advertise here

Search

BIG EXPOSE…”ಜೈಲ್‌ “ಗಳ “ಆಹಾರ ಗೋಲ್ಮಾಲ್‌” ..ಪ್ರತಿ ಖೈದಿಯ 3 ಹೊತ್ತಿನ ಊಟಕ್ಕೆ 85 ರೂ..! ರಾತ್ರಿ ಊಟಕ್ಕೂ-ಬೆಳಗಿನ ಟಿಫನ್‌ ಗೂ 14 ಗಂಟೆಗಳ ಅಂತರ..!ವಾರಕ್ಕೊಮ್ಮೆಯಷ್ಟೇ ಮಾಂಸಹಾರ..!


**ಆರ್‌ ಟಿ ಐನಲ್ಲಿ ಬಯಲಾಯ್ತು ಕರ್ನಾಟಕದ ಜೈಲ್‌ ಗಳ ಕರಾಳ ಮುಖ ** ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರಿಂದ ಅಕ್ರಮ ಬಯಲು ** ಜೈಲ್‌ ಸೂಪರಿಂಟೆಂಡೆಂಟ್‌ ನೀಡಿದ ಸ್ಪೋಟಕ ವಿವರಗಳಿಂದ ಆಹಾರದ ಕರಾಳತೆ ಅನಾವರಣ ** ವಿಚಾರಣಾಧೀನ ಖೈದಿಗಳ ಆಹಾರಕ್ಕೆ ಕನಿಷ್ಟ ದರ ಫಿಕ್ಸ್‌ **ಬೆಳಗಿನ ಉಪಾಹಾರ.ಟೀ, ಮದ್ಯಾಹ್ನದ ಊಟ ಸಂಜೆ ಟೀ-ಸ್ನ್ಯಾಕ್ಸ್‌,ರಾತ್ರಿ ಊಟಕ್ಕೆ 85  ರೂ ** ಕೇರಳಾ ಜೈಲ್‌ ಗಳಲ್ಲಿ ವಾರಕ್ಕೆ 3 ದಿನ ಮಾಂಸಹಾರ-ಆದರೆ ಕರ್ನಾಟಕದಲ್ಲಿ ಏಕೆ ಹೀಗೆ..? ** ಬೆಳಗ್ಗೆ-ಮದ್ಯಾಹ್ನ-ರಾತ್ರಿ ಊಟದ  ಸಮಯ ನಿಗಧಿಯೂ ಅವೈಜ್ಞಾನಿಕ-ಅಮಾನವೀಯ ** 85 ರೂ ಟೆಂಡರ್‌ ಪಡೆದ ಗುತ್ತಿಗೆದಾರನಿಂದ ಕಿಕ್‌ ಬ್ಯಾಕ್‌ ಪಡೆಯದೆ ಬಿಡ್ತಾರಾ ಅಧಿಕಾರಿಗಳು..? ** 85 ರೂಗೆ ಟೆಂಡರ್‌ ಪಡೆದ ಗುತ್ತಿಗೆದಾರನಿಂದ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸಲು ಸಾಧ್ಯನಾ..? ** ನರಸಿಂಹ ಮೂರ್ತಿ ಅವರಿಂದ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಕೆ.

