ಇದು ನಿಜಕ್ಕೂ ಅನ್ಯಾಯದ  ಸಾವು ಕಣ್ರಿ..”ಈ- ಟಿವಿ” ಅಂಥ ದಿಗ್ಗಜ ಮಾದ್ಯಮ ಸಂಸ್ಥೆಯಲ್ಲಿ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರೂ ಸ್ವಲ್ಪವೂ ಅಹಮಿಕೆ ಪ್ರದರ್ಶಿಸಿದೆ ತೀರಾ ಸರಳವಾಗಿ ಬದುಕಿದ ಜೀವ ಅದು..ಆದ್ರೆ ಇದ್ದಕ್ಕಿದ್ದಂತೆ ನೇಪಥ್ಯಕ್ಕೆ ಸರಿದು ಅನೇಕ ವರ್ಷಗಳೇ ಕಳೆದಿದ್ವು..ಅವರು ಇನ್ನಿಲ್ಲ ಎನ್ನುವ ಸುದ್ದಿ ಸಿಡಿಲಂತೆ ಅಪ್ಪಳಿಸಿದಾಗ ನಂಬಲಿಕ್ಕೆ ಸಾಧ್ಯವೇ ಆಗ್ಲಿಲ್ಲ.

ಹೌದು..ಸುದ್ದಿಯೇ ಜೀವಾಳ ಎನ್ನುವ ಆಕರ್ಷಕ ಟೈಟಲ್ ನಲ್ಲಿ ಪ್ರಸಾರವಾಗ್ತಿದ್ದ ಈ ಟಿವಿ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಅನೇಕ ವರ್ಷಗಳವರೆಗೆ ರಿಪೋರ್ಟರ್ ಆಗಿ ಕೆಲಸ ಮಾಡ್ತಿದ್ದ ಭುವನೇಶ್ವರಿ ಇನ್ನಿಲ್ಲ ಎನ್ನುವ ಸುದ್ದಿ ತುಮಕೂರಿನಿಂದ ಹೊರಬಿದ್ದಿದೆ.ಅತ್ಯಂತ ಸಜ್ಜನೆ,ಸಂಭಾವಿತೆ-ನಿಗರ್ವಿ,ಅಜಾತಶತೃ-ಸ್ನೇಹಜೀವಿ, ಕೆಳಹಂತದ ಸಹದ್ಯೋಗಿಗಳ ಜತೆಯಲ್ಲೂ ಆತ್ಮೀಯವಾಗಿ ಬೆರೆಯುತ್ತಿದ್ದ ವ್ಯಕ್ತಿತ್ವದ ಭುವನೇಶ್ವರಿ ಅನಾರೋಗ್ಯಕ್ಕೆ ಬಲಿಯಾಗಿದ್ದಾರೆ.ಈ-ಟಿವಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಚಾನೆಲ್ ನ ಭಾಗವಾಗಿ ಪ್ರಮುಖ ರಿಪೋರ್ಟರ್ ಗಳಲ್ಲಿ ಒಬ್ಬರಾಗಿದ್ದ ಭುವನೇಶ್ವರಿ ಅನೇಕ ವರ್ಷಗಳ ಕಾಲ ಬೆಂಗಳೂರು ಕಚೇರಿಯಲ್ಲಿ ಕೆಲಸ ಮಾಡಿದ್ದರು.ನಂತರ ತುಮಕೂರಿನಲ್ಲಿ ಕುಟುಂಬ ಸಮೇತ  ನೆಲಸಿದ್ದರು.ಎಲ್ಲವೂ ಚೆನ್ನಾಗಿಯೇ ಇದೆ ಎಂದುಕೊಂಡಿದ್ದ ಅವರೊಂದಿಗೆ ಕೆಲಸ ಮಾಡಿದವರಿಗೆ,ಅವರನ್ನು ಬಲ್ಲವರಿಗೆ   ವಯಸ್ಸಲ್ಲದ ವಯಸ್ಸಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ರು ಎನ್ನುವ ಸುದ್ದಿ ಜೀರ್ಣಿಸಿಕೊಳ್ಳಲಿಕ್ಕಾಗಲೇ ಇಲ್ಲ.

