ಬೆಂಗಳೂರು/ರಾಮನಗರ: ಸಮಾಜಕ್ಕೆ ಮಾದರಿಯಾಗಬೇಕಿರೋ ಮಾದ್ಯಮದವರೇ ರಾಜಕಾರಣಿಗಳ ಮುಂದೆ ಬೈಯ್ದಾಡಿ-ಹೊಡೆದಾಡಿದ್ರೆ ಏನಾಗಬೇಕು..? ಅದರಲ್ಲೂ ಮಾದ್ಯಮಗಳ ಬಗ್ಗೆ ಸದಾ ಒಂದು ಕೆಂಗಣ್ಣಿನ ದೃಷ್ಟಿಯನ್ನಿಟ್ಟುಕೊಂಡೇ ಅವರಿಂದ ತಪ್ಪಾದ್ರೆ ಅದರಲ್ಲೇ ವಿಕೃತ ಸಂತೋಷ ಪಡೆಯಲು ಹವಣಿಸುವ ರಾಜಕೀಯದವರ ಮುಂದೆ ಪರಸ್ಪರ ಸಂಘರ್ಷಕ್ಕಿಳಿದ್ರೆ ಏನಾಗಬೇಕು.. ಅಂತದ್ದೇ ಒಂದು ಘಟನೆ ನಿನ್ನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಮನಗರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ದಾಖಲಾಗಿರುವ ಎಫ್ ಐ ಆರ್ ಪ್ರತಿ ಕೂಡ ಲಭ್ಯವಾಗಿದೆ.( ಅ ದೃಶ್ಯಗಳು  ಈಗಾಗಲೇ ವೈರಲ್ ಕೂಡ ಆಗಿವೆ)

ನಿನ್ನೆ ಅಂದ್ರೆ ಗುರುವಾರ( ಮಾರ್ಚ್ 28).ಲೋಕಸಭಾ ಚುನಾವಣೆಯ ಪೈಕಿ ಹೈ ವೋಲ್ಟೇಜ್ ಕ್ಷೇತ್ರ ಎಂದೇ ಕರೆಯಿಸಿಕೊಳ್ಳುವ  ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಡಿ.ಕೆ ಸುರೇಶ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಿಯೋಜನೆಯಾಗಿತ್ತು.ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರವಾಗಿದ್ದರಿಂದ ಸಹಜವಾಗೇ ಬೆಂಗಳೂರಿನಿಂದಲೇ ಎಲ್ಲಾ ಸುದ್ದಿವಾಹಿನಿಗಳ ರಿಪೋರ್ಟರ್ಸ್ ಕವರೇಜ್ ಗೆ ಬಂದಿದ್ರು.ಈ ಪೈಕಿ ರಾಷ್ಟ್ರೀಯ ಮಟ್ಟದ ಸುದ್ದಿ ಸಂಸ್ಥೆಗಳಾದ( ನ್ಯೂಸ್ ಏಜೆನ್ಸಿ) ಪಿಟಿಐ ಹಾಗೂ ಎಎನ್ ಐ ಗಳ ವರದಿಗಾರರು ಬಂದಿದ್ರು.

ANI-PTI “ರಿಪೋರ್ಟರ್ಸ್” ಫೈಟ್-ಠಾಣೆ ಮೆಟ್ಟಿಲೇರಿದ ಪ್ರಕರಣ-FIR ದಾಖಲು

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯೊಕ್ಕಿಂತ ಮುನ್ನ ಅಂದ್ರೆ ಡಿಕೆ ಸುರೇಶ್ ಅವರ ಭಾಷಣದ ವೇಳೆ ಪಿಟಿಐ ಹಾಗೂ ಎಎನ್ ಐ ಸುದ್ದಿ ಸಂಸ್ಥೆಗಳ ವರದಿಗಾರರ ನಡುವೆ ಜಗಳ ಶುರುವಾಗಿದೆ .ಅದನ್ನು ತಡೆಯೊಕ್ಕೆ ಅವರಿಬ್ಬರ ನಡುವಿನ ಗಲಾಟೆ ತಡೆಯೊಕ್ಕೆ ಅಲ್ಲಿದ್ದ ವರದಿಗಾರರು ಕೂಡ ಯತ್ನಿಸಿದ್ದಾರೆ.ಆದರೆ ಅವರಿಬ್ಬರ ಆಕ್ರೋಶ ತಣ್ಣಗಾಗಲೇ ಇಲ್ಲ.ಒಂದು ಹೆಜ್ಜೆ ಮುಂದ್ಹೋಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.ಬೈಯ್ದಾಡಿಕೊಂಡಿದ್ದಾರೆ.

