KSRTC ಯಲ್ಲೊಬ್ಬ “ಬದ್ಮಾಶ್” ಚಾಲಕ: ಆಸ್ತಿಗಾಗಿ ವೃದ್ಧ ತಂದೆಯನ್ನೇ ಥಳಿಸಿದ “ಪಾಪಿ ಪುತ್ರ”.. ಹಲ್ಲೆ ದೃಶ್ಯಗಳು ವೈರಲ್- “ಗಢವ”ನ ಕ್ರೌರ್ಯಕ್ಕೆ ವ್ಯಾಪಕ ಖಂಡನೆ:

ಬೆಂಗಳೂರು/ರಾಮನಗರ: ಮಕ್ಕಳನ್ನು ಹೆತ್ತು ಸಾಕಿ ಸಲಹುವ ಪೋಷಕರನ್ನು ವಯಸ್ಸಾದ ಕಾಲದಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳುವ ದುಷ್ಟ ಮಕ್ಕಳು ಇವತ್ತಿಗೂ ಇದ್ದಾರೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ ಈ ದಾರುಣ ಕಥೆ..
ಸತ್ತ ಮೇಲೆ ಆಸ್ತಿ ನಿನಗೇ ಸೇರುತ್ತೋ ಮಗನೇ ಎಂದು ಪರಿಪರಿಯಾಗಿ ಹೇಳಿದ್ರೂ ಕಿವಿಗಾಕಿಕೊಳ್ಳುವ ಸೌಜನ್ಯವಿಲ್ಲದ ಬದ್ಮಾಶ್ ಮಗ, ಅಪ್ಪನ ಮೇಲೆ ಎಸಗಿರುವ ದೌರ್ಜನ್ಯ-ಕ್ರೌರ್ಯ ಎಂಥಾ ಕಲ್ಲು ಮನಸನ್ನೂ ಕರಗಿಸುತ್ತದೆ.ಅಂತದ್ದೊಂದು ಸ್ಟೋರಿಯನ್ನು ನಿಮ್ಮ ಮುಂದಿಡ್ತಿದೆ ಕನ್ನಡ ಫ್ಲಾಶ್ ನ್ಯೂಸ್..
ಈ ಸ್ಟೋರಿ ನೋಡಿದ ಮೇಲೂ ಇಂಥ ದುಷ್ಟನನ್ನು ಕೆಎಸ್ ಆರ್ ಟಿಸಿ ಆಡಳಿತ, ಕೆಲಸದಲ್ಲಿ ಮುಂದುವರೆಸಿದ್ರೆ ಅದು ದೌರ್ಭಾಗ್ಯಪೂರ್ಣವೇ ಸರಿ.ಏಕೆಂದ್ರೆ ಅಪ್ಪನನ್ನು ಅಷ್ಟು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ ಈ ದುಷ್ಟಪುತ್ರರತ್ನ.
ಅಂದ್ಹಾಗೆ ಈ ಗಢವ ಮಗನ ಹೆಸರು ಕುಮಾರ.ವೃತ್ತಿಯಲ್ಲಿ ಕೆಎಸ್ ಆರ್ ಟಿಸಿ ರಾಮನಗರ ಡಿಪೋದಲ್ಲಿ ಚಾಲಕ. (ಬ್ಯಾಡ್ಜ್ ನಂಬರ್-13338).ಈ ಮಹಾನುಭಾವನದು 5 ಸದಸ್ಯರ ತುಂಬು ಕುಟುಂಬ.ಮೂವರು ಸಹೋದರರ ಜತೆ ಹುಟ್ಟಿದವ.ಇನ್ನುಳಿದ ಇಬ್ಬರು ಗಂಡು ಮಕ್ಕಳ ಬಗ್ಗೆ ತಕರಾರಿಲ್ಲ.ಆದ್ರೆ ಅಪ್ಪ ತಿಮ್ಮಯ್ಯ,ಅವ್ವ ಮುನಿಯಮ್ಮಳನ್ನು ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದಾತನಿಗೆ ಇದ್ದಕ್ಕಿದ್ದಂತೆ ಮನೆ ಮೇಲೆ ಕಣ್ಣು ಬಿದ್ದಿದೆ.ಆ ವಿಚಾರವನ್ನು ತಲೆಗೆ ತುಂಬಿದಾಕೆ ಆತನ ಹೆಂಡ್ತಿ ವರಲಕ್ಷ್ಮಿ ಅಂತೆ.
