ವಿಶೇಷ ಸೂಚನೆ: ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಭಾರೀ ಬದಲಾವಣೆ..! ನಿರೀಕ್ಷಿಸಿ ಎಂದು ಬರೆದಾಗಲೇ ನೂರಾರು ಕರೆಗಳು ಕನ್ನಡ ಫ್ಲ್ಯಾಶ್ ನ್ಯೂಸ್ ಕಚೇರಿಗೆ ಬಂದವು.ಕೆಲವು ಮಾದ್ಯಮ ಮಿತ್ರರದ್ದಾದ್ರೆ, ಇನ್ನು ಕೆಲವರು ಅಜಿತ್ ಹನುಮಕ್ಕನವರ್ ಅಭಿಮಾನಿಗಳದ್ದು…ಆಶ್ಚರ್ಯ ಎಂದರೆ ಕರೆ ಮಾಡಿ ವಿಚಾರಿಸಿದವರಲ್ಲಿ ಅತಿ ಹೆಚ್ಚಿನವರು ಸುವರ್ಣ ನ್ಯೂಸ್ ಚಾನೆಲ್ ಸಿಬ್ಬಂದಿ.ಅವರ ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸುವ ಕೆಲಸಕ್ಕೆ ನಾವು ಹೋಗದೆ, ನಮಗೆ ಲಭ್ಯವಿರುವ ಒಂದಷ್ಟು ಮಾಹಿತಿಗಳನ್ನಾಧರಿಸಿ ವರದಿ ಮಾಡಿರು ತ್ತೇವೆ.ಈ ಸುದ್ದಿಯ ಉದ್ದೇಶ ಸುವರ್ಣ ನ್ಯೂಸ್ ಉದ್ಯೋಗಿಗಳಲ್ಲಿ ಅಭದ್ರತೆಯ ಭಾವನೆ ಮೂಡಿಸುವುದಲ್ಲ.ಸುದ್ದಿ ವಾಹಿನಿಯನ್ನು ತಪ್ಪಾಗಿ ಪ್ರೊಜೆಕ್ಟ್ ಮಾಡುವುದಲ್ಲ…ಹಾಗೆ ಮಾಡುವುದು ಸಾಧ್ಯವಿಲ್ಲ ಎನ್ನುವ ಸತ್ಯದ ವಿವೇಚನೆ ಇದ್ದೇ ಈ ವರದಿಯನ್ನು ಮಾಡಲಾಗುತ್ತಿದೆ.

ಬೆಂಗಳೂರು:ಬದಲಾವಣೆ ಜಗದ ನಿಯಮ… ಅದು ಒಂದ್ ರೀತಿ ಹರಿಯೋ ನೀರಿದ್ದಂತೆ. ಬದಲಾಗದಿದ್ದರೆ, ಅದಕ್ಕೆ ಬೆಲೆನೂ ಇರೊಲ್ಲ,ಅರ್ಥವೂ ಇರೊಲ್ಲ.. ನಾನು ಬದಲಾಗೊಲ್ಲ. ಬದಲಾವಣೆಗೆ ತಕ್ಕಂತೆ ಮಾರ್ಪಾಡಾಗುವುದಿಲ್ಲ ಎಂದು ಪಟ್ಟುಹಿಡಿದು ಕೂತರೆ ತುಕ್ಕು ಹಿಡಿಯುತ್ತಾರೆ.ಏಕಂದರೆ ಕಾಲಘಟ್ಟದಲ್ಲಿ ನಡೆಯುವ ಬದಲಾವಣೆಗಳೆ ಎಲ್ಲವನ್ನು ಬದಲಿಸಿ ಬಿಡುತ್ತೆ.ಇದನ್ನೆಲ್ಲಾ ಹೇಳೊಕ್ಕೆ ಕನ್ನಡದ ಪ್ರಮುಖ ನ್ಯೂಸ್ ಚಾನೆಲ್ ಗಳಲ್ಲೊಂದಾದ ಸುವರ್ಣದಲ್ಲಿ ನಡೆಯುತ್ತಿದೆ ಎನ್ನಲಾದ ಮಹತ್ವದ ಬದಲಾವಣೆ ಹಾಗೂ ಬೆಳವಣಿಗೆ.ಯೆಸ್…ಸುವರ್ಣ ನ್ಯೂಸ್ ಇತಿಹಾಸದಲ್ಲೇ ಹಿಂದೆಂದೂ ನಡೆಯದಿರತಕ್ಕಂತ ಭಾರೀ ಬದಲಾವಣೆಗಳಿಗೆ ವೇದಿಕೆಯೊಂದು ಸೃಷ್ಟಿಯಾಗುತ್ತಿದೆ.ಅದು ಅಂತಿಂಥ ಬದಲಾವಣೆಯಲ್ಲ, ಅಚ್ಚರಿ..ಗಾಬರಿ ಆಗುವಂಥ ನಾ ಭೂತೊ ನ ಭವಿಷ್ಯತಿ ಎನ್ನುವಂತ ಬದಲಾವಣೆಗಳು ಎನ್ನುವ ಮಾತು ವ್ಯಾಪಕ ಕೇಳಿಬರುತ್ತಿದೆ.