ಬೆಂಗಳೂರು: ಕಾರಾಗ್ರಹ ಅಥವಾ ಜೈಲು ಎನ್ನುವುದು ಅಪರಾಧಿಗಳ  ಜೀವನ ಪರಿವರ್ತನೆಯ ತಾಣವಾಗಬೇಕೆನ್ನು ವುದು ಸರ್ಕಾರದ ಅಭಿಪ್ರಾಯ.ಆದರೆ ಹಾಗೆ ಆಗಲು ಅದಕ್ಕೆ ಪೂರಕವಾದ ವಾತಾವರಣ ಕೂಡ ಇರಬೇಕೆ ನ್ನುವುದನ್ನೇ ಬಹುಷಃ ಸರಕಾರ ಮರೆತಂತಿದೆ.ಅಪರಾಧ ಮನಸ್ಥಿತಿ ತೊರೆದು, ಸಮಾಜದ ಮುಖ್ಯವಾಹಿನಿ ಯಲ್ಲಿ ಗೌರವಯುತ  ಬದುಕು ನಡೆಸೊಕ್ಕೆ ಪ್ರೇರಣೆ ನೀಡಬೇಕಿರುವ ಕಾರಾಗ್ರಹಗಳು ಅಲ್ಲಿನ ವಾತಾವರಣ ದಿಂದಲೇ ಅಪರಾಧಕ್ಕೆ ಮತ್ತಷ್ಟು ಕುಮ್ಮಕ್ಕು-ಪ್ರಚೋದನೆ ನೀಡುವಂತಿರುವುದು ಕೂಡ ಅಷ್ಟೇ ಸತ್ಯ. ಕ್ರಿಮಿನಲ್‌ ಕೃತ್ಯಗಳಿಗೆ ಹೇಳಿ ಮಾಡಿಸಿದಂತ ವಾತಾವರಣ ಹೊಂದಿರುವ ಬಹುತೇಕ ಜೈಲುಗಳಲ್ಲಿ ವಿಚಾರಣಾಧೀನ ಖೈದಿಗಳನ್ನು ಮೃಗಗಳಂತೆ ಟ್ರೀಟ್‌ ಮಾಡುತ್ತಿರುವುದು ಕೂಡ ಗುಟ್ಟಾಗೇನು ಉಳಿದಿಲ್ಲ.ಕೇವಲ ವಾತಾವರಣದಲ್ಲಷ್ಟೇ ಅಲ್ಲ ಜೈಲು ಹಕ್ಕಿಗಳಿಗೆ ಪೂರೈಸುತ್ತಿರುವ ಆಹಾರದ ವಿಷಯದಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆ ಹೇಗೆಲ್ಲಾ ನಡೆಯುತ್ತಿದೆ ಎನ್ನುವುದರ ಕರಾಳ ಮುಖವನ್ನು ಬಯಲು ಮಾಡಿದೆ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರಿಗೆ ಆರ್‌ ಟಿಐ ನಲ್ಲಿ ನೀಡಿರುವ ಮಾಹಿತಿಗಳು.ಪರಪ್ಪನ ಅಗ್ರಹಾರ ಸೇರಿದಂತೆ ಎಲ್ಲಾ ಜೈಲುಗಳಲ್ಲಿರುವವರಿಗೆ ನೀಡಲಾಗುತ್ತಿರುವ ಆಹಾರ ವ್ಯವಸ್ಥೆಯ ಕಳಪೆ ಹಾಗೂ ಕರಾಳ ಮುಖ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಎಳೆ ಎಳೆಯಾಗಿ ಬಯಲು ಮಾಡುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ..? ಇಂತದ್ದೊಂದು ಶಂಕೆ ಮೂಡೊಕ್ಕೆ ಕಾರಣ  ಜೈಲು ಆಡಳಿತ ಆರ್‌ ಟಿ ಐ ನಲ್ಲಿ ನೀಡಿರುವ ಮಾಹಿತಿ. ನಾವು ಸಹಜವಾಗಿ ಎಂತದ್ದೇ ಕನಿಷ್ಟ ಎನ್ನುವಂತ ಹೊಟೇಲ್‌ ನಲ್ಲಿ- ಬೀದಿ ಬದಿ ಗಾಡಿಗಳಲ್ಲಿ ದಿನದ 3 ಹೊತ್ತಿನ ಆಹಾರ ಸೇವಿಸಿದ್ರೂ  ಬೆಲೆ 150ಕ್ಕಿಂತ ಕಡಿಮೆ ಇರೊಲ್ಲ.ಆದ್ರೆ   ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗ್ರಹ ಸೇರಿದಂತೆ ಎಲ್ಲಾ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳಿಗೆ 3 ಹೊತ್ತಿನ ಊಟಕ್ಕೆ  ಸರ್ಕಾರ ಮತ್ತು ಜೈಲು ಆಡಳಿತ ಖರ್ಚು ಮಾಡುತ್ತಿರುವುದು ಎಷ್ಟು ಗೊತ್ತಾ..?ಕೇಳಿದ್ರೆ ಗಾಬರಿ ಆಗ್ತಿರಾ..ಹೌದಾ ಎಂದು ಹುಬ್ಬೇರಿಸುತ್ತೀರ… 3 ಹೊತ್ತಿನ ಊಟಕ್ಕೆ ಪ್ರತಿ ಖೈದಿಗೂ ಖರ್ಚು ಮಾಡುತ್ತಿರುವುದು ಕೇವಲ 85 ರೂ. ಇಷ್ಟೊಂದು ಕನಿಷ್ಟ ಎನ್ನುವಂತ ದರದಲ್ಲಿ ಪೂರೈಸುತ್ತಿರುವ ಊಟದ ಗುಣಮಟ್ಟ ಎಂತದ್ದಿರಬಹುದು ಎಂದು ಎಂತವರನ್ನೇ ಪ್ರಶ್ನಿಸಿದ್ರೂ ಕಳಪೆ ಎನ್ನುವ ಉತ್ತರ ದೊರೆಯುತ್ತದೆ. ಇದನ್ನು ನಾವು ಊಹಿಸಿ ಹೇಳುತ್ತಿಲ್ಲ.ಅಥವಾ ಜೈಲಿನಲ್ಲಿರುವ ಖೈದಿಗಳಿಂದ ಮಾಹಿತಿ ಪಡೆದು  ಹೇಳುತ್ತಿಲ್ಲ…ಈ ಮಾಹಿತಿ ನೀಡಿರುವುದು ಸ್ವತಃ ಪರಪ್ಪನ ಅಗ್ರಹಾರ ಜೈಲು ಆಡಳಿತ..ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಅವರು ಕೇಳಿದ್ದ ಪ್ರಶ್ನೆಗೆ ಆರ್‌ ಟಿ ಐನಲ್ಲಿ ಮಾಹಿತಿ ನೀಡಿದೆ.