ಇವತ್ತಿನ ಕಾಲಘಟ್ಟದ ಪತ್ರಕರ್ತರಿಗೆ ಕೈಯಲ್ಲಿ ಲೋಗೋ ಸಿಕ್ಕರೆ ತಲೆನೇ ನಿಲ್ಲೊಲ್ಲ.ತಲೆಯಲ್ಲಿ ವಿಷಯದ ಜ್ನಾನ ಇಲ್ಲದಿದ್ದರೂ ಮಾತಾಡೊಕ್ಕೆ ಬಂದ್ರೆ ಸಾಕು ಅದನ್ನೇ ರಿಪೋರ್ಟಿಂಗ್ ಎಂದುಕೊಂಡವರೇ ಹೆಚ್ಚು.ಅದೇ  ರಿಪೋರ್ಟರ್ ಸಾಮರ್ಥ್ಯ ಎನ್ನುವಂತಾಗಿದೆ.ಅದರಲ್ಲೂ ಲೈವ್ ನಲ್ಲಿ ಬಂದು ತೆರೆಯಲ್ಲಿ ಕಾಣಿಸಿಕೊಂಡ್ರೆ ಮುಗಿದೋಯ್ತು.ಅದನ್ನು  ಫೇಸ್ ಬುಕ್ ನಲ್ಲಿ ಹಾಕ್ಕೊಂಡು ಅದನ್ನೇ ಮಹತ್ಸಾಧನೆ ಎನ್ನುವಂತೆ ಬಿಂಬಿಸಿ  ಸೆಲ್ಫ್ ಮಾರ್ಕೆಟಿಂಗ್ ಮಾಡಿಕೊಳ್ಳುವವರೇ ಹೆಚ್ಚಾಗಿ ಹೋಗಿದ್ದಾರೆ.ನಿಜವಾದ ಪ್ರತಿಭಾನ್ವಿತರು ಅವಕಾಶಗಳಿಲ್ಲದೆ ಇವತ್ತಿಗೂ ಯಾವುದೋ ಮೂಲೆಯಲ್ಲಿ ಕುತ್ಕೊಂಡು ತಾವಾಯ್ತು ತಮ್ಮ ಪಾಡಾಯ್ತೆಂದುಕೊಂಡು ಕೆಲಸ ಮಾಡುತ್ತಿದ್ದಾರೆ.

ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ.ಭುವನೇಶ್ವರಿ ಈಟಿವಿಯಂಥ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಅಹಂನ್ನು ಎಂದೂ ಮೈಗೆ ಅಂಟಿಸಿಕೊಳ್ಳ ಲಿಲ್ಲ.ತನ್ನ ಓರಗೆಯಲ್ಲಿ ಸಣ್ಣ ವಯಸ್ಸಿನ ಪತ್ರಕರ್ತರನ್ನೂ ರೀ ಎಂದು ಸಂಬೋಧಿಸಿಯೇ ಮಾತನಾಡಿದವರು.ಆಗ ತಾನೇ ಪತ್ರಿಕೋದ್ಯಮಕ್ಕೆ ಬಂದವರಿಗೆ ಮಾರ್ಗದರ್ಶಿ ಯಾಗಿದ್ದವರು.ದೃಶ್ಯ ಮಾದ್ಯಮದ ಬೀಜಾಕ್ಷರಗಳನ್ನು ಹೇಳಿಕೊಟ್ಟವರು.ಇಂದಿಗೂ ಅನೇಕರು ಅವರನ್ನು ಆದರ್ಶವಾಗಿ ಸಿಕೊಂಡಿದ್ದಾರೆ.ಅದೆಲ್ಲಕ್ಕಿಂತ ಹೆಚ್ಚಾಗಿ ವೃತ್ತಿಯನ್ನು ಯಾವತ್ತು ಒತ್ತೆಯಿಟ್ಟವರಲ್ಲ.. ಅಕ್ಷರಗಳನ್ನು ಅಡವಿಟ್ಟು ದುಡ್ಡು ಮಾಡಿದವರಲ್ಲ.ವೃತ್ತಿಯನ್ನೇ ದೇವರೆಂದು ಭಾವಿಸಿ ಕೆಲಸ ಮಾಡಿದವರು.( ಹಾಗೇನಾದ್ರು ಹಣ-ಆಸ್ತಿ ಮಾಡಿದ್ದರೆ ಚಿಕಿತ್ಸೆ ತೆಗೆದುಕೊಳ್ಳಲು ಹಣವಿಲ್ಲದೆ ಒದ್ದಾಡುವಂತ,ಅದರ ಪರಿಣಾಮವಾಗಿ ಸಾಯಬೇಕಾಗುತ್ತಿರಲಿಲ್ಲವೇನೋ,,).

