ಬೆಂಗಳೂರು: ಮೊದಲಿಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ನೂತನ  ಅಧ್ಯಕ್ಷರಾಗಿ ನೇಮಕಗೊಂಡಿ ರುವ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶ್ರೀನಿವಾಸ್,ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಿವಣ್ಣ ಮತ್ತು ಬೆಳಗಾಂ ಜಿಲ್ಲೆ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸ್ತೇವೆ..ನೀವು ಇರುವಷ್ಟು ದಿನಗಳಲ್ಲಿ ಎಲ್ಲವೂ ಚೆನ್ನಾಗಿ ನಡೆದು ಸಮಸ್ಯೆಗಳಿಂದ  ತುಂಬಿತುಳುಕುತ್ತಿರುವ ನಿಗಮಗಳಿಗೆ ಚೈತನ್ಯ-ಪುನಶ್ಚೇತನ ಸಿಗುವಂತಾಗಲಿ..

ನೂತನ ಅಧ್ಯಕ್ಷರು, ಬಂದ ಪುಟ್ಟ ಹೋದ ಪುಟ್ಟರಂತಾಗದಿರಲಿ.. ಶಕ್ತಿ ಯೋಜನೆ ಸಮರ್ಪಕ ನಿರ್ವಹಣೆ ಸವಾಲಿನ ಜತೆಗೆ  ಆರ್ಥಿಕ ನಷ್ಟ-ಅಧಿಕಾರಿಗಳ ಮಟ್ಟದ ಭ್ರಷ್ಟಾಚಾರ- ನಿಗಮಗಳೊಳಗಿನ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕಿರೋದೇ ದೊಡ್ಡ ಪರೀಕ್ಷೆ…………..

ಈ 4 ಸಾರಿಗೆ ನಿಯಮಗಳಿಗೆ ಯಾರೇ ಹೊಸ  ಅದ್ಯಕ್ಷರು ಬರಲಿ,ಅವರಿಗೆ ಸಾಲು ಸಾಲು ಸಮಸ್ಯೆಗಳು ಕಾದುಕುಂತಿರುತ್ವೆ. ಅಧ್ಯಕ್ಷರುಗಳು ನೆಮ್ಮದಿಯಿಂದಲಂತೂ ಕೆಲಸ ಮಾಡೊಕ್ಕೆ ಸಾಧ್ಯವೇ ಇಲ್ಲ.ಅಲ್ಲಿ ಇಲ್ಲಿ ಒಂದಷ್ಟು ಅಧಿಕಾರ ಚಲಾಯಿಸಿ ಏನಾದರೊಂದು ಮಾಡಬಹುದೇ ಹೊರತು ಸುಧಾರಣೆ ಮಾಡುವಂತದ್ದು ಸಾಧ್ಯವೇ ಆಗೊಲ್ಲ..ಹಾಗಾಗಿ ನಾವು ನೂತನ ಅಧ್ಯಕ್ಷರು ಸುಧಾರಣೆ-ಅಭಿವೃದ್ಧಿ ಬಗ್ಗೆ ಏನೇ  ಮಾತನಾಡಿದ್ರು ಅದು ಕಂಠಶೋಷಣೆಯೇ ಹೊರತು,ಅದರಿಂದ ಉದ್ದಾರವಾಗುವಂತದ್ದು ಏನೂ ಇಲ್ಲ..