ವಿಐಪಿಗಳಿಗೆ ಸ್ಪೆಷಲ್ ಫುಡ್…ಸಾಮಾನ್ಯ ಖೈದಿಗಳಿಗೆ ಕಳಪೆ ಆಹಾರನಾ..?ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೇರಿದಂತೆ ಅನೇಕ ವಿಐಪಿ, ವಿವಿಐಪಿ ಖೈದಿಗಳ ವಿಚಾರದಲ್ಲಿ ಜೈಲುಗಳಲ್ಲಿ ರುವ ಆಹಾರದ ಮ್ಯಾನುವೆಲ್‌ ವ್ಯವಸ್ಥೆಯನ್ನೇ ಕಾರಾಗ್ರಹ ಆಡಳಿತ ಬದಲಿಸಿಬಿಡುತ್ತದೆ. ರುಚಿರುಚಿ ಯಾದ ಪೌಷ್ಟಿಕ ಹಾಗೂ ಸ್ವಾಧಿಷ್ಟ್ಯ ಆಹಾರವನ್ನು ಹೊತ್ತು ಹೊತ್ತಿಗೆ ನೀಡುವ ಕೆಲಸ ನಡೆಯುತ್ತದೆ. ಅವರಿಗೆ ಪೂರೈಸುವ ಆಹಾರದ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಚೆನ್ನಾಗಿಲ್ಲ, ಪೌಷ್ಟಿಕವಾಗಿಲ್ಲ, ರುಚಿಕರವಾಗಿಲ್ಲ ಎಂದು ವರಾತ ತೆಗೆದ್ರೆ ತತ್‌ ಕ್ಷಣಕ್ಕೆ ಬದಲಿಸಲಾಗುತ್ತದೆ. ಆದರೆ..ಜೈಲುಗಳಲ್ಲಿ ಜೀವನ ಸವೆಸುತ್ತಿರುವ ಅಪರಾಧಿಗಳ ಆಹಾರದ ವಿಚಾರದಲ್ಲಿ ಎಲ್ಲವೂ ನಿರ್ಲಕ್ಷ್ಯ…ಗುಣಮಟ್ಟದ ಪೌಷ್ಟಿಕ ಆಹಾರವನ್ನೇಕೆ ಕೊಡಬೇಕೆನ್ನುವ ತಾತ್ಸಾರ.ಏನ್‌ ಕೊಟ್ಟರೂ ತಿಂದಾರು ಎನ್ನುವಷ್ಟರ ಮಟ್ಟಿಗಿನ ಉದಾಸೀನ ಯಾಕೆ ಎನ್ನುವುದು ಗೊತ್ತಾಗುತ್ತಿಲ್ಲ.

ಜೈಲುಗಳಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ಇವತ್ತಿನ ಆರೋಪವಲ್ಲ.ದಶಕಗಳಿಂದಲೂ ಈ ಬಗ್ಗೆ ಆಕ್ಷೇಪಗಳಿವೆ. ಜೈಲಿನಲ್ಲಿ ಖೈದಿಗಳು ಎಷ್ಟೋ ಬಾರಿ ಊಟ ಬಿಟ್ಟು  ಪ್ರತಿಭಟಿಸಿದ್ದಿದೆ.ಎಷ್ಟೋ ಸನ್ನಿವೇಶಗಳಲ್ಲಿ ಜೈಲಿನ ಆಹಾರ ಸೇವಿಸಿ ಖೈದಿಗಳು ಅಸ್ವಸ್ಥರಾಗಿದ್ದಾರೆ. ಈ ರೀತಿ ಆದಾಗಲೆಲ್ಲಾ ದಿಢೀರ್‌ ಎಚ್ಚೆತ್ತುಕೊಂಡಂತೆ ನಟಿಸುವ ಸರ್ಕಾರ ಮತ್ತು ಜೈಲು ಆಡಳಿತಗಳು ಆ ಸನ್ನಿವೇಶದಲ್ಲಿ ಬದಲಾವಣೆ ಮಾಡಿಕೊಂಡಿರುವಂತೆ ನಟಿಸುತ್ತವೆ. ಸ್ವಲ್ಪ ದಿನ ಕಳೆದ ಮೇಲೆ ಅದೇ ರಾಗ..ಅದೇ ಹಾಡು ಎನ್ನುವಂತಾಗುತ್ತದೆ.  ಖೈದಿಗಳ ಆಹಾರದ ವಿಚಾರದಲ್ಲಿ ನಮ್ಮ ಆಡಳಿತ ವ್ಯವಸ್ಥೆಗಳ ಮನಸ್ಥಿತಿ ಬದಲಾಗುವವರೆಗೂ ಯಾವುದೂ ಬದಲಾಗುವುದಿಲ್ಲ ಎನ್ನುವುದು ಕೂಡ ಸತ್ಯ.

