ಬೆಂಗಳೂರು, ಮೇ 26: ನಿನ್ನೆಯಷ್ಟೇ ಅತ್ತ ರಾಷ್ಟ್ರಪತಿಗಳ ಮಹತ್ವದ ಸಭಾಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೇಷ್ಠ ಸಾಧನೆ ತೋರಿದ ಮಹನೀಯರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಿ, ಗೌರವಿಸಿದ್ದಾರೆ. ಈ ಮಧ್ಯೆ ನಮ್ಮ ಗ್ರೇಟರ್ ಬೆಂಗಳೂರಿನಲ್ಲಿ ಸೈಬರ್ ಖದೀಮರು (Cyber Crime) ಗ್ರೇಟ್ ರಾಬರಿ ಮಾಡಿದ್ದಾರೆ. ಹೌದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ. ವೈ. ವೆಂಕಟೇಶ್ (Padmashree K Y Venkatesh) ಅವರಿಗೆ ಮೋಸ ಮಾಡಿದ್ದಾರೆ. ಅವರೊಬ್ಬ ಪ್ಯಾರಾ ಅಥ್ಲೀಟ್ (Para Athlete K Y Venkatesh) ಆಗಿದ್ದು, ತಮ್ಮ ಸಾಧನೆಯಿಂದ ದೇಶಕ್ಕೆ ಗೌರವ ತಂದಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ ಸಂಗತಿಯಾಗಿದೆ.
ಏನಾಯಿತೆಂದರೆ ಬ್ಯಾಂಕ್ ಹೆಸರಿನಲ್ಲಿ ಕೆ.ವೈ. ವೆಂಕಟೇಶ್ಗೆ ಪದೆಪದೇ ಒಟಿಪಿ ಮೆಸೇಜ್ ಬರುತ್ತಿತ್ತಂತೆ. ಈ ಸಂಬಂಧ ಆ ಬ್ಯಾಂಕ್ ಶಾಖೆಗೆ ತೆರಳಿ, ವಿಚಾರಿಸಿದಾಗ 90 ಸಾವಿರ ರೂಪಾಯಿ ಹಣ ದೋಚಿರುವುದು ಬೆಳಕಿಗೆ ಬಂದಿದೆ.

ಸುಮಾರು 50 ಕ್ಕೂ ಹೆಚ್ಚು ನ್ಯಾಷನಲ್ – ಇಂಟರ್ ನ್ಯಾಷನಲ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಅದರಂತೆ ವೆಂಕಟೇಶ್ ಅವರ ಸಾಧನೆಗೆ 2021 ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು
ಇತ್ತೀಚೆಗೆ ವೆಂಕಟೇಶ್ ಅವರಿಗೆ ಮಧ್ಯೆರಾತ್ರಿ 12 ಗಂಟೆಯ ಅವೇಳೆಯಲ್ಲಿ ನಿರಂತರವಾಗಿ ಒಟಿಪಿ ಬಂದಿತಂತೆ. ಹಾಗಾಗಿ ಮಾರನೆಯ ದಿನ ಬ್ಯಾಂಕಿಗೆ ಭೇಟಿ ನೀಡಿ, ವಿಚಾರಿಸಿದಾಗ ತಾವು ಮರಾಮೋಸ ಹೋಗಿರುವುದು ಅನುಭವಕ್ಕೆ ಬಂದಿದೆ. ತಮ್ಮ ಅಕೌಂಟ್ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಹಣ ಕಳೆದುಕೊಂಡಿರೋದು ಸ್ಪಷ್ಟವಾಗಿದೆ. ಈ ಸಂಬಂಧ ವೆಂಕಟೇಶ್ ಅವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