ಭುವನೇಶ್ವರಿ ಅವರು ಪತ್ರಿಕೋದ್ಯಮ ತೊರೆದ ಮೇಲೆ ಸಾಮಾನ್ಯ ಗೃಹಿಣಿಯಂತೆ ಬದುಕಿದವರು. ಗೃಹರಕ್ಷಕದಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಹಾಗೂ 8ನೇ ತರಗತಿಯಲ್ಲಿ ಓದುತ್ತಿದ್ದ ಮಗನೊಂದಿಗೆ ಬದುಕು ಕಟ್ಟಿಕೊಂಡಿದ್ದರು.ಆದ್ರೆ ಥೈರಾಯ್ಡ್ ಸಮಸ್ಯೆಗೆ ತುತ್ತಾದ ಮೇಲೆ ಸಾಕಷ್ಟು ದಣಿದಂತಿದ್ದರು.ತೀರಾ ಬಳಲಿದಂತಾಗಿದ್ದರು.ಅದರ ನಡುವೆಯೂ ಸಂಸಾರ ನಿಭಾಯಿಸಿಕೊಂಡು ಬರುತ್ತಿದ್ದರು.ಆದ್ರೆ ಸಮಸ್ಯೆ ಅತಿಯಾದಾಗ ಬೆಂಗಳೂರಿನ ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ರು.ಆದ್ರೆ ಥೈರಾಯ್ಡ್ ಸಮಸ್ಯೆ ಬದುಕನ್ನೆ ಆಪೋಷನ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಿದ್ದರಿಂದ ಅವರನ್ನು ಬದುಕಿಸಿಕೊಳ್ಳಲಾಗಲಿಲ್ಲ.ವೈದ್ಯರು ಶತಪ್ರಯತ್ನ ಮಾಡಿದ್ರು ಅದು ಸಾಧ್ಯವಾಗದೆ ವಿಧಿಮುಂದೆ ಮಂಡೂರಿದ್ದಾರೆ.

47, ಸಾಯುವ ವಯಸ್ಸೇನೂ ಅಲ್ಲ.ಅವರು ಆರೋಗ್ಯದ ಬಗ್ಗೆ ಕಾಳಜಿ ಮಾಡಿದಿದ್ದರೆ ಅಪಾಯದಿಂದ ಪಾರಾಗುತ್ತಿದ್ದರೇನೋ..ಆದರೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪತಿಯ ಆರೋಗ್ಯದ ಕಾಳಜಿಯನ್ನೂ ಅವರೇ ಮಾಡಬೇಕಿತ್ತು.ಇನ್ನೊಂದೆಡೆ ಮಗನ ಭವಿಷ್ಯವನ್ನೂ ಅವರೇ ರೂಪಿಸಬೇಕಿತ್ತು.ಕೇವಲ ತನ್ನ ಆರೋಗ್ಯದ ಬಗ್ಗೆ ಕಾಳಜಿ ಮಾಡಿದ್ರೆ ಸ್ವಾರ್ಥಿಯಾಗ್ತೇನೆಂದುಕೊಂಡು ತನ್ನ ಆರೋಗ್ಯದ ಬಗ್ಗೆ ನಿ್ರ್ಲಕ್ಷ್ಯ ಮಾಡಿಬಿಟ್ಟರೇನೋ ಎಂದೆನಿಸುತ್ತದೆ.ಪರಿಣಾಮ ಸಾವು.ಆದರೆ ತನ್ನ ಪತಿಯನ್ನು ಆರೋಗ್ಯವಂತರನ್ನಾಗಿಸಬೇಕು.ಮಗನ ಭವಿಷ್ಯವನ್ನು ಉಜ್ವಲವಾಗಿ ರೂಪಿಸಬೇಕೆನ್ನುವ ಭುವನೇಶ್ವರಿ ಕನಸು ಕನಸಾಗೇ ಉಳಿದುಬಿಡ್ತು.