ಕಲ್ಯಾಣ ಕರ್ನಾಟಕ ಸಾರಿಗೆ ಹೊರತುಪಡಿಸಿ ಕೆಎಸ್ ಆರ್ ಟಿಸಿ ಸೇರಿದಂತೆ ಮೂರು ನಿಗಮಗಳಿಗೆ  ನೂತನ ಅಧ್ಯಕ್ಚರ ಆಯ್ಕೆ ಫೈನಲ್ ಆಗಿರುವುದು ಮಾದ್ಯಮಗಳಲ್ಲಿ ಪ್ರಕಟವಾಗಿದೆ.ಮೂರು ನಿಗಮಗಳಿಗೂ ನೇಮಕಗೊಂಡಿರುವ ಅಧ್ಯಕ್ಷರು ಅವರವರ ತಾಕತ್ತಿನಲ್ಲಿ ಓ.ಕೆ ಎನಿಸಿಕೊಂಡವರೇ..ರಾಜಕೀಯವಾಗಿ ಅನುಭವಿಗಳೇ ಸರಿ.ಹಾಗಾಗಿ ಅವರ ಸಾಮರ್ಥ್ಯದ ಬಗ್ಗೆ ಅನುಮಾನವಾಗಲಿ,ಆಕ್ಷೇಪವಾಗಲಿ ಬೇಡ.

ಗುಬ್ಬಿ ಕ್ಷೇತ್ರದ ಶಾಸಕರಾದ ಶ್ರೀನಿವಾಸ್ ಅವರು ಹಿಂದಿನ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದವರು.ಹಾಗಾಗಿ ಅವರಿಗೆ ಕೆಎಸ್ ಆರ್ ಟಿಸಿ ನಿಗಮ ಮಂಡಳಿಯನ್ನು ಮೆಂಟೇನ್ ಮಾಡುವುದು ಕಷ್ಟ ಅಲ್ವೇ ಅಲ್ಲ.ಸಾರ್ವಜನಿಕವಾಗಿ ಜನಾನುರಾಗಿ,ಜನಸ್ನೇಹಿ ಎಮ್ಮೆಲ್ಲೆ ಎನ್ನುವ ಮಾತಿದೆ.ಆಡಳಿತದ ವಿಚಾರಕ್ಕೆ ಬಂದ್ರೆ ಕಾಂಪ್ರಮೈಸ್ ಸ್ವಭಾವ ಅವರಲ್ಲಿಲ್ಲ.ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವ ಕೆಎಸ್ ಆರ್ ಟಿಸಿಗೆ ಅವರಿಂದ ಸೂಕ್ತ ಪರಿಹಾರ ಸಿಗಬಹುದೆನ್ನುವ ವಿಶ್ವಾಸ ನಮ್ಮದು.ಆದರೆ ಅಧಿಕಾರಿಗಳ ಎಲ್ಲಾ ಮಾತಿಗೂ ಕಿವಿಯಾಗದಿದ್ದರೆ ಮಾತ್ರ ಒಂದಷ್ಟು ಸುಧಾರಣೆ ಸಾಧ್ಯ.ಏಕೆಂದರೆ ಲಾಭದಲ್ಲಿದ್ದ ಕೆಎಸ್ ಆರ್ ಟಿಸಿ ಇವತ್ತು ನಷ್ಟಕ್ಕೆ ಸಿಲುಕೊಕ್ಕೆ ಕಾರಣವೇ ಅಲ್ಲಿರುವ ಕೆಲವು ಅಪ್ರಮಾಣಿಕ-ಭ್ರಷ್ಟ-ನಾಲಾಯಕ್ ಅಧಿಕಾರಿಗಳು. ಅವರಿಂದಾಗಿ ವ್ಯವಸ್ಥೆಯೂ ಹಾಳಾಗಿದೆ.ಇಂದಿಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕೆಲವು ದಕ್ಷ ಅಧಿಕಾರಿಗಳನ್ನೂ ಅನುಮಾನದಿಂದ ನೋಡುವಂತಾಗಿದೆ.

ಶಿಕ್ಷೆ ನೀಡುವ ವಿಚಾರದಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ನಡುವೆ ಎಷ್ಟೊಂದು ಅನ್ಯಾಯ-ಅಸಮಾನತ ಹಾಗೂ ತಾರತಮ್ಯ ಇದೆ ಎನ್ನುವುದಕ್ಕೆ  ಇಲ್ಲೊಂದಷ್ಟು ಉದಾಹರಣೆ ಇವೆ ನೋಡಿ..

