಂಟ್ರೋಲ್‌ ಗೆ ತೆಗೆದುಕೊಳ್ಳೊಕ್ಕೆ ನಿಮಗೆ ಸಾಧ್ಯವಾಗುತ್ತಿಲ್ಲ ಎನ್ನುವುದಾದ್ರೆ ಅದು ನಿಮ್ಮ ವೈಫಲ್ಯ ಅಲ್ಲವೇ ಡಿ.ಕೆ ಶಿವಕುಮಾರ್‌ ಅವ್ರೇ.ಪ್ರಾಮಾಣಿಕತೆ ಹಾಗೂ ದಕ್ಷತೆಯನ್ನು ಬೆಂಬಲಿಸುವ, ಬೆರಳೆಣಿಕೆಯ ದಕ್ಷ ಅಧಿಕಾರಿಗಳ ಬೆನ್ನಿಗೆ ನಿಲ್ಲುವ ಧೋರಣೆ ಹೊಂದಿರುವ ರಾಜ್ಯದ ಅದೆಷ್ಟೋ ಜನರ ನೋವು-ಆಕ್ರೋಶ-ಬೇಸರದ ದ್ವನಿಯಾಗಿ ಕನ್ನಡ ಫ್ಲ್ಯಾಶ್‌ ನ್ಯೂಸ್ ಇವತ್ತು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದೆ.

ಭ್ರಷ್ಟಾಚಾರ ಸಹಿಸೊಲ್ಲ ಎನ್ತೀರಾ..ಪ್ರಾಮಾಣಿಕರಿಗೇ ಉಳಿಗಾಲವಿಲ್ಲ ಸಿಎಂ ಸಾಹೇಬ್ರೇ….  ಹೌದು…ಇವತ್ತು ನೇರವಾಗಿ ನಾವು ಪ್ರಶ್ನಿಸಬೇಕಿರುವುದು ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನು..ಅದಕ್ಕೆ ಕಾರಣ ದಕ್ಷ ಐಪಿಎಸ್‌ ಅಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಅವರ ಅಕಾಲಿಕ ವರ್ಗಾವಣೆ..ಹಾಗೆಯೇ ಖಡಕ್‌ ಕೆಎಎಸ್‌ ಅಧಿಕಾರಿ ಆಶಾ ಪರ್ವಿನ್‌ ಅವರ ಎತ್ತಂಗಡಿ.ಇಬ್ಬರೂ ಅವರವರ ಮಟ್ಟದಲ್ಲಿ ಪ್ರಾಮಾಣಿಕರು…ಅನ್ಯಾಯ-ಭ್ರಷ್ಟಾಚಾರ ಸಹಿಸದವರು.ಅದೇ ಕಾರಣಕ್ಕೆ ಹಲವಾರು ಬಾರಿ ವರ್ಗವಾದವರು.ಅಷ್ಟಕ್ಕೆ ನೈತಿಕ ಸ್ಥೈರ್ಯ-ಹುಮ್ಮಸ್ಸು ಕಳೆದುಕೊಳ್ಳದೆ ತಮ್ಮ ಪಾಡಿಗೆ ನಿರ್ಲಿಪ್ತರಾಗಿ ಕಾರ್ಯೋನ್ಮುಖರಾದವರು.ಆದರೆ ಬೇಸರ ಆಗುತ್ತಿರೋದೇ ಸರ್ಕಾರಗಳಿಗೆ ಇಂಥಾ ಖಡಕ್‌ ಆದ ಅಧಿಕಾರಿಗಳೇಕೆ ಬೇಡವಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ..ಇಂಥವರನ್ನು ಉಳಿಸಿಕೊಳ್ಳೊಕ್ಕೆ. ಇಂಥವರ ಕೆಲಸಗಳನ್ನು ಬೆನ್ತಟ್ಟಿ ಪ್ರೋತ್ಸಾಹಿಸುವುದಕ್ಕೆ ಸಾಧ್ಯವಾಗದಿದ್ದರೆ ಅಕ್ರಮ 10 ರೂಪಾಯಿ ಭ್ರಷ್ಟಾಚಾರವಾದ್ರೂ ಸಹಿಸಿಕೊಳ್ಳೊಲ್ಲ..ಅಪ್ರಾಮಾಣಿಕರು-ಭ್ರಷ್ಟರಾದ ಅಧಿಕಾರಿಗಳನ್ನು ಸುಮ್ಮನೆ ಬಿಡೊಲ್ಲ ಎನ್ನುವ ಶೋ ಅಫ್..ಬಿಲ್ಡಪ್‌ ನೀಡುವುದನ್ನು ನಿಲ್ಲಿಸುವುದು ಒಳ್ಳೇದೆನಿಸುತ್ತದೆ.