ನೇರ-ದಿಟ್ಟ-ನಿರಂತರ.. ಎನ್ನುವ ಆಕರ್ಷಕ ಟ್ಯಾಗ್ ಲೈನ್ ನಲ್ಲಿ ಸುದ್ದಿ ಪ್ರಸಾರ ಮಾಡುತ್ತಿರುವ ಸುವರ್ಣ ನ್ಯೂಸ್ ಚಾನೆಲ್ ನ ಸುದ್ದಿಮನೆಯೊಳಗಿಂದಲೇ ಚಾನೆಲ್ ನಲ್ಲಿ ಭಾರೀ ಪ್ರಮಾಣದ ಬದಲಾವಣೆಗಳಾ ಗಲಿರುವ ಮುನ್ಸೂಚನೆಯ ಸುದ್ದಿಗಳು ಬರಲಾರಂಭಿಸಿವೆ.ಬಹುಷಃ ಯಾವುದಾದರೊಂದು ಚಾನೆಲ್ ತನ್ನ ಹೆಸರು, ಲೋಗೋದಿಂದ ಹಿಡಿದು ಕಾರ್ಯಕ್ರಮ ನಿರೂಪಣೆವರೆಗೂ ನಿರಂತರ ಬದಲಾವಣೆಗೆ ಒಳಗಾಗಿದೆ ಎಂದರೆ ಅದು ಸುವರ್ಣ ನ್ಯೂಸ್ ಮಾತ್ರ ಎಂದರೂ ಆಶ್ಚರ್ಯವಿಲ್ಲ.(ಯಾವುದೇ ವೃತ್ತಿಪರವಾದ ಚಾನೆಲ್ ಅನೇಕ ಕಾರಣಗಳಿಗೆ ಪದೇ ಪದೇ ನಿರಂತರ ಪ್ರಯೋಗಗಳಿಗೆ ಒಳಪಡುವುದು ಕೂಡ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಮಾತು ಪ್ರತಿ ಬಾರಿಯ ಬದಲಾವಣೆ ಸನ್ನಿವೇಶದಲ್ಲೂ ಕೇಳಿಬರುತ್ತಿತ್ತು). ಏನೇ ಬದಲಾದರೂ ಸುವರ್ಣ ನ್ಯೂಸ್ ಮಾತ್ರ ಏಷಿಯಾನೆಟ್ ಆಡಳಿತದ ನಿರೀಕ್ಷೆಗಳನ್ನು ಅಪ್ ಟು ದಿ ಮಾರ್ಕ್ ಎನ್ನುವಷ್ಟಂತೂ ರೀಚ್ ಮಾಡಿದ್ದಿಲ್ಲ ಎನ್ನುವ ಮಾತುಗಳಿವೆ.
ಅಜಿತ್ ಹನುಮಕ್ಕನವರ್, ಪ್ರಶಾಂತ್ ನಾತು ಅವರಂತ ಪ್ರತಿಭಾನ್ವಿತರ ಸುದ್ದಿ ವಿಶ್ಲೇಷಣೆಗಳನ್ನು ಹೊರತುಪಡಿಸಿದ್ರೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವಂತ ಆಯಸ್ಕಾಂತೀಯ ಶಕ್ತಿಯ ಸುದ್ದಿಗಳು ಚಾನೆಲ್ ನಲ್ಲಿ ಪ್ರಸಾರವಾಗಿದ್ದು, ಹಾಗೆಯೇ ಪ್ರಸಾರವಾಗುತ್ತಿರುವುದು ಕೂಡ ಕಡಿಮೆನೇ..! ಇದನ್ನು ಹೊರಗಿನವರಾಗಲಿ, ಕನ್ನಡ ಫ್ಲ್ಯಾಶ್ ನ್ಯೂಸ್ ಆಗಲಿ ಹೇಳ್ತಿಲ್ಲ..ಸುದ್ದಿವಾಹಿನಿ ಒಳಗಿದ್ದುಕೊಂಡೇ ಅಲ್ಲಿನ ವ್ಯವಸ್ಥೆ ಬಗ್ಗೆ ಸಾತ್ವಿಕವಾದ ಆಕ್ರೋಶ ಹೊಂದಿರುವ ಸುದ್ದಿಮಿತ್ರರೇ ಇಂತಹದೊಂದು ಅಸಹನೆಯನ್ನು ತೋಡಿಕೊಂಡಿರುವುದುಂಟು. ಏನೂ ಬೇಡ, ಏಷಿಯಾನೆಟ್ ಆಡಳಿತ ಕಚೇರಿಯೇ ಸುವರ್ಣ ಸುದ್ದಿ ವಾಹಿನಿಯ ಪ್ರದರ್ಶನದ ಬಗ್ಗೆ ಅತೃಪ್ತಿ-ಅಸಮಾಧಾನಗೊಂಡಿದ್ದಾರೆನ್ನುವ ಮಾತಿದೆ.