ಬಿಎಂಟಿಸಿ ಕಂಡಕ್ಟರ್ ತ್ಯಾಗರಾಜ್
ಬಿಎಂಟಿಸಿ ಕಂಡಕ್ಟರ್ ತ್ಯಾಗರಾಜ್

ಪ್ರಕರಣ 1: ಬಿಎಂಟಿಸಿ ಡಿಪೋದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ತ್ಯಾಗರಾಜ್ ಎನ್ನುವ ದಕ್ಷ-ಪ್ರಾಮಾಣಿಕ ಡ್ರೈವರ್ ಕಮ್ ಕಂಡಕ್ಟರ್( ಕೊರೊನಾ ಸಮಯದಲ್ಲಿ ಬಹುತೇಕ ಸಿಬ್ಬಂದಿ ಹೆದರಿಕೊಂಡು ಮನೆಯಲ್ಲೇ ಉಳಿದರೂ ಧೈರ್ಯವಾಗಿ ಕೆಲಸಕ್ಕೆ ಬಂದು ಸಾರಿಗೆ ಸೇವೆ ನೀಡಿದ ಕಾರಣಕ್ಕೆ ಆಡಳಿತ ವರ್ಗವೇ ಇವರನ್ನು ಸನ್ಮಾನಿಸಿತ್ತು) ಅವರನ್ನು ಕ್ಷುಲ್ಲಕ ಕಾರಣಕ್ಕೆ ಶಿಕ್ಷೆಗೆ ಗುರಿಪಡಿಸಿತ್ತು.ಅಲ್ಲದೇ ಬಿಎಂಟಿಸಿಯಲ್ಲಿರುವ ಕೆಲವೇ ಕೆಲವು ದಕ್ಷ ಡ್ರೈವರ್ ಗಳಲ್ಲಿ ಒಬ್ಬರಾಗಿದ್ದ ಇವರನ್ನು ದೂರದಲ್ಲಿರುವ ಡಿಪೋಗೆ ಹಾಕಿ ಎಲೆಕ್ಟ್ರಿಕಲ್ ಬಸ್ ನ ನಿರ್ವಾಹಕನ್ನಾಗಿ ನಿಯೋಜನೆ ಮಾಡಿತ್ತು.

ಕಂಡಕ್ಟರ್ ಕೆಂಪಣ್ಣ
ಕಂಡಕ್ಟರ್ ಕೆಂಪಣ್ಣ

ಪ್ರಕರಣ 2: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳು, ನಿರ್ವಾಹಕ ಕೆಂಪಣ್ಣ ಎಂಬಾತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ಲು.ಸನ್ಮಾನ್ಯ ಪ್ರಭಾಕರ ರೆಡ್ಡಿ ಎನ್ನುವ ಅಧಿಕಾರಿ ನಿರ್ವಾಹಕನಿಗೂ ಒಂದು ಬದುಕು,ಸಮಾಜದಲ್ಲಿ ಸ್ಥಾನಮಾನ,ಗೌರವ,ಪ್ರತಿಷ್ಟೆ ಕನಿಷ್ಟ ಗೌರವ ಇರುತ್ತೆನ್ನುವುದನ್ನೂ ಮರೆತು ಆತನಿಂದ ಸ್ಪಷ್ಟನೆಯನ್ನೂ ಪಡೆಯದೆ ಮಾದ್ಯಮಗಳಲ್ಲಿ ಆ ಸುದ್ದಿ ಕಾಮುಕ ಕಂಡಕ್ಟರ್..ಕಾಮಕ್ರಿಮಿ ಕಂಡಕ್ಟರ್.. ಕಾಮಿಷ್ಟ ಕಂಡಕ್ಟರ್ ಎಂದು ಬಿಂಬಿತವಾಗಲು ಕಾರಣವಾಗಿದ್ರು.ಹೆಂಡತಿ,ಮಕ್ಕಳು,ಸಂಬಂಧಿಕರ ಮುಂದೆ ಮರ್ಯಾದೆಯಿಂದ ಅಡ್ಡಾಡಲು ಸಾಧ್ಯವಾಗದೆ ತೀವ್ರ ಮುಜುಗರಕ್ಕೆ ಈಡಾದ ಕೆಂಪಣ್ಣ ಆತ್ಮಹತ್ಯೆಯತ್ನದ ನಿರ್ದಾರ ಮಾಡಿದ್ದ.ಸಾಲದ್ದಕ್ಕೆ ಸಿಎಂ ಅವರ ಕಚೇರಿಗೂ ಪತ್ರ ಬರೆದು ತನಗಾದ ಅನ್ಯಾಯದ ಬಗ್ಗೆ ಅಳಲು ತೋಡಿಕೊಂಡಿದ್ದ.ಇವತ್ತಿಗೂ ಕೆಲಸವಿಲ್ಲದೆ ನಿರುದ್ಯೋಗಿಯಾಗಿ ಕಾಮುಕ ಕೆಂಪಣ್ಣ ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಅಡ್ಡಾಡುತ್ತಿದ್ದಾನೆ.