ಇಬ್ಬರು ಖಡಕ್‌ ಅಧಿಕಾರಿಗಳ ವರ್ಗಾವಣೆಯ ವಿಷಯ ಹತ್ತಿರತ್ತಿರ ಹಿಂದೆ ಮುಂದೆ ಎನ್ನುವ ದಿನಗಳಲ್ಲಿ ಹೊರಬಿದ್ದಿದೆ.ಅತ್ಯಂತ ಖಡಕ್‌ ಐಪಿಎಸ್‌ ಎನಿಸಿಕೊಂಡಿರುವ ಶಿಪ್ರಕಾಶ್‌ ದೇವರಾಜ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.ಅದು ಕೂಡ ಯಾವುದೇ ಸ್ಥಳ ತೋರಿಸದೆ..ಪೊಲೀಸ್‌ ಇಲಾಖೆಯಲ್ಲಿ ದಕ್ಷರು-ಪ್ರಾಮಾಣಿಕರ ಕೊರತೆ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ಶಿವಪ್ರಕಾಶ್‌ ದೇವರಾಜ್‌ ಅವರಂಥ ಅಧಿಕಾರಿಗಳ ಮೇಲೆ ನಂಬಿಕೆ ಇಡುವ ದೊಡ್ಡ ಸಮುದಾಯವೇ ನಮ್ಮ ನಡುವಿತ್ತು.2014ನೇ ಬ್ಯಾಚ್‌ ನ ಐಪಿಎಸ್‌  ಅಧಿಕಾರಿ ಶಿವಪ್ರಕಾಶ್‌ ದೇವರಾಜ್(‌ಮೂಲತಃ ತೆಲಂಗಾಣ-ಇದು ಅವರಿಗೆ ೯ನೇ ವರ್ಗಾವಣೆ) ಲೋಕಾಯುಕ್ತ ಎಸ್ಪಿಯಾಗಿದ್ರು.ಅವರ ಅವಧಿಯಲ್ಲಿ ನೆನಪಿನಲ್ಲಿಡುವಂಥ ಕೆಲಸವಾಗಿದ್ವು.ಅವರ ಕಾರ್ಯವೈಖರಿಯನ್ನು ಅನೇಕ ಜನ ಮಧುಕರ್‌ ಶೆಟ್ಟಿ ಅವರಿಗೆ ಹೋಲಿಸಲಾಗುತ್ತಿತ್ತು.ಮಧುಕರ್‌ ಶೆಟ್ಟಿ ನಂತರ ಲೋಕಾಯುಕ್ತದಲ್ಲಿ ಏನಾದ್ರೊಂದಿಷ್ಟು ಪರಿಣಾಮಕಾರಿ ಎನ್ನುವಂಥ ಕೆಲಸಗಳಾಗಿತ್ತು ಎಂದ್ರೆ ಅದು ಶಿವಪ್ರಕಾಶ್‌ ದೇವರಾಜ್‌ ಅವರ ಕಾಲದಲ್ಲಿ ಎಂದು ಅಲ್ಲಿನವರೇ ಹೇಳ್ತಿದ್ರು..

ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಶಿವಪ್ರಕಾಶ್‌ ಮಾಡಿದ ತಪ್ಪೇನು.?!  ಶಿವಪ್ರಕಾಶ್‌ ದೇವರಾಜ್‌ ಅವರ ಕಾರ್ಯಾವಧಿಯಲ್ಲಿ ಕರ್ನಾಟಕ ರಾಜ್ಯವೇ ಬೆಚ್ಚಿಬೀಳುವಂಥ ಕಾರ್ಯಾಚರಣೆಗಳಾಗಿದ್ದು ಸತ್ಯ. ಅದರಲ್ಲಿ ಅಬಕಾರಿ ಅಕ್ರಮ, ಭೂಗಳ್ಳರ ವಿರುದ್ದದ ಕಾರ್ಯಾಚರಣೆ ಪ್ರಮುಖವಾಗಿತ್ತು.ಅದರ ಬೆನ್ನಲ್ಲೇ ಅವರು ಸಾಕಷ್ಟು ಅಕ್ರಮಗಳ ವಿರುದ್ದ ಬೇಟೆಯಾಡೊಕ್ಕೆ ಖೆಡ್ಡಾವನ್ನೇ ಸಿದ್ದಮಾಡಿಕೊಂಡಿದ್ರು.ಇದಕ್ಕಾಗಿ ಮೇಲಾಧಿಕಾರಿಗಳ ಅನುಮತಿಗೂ ಕಾಯುತ್ತಿದ್ದರು.ಅವರ ಕಾರ್ಯವೈಖರಿ ಸರ್ಕಾರವನ್ನೇ ಮುಜುಗರಕ್ಕೆ ಈಡುಮಾಡಿದ್ದು ಸುಳ್ಳಲ್ಲವಂತೆ.ಅವರ ಇತ್ತೀಚಿನ ಡೇರ್‌ ಅಂಡ್‌ ಬೋಲ್ಡ್‌ ಆದಂತ ಕಾರ್ಯಾಚರಣೆಗಳನ್ನು ಕಂಡ ಕೆಲವರು ಇವರನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ ನಮ್ಮ ಬುಡವನ್ನೇ ಕಾಯಿಸಬಹುದೆನ್ನುವ ಅಳುಕಿಗೆ ಸಿಲುಕಿದ್ರಂತೆ.ಹಾಗಾಗಿನೇ ಎಲ್ಲಾ ದೊಡ್ಡ ಮಟ್ಟದಲ್ಲಿ ಚಿತಾವಣೆ ನಡೆಸಿ ಸರ್ಕಾರದ ಮೇಲೆಯೇ ಒತ್ತಡ ತಂದು ಅವರನ್ನು ರಾತ್ರೋರಾತ್ರಿ ವರ್ಗ ಮಾಡಿಸುವಲ್ಲಿ ಯಶಸ್ವಿಯಾದರೆನ್ನುವುದು ವರ್ತಮಾನ.

ಐಎಂಎ ಹಗರಣದಲ್ಲಿ ಸಿಲುಕಿದ್ದ ಪ್ರಭಾವಿ ರಾಜಕಾರಣಿಯೊಬ್ಬರ ಹೆಸರು ಕೂಡ ಶಿವಪ್ರಕಾಶ್‌ ದೇವರಾಜ್‌ ಅವರ ವರ್ಗಾವಣೆ ಹಿಂದೆ ಕೇಳಿಬರುತ್ತಿದೆ. ರಾಜ್ಯ ಕಂಡ ಬಹುದೊಡ್ಡ ಹಗರಣದಲ್ಲಿ ಆಪಾದಿತರಾಗಿರುವ ಅವರ ವಿರುದ್ಧ ತನಿಖೆ ನಡೆಸಬೇಕಿರುವುದರಿಂದ ಪ್ರಾಸಿಕ್ಯೂಷನ್‌ ಗೆ ಸರ್ಕಾರದ ಮಟ್ಟದಲ್ಲಿಅನುಮತಿ ಕೇಳಿದ್ರಂತೆ.ಅದೇನಾದ್ರೂ ಆಗಿಬಿಟ್ರೆ ತನ್ನ ಲೈಫ್‌ ಅಂಡ್‌ ಫ್ಯೂಚರ್‌ ಬರ್ಬಾದ್‌ ಆಗೋದು ಪಕ್ಕಾ..ಅಲ್ಲದೇ ಆ ಕೆಲಸವನ್ನು ಶಿವಪ್ರಕಾಶ್‌ ದೇವರಾಜ್‌ ಅವರೇ ಮಾಡಿಬಿಡಬಹುದು ಎಂದು ಅಂಜಿ ಆ ರಾಜಕಾರಣಿಯೇ ಸರ್ಕಾರದ ಮೇಲೆ ಒತ್ತಡ ತರಿಸಿ ವರ್ಗಾವಣೆ ಮಾಡಿಸಿರಬಹುದು ಎನ್ನುವ ವಿಶ್ಲೇಷಣೆ ಕೂಡ ಕೇಳಿಬರುತ್ತಿದೆ.ಶಿವಪ್ರಕಾಶ್‌ ಅವರ ಅಕಾಲಿಕ ವರ್ಗಾವಣೆಯನ್ನು ಈ ಒಂದು ಘಟನೆಯೊಂದಿಗೆ ಹೋಲಿಸಿ ನೋಡಿದ್ರೆ ಅವರ ವರ್ಗಾವಣೆ ಹಿಂದೆ ಇದೇ ಅಂಶ ಕಾರಣವಾಗಿರಬಹುದೆನ್ನುವ ಅನುಮಾನ ದಟ್ಟವಾಗುತ್ತಿದೆ.