ಭಾರೀ ಪ್ರತಿಭಾವಂತರು-ಬುದ್ದಿವಂತರ ತಂಡವಾಗಿ ಕೆಲಸ ಮಾಡುತ್ತಿರುವ ಸುವರ್ಣ ನ್ಯೂಸ್..ಅಜಿತ್ ಹನುಮಕ್ಕನವರ್ ಅವರ ನಾಯಕತ್ವದಲ್ಲಿ ಉತ್ತಮ ರೀತಿಯಲ್ಲಿ ಕೆಲಸವನ್ನೇನೊ ಮಾಡುತ್ತಿದೆ.ಆದರೆ ಒಟ್ಟಾರೆ ತಂಡವಾಗಿ ಇತ್ತೀಚೆಗೆ ನೀಡುತ್ತಿರುವ ಪ್ರದರ್ಶನದ ಬಗ್ಗೆ ಏಷಿಯಾನೆಟ್ ಆಡಳಿತ ಅದರಲ್ಲೂ ಸಂಪಾದಕೀಯ ಸಂತುಷ್ಟಗೊಂಡಂತೆ ಕಾಣುತ್ತಿಲ್ಲವಂತೆ. ಹಾಗಾಗಿನೇ ಗಟ್ಟಿ ಕಾಳುಗಳನ್ನು ಬಿಟ್ಟು ಜೊಳ್ಳುಗಳನ್ನೆಲ್ಲಾ ಕೇರಿ-ತೂರಿ ಬಿಡಲು ನಿರ್ದರಿಸಲಾಗಿದೆಯಂತೆ.ಸುದ್ದಿ ಜಗತ್ತು ಸ್ಪರ್ದಾತ್ಮಕವಾಗುತ್ತಿದ್ದರೂ ಸ್ಪೋಟಕ ಸುದ್ದಿ ಹೆಕ್ಕಿ ತೆಗೆಯೋದನ್ನೇ ಮರೆತು,ಚಾನೆಲ್ ಕೊಡುವ ಕೈ ತುಂಬಾ ಸಂಬಳ ಪಡೆದು, ಚಾನೆಲ್ ನ್ನು ಮಾವನ ಮನೆಯಂತೆ ಮಾಡಿಕೊಂಡು ಕಂಫರ್ಟ್ ಝೋನ್ ನಲ್ಲಿ ಕಾಲ ಕಳೆಯುತ್ತಿರುವವರಿಗೆಲ್ಲಾ ಶಾಕಿಂಗ್ ಎನ್ನುವಂತ ಸುದ್ದಿ ನೀಡಲು ಆಡಳಿತ ಹೊರಟಿದೆ ಎನ್ನುವ ಮಾತಿದೆ.
ಅಜಿತ್ ಹನುಮಕ್ಕನವರ್ ಅವರ ಸುದ್ದಿ ನಿರೂಪಣೆ,ಸಂದರ್ಶನ ಮತ್ತು ರಾಜಕೀಯ ದಿಗ್ಗಜ ವಿಶ್ಲೇಷಕ ಪ್ರಶಾಂತ್ ನಾತು ಅವರ ಹರಿತವಾದ ರಾಜಕೀಯ ವಿಶ್ಲೇಷಣೆಗಳನ್ನು ಬಿಟ್ಟರೆ ಮೂರನೆಯ ಮತ್ತೊಂದು ಸ್ಲಾಟ್ ಅಥವಾ ಕಾರ್ಯಕ್ರಮ ಯಾವುದಿದೆ ಎಂದು ಪ್ರಶ್ನಿಸಿದ್ರೆ ಪಟ್ಟಿ ಮಾಡೋದು ಕಷ್ಟ. ಅಂತದೊಂದಿ ಷ್ಟು ಕಾರ್ಯಕ್ರಮಗಳ ಕೊರತೆ ಚಾನೆಲ್ ನಲ್ಲಿದೆ ಎನ್ನುವ ಅಭಿಪ್ರಾಯ ಸ್ವತಃ ನೋಡುಗರಲ್ಲಿದೆ.