ಡ್ರೈವರ್ ಕಮ್ ಕಂಡಕ್ಟರ್ ಬಸಪ್ಪ
ಡ್ರೈವರ್ ಕಮ್ ಕಂಡಕ್ಟರ್ ಬಸಪ್ಪ

ಪ್ರಕರಣ 3:ಇದು ಮತ್ತೊಂದು ರೀತಿಯ ವಿಚಿತ್ರ ಪ್ರಕರಣ. ಡಿಪೋ 13ರ ಚಾಲಕ ಬಸಪ್ಪನ ತಾಯಿಗೆ ಕ್ಯಾನ್ಸರ್ ಇದ್ದುದ್ದರಿಂದ  ಡಿ.ಸಿ. ಆದ ನಾಗರಾಜ ಮೂರ್ತಿ ಅವರಿಂದಲೇ ಮೆಡಿಕಲ್ ಲೀವ್ ಪಡೆದು ಹೋಗಿದ್ದ.ಈ ಮಹಾನುಭಾವ ಲೀವ್ ಸ್ಯಾಂಕ್ಷನ್ ಮಾಡಿದ್ದಲ್ಲದೇ ಸಂಬಳವನ್ನೂ ಖಾತೆಗೆ ಹಾಕಿಸಿದ್ದರು.ಆದರೆ ಈ ನಡುವೆ ತಾನೇ ಹಾಕಿದ ಲೀವ್ ನ್ನೆಲ್ಲಾ ಕ್ಯಾನ್ಸಲ್ ಮಾಡಿ,ಆತ 108 ದಿನಗಳು ಗೈರಾದ್ರೂ ಸಂಬಳ ಹಾಕಿ ಯಡವಟ್ಟು ಮಾಡಿಕೊಂಡಿದ್ದರು.ಕೊನೆಗೆ ತನ್ನ ಬುಡಕ್ಕೆಲ್ಲಿ ಬರುತ್ತದೆಯೋ ಎಂದು ಭಾವಿಸಿ ಆತನನ್ನು ಕೆಲಸಕ್ಕೆ ಬರುವಂತೆ ಹೇಳಿ ಆತನಿಂದ ಹಣ ವಾಪಸ್ ಕೇಳಿದ್ದಾನೆ.ಆಗೊಲ್ಲ ಎಂದಿದ್ದಕ್ಕೆ ಲೀವ್ ನೀಡಿದ ಕಾಲಮ್ ನಲ್ಲೇ  ಆಬ್ಸೆಂಟ್ ಹಾಕಿದ್ದಾನೆ,ತನಿಖೆ ಬೇಕಾದ್ರೆ ಮಾಡಿ ಸ್ಪಷ್ಟನೆ ಕೊಡ್ತೇನೆ ಎಂದು ಬಸಪ್ಪ ಹೇಳಿದ್ರೂ ತನಿಖೆ ನಡೆಸದೆ ಆತನ ಒಂದು ಇಂಕ್ರಿಮೆಂಟ್ ನ್ನು ರದ್ದು ಮಾಡಿ ಆತನ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದ್ದಾರೆ.

ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮುರ್ತಿ
BMTC ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜಮುರ್ತಿ

ಮೇಲ್ಕಂಡ 3 ಪ್ರಕರಣಗಳಲ್ಲಿ ಸಿಬ್ಬಂದಿ ಮಾಡಿದ್ದು ಹೇಳಿಕೊಳ್ಳುವಂಥ ಘನಘೋರ ತಪ್ಪಲ್ಲ. ಆದ್ರೂಅವರಿಗೆಲ್ಲಾ ಶಿಕ್ಷೆ-ದಂಡನೆಯಾಗಿ ಮಾನಸಿಕವಾಗಿ ನೊಂದಿದ್ದಾರೆ. ಆದ್ರೆ 3ನೇ ಪ್ರಕರಣದಲ್ಲಿ ನಾಗರಾಜಮೂರ್ತಿ ಮಾಡಿದ್ದು ಅಕ್ಷಮ್ಯ ಎನ್ನುವುದು ಗೊತ್ತಿದ್ದರೂ ಘಟನೆ ನಡೆದು ಅನೇಕ ದಿನಗಳೇ ಕಳೆದರೂ ಅವರ ವಿರುದ್ದ ಕ್ರಮವಿಲ್ಲ..ನಾಗರಾಜಮೂರ್ತಿ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ.ನನಗೆ ಯಾರೂ ಏನು ಮಾಡಲಿಕ್ಕೆ ಆಗೊಲ್ಲ..ನನಗೆ ದೊಡ್ಡವರು ಗೊತ್ತು.ಅವರನ್ನು ಹೇಗೆ ಮ್ಯಾನೇಜ್ ಮಾಡಬೇಕೆನ್ನೋದು ಗೊತ್ತಿದೆ.ಯಾರೂ ನನ್ನ ಕೂದಲನ್ನು ಕೊಂಕಿಸಿಕೊಳ್ಳೊಕ್ಕೆ ಆಗೊಲ್ಲ ಎಂದು ಮಾತನಾಡಿಕೊಂಡು ಅಡ್ಡಾಡುತ್ತಿದ್ದಾರೆಂದರೆ ನಮ್ಮ ಸಾರಿಗೆ ಆಡಳಿತ ಅನ್ಯಾಯ ಕಂಡ್ರೂ ಎಷ್ಟರ ಮಟ್ಟಿಗೆ ಕುರುಡಾಗಿದೆ ಎನ್ನುವುದು ಗೊತ್ತಿದೆ.ಇದು ಒಂದು ಸ್ಯಾಂಪಲ್ ಅಷ್ಟೇ..ಇಂಥ ಕರ್ಮಕಾಂಡಗಳು ನಾಲ್ಕು ನಿಗಮಗಳಲ್ಲೂ ನಡೆಯುತ್ತಲೇ ಇರುತ್ವೆ.