ALSO READ :  "ನನ್ನ ಪತಿ ವಿಜಯ್ ದೇವರಕೊಂಡ" ಎಂದು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ರಶ್ಮಿಕಾ

ಈ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್‌ ಶಿವಪ್ರಕಾಶ್‌ ದೇವರಾಜ್‌ ಅವರನ್ನು ಮಾತನಾಡಿಸಿತು.“ನಾನೊಬ್ಬ ಸರ್ಕಾರದ ಅಧಿಕಾರಿ.ಸರ್ಕಾರ ನನಗೆ ಯಾವ ಹುದ್ದೆಯಲ್ಲಿ ಹಾಕಿದ್ರು ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ.ಅದು ನನಗೆ ರಕ್ತಗತವಾಗಿದೆ.ನಾನು ಎಲ್ಲೇ ಕೆಲಸ ಮಾಡಿದ್ರೂ ಒಳ್ಳೆಯ ಹೆಸರನ್ನೇ ಪಡೆದಿದ್ದೇನೆ.ನಾಲ್ಕೈದು ಜನಕ್ಕೆ ನನ್ನಿಂದ ಒಳ್ಳೆಯದಾಗಿದೆ.ಲೋಕಾಯುಕ್ತದಲ್ಲೂ ನಾನು ನನ್ನ ವೃತ್ತಿ ಧರ್ಮಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕೆಲಸ ಮಾಡಿದ್ದೇನೆ.ಸರ್ಕಾರ ಎಷ್ಟು ದಿನ ಹುದ್ದೆಯಲ್ಲಿ ಇರಿ ಎನ್ನುತ್ತೋ ಅಲ್ಲಿಯವರೆಗೆ ಇರುತ್ತೇನೆ.ನಾನೇನಿದ್ದರೂ ಸರ್ಕಾರದ ಸೇವಕ.ಈಗ ಬೇರೆ ಇಲಾಖೆಯಲ್ಲಿ ಕೆಲಸ ಮಾಡಿ ಎಂದ್ರೂ ಮಾಡ್ತೇನೆ.ಎಲ್ಲೇ ಹೋದರೂ ನನ್ನ ಪ್ರಾಮಾಣಿಕತೆಯನ್ನು ಬಿಡೊಲ್ಲ..ಇದು ನನಗೆ ನನ್ನ ವೃತ್ತಿ ಕಲಿಸಿಕೊಟ್ಟ ಸಂಸ್ಕಾರ” ಎಂದ್ರು.

“ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ರಾಜ್ಯಪಾಲರಿಗೆ ಪತ್ರ-ಮದ್ಯೆ ಪ್ರವೇಶಿಸುವಂತೆ ಮನವಿ: ಶಿವಪ್ರಕಾಶ್‌ ದೇವರಾಜ್‌ ಅವರ ವರ್ಗಾವಣೆಗೆ ತೀವ್ರ ಆಕ್ಷೇಪ-ಅಸಮಾಧಾನ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಲ್ಲಹಳ್ಳಿ ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆದಿದ್ದಾರೆ.ಶಿವಪ್ರಕಾಶ್‌ ದೇವರಾಜ್‌ ಅವರ ವರ್ಗಾವಣೆಗೆ ಕಾರಣವೇನು ಎನ್ನುವುದನ್ನು ರಾಜ್ಯದ ಜನರ ಮುಂದೆ ಸರ್ಕಾರ ಹೇಳಬೇಕಿದೆ. ನಮ್ಮ ನಡುವೆ ಪ್ರಾಮಾಣಿಕರಾಗಿ ಉಳಿದುಕೊಂಡಿರುವ ಅಧಿಕಾರಿಗಳೇ ಕಡಿಮೆ.ಅದರಲ್ಲಿ ಶಿವಪ್ರಕಾಶ್‌ ಅವರಂಥ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲಿಕ್ಕೆ ಅವಕಾಶ ಮಾಡಿಕೊಡದಿದ್ದರೆ ಹೇಗೆ..? ಇದು ಅವರಂತೆ ಇರುವ ಅವರಂಥ ಎಷ್ಟೋ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸಿದಂತೆ ಆಗುವುದಿಲ್ಲವೇ..? ಸರ್ಕಾರ ಇದಕ್ಕೆಲ್ಲಾ ಅವಕಾಶ ಕೊಡಬಾರದು.ಸರ್ಕಾರ ಮಾಡಿರುವ ಅಕಾಲಿಕ ವರ್ಗಾವಣೆಯ ಆದೇಶವನ್ನು ಮರುಪರಿಶೀಲಿಸಬೇಕು..ತಕ್ಷಣಕ್ಕೆ ಅದನ್ನು ರದ್ದು ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಈ ವಿಷಯದಲ್ಲಿ ರಾಜ್ಯಪಾಲರು ಮದ್ಯೆ ಪ್ರವೇಶ ಮಾಡಬೇಕೆಂದು ಆಗ್ರಹಿಸಿದ್ದಾರೆ.ಇವರ ಪತ್ರವನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಲೇಬೇಕು.ಶಿವಪ್ರಕಾಶ್‌ ಅವರಂಥ ಅಧಿಕಾರಿಗಳನ್ನು ಉಳಿಸಿಕೊ‍ಳ್ಳುವ ಮೂಲಕ ಸರ್ಕಾರ ತನ್ನ ನೈತಿಕತೆಯನ್ನು ಸಾಬೀತುಪಡಿಸಬೇಕೆಂದು ದಿನೇಶ್‌ ಕಲ್ಲಹಳ್ಳಿ ಮನವಿ ಮಾಡಿದ್ದಾರೆ”