ಸುವರ್ಣ ನ್ಯೂಸ್ ಚಾನೆಲ್ ನ ಯಾವುದೇ ವಿಭಾಗಗಳನ್ನು ತೆಗೆದುಕೊಳ್ಳಿ..ಅನುಭವಿ ವರದಿಗಾರರಿದ್ದಾರೆ.. ಕಸುವುಳ್ಳ ಸುದ್ದಿ ನಿರೂಪಕರಿದ್ದಾರೆ.ನುರಿತ ಕ್ಯಾಮೆರಾಮನ್ ಗಳಿದ್ದಾರೆ..ಹಾಗೆಯೆ ತಾಂತ್ರಿಕ ವಿಭಾಗದಲ್ಲೂ ಪಳಗಿದವರಿದ್ದಾರೆ.ಇಷ್ಟೆಲ್ಲಾ ಆದರೂ ಚಾನೆಲ್ ಟಿಆರ್ ಪಿಯಾಗಲಿ, ಕಾರ್ಯಕ್ರಮಗಳ ಗುಣಮಟ್ಟವಾಗಲಿ ಆಡಳಿತ ಮಂಡಳಿಯ ನಿರೀಕ್ಷೆ ಮುಟ್ಟುತ್ತಿಲ್ಲ ಎನ್ನುವ ಆರೋಪ ಇತ್ತೀಚೆಗೆ ಬಲವಾಗಿ ಕೇಳಿಬರಲಾರಂಭಿಸಿದೆ.ಚಾನೆಲ್ ನ ಸಿಬ್ಬಂದಿಗೆ ಅವರ ಹಿರಿತನ-ಸಾಮರ್ಥ್ಯವನ್ನು ಆಧರಿಸಿ ಕೇಳಿದಷ್ಟು ಸಂಬಳ ಕೊಟ್ಟ ಮೇಲೂ ಎನೂ ಬದಲಾಗುತ್ತಿಲ್ಲ ಎಂದರೆ ಸಮಸ್ಯೆ ಆಗಿರುವುದು ಎಲ್ಲಿ, ಸಮಸ್ಯೆಯನ್ನು ಪತ್ತೆ ಮಾಡಿ ಸರಿ ಮಾಡಬೇಕಿರುವುದೇನು ಎನ್ನುವುದು ಗಂಭೀರವಾಗಿ ಕಾಡಿರಬಹುದೇನೋ..? ಹಾಗಾಗಿನೇ ಅಮೂಲಾಗ್ರ ಬದಲಾವಣೆಯೊಂದಕ್ಕೆ ಆಡಳಿತ ಕೈ ಹಾಕೊಕ್ಕೆ ಮುಂದಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
200ಕ್ಕಿಂತ ಹೆಚ್ಚು ಸಿಬ್ಬಂದಿ ಸುವರ್ಣ ನ್ಯೂಸ್ ಬಳಗದಲ್ಲಿದ್ದಾರಂತೆ. ಅವರು ಕೇಳಿದ್ದನ್ನೆಲ್ಲಾ ಕಾಲಕಾಲಕ್ಕೆ ರಾಜಿ ಮಾಡಿಕೊಳ್ಳದೆ ಪೂರೈಸುತ್ತಿದ್ರೂ ನಮ್ಮ ನಿರೀಕ್ಷೆಗೆ ತಕ್ಕಂತೆ ಅವರಿಂದ ಕೆಲಸ ಬರುತ್ತಿಲ್ಲ ಎನ್ನುವು ದಾದ್ರೆ ಇಷ್ಟೊಂದು ಸಂಖ್ಯೆಯ ಸಿಬ್ಬಂದಿ ಅಗತ್ಯ ನಿಜಕ್ಕು ಇದೆಯೇ..? ಎನ್ನುವ ಪ್ರಶ್ನೆ ಆಡಳಿತವನ್ನು ಕಾಡಿರಬಹುದು.ಅದು ಸಹಜ ಬಿಡಿ.ಇತ್ತೀಚೆಗೆ ಕಡಿಮೆ ಸಿಬ್ಬಂದಿ ಫಾರ್ಮೂಲ ಅಳವಡಿಸಿಕೊಳ್ಳುತ್ತಿರುವ ಬಹುತೇಕ ಚಾನೆಲ್ ಗಳ ನಿಯಮವನ್ನು ಅಳವಡಿಸಿಕೊಂಡರೆ ಹೇಗೆ ಎನ್ನುವ ನಿಟ್ಟಿನಲ್ಲಿ ಆಲೋಚನೆ ಮಾಡಿರಬಹುದೇನೊ..ಚಾನೆಲ್ ನ ಒಳಹೊರಗುಗಳ ಬಗ್ಗೆ ಆಂತರಿಕವಾಗಿ ಅಧ್ಯಯನ ಮಾಡುವ ಟೀಮ್ ನ ಸಲಹೆ ಕೇಳಿರಬಹುದು..ಅದು ಕೂಡ ಇದೇ ಸಲಹೆ ನೀಡಿರಬಹುದೇನೋ..? ಹಾಗಾಗಿನೇ ಸಿಬ್ಬಂದಿ ಕಡಿತದ ಚಿಂತನೆ ನಡೆಸಿರಬಹುದು..ಅದರ ಅನುಷ್ಟಾನ ಶೀ್ಘ್ರವೇ ಚಾಲನೆ ಪಡೆದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.