ಡೀಸೆಲ್ ಖರೀದಿಯಲ್ಲಿ ಆಗ್ತಿದೆ ಎನ್ನುವ ಹಗರಣ, ಬಿಡಿಭಾಗಗಳ ಖರೀದಿಯಲ್ಲಿನ ಅಕ್ರಮ, ಬೆಳಕಿಗೆನೆ ಬಾರದೆ ಮುಚ್ಚಿ ಹೋಗುತ್ತಿರುವ ಕೆಲವು ಅಧಿಕಾರಿಗಳ ಭ್ರಷ್ಟಾಚಾರ,ಹಗರಣಕ್ಕೆ ಬ್ರೇಕ್ ಹಾಕಲೇಬೇಕಿದೆ.ನೂತನ ಅಧ್ಯಕ್ಷರುಗಳೆಲ್ಲಾ ಇದನ್ನೇ ರಿಪೀಟ್ ಮಾಡ್ತಾರೆ.ಆದ್ರೆ ಕಾರ್ಯರೂಪಕ್ಕೆ ತರೋ ವಿಷಯ ಬಂದಾಗ ಸುಮ್ಮನಾಗುತ್ತಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಆಗಬೇಕಿರುವುದು ಸಂಸ್ಥೆಯ ಉದ್ದಾರ-ಪ್ರಗತಿ-ಅಭಿವೃದ್ಧಿಗೆ ಟೊಂಕಕಟ್ಟಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಮನುಷ್ಯ ರಂತೆ ನೋಡುವ ವಾತಾವರಣ ನಿರ್ಮಾಣ.ಶೇಕಡಾ 90 ರಷ್ಟು ಸಿಬ್ಬಂದಿ ನಾವು ಎಷ್ಟೇ ಕಠಿಣ ಕೆಲಸ ಕೊಟ್ಟರೂ ಮಾಡುತ್ತೇವೆ.ಅನ್ನ ಕೊಡುವ ಸಂಸ್ಥೆ ಎಂದು ತಲೆಮೇಲೆ ಇಟ್ಟುಕೊಂಡು ಕೆಲಸ ಮಾಡುತ್ತೇವೆ.ಆದರೆ ಮೊದಲು ನಮ್ಮನ್ನೂ ಕನಿಷ್ಟ  ಗೌರವ ಕೊಟ್ಟು ಮಾತನಾಡಿಸುವ ಕೆಲಸವನ್ನು ಅಧಿಕಾರಿ ಗಳು ಮಾಡಲಿ, ನಮಗೂ ನಮ್ಮದೇ ಆದ ಘನತೆ ಇರುತ್ತದೆ.ಅದನ್ನು ಪರಿಗಣಿಸದೆ ಗುಲಾಮರಂತೆ-ಜೀತದಾಳುಗಳಂತೆ ನೋಡುವ ಅಧಿಕಾರಿಗಳು ಬಹಳಷ್ಟಿದ್ದಾರೆ.ಅದನ್ನು ಸಚಿವರು ಬದಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಅನೇಕ ಸಿಬ್ಬಂದಿ.

ಸಿಬ್ಬಂದಿಗೆ ಅನಗತ್ಯ ಕಿರುಕುಳ, ವಿನಾಕಾರಣ ದೋಷಾರೋಪಣೆ ಹೊರಿಸಿ ಶಿಕ್ಷೆಗೆ ಗುರಿಪಡಿಸುವುದು, ಮನಸೋಇಚ್ಚೆ ದಂಡಿಸುವುದು,ಬೇಕಾಬಿಟ್ಟಿ ತನಿಖೆ ನಡೆಸಿ ಮನಸಿಗೆ ಬಂದಂತೆ ಶಿಕ್ಷೆಗೊಳಪಡಿಸುವಂಥ ಕೆಲಸವನ್ನು ಕೆಲವು ಅಧಿಕಾರಿಗಳು ಮಾಡುತ್ತಲೇ ಬಂದಿದ್ದಾರೆ.ಇದರಿಂದ ಮಾನಸಿಕವಾಗಿ ಸಿಬ್ಬಂದಿ ಜಿಗುಪ್ಸೆಗೊಂಡಿದ್ದಾರೆ.ಅಧಿಕಾರಿಗಳ ಆಟಾಟೋಪಕ್ಕೆ ಬ್ರೇಕ್ ಹಾಕೋ ಕೆಲಸ ಮಾಡಲೇಬೇಕಿದೆ.