ಅವರಿಬ್ಬರ ನಡುವಿನ ಸಂಘರ್ಷ ತಾರಕಕ್ಕೇರಬಹುದೆನ್ನುವುದನ್ನು ಅಂದಾಜಿಸಿದ ಇತರೆ ವರದಿಗಾರರು ತಮ್ಮ ಮಾನವೆಲ್ಲಿ ಸಾರ್ವಜನಿಕವಾಗಿ ಹರಾಜಾಗುತ್ತದೆಂದು ಭಾವಿಸಿ ಅವರನ್ನು ಹೇಗೋ ಕರೆತಂದಿದ್ದಾರೆ.ಇಬ್ಬರ ಮುನಿಸನ್ನು ಶಮನ ಮಾಡೊಕ್ಕೆ ಯತ್ನಿಸಿದ್ದಾರೆ.ಆದರೆ ತನ್ನ ಮೇಲೆ ಎಎನ್ಐ ವರದಿಗಾರ ಹಲ್ಲೆಯತ್ನ ಮಾಡಿದ್ದಾನೆಂದು ಆಪಾದಿಸಿ ಪಿಟಿಐ ವರದಿಗಾರ್ತಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.ವರದಿಗಾರ್ತಿ ಕೊಟ್ಟ ದೂರಿನ ಮೇರೆಗೆ ರಾಮನಗರ ಪೊಲೀಸರು ಎಫ್ ಐ ಆರ್ ಲಾಡ್ಜ್ ಮಾಡಿದ್ದಾರೆ.

ಎಫ್ ಐ ಆರ್ ನಲ್ಲಿ ಎಎನ್ ಐ ವರದಿಗಾರನ ಮೇಲೆ ಸೆಕ್ಷನ್ 354,323,504,509 ಅನ್ವಯ ಕೇಸ್ ದಾಖಲಿಸಲಾಗಿದೆ. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಪಿಟಿಐ ಆಡಳಿತ ಮಂಡಳಿ ಎಎನ್ ಐ ಆಡಳಿತ ಮಂಡಳಿ ವಿರುದ್ದ ಕೆಂಡಾಮಂಡಲವಾಗಿದೆ.ತಮ್ಮ ಸಂಸ್ಥೆ ವರದಿಗಾರ್ತಿ ಮೇಲೆ ಹಲ್ಲೆ ನಡೆಸಿರುವ ತಮ್ಮ ವರದಿಗಾರನ ವಿರುದ್ಧ ಕ್ರಮ ಕೈಗೊಳ್ಳಲೇಬೇಕು.ಇಲ್ಲವಾದಲ್ಲಿ ಕಾನೂನಾತ್ಮಕ ಸಮರ ಮುಂದುವರೆಸುವುದಾಗಿ ಎಚ್ಚರಿಸಿದೆ.

ಸಮಾಜದ ಅಂಕುಡೊಂಕನ್ನು ಬಟಾಬಯಲುಗೊಳಿಸುವ ಕೆಲಸ ಮಾಡುವ ಮಾದ್ಯಮಗಳ ಪ್ರತಿನಿಧಿಗಳೇ ಹಾದಿರಂಪ ಬೀದಿರಂಪ ಮಾಡಿಕೊಂಡು ಸಾರ್ವಜನಿಕರ ಮುಂದೆ ನಗೆಪಾಟಲಿಗೀಡಾದಂತದ್ದು ಮಾತ್ರ ವಿಷಾದನೀಯ.

Spread the love

Leave a Reply

Your email address will not be published. Required fields are marked *