 ದಕ್ಷ ಕೆಎಎಸ್‌ ಆಶಾ ಪರ್ವಿನ್‌ ಗೂ ವರ್ಗಾವಣೆ ಶಿಕ್ಷೆ..ಏನಿದು ಅನ್ಯಾಯ..! ಮತ್ತೊಂದು ಪ್ರಕರಣದಲ್ಲಿ ಕೂಡ ಓರ್ವ ದಕ್ಷ ಕೆಎಎಸ್‌ ಅಧಿಕಾರಿಣಿ ಅವರರನ್ನು ವರ್ಗ ಮಾಡಲಾಗಿದೆ. ಹಿರಿಯ ಕೆಎಎಸ್ ಅಧಿಕಾರಿ ಆಶಾ ಪರ್ವಿನ್‌ ಅವರನ್ನು ಹಿಂದೆ ವರ್ಗ ಮಾಡಿದ ಇಲಾಖೆಯಿಂದ ಎರಡೇ ತಿಂಗಳ ಅವಧಿಯಲ್ಲಿ ಎತ್ತಂಗಡಿ ಮಾಡಲಾಗಿದೆ.ಕಿದ್ವಾಯಿ ಆಸ್ಪತ್ರೆಯಲ್ಲಿ ಆಯಕಟ್ಟಿನ ಸ್ಥಳದಲ್ಲಿರುವ ಕೆಲವರು ನಡೆಸುತ್ತಿರುವ ಅಕ್ರಮ-ಭ್ರಷ್ಟಾಚಾರದ ವಿರುದ್ದ ಸರ್ಕಾರಕ್ಕೆ ವರದಿ ಸಲ್ಲಿಸಿದರೆನ್ನುವುದೇ ಅವರ ವರ್ಗಾವಣೆಗೆ ಕಾರಣ ಎನ್ನಲಾಗ್ತಿದೆ.

ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಅವರು ಕೆಲಸ ಮಾಡ್ತಿದ್ದ ವೇಳೆ ಅಲ್ಲಿನ ಭ್ರಷ್ಟ ಡಾ.ಶಿವಲಿಂಗಯ್ಯ ಅವರ ವಿರುದ್ಧ ಸಾಕ್ಷ್ಯ ಸಮೇತ ಸರ್ಕಾರಕ್ಕೆ ವರದಿ ಮಾಡಿದರೆನ್ನುವ ಕಾರಣಕ್ಕೆ ಅಲ್ಲಿಂದ ವರ್ಗ ಮಾಡಿತ್ತು ಸರ್ಕಾರ.ಅನೇಕ ತಿಂಗಳು ಹುದ್ದೆ ಸಿಗದೆ ಖಾಲಿ ಕೂತಿದ್ದ ಅವರನ್ನು ಕಿದ್ವಾಯಿಗೆ ವರ್ಗ ಮಾಡಿದ್ದು ಇದೇ ಸರ್ಕಾರ.ಅಲ್ಲಿ ನಡೆಯುತ್ತಿರುವ ಅಕ್ರಮ-ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕಮ್ಮ..ಅದಕ್ಕೆ ನಿನ್ನಂತ ಖಡಕ್‌ ಅಧಿಕಾರಿನೇ ಬೇಕು ಎಂದು ಆನ್‌ ಡಿಮ್ಯಾಂಡ್‌ ನಲ್ಲಿ ನಿಯುಕ್ತಿ ಮಾಡಿದ್ದು ಕೂಡ ಇದೇ ಕಾಂಗ್ರೆಸ್‌ ಸರ್ಕಾರ.ಆದ್ರೆ ದುರಂತ ನೋಡಿ ಅದೇ ಅಧಿಕಾರಿಣಿಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡಿದ ಕಾರಣಕ್ಕೆ ವರ್ಗ ಮಾಡಲಾಗುತ್ತೆ ಎಂದ್ರೆ ಇದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ.