ರಾತ್ರಿ ಊಟದಿಂದ ಬೆಳಗಿನ  ತಿಂಡಿ ನಡುವೆ 14   ಗಂಟೆ ಗ್ಯಾಪ್‌..ಇದು ದೌರ್ಜನ್ಯವಲ್ಲದೆ ಇನ್ನೇನು? ರಾತ್ರಿಯ ಊಟವನ್ನು ಸಂಜೆ 5 ಗಂಟೆಗೆ ಕೊಡುವ ಜೈಲು ಆಡಳಿತ ಮತ್ತೆ ಅವರಿಗೆ ಬೆಳಗಿನ ಉಪಹಾರ ಕೊಡುವುದು ಅವರೇ ಹೇಳಿಕೊಂಡಿರುವಂತೆ ಬೆಳಗ್ಗೆ 7 ಗಂಟೆಗೆ ಅಂತೆ.ಸಂಜೆ 5 ರ ನಂತರ ಏನಾದ್ರೂ ಹೊಟ್ಟೆ ಹಸಿದರೆ ಅವರಿಗೆ ಆಹಾರ ನೀಡಲಾಗುತ್ತದೆಯೋ ಅಥವಾ ನಿರಾಕರಿಸಲಾಗುತ್ತದಾ..? ಗೊತ್ತಿಲ್ಲ. (ಜೈಲ್‌ ಸೂಪರಿಂಟೇಂಡೆಂಟ್‌ ಅವರು ನೀಡಿರುವ ಮಾಹಿತಿಯಂತೆ ಬೆಳಗಿನ ಜಾವ 7.15-8:30 ರ ಒಳಗೆ ತಿಂಡಿ, ಮಧ್ಯಾಹ್ನ:11:00-11:3-00 ರೊಳಗೆ ಊಟ, ರಾತ್ರಿ: 5:15-5:45 ರೊಳಗೆ ಊಟ)

ಆದರೆ ಹಾಗೆ ನಿರಾಕರಿಸುವ ವ್ಯವಸ್ಥೆ ಜೈಲಿನಲ್ಲಿ ಇದ್ದಿದ್ದೇ ಆದರೆ ಅದರಷ್ಟು ಅಮಾನವೀಯ ಮತ್ತೊಂದಿರಲಾರದು.ಏಕೆಂದರೆ ಸಂಜೆ 5 ರ ರಾತ್ರಿ ಊಟಕ್ಕೂ ಬೆಳಗ್ಗೆ 7  ಗಂಟೆಗೆ ನೀಡುವ ಉಪಹಾರಕ್ಕೂ ಹತ್ತಿರತ್ತಿರ 14  ಗಂಟೆ ಗ್ಯಾಪ್‌ ಆದಂತಾಯಿತು.೧೪ ಗಂಟೆವರೆಗೂ ಹಸಿವನ್ನು ತಡೆದಿಟ್ಟುಕೊಳ್ಳಬೇಕೆನ್ನುವುದು ಯಾವ ನ್ಯಾಯ.? ಏಕೆಂದರೆ ಜೈಲಿನಲ್ಲಿರುವ ಎಲ್ಲಾ ಖೈದಿಗಳ ಆರೋಗ್ಯವೂ ಸರಿಯಾಗಿರೊಲ್ಲ.ಕೆಲವರ ಆರೋಗ್ಯದಲ್ಲಿ ಸಮಸ್ಯೆಗಳಿರುತ್ತವೆ.ಅಂಥವರು 14 ಗಂಟೆಗಳವರೆಗೂ ಹಸಿವನ್ನು ಕಂಟ್ರೋಲ್‌ ಮಾಡಿಟ್ಟುಕೊಳ್ಳುವುದು ಕಷ್ಟವೇ ಸರಿ.ಅಲ್ಲದೇ ಹಾಗೆ ಮಾಡುವುದರಿಂದ ಅವರ ಆರೋಗ್ಯದಲ್ಲೂ ಸಾಕಷ್ಟು ಏರುಪೇರುಗಳಾಗಬಹುದ..ಜೈಲುಗಳಲ್ಲಿ ಹಾಗೆಯೇ ಆಗುತ್ತಿದೆ ಎನ್ನುವ ಮಾಹಿತಿಯಿದೆ. ಸಂಜೆ 5 ಗಂಟೆಗೆ ರಾತ್ರಿಯ ಆಹಾರ ಪೂರೈಸುವಂತ ವ್ಯವಸ್ಥೆಯನ್ನು ಮಾಡಿರುವುದೇ ಅವೈಜ್ನಾನಿಕ ಎನ್ನಲಾಗುತ್ತಿದೆ.ಸಂಜೆ 7 ಅಥವಾ 8 ಗಂಟೆಗೆ ಆಹಾರ ನೀಡಿದ್ರೆ ಬೇಕಾದ್ರೆ 7 ರವರೆಗೂ ಹಸಿವನ್ನು ಹೇಗೋ ಕಂಟ್ರೋಲ್‌ ಮಾಡಬಹುದಾಗಿರುತ್ತದೆ.ಅದನ್ನು ಬಿಟ್ಟು ತಮ್ಮದೇ ಸಪರೇಟ್‌ ಮ್ಯಾನುವೇಲ್‌ ಮಾಡಿಕೊಂಡು ಅದರಲ್ಲಿ ತಮಗಿಷ್ಟ ಬಂದ ಅವಧಿಯನ್ನು ಫಿಕ್ಸ್‌ ಮಾಡಿಕೊಂಡು ಖೈದಿಗಳ ಆಹಾರ ಸ್ವಾತಂತ್ರ್ಯದ ವಿಚಾರದಲ್ಲಿ ಆಟ ಆಡುವುದು ನಿಜಕ್ಕೂ ಸರಿಯಲ್ಲ ಈ ವ್ಯವಸ್ಥೆ ವಿರುದ್ದ ಕ್ರಮ ಕೈಗೊಂಡು ಸಮಯ ನಿಗಧಿಯಲ್ಲಿ ಬದಲಾವಣೆ ತರಬೇಕೆನ್ನುತ್ತಾರೆ ದೂರುದಾರ ನರಸಿಂಹಮೂರ್ತಿ.