ದಿನಕಳೆದಂತೆಲ್ಲಾ ವಯಸ್ಸಾಗುತ್ತಿದ್ದ ತಿಮ್ಮಯ್ಯನ ಆರೋಗ್ಯವೂ ಕ್ಷೀಣಿಸ್ಲಿಕ್ಕೆ ಶುರುವಾಯ್ತು. ಮುನಿಯವ್ವಳದು ಮನೆಯಲ್ಲಿ ಏನೇ ಆದರೂ ಮೌನಧಾರಣೆ.ಪ್ರಶ್ನಿಸಿದ್ರೆ ಆ ಸಿಟ್ಟು-ಕ್ರೌರ್ಯಕ್ಕೆ ತಾನೆಲ್ಲಿ ಈಡಾಗುತ್ತೇನೋ ಎನ್ನುವ ಸಹಜವಾದ ಅಳುಕು.ಹಾಗಾಗಿನೇ ಗಂಡನ ಮೇಲೆ ದೌರ್ಜನ್ಯ ನಡುದ್ರೂ ಅದನ್ನು ಪ್ರಶ್ನಿಸದೆ ಎಲ್ಲಾ ನೋವನ್ನು ಮನಸಿನಲ್ಲಿಯೇ ನುಂಗಿಕೊಳ್ಳುತ್ತಿದ್ದ ಅಸಹಾಯಕ ತಾಯಿ.
ತಿಮ್ಮಯ್ಯ ನಡೆದು ಓಡಾಡೊಕ್ಕೆ ಸಾಧ್ಯವಾಗದ ಸ್ತಿತಿ ತಲುಪಿದಾಗ ಕುಮಾರನ ತಲೆಯನ್ನು ಕೆಡಿಸಿದ ವರಲಕ್ಷ್ಮಿ ಮನೆಯನ್ನು ತನ್ನಹೆಸರಿಗೆ ಬರೆಯಿಸಿಕೊಳ್ಳುವಂತೆ ಒತ್ತಾಯಿಸಲಾರಂಭಿಸಿದ್ದಾಳೆ.ತಲೆ ತಿರುಕ ಮಗ ಮೂಗ ಬಸವನಂತೆ ತಲೆ ಅಲ್ಲಾಡಿಸುತ್ತಲೇ ಅಪ್ಪನನ್ನು ಬೈಯ್ಯೋದು…ಹೊಡೆಯೊಕ್ಕೆ ಶುರುವಿಟ್ಟುಕೊಂಡಿದ್ದಾನೆ.ಸರಿಯಾಗಿ ಊಟ ಕೊಡದೆ ಪೀಡಿಸಲಾರಂಭಿಸಿದ್ದಾನೆ.ಸ್ವಾಭಿಮಾನಿ ತಿಮ್ಮಯ್ಯ ತನ್ನ ಕೈಲಾದಷ್ಟು ವಿರೋಧಿಸಿದ್ದಾನೆ.ಆದ್ರೆ ಕಸುವಿನ ಕೊರತೆಯಿಂದಾಗಿ ಹೊಡೆತ ತಿಂದು ಮೂಲೆಯಲ್ಲಿ ಅಳುತ್ತಾ ದಿನ ಕಳೆಯೋದು ಮಾಮೂಲಾಗಿ ಹೋಗಿದೆ.



ಇದ್ದೊಂದು ಮನೆಯನ್ನು ಮಗನ ಹೆಸರಿಗೆ ಬರುದ್ರೆ ತಾನು..ತನ್ನ ಹೆಂಡ್ತಿ ಕೇರ್ ಆಫ್ ಫುಟ್ಪಾತ್ ಗ್ಯಾರಂಟಿ ಎನ್ನುವ ಕಾರಣದಿಂದಲೇ ಒಲ್ಲೆ ಎನ್ನುತ್ತಾ ಬಂದಿದ್ದ ತಿಮ್ಮಯ್ಯ.ಆದ್ರೆ ದಿನ ಬೆಳಗಾದ್ರೆ ಇದೇ ವಿಷಯಕ್ಕೆ ಹೊಡೆತ ತಿಂದು ತಿಂದು ಸುಸ್ತಾಗಿದ್ದ ವೃದ್ಧ ರಾಮನಗರದ ಟೌನ್ ಠಾಣೆಗೂ ದೂರು ಕೊಟ್ಟಿತ್ತಂತೆ.