ಆಶಾ ಪರ್ವಿನ್‌ ಅವರನ್ನು ಸಧ್ಯಕ್ಕೆ ಜಲಮಂಡಳಿಯ ಆಡಳಿತಾಧಿಕಾರಿಯಾಗಿ ಸರ್ಕಾರ ನಿಯುಕ್ತಿ ಮಾಡಿದೆ ಎನ್ನುವ ಸುದ್ದಿಯಿದೆ.ಆದರೆ ಅಲ್ಲಿಯೂ ಕೂಡ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ.ತಮ್ಮನ್ನು ಎಷ್ಟೇ ಬಾರಿ ಸರ್ಕಾರ ವರ್ಗಾಯಿಸಲಿ,ಎಲ್ಲೇ ವರ್ಗಾಯಿಸಲಿ ಅಲ್ಲಿ ಕೆಲಸ ಮಾಡಲು ಸಿದ್ದ..ಏಕೆಂದರೆ ನಾನು ಸರ್ಕಾರದ ಸೇವಕಿ…ಹಾಗೆಂದು ದಕ್ಷತೆ-ಪ್ರಾಮಾಣಿಕತೆಯಲ್ಲಿ ಹೊಂದಾಣಿಕೆಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ..ಅಲ್ಲಿಯೂ ನನ್ನ ಕೆಲಸ ಮುಂದುವರೆಸುತ್ತೇನೆ ಎಂದು ಆಶಾ ಪರ್ವಿನ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.ಹಾಗಾಗಿ ಈಗಾಗಲೇ ಜಲಮಂಡಳಿಯಲ್ಲಿ ಆಶಾ ಪರ್ವಿನ್‌ ಬರ್ತಿದ್ದಾರೆ ಎನ್ನುವ ಸುದ್ದಿನೇ ಭ್ರಷ್ಟರ ಎದೆಯಲ್ಲಿ ದೊಡ್ಡ ಮಟ್ಟದ ನಡು-ಆತಂಕ ಸೃಷ್ಟಿಸಿದೆಯಂತೆ.

ಶಿವಪ್ರಕಾಶ್‌ ದೇವರಾಜ್‌ ಮತ್ತು ಆಶಾ ಪರ್ವಿನ್‌ ಅವರಂಥ ದಕ್ಷ ಅಧಿಕಾರಿಗಳನ್ನು ಸರ್ಕಾರ ಇಷ್ಟೊಂದು ನಿಷ್ಟೂರವಾಗಿ, ಅಪಮಾನಕರವಾಗಿ, ನಿರ್ದಯಿಯಾಗಿ ನಡೆಸಿಕೊ‍ಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ..ಸರ್ಕಾರಿ ಅಧಿಕಾರಿಯಾಗಿರುವುದರಿಂದ ಇಬ್ಬರೂ ತಮಗಾದ ಅನ್ಯಾಯದ ಬಗ್ಗೆ ಸಾರ್ವಜನಿಕವಾಗಿ ಏನೂ ಹೇಳಲಾಗದು.ಆದರೆ ಇದರಿಂದ ತಮಗಾಗಿರುವ ನೋವು-ಅವಮಾನದ ಬಗ್ಗೆ ಆಕ್ರೋಶದ ಭಾವನೆ ಅವರಲ್ಲಿದ್ದೇ ಇದೆ.ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ನಿಜಕ್ಕೂ ನೈತಿಕತೆ ಎನ್ನುವುದಿದ್ದರೆ ಈ ಇಬ್ಬರೂ ಅಧಿಕಾರಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಿದೆ.ಅದಾಗದಿದ್ದರೆ ತಮ್ಮದು ಅಕ್ರಮ-ಭ್ರಷ್ಟಾಚಾರ ವಿರೋಧಿ ಸರ್ಕಾರ ಎಂದು ಅವರೇ ಒಪ್ಪಿಕೊಂಡಂತಾಗುತ್ತದೆಯಲ್ಲವೇ..?


Leave a Comment