ALSO READ :  ಟಾಟಾ ಟ್ರಸ್ಟ್ ಉತ್ತರಾಧಿಕಾರಿಯಾಗಿ ನೊಯೆಲ್ ಟಾಟಾ ಅವಿರೋಧ ಆಯ್ಕೆ

ವಾರಕ್ಕೆ ಒಮ್ಮೆಯಷ್ಟೇ ಮಾಂಸಹಾರ: ಅದು ಅರೆಹೊಟ್ಟೆ: ಸಹಜವಾಗಿ ಎಲ್ಲರೂ ಜೈಲುಗಳಲ್ಲಿ ವಾರಕ್ಕೆ ಕನಿಷ್ಟ ಎಂದ್ರೂ 2-3 ಬಾರಿ ಮಾಂಸಹಾರ ನೀಡಲಾಗುತ್ತದೆ ಎಂದೇ ಭಾವಿಸಿರುತ್ತಾರೆ.ಆದರೆ ಅದು ಸುಳ್ಳು..ಇದನ್ನು ಆರ್‌ ಟಿ ಐ ನಲ್ಲಿ ಜೈಲು ಆಡಳಿತವೇ ಮಾಹಿತಿ ನೀಡಿದೆ.ಮಾಂಸಹಾರ ನೀಡುವುದೇ  ವಾರಕ್ಕೆ ಒಮ್ಮೆ ಅಂತೆ.ಅದು ಕೂಡ ಹೊಟ್ಟೆ ತುಂಬ ಅಲ್ವಂತೆ. ಉಪ್ಪು-ಖಾರದ ಹದವೂ ಇಲ್ಲದ ಮಾಂಸಹಾರವಂತೆ.ಅಲ್ಲಿ ನೀಡಲಾಗುವ ಮಾಂಸಹಾರ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆಯಂತೆ.ನಿಮಗೆ ನೆನಪಿರಲಿ ಅಂಥಾ ಹೇಳ್ತೇವೆ ಕೇಳಿ, ಪಕ್ಕದ ಕೇರಳಾದಲ್ಲಿ ವಾರಕ್ಕೆ 3 ಬಾರಿ( ಸೋಮವಾರ-ಬುಧವಾರ-ಶನಿವಾರ) ಖೈದಿಗಳಿಗೆ ಗುಣಮಟ್ಟದ ಹಾಗೂ ಪೌಷ್ಟಿಕವಾದ ಮಾಂಸಹಾರ ನೀಡಲಾಗುತ್ತಿದೆ.ಅದು ಕೂಡ ಹೊಟ್ಟೆ ತುಂಬುವಷ್ಟು ಅಂತೆ.ಅದೇ ಮಾದರಿಯನ್ನು ನಮ್ಮಲ್ಲೂ ಅನುಸರಿಸಿ. ನಮಗೂ ವಾರದಲ್ಲಿ ಕನಿಷ್ಟ 2-3 ಬಾರಿಯಾದರೂ ಮಾಂಸಹಾರ ನೀಡಿ ಎಂದು ಜೈಲಿನಲ್ಲಿ ಇವತ್ತಿಗೂ ಹೋರಾಟ ನಡೆಯುತ್ತಲೇ ಇದೆ. ಆದರೆ ಈ ಅಹವಾಲಿಗೆ ಜೈಲು ಆಡಳಿತ ಸ್ಪಂದಿಸಿದಂತಿಲ್ಲ.ಈ ಎಲ್ಲಾ ಕಾರಣಕ್ಕೆ ಜೈಲಿನಲ್ಲಿ ನೀಡಲಾಗುವ ಮಾಂಸಹಾರವನ್ನು ಒಂದಷ್ಟು ಮಂದಿ ತಿನ್ನುವುದೇ ಇಲ್ವಂತೆ. ಹೊರಗಡೆಯಿಂದಲೋ ,ಅಥವಾ ಅಲ್ಲೇ ಪ್ರತ್ಯೇಕವಾಗಿ ಸಿದ್ದಪಡಿಸಿ ತಿನ್ನಲಾಗುತ್ತಿದೆಯಂತೆ.ಮಾಂಸಹಾರವೂ ಬೇಡ..ಅದರಿಂದ ಆಗುವ ದುಷ್ಪರಿಣಾಮಗಳ ಸಹವಾಸವೂ ಬೇಡ ಎಂದು ಕೈ ಕೈ ಮುಗಿಯುತ್ತಾರಂತೆ.