ಆ ದಿನಗಳು ಇನ್ನೆಲ್ಲಿ..ಆ ಜೀವವೂ ಇನ್ನೆಲ್ಲಿ....ಭುವನೇಶ್ವರಿ ಈ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳ ಫೋಟೋ ಇದು..ಇವತ್ತಿಗೆ ಆಗಿನ ಸಂಪಾದಕ ಡಾ.ಜಿ.ಎನ್.ಮೋಹನ್ ಸೇರಿ ಅನೇಕರು ವೃತ್ತಿಯಿಂದಲೇ ಹೊರಗುಳಿದಿದ್ದಾರೆ.ಬೆರಳೆಣಿಕೆ ಜನ ಕ್ರಿಯಾಶೀಲರಾಗಿದ್ದಾರೆ.
ಆ ದಿನಗಳು ಇನ್ನೆಲ್ಲಿ..ಆ ಜೀವವೂ ಇನ್ನೆಲ್ಲಿ….ಭುವನೇಶ್ವರಿ ಈ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳ ಫೋಟೋ ಇದು..ಇವತ್ತಿಗೆ ಆಗಿನ ಸಂಪಾದಕ ಡಾ.ಜಿ.ಎನ್.ಮೋಹನ್ ಸೇರಿ ಅನೇಕರು ವೃತ್ತಿಯಿಂದಲೇ ಹೊರಗುಳಿದಿದ್ದಾರೆ.ಬೆರಳೆಣಿಕೆ ಜನ ಕ್ರಿಯಾಶೀಲರಾಗಿದ್ದಾರೆ..

ಹೇಳಿಕೊಳ್ಳುವಷ್ಟು ಆರ್ಥಿಕವಾಗಿ ಸ್ಥಿತಿವಂತ ಕುಟುಂಬವೇನು ಅಲ್ಲ ಭುವನೇಶ್ವರಿ ಅವರದು.ಕಷ್ಟ ಬಂದರೂ ಯಾರಿಗೂ ತಿಳಿಯದಂತೆ ನಿಭಾಯಿಸುವ ಮಹಾನ್ ಸ್ವಾಭಿಮಾನಿ ಆಕೆ.ಕಷ್ಟದ ದಿನಗಳಲ್ಲೂ ಯಾರ ಬಳಿಯೂ ನೆರವಿನ ನಿರೀಕ್ಷೆ ಮಾಡಿದವರಲ್ಲ..ಯಾರ ಬಳಿಯೂ ನಯಾಪೈಸೆ ಯಾಚಿಸಲಿಲ್ಲ.( ಹಾಗಂತ ಅವರ ಬಗ್ಗೆ ತಿಳಿದಿದ್ದರೂ ಅವರಿಗೆ ಸಹಾಯ ಮಾಡಬೇಕಾದವರೇ ಮಾಡಲಿಲ್ಲ ಎನ್ನುವುದು ದುರಂತ)ತನ್ನ ಕಷ್ಟ-ನೋವು-ಸಂಕಟವನ್ನು ತಾನೇ ನುಂಗಿದವರು.ಆದ್ರೆ ಅದು ಇಷ್ಟು ಬೇಗ ತನ್ನ ಬಾಳ ಪಯಣ ಮುಗಿಸ್ಲಿಕ್ಕೆ ಕಾರಣವಾಗುತ್ತೆನ್ನುವ ಸಣ್ಣ ಸೂಕ್ಷ್ಮವೂ ಭುವನೇಶ್ವರಿ ಅವರಿಗೆ ಇಲ್ಲವಾಯ್ದೆ ಹೋಯ್ತು.

ಕಾಡಿದ ಅನಾರೋಗ್ಯದ ವಿರುದ್ಧ ಮೈಯಲ್ಲಿ ಕಸುವಿರುವ ಕೊನೇ ಕ್ಷಣದವರೆಗೂ ಹೋರಾಡಿದ ಭುವನೇಶ್ವರಿ ಆ ಯುದ್ಧ ಗೆಲ್ಲಲಾಗಲಿಲ್ಲವಲ್ಲ ಎನ್ನುವು ದೇ ಬೇಸರ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು  ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ ಎನ್ನುವುದು ಕ್ಲೀಷೆಯಾದ್ರೂ ಅದನ್ನು ಬಿಟ್ಟು ಬೇರೆ ಇನ್ನೇನನ್ನೂ ಹೇಳೊಕ್ಕಾಗೊಲ್ಲ ಎನ್ನುವುದು ಕೂಡ ವಾಸ್ತವ..ಭುವನೇಶ್ವರಿ ಅವರು ಬಿಟ್ಟುಹೋದ ಆದರ್ಶಗಳನ್ನು ನಮ್ಮ ಪತ್ರಕರ್ತರು  ಸಾಧ್ಯವಾದಷ್ಟು ಅಳವಡಿಸಿಕೊಳ್ಳುವಂತಾಗಲಿ ಎನ್ನುವುದೇ ನಮ್ಮ ಅರಿಕೆ-ಪ್ರಾರ್ಥನೆ.

Spread the love

Leave a Reply

Your email address will not be published. Required fields are marked *