ಏಕೆಂದರೆ ಈಗಾಗಲೇ ಸುವರ್ಣ ನ್ಯೂಸ್ ನ ಕಚೇರಿಯಲ್ಲಿ ಬೀಡುಬಿಟ್ಟಿದೆ ಎನ್ನಲಾಗುತ್ತಿರುವ ಟೀಮ್ ಪ್ರತಿಯೊಬ್ಬ ಸಿಬ್ಬಂದಿಯ ಕೆಲಸದ ಗುಣಮಟ್ಟ ಅವಲೋಕಿಸುವ ಜತೆಗೆ ಅವರ ಅಗತ್ಯ/ಅನಿವಾರ್ಯತೆಗಳನ್ನೂ ತೂಗಿ ಅಳೆಯುವ ಕೆಲಸ ಮಾಡುತ್ತಿದೆಯಂತೆ.ಒಂದು ಮೂಲದ ಪ್ರಕಾರ ಚಾನೆಲ್ ಗೆ ಬೇಕಿರುವ ಗಟ್ಟಿ ಕಾಳುಗಳ ಅಂತಿಮ ಪಟ್ಟಿಯೂ ಸಿದ್ದವಾಗಿದೆಯಂತೆ. ಕೈ ತುಂಬಾ ಸಂಬಳ ಪಡೆದುಕೊಂಡ ಹೊರತಾಗ್ಯೂ ಚಾನೆಲ್ ನ ಜನಪ್ರಿಯತೆ-ಟಿಆರ್ ಪಿ-ಪ್ರದರ್ಶನ ಹೆಚ್ಚಲು ತಮ್ಮ ಕೊಡುಗೆಯನ್ನೇ ಕೊಡದ ಚಾನೆಲ್ ನ್ನು ಮಾವನ ಮನೆಯ ರೇಂಜ್ ನಲ್ಲಿ ಅಂದಾದರ್ಬಾರ್ ನಡೆಸುತ್ತಿರುವ ಅನೇಕರೇ ಮೊದಲ ಟಾರ್ಗೆಟ್ ಅಂತೆ. ಈ ಮಾಹಿತಿ ಈಗಾಗಲೇ ಅನೇಕರಿಗೆ ದೊರೆತಿದ್ದು ಎಲ್ಲರಲ್ಲೂ ನಡುಕ ಸೃಷ್ಟಿಯಾಗಿದೆಯಂತೆ.ಅಸ್ಥಿತ್ವದ ಭಯ ಶುರುವಾಗಿದೆಯಂತೆ.