ಉತ್ತಮ ಆಹಾರ-ಯೋಗ್ಯ ವಸತಿ-ಕನಿಷ್ಟ ಸೌಲಭ್ಯ ನೀಡದಿರೋದು ಮಾನವ ಹಕ್ಕುಗಳ ಉಲ್ಲಂಘನೆ: ಜೈಲುಗಳಲ್ಲಿರುವ ಖೈದಿಗಳು ಅಪರಾಧಿ ಮನಸ್ಥಿತಿಯಿಂದ ಬಳಲುವಂತೆ ಮಾಡೊಕ್ಕೆ ಕಾರಣವೇ ಜೈಲುಗಳ ಆಡಳಿತ ಎನ್ನುವುದು ಅನೇಕರ ಅಭಿಪ್ರಾಯ.ಇದು ಒಂದು ಹಂತದರೆಗೆ ಸತ್ಯವೂ ಕೂಡ ಅನ್ನಿಸುತ್ತೆ.ಏಕೆಂದರೆ ಯಾವುದೇ ಜೈಲ್‌ ಮ್ಯಾನುವೆಲ್‌ ಗಳಾಗಲಿ ಅಥವಾ ಸರ್ಕಾರದ ಸುತ್ತೋಲೆಗಳು, ಯಾವುದೇ ಅಪರಾಧಿಗೆ ಕೆಟ್ಟ ಆಹಾರ ಕೊಡಬೇಕು.ಯೋಗ್ಯವಲ್ಲದ ವಾಸ್ತವ್ಯ ಕೊಡಬೇಕು, ಉಸಿರುಗಟ್ಸಿಸುವಂಥ ವಾತಾವರಣ ನೀಡಬೇಕೆಂದು ಹೇಳೊಲ್ಲ. ಒಳ್ಳೆಯ ವ್ಯವಸ್ಥೆ ನೀಡದಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ.ಮಾಹಿತಿ ಹಕ್ಕಿನಲ್ಲಿ ನೀಡಿರುವ ಮಾಹಿತಿಗಳನ್ನು ಗಮನಿಸಿದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಗುತ್ತಿರುವುದು ಕೂಡ ಖೈದಿಗಳ ಮೇಲೆ ಮಾನಸಿಕ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವುದು ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಅವರ ಆಪಾದನೆ. ತಮಗೆ ಸಿಕ್ಕ ಮಾಹಿತಿಗಳನ್ನು ಕ್ರೋಢೀಕರಿಸಿ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೂಡ ಸಲ್ಲಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತಿದೆ…ಜೈಲಿನಲ್ಲಿರುವ ಖೈದಿಗಳನ್ನು ಮನುಷ್ಯರಂತೆ ನೋಡುವ ವಾತಾವರಣವೇ ನಿರ್ಮಾಣವಾಗಿಲ್ಲ ಎನಿಸುತ್ತೆ.ಸರ್ಕಾರಗಳು ಹಾಗೂ ಜೈಲು ಆಡಳಿತಗಳು ಪದೇ ಪದೇ ಸುಧಾರಣೆ ಬಗ್ಗೆ ಮಾತನ್ನಾಡುತ್ತವೆ.ಆದರೆ ಅದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತಿದೆ ಎನ್ನುವುದು ದಿನನಿತ್ಯ ನಡೆಯುತ್ತಿರುವ ಘಟನೆಗಳಿಂದಲೇ ತಿಳಿದುಬರುತ್ತದೆ.ಖೈದಿಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕೆನ್ನುವ ಮಾತು ಪರಪ್ಪನ ಅಗ್ರಹಾರದಲ್ಲಿ ಪಾಲನೆಯಾಗುತ್ತಿಲ್ಲ.ಖೈದಿಗಳೆಂದಾಕ್ಷಣ ಅವರು ಏನ್‌ ಕೊಟ್ಟರೂ ತಿನ್ನುತ್ತಾರೆ..ಹೇಗೆ ಬೇಕಾದ್ರೂ ವಾಸಿಸುತ್ತಾರೆ..? ಅವರಿಗೇಕೆ ಒಳ್ಳೆಯ ವಸತಿ-ಆಹಾರ-ಆರೋಗ್ಯ ಎನ್ನುವ ಉದಾಸೀನ-ತಾತ್ಸಾರದ ಮನೋಭಾವ ಜೈಲು ಆಡಳಿತಕ್ಕೆ ಇದ್ದಂತೆ ತೋರುತ್ತದೆ. ಅಪರಾಧ ಸಾಬೀತಾಗುವವರೆಗೂ ಅವರು ನಿರಪರಾಧಿಗಳು, ಅಪರಾಧ ಸಾಬೀತಾದವರು ಅಪರಾಧಿಗಳಾದ್ರೂ ಅವರನ್ನು ಮಾನವೀಯ ನೆಲೆಗಟ್ಟಿನಲ್ಲಿಯೇ ನಡೆಸಿಕೊಳ್ಳಬೇಕೆನ್ನುತ್ತದೆ  ಜೈಲ್‌ ಮ್ಯಾನುವೆಲ್.ಆದರೆ ಅದ್ಯಾವುದರ ಬಗ್ಗೆಯೂ ಪರಪ್ಪನ ಅಗ್ರಹಾರ ಜೈಲು ಆಡಳಿತ ತಲೆಕೆಡಿಸಿಕೊಂಡಂತಿಲ್ಲ.ಹಾಗಾಗಿನೇ ಮಾನವ ಹಕ್ಕುಗಳನ್ನು ಉಲ್ಲಂಘಿಸುವಷ್ಟರ ಮಟ್ಟಿಗಿನ ಬೆಳವಣಿಗೆ ಅಲ್ಲಿ ನಡೆಯುತ್ತಿದೆ..ಇದೆಲ್ಲಾ ಬದಲಾಗಬೇಕು..ಈ ಹಿನ್ನಲೆಯಲ್ಲಿಯೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡಲಾಗಿದೆ. ವ್ಯವಸ್ಥೆ ಸುಧಾರಣೆ ಆಗಬೇಕೆನ್ನುವುದಷ್ಟೇ ನಮ್ಮ ಕಾಳಜಿ-ಕಳಜಿ-ಆಶಯ ***** ನರಸಿಂಹಮೂರ್ತಿ-ಸಾಮಾಜಿಕ ಕಾರ್ಯಕರ್ತ