ತಪ್ಪು ಸಿಬ್ಬಂದಿ ಮಟ್ಟದಲ್ಲಿ ನಡುದ್ರೆ  ಅದನ್ನು ದೊಡ್ಡದು ಮಾಡಿ ಅವರನ್ನು ಶಿಕ್ಷೆಗೊಳಪಡಿಸುವ ಕೆಟ್ಟ ವ್ಯವಸ್ಥೆ ಸಾರಿಗೆ ನಿಗಮಗಳಲ್ಲಿದೆ.ಆದ್ರೆ ಭ್ರಷ್ಟಾಚಾರ  ಅಧಿಕಾರಿಗಳ ಮಟ್ಟದಲ್ಲಿ ನಡೆದರೂ ಡೋಂಟ್ ಕೇರ್ ಎನ್ನುತ್ತದೆ ಆಡಳಿತ ಮಂಡಳಿ. ಅಧಿಕಾರಿಗಳನ್ನು ಮಾತ್ರ ಕೆಲಸಗಾರರು,ಸಂಸ್ಥೆ ಉದ್ದಾರಕ್ಕೆ ಕೆಲಸ ಮಾಡುತ್ತಿರುವವರು ಎನ್ನುವ ಮನಸ್ಥಿತಿ ಆಡಳಿತವರ್ಗದಲ್ಲಿದೆ.ಮೊದಲು ಅದು ದೂರವಾಗಬೇಕು.ದಂಡನೆ-ಶಿಕ್ಷೆ ಎನ್ನುವುದನ್ನು ಕೇವಲ ಸಿಬ್ಬಂದಿಗೆ ಸೀಮಿತಗೊಳಿಸದೆ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ-ಅಕ್ರಮ-ಹಗರಣಗಳನ್ನು ಗಂಭೀರವಾಗಿ ಪರಿಗಣಿಸ ಬೇಕು.ಧೂಳು ಹಿಡಿದು ಮೂಲೆಗುಂಪಾಗಿರುವ ಅದೆಷ್ಟೋ ಅಕ್ರಮ-ಭ್ರಷ್ಟಾಚಾರ-ಹಗರಣಗಳ ತನಿಖೆಗೆ ಆದೇಶ ಕೊಟ್ಟರೆ ಆಡಳಿತ ವರ್ಗದಲ್ಲಿರುವ ಕೆಲವರನ್ನು ಮ್ಯಾನೇಜ್ ಮಾಡಿಕೊಂಡು ಆರಾಮಾಗಿರುವ,ಆಯಕಟ್ಟಿನ ಸ್ಥಳದಲ್ಲಿ ದರ್ಬಾರ್ ಮಾಡುತ್ತಿರುವ ಎಷ್ಟೋ ಭ್ರಷ್ಟ ಅಧಿಕಾರಿಗಳು ಖೆಡ್ಡಾಕ್ಕೆ ಬೀಳೋದರಲ್ಲಿ ಡೌಟೇ ಇಲ್ಲ.

ಹಾಗಾಗಿ ಮೂರು ನೂತನ ಅಧ್ಯಕ್ಷರಿಗೂ ಸವಾಲುಗಳಿವೆ.ಅವರ ಹಾದಿಯೇನು ಹೂವಿನಿಂದ ಕೂಡಿಲ್ಲ.ಅಲ್ಲಿ ಸಮಸ್ಯೆಗಳ ನೂರಾರು ಮುಳ್ಳುಗಳಿವೆ.ಅದನ್ನು ನಿಭಾಯಿಸಿಕೊಂಡು ಹೋದರೆ ಸಂಸ್ಥೆಯೂ ಉದ್ದಾರವಾಗುತ್ತೆ.ವ್ಯವಸ್ಥೆನೂ ಚೆನ್ನಾಗಿರುತ್ತೆ ಅಷ್ಟೆ..

Spread the love

Leave a Reply

Your email address will not be published. Required fields are marked *