ಬೇರೆ ಚಾನೆಲ್ ಗಳಿಗೆ ಹೋಲಿಸಿದ್ರೆ ಸುವರ್ಣ ಮಾದ್ಯಮ ಮಿತ್ರರಿಗೆ ಸೇಫೆಸ್ಟ್ ಚಾನೆಲ್ ಎನಿಸಿಕೊಂಡಿದೆ. ಅದು ಸತ್ಯ ಕೂಡ.ಆದರೆ ಇದನ್ನೇ ಕೆಲವರು ಮಿಸ್ಯೂಸ್ ಮಾಡಿಕೊಂಡು ಅನೇಕ ವರ್ಷಗಳಿಂದ ಆರಾಮಾಗಿದ್ದಾರಂತೆ.ಚಾನೆಲ್ ನಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿರುವವರಿಗೆ ಬಕೆಟ್-ಸಿಂಟೆಕ್ಸ್ ಹಿಡಿದುಕೊಂಡು ದಿನ ದೂಡುತ್ತಿರುವ ಒಂದಷ್ಟು ಉದ್ಯೋಗಿಗಳಿದ್ದಾರಂತೆ.ಅಲ್ಲಿದೆ ಎನ್ನಲಾಗುತ್ತಿರುವ ಇಂತದ್ದೊಂದು ವ್ಯವಸ್ಥೆ ಬಗ್ಗೆ ಬೇಸರಿಸಿಕೊಂಡಿರುವ ಒಂದಷ್ಟು ಮಾದ್ಯಮಮಿತ್ರರೇ ಇದು ಹೌದು ಸರ್ ಎಂದು ಮಾಹಿತಿ ನೀಡಿದ್ದಾರೆ. ಆಡಳಿತ, ಚಾನೆಲ್ ನ ಉದ್ದಾರಕ್ಕೆ ಕೋಟಿಗಳಲ್ಲಿ ಹಣ ಸುರಿಯುತ್ತಲೇ ಇದೆ.ಸಿಬ್ಬಂದಿಗೆ ಕಾಲ ಕಾಲಕ್ಕೆ ಸಂಬಳದಲ್ಲಿ ಹೆಚ್ಚಳ, ಹುದ್ದೆಯಲ್ಲಿ ಭಡ್ತಿ ಕೊಡುತ್ತಾ ಉದ್ಯೋಗಿಸ್ನೇಹಿ ವ್ಯವಸ್ಥೆ ಅಳವಡಿಸಿಕೊಂಡಿದೆ.ಆದರೆ ಮ್ಯಾನೇಜ್ಮೆಂಟ್ ಏನೂ ಕೇಳೊಲ್ಲ ಎಂದುಕೊಂಡು ವ್ಯವಸ್ಥೆಯನ್ನು ಬೇಕಾಬಿಟ್ಟಿ ನಡೆಸಿಕೊಂಡು ಬಂದಿದ್ದರ ಪರಿಣಾಮವೇ ಇವತ್ತು ತಮ್ಮ ಖೆಡ್ಡಾ ತಾವೇ ತೋಡಿಕೊಳ್ಳುವಂ ಥ ಸ್ಥಿತಿ ಬಂದೊದಗಿದೆ ಎನ್ನಲಾಗುತ್ತಿದೆ.ಈ ತಪ್ಪಿಗೆ ತಲೆದಂಡದಂಥ ಶಿಕ್ಷೆ ಎದುರಿಸಬೇ ಕಾದಂತ ಸನ್ನಿವೇ ಶ ನಿರ್ಮಾಣವಾಗಿದೆಯಂತೆ. ಚಾನೆಲ್ ನಿರ್ವಹಣೆಯ ಜವಾಬ್ದಾರಿ ಹೊತ್ತವರೇ ಇದರ ನೈತಿಕ ಹೊಣೆ ಹೊರಬೇಕಾಗಿರುವುದು ಕೂಡ ಅಷ್ಟೇ ಸತ್ಯ.

ಚಾನೆಲ್ ನ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸಿ, ಸ್ವರೂಪವನ್ನು ಆಕರ್ಷಣೀಯಗೊಳಿಸುವ ಪ್ರಯ ತ್ನದ ಭಾಗವಾಗಿ ನಡೆಯಲಿದೆ ಎನ್ನಲಾಗುತ್ತಿರುವ ಬದಲಾವಣೆ ಅರ್ಹರು-ಸಮರ್ಥರಿಗೆ ಕಂಟಕವಾಗುವ ಸಾಧ್ಯತೆ ಕಡಿಮೆಯಂತೆ.ತುಂಬಾ ವರ್ಷಗಳಿಂದ ಇದ್ದರೂ, ಚಾನೆಲ್ ನ ಅಭಿವೃದ್ದಿಗೆ ಕೈ ಜೋಡಿಸದವರು ಟಾರ್ಗೆಟ್ ಆಗಬಹುದಂತೆ.ಕೇರಳಾದಿಂದ ಬಂದಿದೆ ಎನ್ನಲಾಗಿರುವ ಟೀಮ್ ಎಲ್ಲರ ಬಂಡವಾಳ-ಜಾತಕ ವನ್ನು ಕೈಲಿಟ್ಟುಕೊಂಡು ಯಾರನ್ನು ಯಾವಾಗ, ಹೇಗೆ ಕಳುಹಿಸಬೇಕೆನ್ನುವ ಪ್ಲ್ಯಾನ್ ರೂಪಿಸಿಕೊಂಡಿದೆ ಯಂತೆ.ಈ ಹಿನ್ನಲೆಯಲ್ಲಿ ಒಂದಷ್ಟು ವರದಿಗಾರರು ಖೆಡ್ಡಾಕ್ಕೆ ಸಂಕಷ್ಟಕ್ಕೆ ಸಿಲುಕಬಹುದು. ಆಂಕರ್ ಗಳಲ್ಲೂ ಬದಲಾವಣೆ ಸಾಧ್ಯತೆಗಳಿವೆಯಂತೆ. ಕ್ಯಾಮೆರಾಮನ್ ಗಳ ಸಂಖ್ಯೆಯು ಕಡಿತವಾಗಲಿದೆಯಂತೆ. ಟೆಕ್ನಿಕಲ್ ಹಾಗೂ ಪ್ರೊಡಕ್ಷನ್ ನಲ್ಲಿಯೂ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆಯಂತೂ ದಟ್ಟವಾಗಿದೆಯಂತೆ.