ಆಹಾರದ ಟೆಂಡರ್‌ ನಲ್ಲೂ ಗೋಲ್ಮಾಲ್..!?‌ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಜೈಲುಗಳಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ಪೂರೈಸುತ್ತಿರುವ ಆಹಾರದ ಟೆಂಡರ್‌ ನಲ್ಲೂ ಗೋಲ್ಮಾಲ್‌ ನಡೆಯುತ್ತಿರುವ ಬಗ್ಗೆ ಆಪಾದನೆ ಗಳಿವೆ.ಪ್ರತಿ ಖೈದಿಗೂ  85 ರೂ ಪ್ರಮಾಣದ ಆಹಾರ ಪೂರೈಸುವ  ಗುತ್ತಿಗೆ ಪಡೆಯುವ ಗುತ್ತಿಗೆದಾರ ಅಷ್ಟೇ ಮೊತ್ತಕ್ಕೇ ಆಹಾರ ಪೂರೈಸುತ್ತಾನಾ..? ಖಂಡಿತಾ ಇಲ್ಲ.ಆ ಟೆಂಡರ್‌ ಪಡೆಯಲು ಇಲಾಖೆ ಯಲ್ಲಿರುವ ಕೆಲವರಿಗೆ ಕಮಿಷನ್-ಕಿಕ್‌ ಬ್ಯಾಕ್‌ ನೀಡಬೇಕಿರೋದು ಸಂಪ್ರದಾಯ. ಟೆಂಡರ್‌ ಪಡೆಯೊಕ್ಕೆ ಇಷ್ಟೊಂದು ಕಿಕ್‌ ಬ್ಯಾಕ್‌ ಕೊಟ್ಟ ಆತ ನೀಯತ್ತಾಗಿ ಗುಣಮಟ್ಟದ ಆಹಾರ ಪೂರೈಸುತ್ತಾನಾ..? ಖಂಡಿತಾ ಇಲ್ವಲಾ..? ಯಾರ್ಯಾರಿಗೆ ಎಷ್ಟೆಷ್ಟನ್ನು ಸಲ್ಲಿಸಬೇಕೋ,ಅ ಷ್ಟನ್ನೆಲ್ಲಾ ಸಲ್ಲಿಸಿದ ಗುತ್ತಿಗೆದಾರ ಗುಣಮಟ್ಟದ ಆಹಾರ ಪೂರೈಸುತ್ತಾನಾ..? ನೋ ಚಾನ್ಸ್..‌ ಗುತ್ತಿಗೆದಾರ ಹಾಗೂ ಇಲಾಖೆಯಲ್ಲಿರುವ ಕೆಲ ಭ್ರಷ್ಟರ ದಂಧೆಕೋರತನಕ್ಕೆ ಬಲಿಪಶುಗಳಾಗೋದು ವಿಚಾರಣಾಧೀನ ಖೈದಿಗಳು ಎನ್ನುವುದು ದೂರುದಾರ ನರಸಿಂಹ ಮೂರ್ತಿ.

