ಮನೆಗೆ ಬೆಂಕಿ ತಗುಲಿ 8 ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ಸಜೀವ ದಹನಗೊಂಡ ಆಘಾತಕಾರಿ ಘಟನೆ ಕೇರಳದ ವರ್ಕಲಾದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
ವರ್ಕಲಾ ಪಟ್ಟಣದಲ್ಲಿ ತರಕಾರಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅಖಿಲ್ (29) ಹಾಗೂ ರಿಯಾನ್ (8ತಿಂಗಳು) ಮೃತಪಟ್ಟ ದುರ್ದೈವಿಗಳು
ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ಕಾರಣಕ್ಕೆ ಬೆಂಕಿ ತಗುಲಿದೆ ಎನ್ನುವ ಬಗ್ಗೆ ಸದ್ಯಕ್ಕೆ ಇನ್ನೂ ತಿಳಿದಿಲ್ಲ. ಬೆಂಕಿ ಅನಾಹುತದಲ್ಲಿ ಕನಿಷ್ಠ 5 ದ್ವಿಚಕ್ರ ವಾಹನಗಳು ಧ್ವಂಸಗೊಂಡಿದೆ. ತಜ್ಞರು ಸ್ಥಳಾಗಮಿಸಿ ಪರಿಶೀಲಿಸಿದ ನಂತರ ತನಿಖೆ ನಡೆಸಲಾಗುವುದು ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದಿವ್ಯಾ ಗೋಪಿನಾಥ್ ತಿಳಿಸಿದರು.