ಬದಲಾಗುತ್ತಾ ಚಾನೆಲ್ ಹೆಸರು..?! ಈ ಎಲ್ಲಾ ಬದಲಾವಣೆಗಳ ಜತೆಗೆ ಬದಲಾಗಲಿದೆ ಎನ್ನುವ ಮತ್ತೊಂದು ಸಂಗತಿಯೇ ಚಾನೆಲ್ ಹೆಸರಿನ ಬದಲಾವಣೆ.ಸುವರ್ಣ ನ್ಯೂಸ್ ಹೆಸರನ್ನು ಏಷಿಯಾನೆಟ್ ಕನ್ನಡ ಎಂದು ಬದಲಿಸಲಾಗುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಏಷಿಯಾನೆಟ್ ಮೂಲಸಂಸ್ಥೆಯಾಗಿದ್ದು ಕೇರಳಾದಂಥ ರಾಜ್ಯದಲ್ಲಿ ಅದೇ ಹೆಸರಿಗೆ ವೈಬ್ರೇಷನ್ ಹೆಚ್ಚಿರುವುದರಿಂದ ಅದೇ ಪ್ರಯೋಗವನ್ನು ಕರ್ನಾಟಕದಲ್ಲಿಯೂ ಮಾಡಿದರೆ ಹೇಗೆ ಎನ್ನುವ ಚಿಂತನೆ ಮೂಡಿದೆಯಂತೆ.ಇದರ ಭಾಗವಾಗಿಯೇ ಸುವರ್ಣ ನ್ಯೂಸ್ ಎನ್ನುವುದನ್ನು ಏಷಿಯಾನೆಟ್ ಕನ್ನಡ ಎಂದು ಬದಲಿಸುವ ಇರಾದೆ ಇದೆ ಎನ್ನಲಾಗುತ್ತಿದೆ.ಇದೇ ಸತ್ಯವಾದ್ರೆ ಮುಂದಿನ ದಿನಗಳಲ್ಲಿ ಸುವರ್ಣ ನ್ಯೂಸ್, ಏಷಿಯಾನೆಟ್ ಕನ್ನಡವಾಗಿ ಹೊರಹೊಮ್ಮಲಿದೆ.ಆದರೆ ಹೆಸರು ಬದಲಿಸಿದಾಕ್ಷಣ ಎಲ್ಲವೂ ಸರಿ ಹೋಗಿಬಿಡುತ್ತಾ. .ಚಾನೆಲ್ ನಲ್ಲಿ ಆಗಬೇಕಿರುವುದೇ ಬೇರೆ ಬದಲಾವಣೆ. ಅರ್ಹರಾದ ಯಾರನ್ನು ಇಟ್ಟುಕೊಳ್ಳಬೇಕು.. ಬಕೆಟ್ ಹಿಡಿದು ಕೆಲಸ ಉಳಿಸಿಕೊಳ್ಳುತ್ತಿರುವ ಯಾರನ್ನು ಕುತ್ತಿಗೆ ಹಿಡಿದು ಹೊರ ತಳ್ಳಬೇಕೆನ್ನುವುದು ಡಿಸೈಡ್ ಆಗಬೇಕು ಎನ್ನುವುದು ಅದೇ ಸಂಸ್ಥೆಯ ಅನೇಕರ ಅಭಿಪ್ರಾಯ.