ನರಸಿಂಹ ಮೂರ್ತಿ ಅವರು ಮಾಹಿತಿ ಹಕ್ಕಿನಲ್ಲಿ ತೆಗೆದುಕೊಂಡ ಮಾಹಿತಿಗಳನ್ನು ಗಮನಿಸಿದಾಗ ರಾಜ್ಯದ ಜೈಲುಗಳಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸರ್ಕಾರಗಳು ಗಂಭೀರ ಚಿಂತನೆ ಮಾಡಬೇಕಿದೆ.ಇಷ್ಟು ಕಡಿಮೆ ಮೊತ್ತವನ್ನು ಆಹಾರಕ್ಕೆ ಖರ್ಚು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಪ್ರತಿ ಖೈದಿಗೂ ಉತ್ತಮ ಹಾಗೂ ಪೌಷ್ಟಿಕ ಆಹಾರ ಪೂರೈಸುವುದು ಸರ್ಕಾರದ ಹೊಣೆ.ಅದಕ್ಕೆ ಹೆಚ್ಚಿನ ಹಣ ಖರ್ಚು ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ.?ಅದನ್ನು ಯಾರೂ ಪ್ರಶ್ನಿಸುವುದೂ ಇಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ವಿಚಾರಣಾಧೀನ ಖೈದಿಗಳ ಆಹಾರಕ್ಕೆ ಮಾಡುತ್ತಿರುವ ಖರ್ಚಿನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಖೈದಿಗಳಿಗೂ ಗುಣಮಟ್ಟದ  ಹಾಗೂ ಪೌಷ್ಟಿಕ ಆಹಾರ ಸಿಗಬಹುದಲ್ಲವೇ..?


Political News

“ಯುದ್ಧಭೂಮಿ”ಯಲ್ಲಿ ಪ್ರಾಣದ ಹಂಗು ತೊರೆದ “ಮಾದ್ಯಮಯೋಧರು”

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಇದೆಂಥಾ ನ್ಯಾಯ.? ಸಂಬಂಧಿಗೇ ಸಾಲ.. ?! ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರ ವಿರುದ್ಧ “ಸ್ವಜನ ಪಕ್ಷಪಾತ” ಆರೋಪ..?!

ಈ ಸುದ್ದಿ ನಮ್ಮಲ್ಲಿ ಮಾತ್ರ…POLITICAL EXCLUSIVE… ಕಾಂಗ್ರೆಸ್ ಗೆ ಗುಡ್ ಬೈ..! ಬಿಜೆಪಿಗೆ ಜೈ..ಜೈ.. ! 60 ಶಾಸಕರಿಗೆ ಗಾಳ….! 42 ಶಾಸಕರ ಲೀಸ್ಟ್ ರೆಡಿ..! ನವೆಂಬರ್ ಗೆ “ಡಿಕೆಶಿ” ಜಂಪಿಂಗ್ ಪಕ್ಕಾ..!

ಬಿಜೆಪಿ ನೂತನ ರಾಜ್ಯಾಧ್ಯಕ್ಷ ಲೀಸ್ಟ್ ನ ಆ ಮುಂಚೂಣಿ ಹೆಸರು..ರೇಸ್ ನಲ್ಲಿರೋರು ಯಾರ್ ಗೊತ್ತಾ..!?

EXCLUSIVE..ಹಿರಿಯ “ಪತ್ರಕರ್ತ ದಿಗ್ಗಜ”ರೊಬ್ಬರಿಗೆ ಬಿಜೆಪಿ ಗಾಳ..!- ಆಯಕಟ್ಟಿನ ಹುದ್ದೆಗೆ ಡಿಮ್ಯಾಂಡ್..!

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

Scroll to Top