ಪೊಲೀಸ್ರು ಮನೆಯ ಕಾಮನ್ ಪ್ರಾಬ್ಲಮ್ ಎಂದ್ಕೊಂಡು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.ಆದ್ರೆ ಇದನ್ನೇ ಸಲುಗೆಯನ್ನಾಗಿಸಿಕೊಂಡ ಗಢವ ಕುಮಾರ ಅಪ್ಪ ತಿಮ್ಮಯ್ಯನನ್ನು ಮನಸೋಇಚ್ಛೆ ಥಳಿಸುವ ದುಷ್ಟತನಕ್ಕೆ ಕೈ ಹಾಕಿ ಎಲ್ಲರಿಂದ ಛೀ.ಥೂ ಎನಿಸಿಕೊಂಡಿದ್ದಾನೆ. ತಂದೆಯನ್ನು ಹೊಡೆದು ಮನೆಯಿಂದ ಹೊರ ದೂಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೃದ್ಧಾಪ್ಯದಲ್ಲಿ ಪೋಷಕರನ್ನು ಚೆನ್ನಾಗಿ ಆರೈಕೆ ಮಾಡೋದನ್ನು ಬಿಟ್ಟು ಮನೆಗಾಗಿ ಅಪ್ಪನ ಮೇಲೆ ಕೈ ಮಾಡಿ ಮನೆಯಿಂದಲೇ ಹೊರ ದೂಡುವಂಥ ಕುಮಾರನ ಪೌರುಷತ್ವಕ್ಕೆ ಇಡೀ ಕೆಎಸ್ ಆರ್ ಟಿಸಿ ನೌಕರ ಸಮುದಾಯ ಕೆಂಡಾಮಂಡಲವಾಗಿದೆ.ಇಂಥಾ ಮಗ ಇಡೀ ಕೆಎಸ್ ಆರ್ ಟಿಸಿಗೆ ಕಳಂಕ.ಇಂಥವನನ್ನು ಉಳಿಸಿಕೊಂಡ್ರೆ ನಿಗಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕಿಡಿಕಾರಿರುವ ನೌಕರರು ಕೆಲಸದಿಂದ ವಜಾಗೊಳಿಸಿ ಬುದ್ದಿ ಕಲಿಸಬೇಕು ಎಂದು ಆಡಳಿತವನ್ನು ಮನವಿ ಮಾಡಿಕೊಂಡಿದ್ದಾರೆ.ನೌಕರರಲ್ಲೇ ಕೆಲವರು ಈ ಪ್ರಕರಣದ ಹಿನ್ನಲೆಯಲ್ಲಿ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಲು ಮುಂದಾಗಿದ್ದಾರೆ.
ಅದೇನೇ ಆಗಲಿ,ಮಕ್ಕಳನ್ನು ತಮ್ಮೆಲ್ಲಾ ಕಷ್ಟಗಳ ಹೊರತಾಗ್ಯೂ ಚೆನ್ನಾಗಿ ಬೆಳೆಸಿ, ಅವರ ಬೇಕು ಬೇಡುಗಳನ್ನು ಅರ್ಥೈಸಿಕೊಂಡು ಪೂರೈಸಿದ ಹೆತ್ತವರು, ಕುಮಾರನಂತ ದುಷ್ಟ ಮಕ್ಕಳ ಕಾರಣಕ್ಕೆ ತಮ್ಮ ಮುಪ್ಪಿನ ಕಾಲದಲ್ಲಿ ತಮ್ಮ ಜನ್ಮವನ್ನು ಶಪಿಸಿಕೊಳ್ಳುವಂತಾಗುವುದು ದುರಂತ ಅಲ್ಲದೆ ಇನ್ನೇನು..