ಅಜಿತ್ ಹನುಮಕ್ಕನವರ್ ಕಥೆ ಏನಾಗುತ್ತದೆ..ರಿಪಬ್ಲಿಕ್ ಕನ್ನಡದ ಪಾಲಾಗ್ತಾರಾ..? ಇಲ್ಲೇ ಉಳಿತಾರಾ..?ಇದೆಲ್ಲದರ ನಡುವೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿರುವ ಮ್ಯಾಟರ್ರೇ ಸುದ್ದಿ ಸಂಪಾದಕ ಅಜಿತ್ ಹನುಮಕ್ಕನವರ್ ಏನಾಗ್ತಾರೆನ್ನುವುದು..ತಮ್ಮನ್ನು ರಾಷ್ಟ್ರವಾದಿ ಪತ್ರಕರ್ತ ಎಂದು ಕರೆದುಕೊಳ್ಳುವ ಅಜಿತ್, ರಿಪಬ್ಲಿಕ್ ಕನ್ನಡಕ್ಕೆ ಹೋಗುತ್ತಾರೆ..ಆ ಕುರಿತಾಗಿನ ಅಂತಿಮ ಹಂತದ ಮಾತುಕತೆ ಮುಗಿದಿದೆ ಎಂದೆಲ್ಲಾ ಖಚಿತವಾಗಿ ಹೇಳಲಾಗುತ್ತಿತ್ತು.ಕನ್ನಡ ಫ್ಲ್ಯಾಶ್ ನ್ಯೂಸ್ ಕೂಡ ಇದರ ಮೇಲೆ ಬೆಳಕು ಚೆಲ್ಲಿತ್ತು.ಆಗಲಿರುವ ಹೊಸ ಬದಲಾವಣೆ ಅಜಿತ್ ಅವರಿಗೆ ಹೆಚ್ಚಿನ ಬಲ-ಸ್ವಾತಂತ್ರ್ಯ ಕೊಟ್ಟು ಅಲ್ಲೇ ಉಳಿಯವುದಕ್ಕೆ ಮತ್ತಷ್ಟು ಬಲ ಕೊಡುತ್ತದೋ ಅಥವಾ ತಮ್ಮ ಮೆಚ್ಚಿನ ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಕನ್ನಡದ ಬಳಗ ಸೇರುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.

ಏಕೆಂದರೆ ಸುದ್ದಿ ಜಗತ್ತಿನಲ್ಲಿ ಸುವರ್ಣ ನ್ಯೂಸ್ ಗಿಂತ ಅಜಿತ್ ಅವರ ಅವಶ್ಯಕತೆ ಹೆಚ್ಚಾಗಿ ಇರುವುದು ರಿಪಬ್ಲಿಕ್ ಕನ್ನಡಕ್ಕೆ..ಅವರು ರಿಪಬ್ಲಿಕ್ ಕನ್ನಡದ ಸ್ಟಾರ್ ಆಗಿ ಮಿಂಚುವುದನ್ನು ನೋಡುವುದೆ ನಮಗೆ ಹೆಚ್ಚು ಇಷ್ಟ ಎಂದು ಅನೇಕರು ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ತಿಳಿಸಿದ್ದಾರೆ.ಆದರೆ ಸುವರ್ಣದಲ್ಲೇ ಉಳಿಯುವುದು (ಕೆಲವು ಮೂಲಗಳ ಪ್ರಕಾರ ಅಜಿತ್ ಅವರಿಗೂ ಕೆಲವರಿಂದಾಗಿ ಅಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ ಎನ್ನಲಾಗುತ್ತಿದೆ.ಆದರೆ ಅದು ಎಷ್ಟರ ಮಟ್ಟಿಗೆ ಸತ್ಯನೋ ಗೊತ್ತಿಲ್ಲ.)ಅಥವಾ ರಿಪಬ್ಲಿಕ್ ಕನ್ನಡ ಬಳಗ ಸೇರುವುದು ಅಜಿತ್ ಅವರ ಅಂತಿಮ ವಿವೇಚನಾಯುತ ಅಧಿಕಾರ.
ಅದೇನೇ ಆಗಲಿ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುವರ್ಣ ನ್ಯೂಸ್ , ಸಾಕಷ್ಟು ಬದಲಾವಣೆಗೆ ತನ್ನನ್ನು ಒಗ್ಗಿಸಿಕೊಳ್ಳುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.ಕನ್ನಡ ಫ್ಲ್ಯಾಶ್ ನ್ಯೂಸ್ ಗೂ ಇದರ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ.ಆದರೆ ಅಂತಿಮವಾಗಿ ಏನಾಗಲಿದೆ ಎನ್ನುವುದು ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟ ವಿಚಾರ.ಆದರೆ ಬದಲಾವಣೆ ಏನೇ ಆಗಲಿ ನಿಜಕ್ಕೂ ಪ್ರಯೋಜನಕಾರಿಯಲ್ಲದ ಜೊಳ್ಳುಗಳನ್ನು ಕೇರಿ ತೂರುವ ಆತುರದಲ್ಲಿ ಹೊರ ಜಗತ್ತಿನ ಸಂಪರ್ಕವೇ ಇಲ್ಲದೆ ಬದುಕಿಗಾಗಿ ಕೇವಲ ಸುದ್ದಿ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿರುವ ಪ್ರಾಮಾಣಿಕ ಹಾಗೂ ನಿಷ್ಟಾವಂತ ಮಾದ್ಯಮ ಸ್ನೇಹಿತರು ಬಲಿಯಾಗಬಾರದು ಅಷ್ಟೆ..